Thursday, May 7, 2026
Thursday, May 7, 2026
Home Blog Page 57

ಬಿಜೆಪಿ ಯುವ ಮೋರ್ಚಾ ಜಿಲ್ಲಾ ತಂಡದಿಂದ ಮನವಿ

0

ಶಿವಮೊಗ್ಗ ನಗರದ ಗೋಪೀ ಸರ್ಕಲ್‌ನಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ, ಮಾನ್ಯ ಭಾರತದ ಪ್ರಧಾನಮಂತ್ರಿಗಳಿಗೆ ಅವಮಾನವಾಗುವ ರೀತಿಯಲ್ಲಿ ಅಣಕು ಪ್ರದರ್ಶನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ ಪ್ರಧಾನಮಂತ್ರಿ ಎನ್ನುವುದು ದೇಶದ ಗೌರವದ ಸ್ಥಾನವಾಗಿದ್ದು, ಆ ಸ್ಥಾನದಲ್ಲಿರುವ ವ್ಯಕ್ತಿಗೆ ಇಂತಹ ರೀತಿಯಲ್ಲಿ ಅಗೌರವ ತೋರಿಸುವುದು ಸರಿಯಾದ ಸಂಸ್ಕೃತಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಕುರಿತು ಸ್ವಯಂಪ್ರೇರಿತವಾಗಿ (ಸೂಮೊಟೋ) ಪ್ರಕರಣ ದಾಖಲಿಸಲಾಗುತ್ತದೆ ಎಂದು ನಿರೀಕ್ಷಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಇವತ್ತಿನ ದಿನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಈ ಘಟನೆ ಕುರಿತು ಪ್ರಕರಣ ದಾಖಲಿಸುವಂತೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಮನವಿ ಹಾಗೂ ದೂರು ಸಲ್ಲಿಸಲಾಯಿತು. ಜೊತೆಗೆ ಎಸ್‌ಪಿ ಅವರ ಮುಖಾಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಗತ್ಯವಾದ ಸೂಚನೆ ನೀಡುವಂತೆ ವಿನಂತಿಸಲಾಯಿತು. ಇದೇ ವೇಳೆ ದೊಡ್ಡಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೂ ಮನವಿ ಸಲ್ಲಿಸಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಲಾಯಿತು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತ್ ಕುಕ್ಕೆ ಅವರ ನೇತೃತ್ವದಲ್ಲಿ ಯುವ ಮೋರ್ಚಾ ತಂಡದಿಂದ ಮನವಿ ಹಾಗೂ ದೂರು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಯುವ ಮೋರ್ಚಾ ಜಿಲ್ಲಾ ಸಹ ಪ್ರಭಾರಿಗಳಾದ ಸಂತೋಷ್ ಹೊಳಲೂರು, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಸತೀಶ್ ರಾಮನಕೊಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದರ್ಶನ್ ಆರ್ ವಿ ಹಾಗೂ ಅರುಣ್ ಕುಗ್ವೆ , ಶಿವಮೊಗ್ಗ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಅನಿಲ್ ಲೋಕಿನಕೊಪ್ಪ
ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಯುವರಾಜ್ ಎನ್.ವಿ. ಮತ್ತು ಹರೀಶ್ ನಾಯ್ಕ್ , ಜಿಲ್ಲಾ ಖಜಾಂಚಿಗಳಾದ ವಿವೇಕ್ ಹೆಬ್ಬಾರ್, ಜಿಲ್ಲಾ ಪದಾಧಿಕಾರಿಗಳಾದ ಕುಮಾರ್ ಆಯನೂರು, ಅಜಯ್ ಬೊಮ್ಮನಕಟ್ಟೆ, ಪವನ್, ಗಣೇಶ್ ಗುಂಡಗದ್ದೆ, ಅಮಿತ್ ಹೆಗ್ಗಾರ್ , ಶಶಿ , ಸತೀಶ್ ಸೇರಿದಂತೆ ಯುವ ಮೋರ್ಚಾದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

DC Shivamogga ಮಾ.18 ರಿಂದ ಎಸ್‌ಎಸ್‌ಎಲ್ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ

0

DC Shivamogga ವಿದ್ಯಾರ್ಥಿಗಳ ಜೀವನದ ದಿಸೆಯನ್ನು ನಿರ್ಧರಿಸುವ ಮುಖ್ಯ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕೆಂದು ಪರೀಕ್ಷಾ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ತಿಳಿಸಿದರು.

ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಪೂರ್ವಸಿದ್ದತೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾರ್ಚ್ 18 ರಿಂದ ಏಪ್ರಿಲ್ 04 ರವರೆಗೆ ಜಿಲ್ಲೆಯ ಒಟ್ಟು 79 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಭದ್ರಾವತಿ 15, ಹೊಸನಗರ 07, ಸಾಗರ 09, ಶಿಕಾರಿಪುರ 11, ಶಿವಮೊಗ್ಗ 20, ಸೊರಬ 10 ಮತ್ತು ತೀರ್ಥಹಳ್ಳಿ 07 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಮಾಡಬೇಕು. ಹಾಗೂ ಒತ್ತಡ ರಹಿತ ವಾತಾವರಣವನ್ನು ನಿರ್ಮಿಸಬೇಕು. ಎಲ್ಲಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವೆಬ್ ಕಾಸ್ಟಿಂಗ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯಲು ಪೂರ್ವಭಾವಿಯಾಗಿ ಡ್ರೆöÊರನ್ ನಡೆಸಲಾಗಿದ್ದು, ಮತ್ತೊಮ್ಮೆ ಇಂಟರ್‌ನೆಟ್ ವ್ಯವಸ್ಥೆ, ಯುಪಿಎಸ್ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

31 ಮಾರ್ಗ ರಚಿಸಲಾಗಿದ್ದು, ಈ ಮಾರ್ಗಗಳಿಗೆ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. 79 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ನವರು ಒದಗಿಸುವಂತೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಾದ ಪೊಲೀಸ್ ಬಂದೋಬಸ್ತ್ ಗೆ ಮನವಿ ಮಾಡಲಾಗಿದ್ದು, ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೈಬರ್ ಮತ್ತು ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸದಂತೆ ಆದೇಶಿಸಲಾಗಿದೆ.
ವಿದ್ಯಾರ್ಥಿಗಳು ಯಾವುದೇ ರೀತಿಯ ಎಲೆಕ್ಟಾçನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ. ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಲಾಗುವುದು ಎಂದ ಅವರು ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಪರೀಕ್ಷೆಗಳು ನಡೆಯುವಂತೆ ಎಲ್ಲ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಪರೀಕ್ಷಾ ನಿಯೋಜಿತ ಅಧಿಕಾರಿಗಳು ಪರೀಕ್ಷೆಗೆ ಸಂಬಂಧಿಸಿದಂತೆ ಸುಳ್ಳುವದಂತಿ ಹಬ್ಬಿಸುವ ಸುದ್ದಿಗಳಿಗೆ ಕಿವಿಗೊಡದೆ ಹಾಗೂ ಕರ್ತವ್ಯವದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರದೆ, ಜಿಲ್ಲೆಗೆ ಒಳ್ಳೆಯ ಹೆಸರು ತರುವ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಮಾತನಾಡಿ, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಹಬ್ಬದ ಈ ದಿನಗಳಲ್ಲಿ ಸೂಕ್ತ ಆಹಾರ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ನಿದ್ರೆಗೆಡದೆ, ಸಾಕಷ್ಟು ನಿದ್ರೆ ಮಾಡಬೇಕು. ಯಾವುದೇ ರೀತಿಯ ಆತಂಕ, ಭಯಕ್ಕೆ ಒಳಗಾಗದೇ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಡ್ರೈಂರನ್ ನಡೆಸಿ ಖಾತ್ರಿಪಡಿಸಿಕೊಂಡು, ಯುಪಿಎಸ್, ಇಂಟರ್‌ನೆಟ್ ಇತರೆ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಿಂದ ದೂರ ಇರುವ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕು ಮಟ್ಟದಿಂದ ಹಿಡಿದು ಎಲ್ಲ ಪರೀಕ್ಷಾ ನಿಯೋಜಿತ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಹಾಜರಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಸಹಕರಿಸಬೇಕು ಎಂದು ತಿಳಿಸಿದರು.

DC Shivamogga ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಮಾತನಾಡಿ, ಪರೀಕ್ಷೆಯ ಬಂದೋಬಸ್ತ್ ಗೆ ಅಗತ್ಯವಾದ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಪರೀಕ್ಷೆಗಳನ್ನು ಎಲ್ಲ ಅಧಿಕಾರಿ/ಸಿಬ್ಬಂದಿಗಳು ಸೇರಿ ಪಾರದರ್ಶಕವಾಗಿ ನಡೆಸಿಕೊಡಬೇಕು. ಯಾವುದೇ ರೀತಿಯ ತೊಂದರೆಗಳು ಉಂಟಾದಲ್ಲಿ ಶೀಘ್ರವೇ ತಮ್ಮ ಗಮನಕ್ಕೆ ತರಬೇಕು. ಯಾವುದೇ ಆತಂಕವಿಲ್ಲದಂತೆ ಪರೀಕ್ಷೆ ನಡೆಯುವ ವಾತಾವರಣ ಕಲ್ಪಿಸಲಾಗುವುದು ಎಂದರು.

ದ್ವಿಚಕ್ರ ವಾಹನ ಓಡಿಸುವ ಪ್ರತಿಯೊಬ್ಬ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಅರ್ಧ ಹೆಲ್ಮೆಟ್ ಬಳಸದೇ, ಪೂರ್ತಿ ಮತ್ತು ಸುರಕ್ಷಿತವಾದ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತದಲ್ಲಿ ಸಂಭವಿಸಬಹುದಾದ ಪ್ರಾಣಹಾನಿಯನ್ನು ತಡೆಯಬಹುದು. ಹಾಗೂ ಯಾವುದೇ ಕಾರಣಕ್ಕೂ ಮನೆಯಲ್ಲಿ ಲೈಸೆನ್ಸ್ ಇಲ್ಲದ ಮಕ್ಕಳಿಗೆ ವಾಹನವನ್ನು ಕೊಡಬಾರದು. ವಾಹನ ಓಡಿಸುವಾಗ ಅಪ್ಪಿತಪ್ಪಿಯೂ ಮೊಬೈಲ್ ನಲ್ಲಿ ಮಾತನಾಡಬಾರದು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ನಾವೇ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ
-ನಿಖಿಲ್ ಬಿ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಡಯಟ್ ಪ್ರಾಂಶುಪಾಲರಾದ ಕೃಷ್ಣಮೂರ್ತಿ, ಡಿಡಿಪಿಐ ಮಂಜುನಾಥ್, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಹಾಜರಿದ್ದರು.

ಶಿವಮೊಗ್ಗದ ರಾಯಲ್ ಆರ್ಕಿಡ್ ನಲ್ಲಿ ಅವಿರ ಉಡುಪು ಸಂಸ್ಥೆಯ ಯುಗಾದಿ ಸೀರೆ ಹಬ್ಬ

0

ಶಿವಮೊಗ್ಗದ ರಾಯಲ್ ಆರ್ಕಿಡ್ ನಲ್ಲಿ ಚಿತ್ರನಟಿ ಕಾರುಣ್ಯ ಗೌಡರ ಅವಿರ ಉಡುಪು ಸಂಸ್ಥೆಯ ಶಿವಮೊಗ್ಗ ಯುಗಾದಿ ಸೀರೆ ಹಬ್ಬ ಇಂದಿನಿಂದ ಮಾ.15 ರ ವರೆಗೆ ಆರಂಭವಾಗಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರುಣ್ಯ ಗೌಡ, ಸಮನ್ವಯ ಕಾಶಿ ಸೇರಿದಂತೆ ಹಲವರಿದ್ದರು.

Klive Special Article ಶಿಸ್ತು ಬದುಕಿನ ನಿತ್ಯ ರೂಢಿಯಾಗಲಿ ಲೇ: ಪುಟ್ಟಮ್ಮ ಶಿವಾನಿ ಶಿವಮೊಗ್ಗ

0

Klive Special Article ಗಿರೀಶ್‌ ಕಾರ್ನಾಡರ ತಲೆದಂಡ ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಬಿಜ್ಜಳ ಮಹಾರಾಜರು ವಿಜಯ ಯಾತ್ರೆಗೆ ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಗ ಸೋವಿದೇವ ಭಂಡಾರದಲ್ಲಿನ ರೊಕ್ಕ ವ್ಯತ್ಯಾಸವಾಗಿದೆಯೆಂದು ಹಣಕಾಸು ಮಂತ್ರಿಯಾಗಿದ್ದ ಬಸವಣ್ಣನವರು ಊರಲ್ಲಿ ಇಲ್ಲದ ವೇಳೆ ಅವರ ವಿರುದ್ದ ವಿಚಾರಣೆ ಆರಂಭಿಸುತ್ತಾನೆ. ನಂತರ ಬಸವಣ್ಣನವರು ಊರಿಗೆ ಬರುತ್ತಾರೆ, ಬಂದವರೆ ವಿಷಯ ತಿಳಿದು ಅಲ್ಲಿ ನೆರೆದಿದ್ದ 15 ಸಾವಿರ ಮಂದಿಯ ಕಣ್ಣೆದುರು ಸೋವಿದೇವನನ್ನು ಕೈ ಹಿಡಿದು ಭಂಡಾರದೊಳಗೆ ಕರೆದೊಯ್ದು ಕುಳ್ಳಿರಿಸಿ ಲೆಕ್ಕ ಪರಿಶೀಲನೆ ಮಾಡಲು ಕೇಳಿಕೊಳ್ಳುತಾರೆ.
ಸೋವಿದೇವ ಅಲ್ಲಿಯೇ 10 ದಿನ ಕುಳಿತು ಲೆಕ್ಕ ಪರಿಶೀಲಿಸುತ್ತಾನೆ. ಅಷ್ಟರಲ್ಲಿ ಭಿಜ್ಜಳಮಹಾರಾಜರು ವಿಜಯ ಯಾತ್ರೆಯಿಂದ ಅರಮನೆಗೆ ಹಿಂತಿರುಗುತ್ತಾರೆ. ಹಿಂತಿರುಗಿದ ನಂತರ ವಿಷಯ ತಿಳಿದು ತನ್ನ ಮಗನನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ಮತ್ತು ಅವನನ್ನು ಕೇಳುತ್ತಾರೆ: ಒಂದು ಒಡಕು ಕವಡಿ ಹೆಚ್ಚು ಕಮ್ಮಿ ಆಗಿತ್ತಾ? ಒಂದು ದುಗ್ಗಾಣಿ ಏರು ಪೇರು ಆಗಿತ್ತಾ? ಅದು ಬಸವಣ್ಣನ ಲೆಕ್ಕ!; ಬ್ರಹ್ಮಲಿಖಿತ! ಒಮ್ಮೆ ಬರೆದರೆ ಒಂದಂಕಿ ಅಳಗ್ಯಾಡೂದಿಲ್ಲ! ಎನ್ನುತ್ತಾರೆ.
ಇದನ್ನು ಗಮನಿಸಿದರೆ, ಬಸವಣ್ಣನವರು ಸಾರ್ವಜನಿಕ ಸೇವೆಯಲ್ಲಿ ಎಂಥಹಾ ಶಿಸ್ತು ಪಾಲಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಭಾರತ ರತ್ನ ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಶಿಸ್ತು ವಿಶ್ವವಿಖ್ಯಾತ! ಒಂದು ಮೇಣದಬತ್ತಿ ಹಚ್ಚಿಕೊಂಡು ಸರ್ಕಾರಿ ಕೆಲಸ ನಿರ್ವಹಿಸಿದ ನಂತರ ಅದನ್ನು ನಂದಿಸಿ ಬೇರೊಂದು ಮೇಣದಬತ್ತಿ ಹಚ್ಚಿಕೊಂಡು ತನ್ನ ಸ್ವಂತ ಕೆಲಸ ನಿರ್ವಹಿಸುತ್ತಿದ್ದ ವಿಶ್ವೇಶ್ವರಯ್ಯನವರು ಶಿಸ್ತಿನ ದಂತಕಥೆಯಾಗಿದ್ದರು! ತನ್ನ ವಯಕ್ತಿಕ ಜೀವನದಲ್ಲಿ, ಸಾರ್ವಜನಿಕ ಸೇವೆಯಲ್ಲಿ ಎಲ್ಲದರಲ್ಲೂ ಅವರದು ಬಹಳ ಶಿಸ್ತು! ಅವರು ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್‌ ಆಗಿದ್ದಾಗ ಕಚೇರಿಯಲ್ಲಿ ಲಕೋಟೆಗೆ ಪತ್ರ ಹಾಕಿ ಹೇಗೆ ಗಮ್‌ ಅಂಟಿಸಬೇಕು ಮತ್ತು ಸ್ಟಾಂಪನ್ನು ಹೇಗೆ ಅಂಟಿಸಬೇಕು ಎಂಬುದನ್ನು ರವಾನೆ ಗುಮಾಸ್ತ ರನ್ನು ತನ್ನ ಟೇಬಲ್‌ಗೆ ಕರೆಸಿ, ಗಮ್‌ ಮತ್ತು ಸ್ಟಾಂಪ್‌ ತರಿಸಿ ಅಂಟಿಸಿ ತೋರಿಸಿದ್ದರಂತೆ!. ಕಛೇರಿಯ ಎಲ್ಲಾ ನೌಕರರೂ ಸಮಯಕ್ಕೆ ಸರಿಯಾಗಿ ಕಛೆರಿಗೆ ಹಾಜರಾಗಬೇಕೆಂಬುದು ಶಿಸ್ತು! ಅದಲ್ಲದೆ ಎಲ್ಲರೂ ಶುಚಿಯಾದ ಬಟ್ಟೆ ಧರಿಸಿಯೇ ಕಛೆರಿಗೆ ಬರಬೇಕು, ತಲೆಕೂದಲನ್ನು ಬಾಚಿಕೊಂಡು ಬರಬೇಕು ….. ಇತ್ಯಾದಿ ಶಿಸ್ತೂ ಸಹ ಅವರ ಕಛೇರಿಯಲ್ಲಿದ್ದವು. ಒಂದು ದಿನ ಅವರ ಕಛೇರಿಯ ಒಬ್ಬ ನೌಕರ ಬೂಟುಗಳಿಗೆ ಪಾಲೀಶ್ ಇಲ್ಲದೆ ಕಛೇರಿಗೆ ಬಂದಿದ್ದರಂತೆ! . ವಿಶ್ವೇಶ್ವರಯ್ಯನವರು ಇದನ್ನು ಗಮನಿಸಿ ಆ ನೌಕರನಿಗೆ ½ ದಿನದ ರಜೆ ಕೊಟ್ಟು ಬೂಟು ಪಾಲೀಶ್‌ ಮಾಡಿಕೊಂಡು ತೊಟ್ಟು ನಾಳೆ ಕಛೆರಿಗೆ ಬರುವಂತೆ ತಿಳಿಸಿದರಂತೆ!
Klive Special Article ಈ ಕಾಲದಲ್ಲಿಯೂ ವಿಶ್ವೇಶ್ವರಯ್ಯನವರಷ್ಟಲ್ಲದಿದ್ದರೂ ಸ್ವಲ್ಪ ಕಡಿಮೆಯಾದರೂ ಸಾರ್ವಜನಿಕ ಸೇವೆಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಶಿಸ್ತು ಇರುವವರು ಕೆಲವರನ್ನು ನಾವು ಕಾಣುತ್ತೇವೆ. ವೇಳೆಗೆ ಸರಿಯಾಗಿ ಕಛೇರಿಗೆ/ ಸಭೆ ಸಮಾರಂಭಗಳಿಗೆ ಹಾಜರಾಗುವುದು, ಸಮಯದ ಮಿತಿಯೊಳಗೇ ಕೆಲಸ ಮಾಡುವುದು, ಸಂಬಳ/ ಸಂಭಾವನೆಯ ಹೊರತು ಬೇರೇನನ್ನೂ ಅಪೇಕ್ಷಿಸದಿರುವುದು…… ಇತ್ಯಾದಿ ಶಿಸ್ತು ಅಳವಡಿಸಿಕೊಂಡಿರುವವರನ್ನು ನಾವು ನೋಡುತ್ತೇವೆ. ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು.
ವಯಕ್ತಿಕ ಜೀವನದಲ್ಲಿ ಹಾಗೆಯೇ ಸಾರ್ವಜನಿಕ ಬದುಕಲ್ಲಿ ಶಿಸ್ತು ಎಲ್ಲರಿಗೂ ಬೇಕು. ಚಿಕ್ಕ ಉದಾಹರಣೆ ಕೊಡಬೇಕೆಂದರೆ ಯಾವ ವಸ್ತುವನ್ನು ತಾನು ಎಲ್ಲಿಂದ ತೆಗೆದುಕೊಂಡಿದ್ದೆನೋ ಕೆಲಸವಾದ ನಂತರ ಅಲ್ಲಿಯೇ ಇಡಬೇಕೆಂಬ ಶಿಸ್ತನ್ನು ಅಳವಡಿಸಿಕೊಂಡರೆ ಆ ವಸ್ತುವನ್ನು ಹುಡುಕಲು ಅನಾವಶ್ಯಕವಾಗಿ ಸಮಯ ಹಾಳು ಮಾಡುವುದು ತಪ್ಪುತ್ತದೆ. ಆರ್ಥಿಕ ಶಿಸ್ತು ಇಲ್ಲದೆ, ಯೋಜನೆ ಇಲ್ಲದೆ ದುಂದು ಮಾಡಿದರೆ ಅವಶ್ಯಕತೆ ಇದ್ದಾಗ ಹಣವಿಲ್ಲದೇ ವ್ಯಥೆಪಡುವುದನ್ನು ತಪ್ಪಿಸಬಹುದು. ಹಾಗೆಯೇ ಮಾನವೀಯ ಸಂಬಂಧಗಳಲ್ಲಿ ಶಿಸ್ತು ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ.
ಸಾರ್ವಜನಿಕ ಜೀವನದಲ್ಲಿ ಶಿಸ್ತಿನಿಂದ ನಡೆದುಕೊಳ್ಳುವುದು ಅತ್ಯಗತ್ಯ. ಸರ್ಕಾರಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿಯೋಜಿತರಾಗಿರುವವರ ಶಿಸ್ತನ್ನು ಪಾಲಿಸಲೇಬೇಕು. ಶಿಸ್ತು ಪಾಲಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಾಗರೀಕ ಸೇವಾನಿಯಮದಲ್ಲೇನೋ ಇದೆ. ಇಂದಿನ ನಾಗರೀಕಸೇವಾ ಸ್ಥಳಗಳಲ್ಲಿ ಅಪೇಕ್ಷಣೀಯ ಶಿಸ್ತು ಪಾಲನೆಯಾಗುತ್ತಿದೆಯೇ ಎಂದು ನೋಡಿದರೆ ವಿಷಾದವೆನ್ನಿಸುತ್ತದೆ. ಯಾವ ಕೆಲಸಕ್ಕೆ ಹೋದರೂ ನಾಳೆ ಬನ್ನಿ, ವಾರಬಿಟ್ಟು ಬನ್ನಿ, ನಮಗೆ ತುಂಬಾ ಕೆಲಸವಿದೆ, ಇದು ಹಾಗಲ್ಲ, ಇದು ಆಗುವುದಿಲ್ಲ, ಇದು ಇಲ್ಲಲ್ಲ, ನೀವು ಅಲ್ಲಿ ಅರ್ಜಿ ಕೊಡಿ ಎಂದು ಅಲೆದಾಡಿಸುವುದು ಸರ್ವೆ ಸಾಮಾನ್ಯವಾಗಿದೆ. ಇದು ಆಗಬಾರದೆಂದು ಸಕಾಲ, ಮಾಹಿತಿ ಹಕ್ಕು ಅಧಿನಿಯಮ ಮುಂತಾದ ಕಾನೂನುಗಳು ಬಂದಿದ್ದರೂ ಜನ ಸಾಮಾನ್ಯರ ಅಲೆದಾಟ ಮಾತ್ರ ತಪ್ಪಿಲ್ಲ. ನಮ್ಮ ಕೆಲಸದ ಕೋರಿಕೆಯ ಅರ್ಜಿ ಕೊಟ್ಟ ಬಳಿಕ ಅರ್ಜಿದಾರ ಮತ್ತೇಕೆ ಬರಬೇಕು? ಕಛೇರಿ ನಿಯಮಾವಳಿ ಪ್ರಕಾರ ನಿಶ್ಚಿತ ಸಮಯದೊಳಗೆ ಕೆಲಸ ಮಾಡಬೇಕು. ಇಲ್ಲವೇ ಹಿಂಬರಹ ನೀಡಬೇಕು. ವಾರ ಬಿಟ್ಟು ಬಂದರೆ ಕೆಲಸ ಆಗಿರುತ್ತದೆಯೇ? ಅನುಮಾನ!. ಬೇಸತ್ತು ಕಛೇರಿ ಮುಖ್ಯಸ್ತರಿಗೆ ತಿಳಿಸಿದರೆ ಆಗಲಾದರೂ ಕೆಲಸವಾಗುವುದೇ? ಆನೇಕ ವೇಳೆ ಅದು ಗೋಜಲಾಗುವುದೇ ಹೆಚ್ಚು! ಕೆಲಸವಾದರೆ ಅಮ್ಮ ಅದೃಷ್ಟ!. ಸಮಯದೊಳಗೆ ನಮ್ಮ ಕೆಲಸವಾಗಬೇಕೆಂದರೆ ರಾಜಕಾರಣಿಗಳ ಮೂಲಕ ಹೇಳಿಸುವುದು ಅಥವಾ ಬೇರೆಯದೇ ಕಸರತ್ತು ಮಾಡಬೇಕಾದ್ದು ಈಗೀಗ ಅನಿವಾರ್ಯವಾಗಿದೆ. ಇಂಥಾ ಮುಂದುವರಿದ ಕಾಲದಲ್ಲೂ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಶೋಚನೀಯ! ಇಂಥಾ ಅಧಿಕಾರಿಯಿಂದ ನಮ್ಮ ಕೆಲಸ ಸಲೀಸಾಗಿ ಆಯಿತು ಎಂದು ಕೇಳಿದ ಉಧಾಹರಣೆಗಳು ಕಡಿಮೆ!. ಈ ಎಲ್ಲಾ ಮಾತುಗಳೂ ಯಾರೊಬ್ಬರನ್ನೋ ದೂರುವುದಕ್ಕಲ್ಲ ಬದಲಾಗಿ ಇಂದಿನ ವಸ್ತುಸ್ಥಿತಿಯೇ ಹಾಗಿದೆ. ಪ್ರತಿಯೊಬ್ಬರಿಗೂ ತನ್ನ ಬದುಕಿನ ಮೌಲ್ಯಗಳ ಬಗ್ಗೆ ಗಮನವಿರಬೇಕು. ಬದುಕಿನ ಅರ್ಥ ಗುರಿ, ಉದ್ದೇಶ ಸಾಧನೆಗಳ ಅರಿವಿರಬೇಕು. ನನಗೆ ದೊರೆತಿರುವ ಈ ಪವಿತ್ರ ನೌಕರಿಯಿಂದ ನಾನು ನನ್ನ ಬದುಕು ಮತ್ತು ಜೀವನವನ್ನು ಎಷ್ಟು ಚೆನ್ನಾಗಿ ನಡೆಸಿಕೊಂಡು ಹೋಗಬಲ್ಲೆ; ಸಮಾಜಕ್ಕೆ ಎಷ್ಟು ಸಹಾಯ ಮಾಡಬಲ್ಲೆ ಎಂದು ಯೋಚಿಸಬೇಕು. ಯಾವ ವಿಶಿಷ್ಟ ಕೆಲಸವನ್ನು ನಿಯಮಾನುಸಾರ ಕಾಲಮಿತಿಯೊಳಗೆ ಸರಿಯಾಗಿ ಮಾಡಲು ಯಾವರೀತಿಯ ಶಿಸ್ತು ಅಳವಡಿಸಿಕೊಳ್ಳಬೇಕು ಎಂಬುದು ಅನುಭದಿಂದ; ಇತರರ ಅನುಭವದಿಂದ; ಮಹನೀಯರ ಜೀವನಕ್ರಮದ ಅದ್ಯಯನದಿಂದ;ಸ್ನೇಹಿತರ/ಸಂಬಂಧಿಗಳ/ಹಿತೈಶಿಗಳ/ವೃತ್ತಿಬಾಂಧವರ/ ಮೇಲಾಧಿಕಾರಿಗಳ ಸಲಹೆ, ಸೂಚನೆ, ಸಹಕಾರದಿಂದಲೂ ಅರಿಯಬಹುದು.
ಶಿಸ್ತು ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಹಕಾರಿ!. ಆದರೆ ಅತಿಯಾದ, ಹಾಗೂ ಅನಾವಶ್ಯಕವಾದ ಶಿಸ್ತಿನಿಂದ ಇತರರ ಜೀವನವನ್ನು ಗೋಳು ಹೊಯ್ದುಕೊಳ್ಳುವುದನ್ನು ನಾವು ನೋಡಿದ್ದೇವೆ. ಅಷ್ಟಲ್ಲದೇ ಅತಿಯಾದ ಶಿಸ್ತಿನಿಂದ ಅನೇಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಅದು ಸರಿಯಲ್ಲ. ಶಿಸ್ತು ನಮ್ಮ ಜೀವನವನ್ನು ಅಚ್ಚುಕಟ್ಟು ಮಾಡಬೇಕೇ ವಿನ: ಇಕ್ಕಟ್ಟು ಮಾಡಬಾರದು.

ಪುಟ್ಟಮ್ಮ ಶಿವಾನಿ
ನಂ 80 ಶಿವಾನಿ 
 ಲಾಲ್‌ ಬಹದ್ದೂರ್‌ ಶಾಸ್ತ್ರೀ ನಗರ 2 ನೇ ಮೆಯಿನ್
ಸೌಳಂಗ ರಸ್ತೆ,  ಶಿವಮೊಗ್ಗ 577204
 E mail: puttammat415@gmail.com

“ನೈಸರ್ಗಿಕ ಮತ್ತು ಸಾವಯವ ಕೃಷಿ” ಕುರಿತಾದ ಪ್ರಾದೇಶಿಕ ವಿಚಾರಸಂಕಿರಣ’ಯಶಸ್ವಿ

0

Regional Organic and Natural Farming Center ಪ್ರಾದೇಶಿಕ ಸಾವಯವ ಮತ್ತು ಪ್ರಾಕೃತಿಕ ಕೃಷಿ ಕೇಂದ್ರ (RCNOF), ಬೆಂಗಳೂರು, ತೋಟಗಾರಿಕೆ ಇಲಾಖೆ. ಕರ್ನಾಟಕ ಸರ್ಕಾರ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ (COE-FPO), ಬೆಂಗಳೂರು ಇವರ ಆಶ್ರಯದಲ್ಲಿ “ನೈಸರ್ಗಿಕ ಮತ್ತು ಸಾವಯವ ಕೃಷಿ” ಕುರಿತಾದ ಪ್ರಾದೇಶಿಕ ವಿಚಾರಸಂಕಿರಣ’ವು ಮಾರ್ಚ್ 12 2026, ಗುರುವಾರದಂದು ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಗಿರೀಶ್ ಆರ್., ಭಾ.ಆ.ಸೇ ಮುಖ್ಯ ಅತಿಥಿಯಾಗಿ ಆಗಮಿಸಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದರು. ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ರೈತರ ಆದಾಯ ಹೆಚ್ಚುವ ಜೊತೆಗೆ ಮಣ್ಣಿನ ಆರೋಗ್ಯವೂ ಕಾಪಾಡಬಹುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಉಪನಿರ್ದೇಶಕರಾದ ಡಾ. ಸದಾನಂದ ಜಿ.ಕೆ. ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಅಪರ ನಿರ್ದೇಶಕರಾದ ಶ್ರೀ ಪಿ.ಎಂ. ಸೊಬರದ್, ಲಾಲ್‌ಬಾಗ್, ಪ್ರಾದೇಶಿಕ ನಿರ್ದೇಶಕರಾದ ಡಾ. ವಿ.ಕೆ. ವರ್ಮಾ (RCNOF) ಹಾಗೂ ತೋಟಗಾರಿಕೆ ಜಂಟಿ ನಿರ್ದೇಶಕರಾದ ಶ್ರೀಮತಿ ಹೇಮ ಹೆಚ್.ಎನ್. ಅವರು ನೈಸರ್ಗಿಕ ಕೃಷಿಯ ಪ್ರಚಾರ ಮತ್ತು ರೈತರಿಗೆ ಇದರ ಅಗತ್ಯತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Regional Organic and Natural Farming Center ಈ ಕಾರ್ಯಕ್ರಮದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಯಶಸ್ವಿಯಾಗಿ ಅನುಸರಿಸುತ್ತಿರುವ ಹತ್ತು ಪ್ರಗತಿಪರ ರೈತರನ್ನು RCNOF ಮತ್ತು COE-FPO ತಂಡದ ವತಿಯಿಂದ ಸನ್ಮಾನಿಸಲಾಯಿತು.

DC Shivamogga ವಾಣಿಜ್ಯ ಸಿಲಿಂಡರ್‌ಗಳ ನಿಯಮಿತ ಸರಬರಾಜು ಮಾಡಲು ಮನವಿ

0

DC Shivamogga ಹೋಟೆಲ್ ಮತ್ತು ಉಪಹಾರ ಗೃಹಗಳಿಗೆ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಅನ್ನು ನಿಯಮಿತವಾಗಿ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಗ್ಯಾಸ್ ಡೀಲರ್‌ಗಳು ಸಿಲಿಂಡರ್ ಸರಬರಾಜು ನಿಲ್ಲಿಸುವ ಸಾಧ್ಯತೆ ಇರುವುದರಿಂದ ಹೋಟೆಲ್ ಮತ್ತು ಉಪಹಾರ ಗೃಹಗಳ ಕಾರ್ಯಾಚರಣೆಗೆ ಅಡಚಣೆಯಾಗಲಿದೆ. ಆದ್ದರಿಂದ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರೋಗಿಗಳು, ಅವರ ಕುಟುಂಬದವರು ಹಾಗೂ ಆರೋಗ್ಯ ಸಿಬ್ಬಂದಿಗೆ ಆಸ್ಪತ್ರೆಗಳ ಸಮೀಪದ ಹೋಟೆಲ್‌ಗಳು ಆಹಾರ ಒದಗಿಸುತ್ತಿರುವುದರಿಂದ ಗ್ಯಾಸ್ ಸರಬರಾಜು ನಿಂತರೆ ತೊಂದರೆ ಆಗುತ್ತದೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರ ಜೀವನಕ್ಕೆ ತೊಂದರೆ ಆಗುತ್ತದೆ. ವಿದ್ಯಾರ್ಥಿಗಳು, ಪ್ರಯಾಣಿಕರು, ಜನರಿಗೆ ಆಹಾರ ಪೂರೈಕೆ ಸಮಸ್ಯೆಯಾಗುತ್ತದೆ ಎಂದರು.

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸರಬರಾಜನ್ನು ನಿಯಮಿತವಾಗಿ ಮಾಡಬೇಕು. ಹೋಟೆಲ್ ಮತ್ತು ಉಪಹಾರ ಗೃಹಗಳಿಗೆ ತಾತ್ಕಾಲಿಕವಾಗಿ ಸಿಲಿಂಡರ್‌ಗಳನ್ನು ಆದ್ಯತೆ ಮೇಲೆ ಹಂಚಿಕೆ ಮಾಡಬೇಕು. ವಿಶೇಷವಾಗಿ ಆಸ್ಪತ್ರೆಗಳ ಸಮೀಪ ಇರುವ ಹೋಟೆಲ್‌ಗಳಿಗೆ ತುರ್ತು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಕಾರ್ಯದರ್ಶಿ ಎನ್.ಗೋಪಿನಾಥ್ ಇದ್ದರು.

MESCOM ಮಾರ್ಚ್ 14 ಮತ್ತು 15 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

0

MESCOM ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮಾರ್ಗಗಳಲ್ಲಿ ಮಾರ್ಚ್ 14 ಮತ್ತು 15 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕುವೆಂಪುನಗರದ ಸೂಡಾ ಸಿ ಮತ್ತು ಡಿ ಬ್ಲಾಕ್, ಶಿವಕುಮಾರಸ್ವಾಮಿ ಲೇಔಟ್ ಮತ್ತು ಇನ್ಫಾ ಸಿಟಿ, ಮ್ಯಕ್ಸ್ ಲೇಔಟ್, ಎಂ.ಇ.ಎಸ್ ಲೇಔಟ್, ಚನ್ನಮುಂಬಾಪುರ, ಬಸವನ ಗಂಗೂರು, ರೆಡ್ಡಿ ಲೇಔಟ್,ಸವಳಂಗ ರಸ್ತೆ ರತ್ನಗಿರಿ ನಗರ ಮತ್ತು ಹುಣಸೋಡು,ಕಲ್ಲಗಂಗೂರು ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ವಿದ್ಯುತ್ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂ ಕೋರಿದೆ.

Kuvempu University ಕುವೆಂಪು ವಿವಿಯಲ್ಲಿ ‘ಸಹ್ಯಾದ್ರಿ ಉತ್ಸವ-2026’ಕ್ಕೆ ಅದ್ಧೂರಿ ಚಾಲನೆ: ಜಾನಪದ ಕಲೆಗಳ ವೈಭವ

0

Kuvempu University ಕುವೆಂಪು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾದ 2026ನೇ ಸಾಲಿನ ‘ಸಹ್ಯಾದ್ರಿ ಉತ್ಸವ’ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಗುರುವಾರ (ಮಾರ್ಚ್ 12) ವಿಶ್ವವಿದ್ಯಾಲಯದ ಆವರಣದಲ್ಲಿ ಅತ್ಯಂತ ಸಡಗರದಿಂದ ಚಾಲನೆ ನೀಡಲಾಯಿತು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸುಮಾರು 40ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಲು ಆಗಮಿಸಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಕುವೆಂಪು ಪ್ರತಿಮೆಗೆ ಹಾರ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಸಾಂಪ್ರದಾಯಿಕವಾಗಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಹ್ಯಾದ್ರಿ ಉತ್ಸವ ಹಾಗೂ ಪಥ ಸಂಚಲನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ವಿಶ್ವವಿದ್ಯಾಲಯದ ಬಸವ ಸಭಾಭವನದಲ್ಲಿ ನಡೆದ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಡಾ. ಜಯಮಾಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಯಮಾಲಾ ಅವರು “ನಾನು ಪುನರ್ವಸತಿಯ ಬಗ್ಗೆ ಸುದೀರ್ಘವಾಗಿ ಸಂಶೋಧನೆ ನಡೆಸಿ ಥೀಸಿಸ್ ಬರೆದಿದ್ದೇನೆ. ಅಲ್ಮಟ್ಟಿಯ ಅಣೆಕಟ್ಟು ಸಂತ್ರಸ್ತರ ನೋವು ಮತ್ತು ಅನುಭವಗಳನ್ನು ಹತ್ತಿರದಿಂದ ಕಂಡಿದ್ದೇನೆ. ನನ್ನ ಈ ಶೈಕ್ಷಣಿಕ ಸಾಧನೆಗಾಗಿ ಅಂದಿನ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಪಡೆದ ಸಾರ್ಥಕತೆ ನನಗಿದೆ. ನಿರಾಶ್ರಿತ ಭಾವ ಎಂಬುದು ಪ್ರತಿಯೊಬ್ಬ ಮನುಷ್ಯನನ್ನೂ ಕಾಡುವಂತಹದ್ದು, ಈ ಕಾರ್ಯಕ್ರಮಕ್ಕೆ ಬರಬೇಕೆಂಬ ಹಂಬಲ ನನಗಿತ್ತು,” ಎಂದು ನೆನಪು ಮಾಡಿಕೊಂಡರು.
Kuvempu University ಕುವೆಂಪು ಅವರ “ಹೋಗುವೆನು ನಾ ಮಲೆಯ ನಾಡಿಗೆ” ಎಂಬ ಸಾಲುಗಳನ್ನು ಸ್ಮರಿಸುತ್ತಾ, “ಮಲೆನಾಡು ಅತ್ಯಂತ ನಯನ ಮನೋಹರವಾದ ಕಾಡುಗಳನ್ನು ಹೊಂದಿರುವ ತಾಣ. ಇದು ಕೇವಲ ಪ್ರಕೃತಿಯಲ್ಲ, ದೈತ್ಯ ಪ್ರತಿಭೆಗಳನ್ನು ನಾಡಿಗೆ ನೀಡಿದ ಪವಿತ್ರ ಭೂಮಿ,” ಎಂದು ಮಲೆನಾಡಿನ ಸಾಹಿತ್ಯಿಕ ಶ್ರೀಮಂತಿಕೆಯನ್ನು ಬಣ್ಣಿಸಿದರು.
“ವಿದ್ಯಾರ್ಥಿಗಳು ತಮ್ಮ ಜಾಣ್ಮೆಯನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸಬೇಕು. ಮನುಷ್ಯನನ್ನು ಮೃದುವಾಗಿರಿಸುವ ಗುಣಗಳಾದ ಸಾಹಿತ್ಯ, ಸಂಗೀತ ಮತ್ತು ಕಲೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ಪ್ರೀತಿ, ಸಹಿಷ್ಣುತೆ ಮತ್ತು ಉಪಕಾರದ ಗುಣಗಳನ್ನು ಮರೆಯಬೇಡಿ. ಮನುಷ್ಯ ಭಾವನಾಶೂನ್ಯನಾದರೆ ಎಷ್ಟೇ ಆಸೆಗಳಿದ್ದರೂ ಬದುಕು ಶೂನ್ಯವಾಗುತ್ತದೆ. ವಿಶ್ವವಿದ್ಯಾಲಯ ನೀಡುವ ಉತ್ತಮ ಶಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳಿ,” ಎಂದು ಕರೆ ನೀಡಿದರು.
ಇಂದಿನ ಜಾಗತಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಇಡೀ ದೇಶ ಮತ್ತು ಜಗತ್ತು ಯುದ್ಧದ ಭೀತಿಯಿಂದ ತುಂಬಿದೆ. ಇಂತಹ ಸಮಯದಲ್ಲಿ ಮನುಷ್ಯನಿಗೆ ಎಲ್ಲಕ್ಕಿಂತ ಮೊದಲು ಬೇಕಾಗಿರುವುದು ಮಾನವೀಯತೆ. ಕುವೆಂಪು ಅವರು ಹೇಳಿದಂತೆ ಇದು ‘ಸರ್ವಜನಾಂಗದ ಶಾಂತಿಯ ತೋಟ’ವಾಗಬೇಕು,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ಮಾತನಾಡಿ, “ಕನ್ನಡ ಸಿನಿಮಾ ರಂಗವು ಅತ್ಯಂತ ಉತ್ತುಂಗದಲ್ಲಿದ್ದ ಕಾಲದಲ್ಲಿ ತನ್ನ ಅಭಿನಯದ ಮೂಲಕ ಮನೆಮಾತಾದವರು ಡಾ. ಜಯಮಾಲಾ. ಅವರು ಕೇವಲ ಬೆಳ್ಳಿ ಪರದೆಯ ತಾರೆಯಲ್ಲ, ಸಾಧನೆಯ ಶಿಖರಕ್ಕೇರಿದ ‘ಧ್ರುವತಾರೆ’. ಅವರೊಟ್ಟಿಗಿನ ನೆನಪುಗಳು ಸದಾ ಹಸಿರು. ಅವರು ಅಭಿನಯಿಸಿದ ಚಿತ್ರಗಳು ‘ಸ್ವರ್ಣ ಕಮಲ’ ಪ್ರಶಸ್ತಿ ಪಡೆದಿರುವುದು ಅವರ ಕಲಾತ್ಮಕ ಪ್ರತಿಭೆಗೆ ಸಾಕ್ಷಿ. ಅಂತಹ ಸಾಧಕಿ ನಮ್ಮ ನಡುವೆ ಇರುವುದು ಹೆಮ್ಮೆಯ ವಿಷಯ,” ಎಂದು ಶ್ಲಾಘಿಸಿದರು.
“ಇವತ್ತಿನ ಪಥಸಂಚಲನದ ವೈಭವವೇ ಅದಕ್ಕೆ ಸಾಕ್ಷಿ. ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಕಲಾ ಪ್ರಕಾರಗಳು ಪಥಸಂಚಲನದ ವಿಶೇಷತೆಯನ್ನು ಹೆಚ್ಚಿಸಿವೆ,” ಎಂದು ಮಲೆನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಣ್ಣಿಸಿದರು. “ವಿದ್ಯಾರ್ಥಿಗಳು ಈ ಮೂರು ದಿನಗಳ ಕಾಲ ಎಲ್ಲವನ್ನೂ ಸಂಭ್ರಮದಿಂದ ಕಲಿಯಬೇಕು. ಇದು ಕೇವಲ ಸ್ಪರ್ಧೆಯಲ್ಲ, ನಿಮ್ಮೊಳಗಿನ ಕಲೆ ಪ್ರದರ್ಶಿಸಲು ಸಿಕ್ಕಿರುವ ಸುವರ್ಣ ಅವಕಾಶ. ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ,” ಎಂದು ಆಶಿಸಿದರು.
ಆಧುನಿಕ ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾ, “ಇಂದಿನ ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಷ್ಟೇ ಮುಂದುವರಿದಿದ್ದರೂ, ಮನುಷ್ಯನ ಮನುಷ್ಯತ್ವವನ್ನು ಮತ್ತು ಭಾವನೆಗಳನ್ನು ಉಳಿಸುವುದು ಕಲೆ ಮಾತ್ರ. ಎಂತಹ ತಂತ್ರಜ್ಞಾನವೂ ಕಲೆಯನ್ನು ಎಂದಿಗೂ ರೀಪ್ಲೇಸ್ ಮಾಡಲು ಸಾಧ್ಯವಿಲ್ಲ. ಮನುಷ್ಯನಿಗೆ ಕೊನೆಯವರೆಗೂ ಭರವಸೆ ಇರುವುದು ಕಲೆ ಮತ್ತು ಸಾಹಿತ್ಯದಲ್ಲಿ ಮಾತ್ರ,” ಎಂಬ ಗಹನವಾದ ವಿಚಾರವನ್ನು ಮಂಡಿಸಿದರು.
ಗಮನಸೆಳೆದ ಪಥಸಂಚಲನ:
ಪಥ ಸಂಚಲನದಲ್ಲಿ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾವಾಡಿ, ಕಂಸಾಳೆ, ಕೊಡವ ನೃತ್ಯ, ನವದುರ್ಗೆಯರ ವೇಷಧಾರಿಗಳು, ಪೂಜಾ ಕುಣಿತ, ನಂದಿ ಕೋಲು, ಕಾಡು ಮನುಷ್ಯರ ವೇಷ ಹಾಗೂ ವೀರಗಾಸೆ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ವಿಶೇಷವಾಗಿ ಕುವೆಂಪು ಶತಮಾನೋತ್ಸವ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ‘ವಿವಿಧತೆಯಲ್ಲಿ ಏಕತೆ’ ಎಂಬ ಪರಿಕಲ್ಪನೆಯ ಪಥ ಸಂಚಲನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಶ್ರೀ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಆರ್. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ. ಹೆಚ್. ಎನ್. ರಮೇಶ್ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಜಿ. ಪ್ರಶಾಂತ್ ನಾಯಕ್, ಪ್ರೊ. ವಿಜಯಕುಮಾರ, ಪ್ರೊ. ವೆಂಕಟೇಶ್, ಪ್ರೊ. ಸತ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಕಣ್ಣಿನ ಆರೋಗ್ಯ ರಕ್ಷಣೆ ಕುರಿತು ನಂದೀಶ್‌ರಿಂದ ವಿಶೇಷ ಮಾಹಿತಿ

0

ಗ್ಲೂಕೋಮಾ ಎನ್ನುವುದು ಕಣ್ಣಿನ ನರ ಹಾನಿಗೊಳಗಾಗುವ ಗಂಭೀರ ಕಣ್ಣಿನ ರೋಗವಾಗಿದೆ. ಕಣ್ಣಿನ ಒಳ ಒತ್ತಡ ಹೆಚ್ಚಾಗುವುದರಿಂದ ಈ ನರ ನಿಧಾನವಾಗಿ ಹಾನಿಯಾಗಬಹುದು. ಈ ರೋಗವನ್ನು ಸಾಮಾನ್ಯವಾಗಿ ‘ನಿಶ್ಶಬ್ದ ದೃಷ್ಟಿ ಕಳ್ಳ’ ಎಂದು ಕರೆಯುತ್ತಾರೆ, ಕಾರಣ ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸದೆ ನಿಧಾನವಾಗಿ ದೃಷ್ಟಿ ಕಡಿಮೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚದಿದ್ದರೆ ಶಾಶ್ವತವಾಗಿ ದೃಷ್ಟಿ ನಷ್ಟವಾಗುವ ಸಾಧ್ಯತೆ ಇದೆ.

ಗ್ಲೂಕೋಮಾ ಲಕ್ಷಣಗಳು: ಗ್ಲೂಕೋಮಾ ಆರಂಭಿಕ ಹಂತದಲ್ಲಿ ಹೆಚ್ಚಿನವರಿಗೆ ಲಕ್ಷಣಗಳು ಕಾಣಿಸದಿರಬಹುದು. ಆದರೆ ಮುಂದಿನ ಹಂತಗಳಲ್ಲಿ ಕೆಳಗಿನ ಲಕ್ಷಣಗಳು ಕಾಣಿಸಬಹುದು ಪಕ್ಕದ ದೃಷ್ಟಿ ನಿಧಾನವಾಗಿ ಕಡಿಮೆಯಾಗುವುದು. ಮಂಜದ ಅಥವಾ ಸ್ಪಷ್ಟವಲ್ಲದ ದೃಷ್ಟಿ. ಬೆಳಕಿನ ಸುತ್ತ ವಲಯ ಕಾಣುವುದು ಕಣ್ಣಿನಲ್ಲಿ ನೋವು ಅಥವಾ ಒತ್ತಡದ ಅನುಭವ ತಲೆನೋವು ಕಣ್ಣು ಕೆಂಪಾಗುವುದು ರಾತ್ರಿ ಸಮಯದಲ್ಲಿ ದೃಷ್ಟಿ ಸಮಸ್ಯೆಱಗ್ಲೂಕೋಮಾ ಆಗುವ ಸಾಧ್ಯತೆ ಹೆಚ್ಚಿರುವವರು ಕೆಳಗಿನವರಿಗೆ ಗ್ಲೂಕೋಮಾ ಆಗುವ ಸಾಧ್ಯತೆ ಹೆಚ್ಚು ೪೦ ವರ್ಷಕ್ಕಿಂತ ಮೇಲ್ಪಟ್ಟವರು ಕುಟುಂಬದಲ್ಲಿ ಗ್ಲೂಕೋಮಾ ಇತಿಹಾಸ ಇರುವವರು. ಮಧುಮೇಹ ಇರುವವರು ಹೆಚ್ಚು ಕಣ್ಣಿನ ಒಳ ಒತ್ತಡ ಇರುವವರು ಹೆಚ್ಚು ಕಾಲ ಸ್ಟಿರಾಯ್ಡ್ ಔಷಧಿ ಬಳಸುವವರು ಹೆಚ್ಚಿನ ಕಣ್ಣಿನ ಸಂಖ್ಯೆ ಇರುವವರುಱಗ್ಲೂಕೋಮಾ ಪತ್ತೆ ಗ್ಲೂಕೋಮಾವನ್ನು ಬೇಗ ಪತ್ತೆ ಹಚ್ಚುವುದು ಅತ್ಯಂತ ಮುಖ್ಯ. ನೇತ್ರ ತಜ್ಞ ವೈದ್ಯರು ಕೆಳಗಿನ ಪರೀಕ್ಷೆಗಳ ಮೂಲಕ ಗ್ಲೂಕೋಮಾವನ್ನು ಪತ್ತೆಹಚ್ಚುತ್ತಾರೆ ಕಣ್ಣಿನ ಒಳ ಒತ್ತಡ ಪರೀಕ್ಷೆ ಆಪ್ಟಿಕ್ ನರ ಪರೀಕ್ಷೆ ದೃಷ್ಟಿ ಕ್ಷೇತ್ರ ಪರೀಕ್ಷೆ ಸ್ಕ್ಯಾನ್ ಪರೀಕ್ಷೆ ಕಾರ್ನಿಯಾ ದಪ್ಪ ಪರೀಕ್ಷೆ ಗ್ಲೂಕೋಮಾ ಚಿಕಿತ್ಸೆ ಗ್ಲೂಕೋಮಾವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ದೃಷ್ಟಿ ಹಾನಿಯನ್ನು ತಡೆಯಬಹುದು.

ಚಿಕಿತ್ಸೆಗಳಲ್ಲಿ ಸಾಮಾನ್ಯವಾಗಿ ಕಣ್ಣಿನ ಔಷಧಿ ಕಣ್ಣಿನ ಒಳ ಒತ್ತಡವನ್ನು ಕಡಿಮೆ ಮಾಡಲು ಲೇಸರ್ ಚಿಕಿತ್ಸೆ ಕಣ್ಣಿನ ಒಳ ದ್ರವ ಸಂಚಾರವನ್ನು ಸುಧಾರಿಸಲು ಶಸ್ತ್ರಚಿಕಿತ್ಸೆ ತೀವ್ರ ಗ್ಲೂಕೋಮಾ ಸಂದರ್ಭದಲ್ಲಿ ಗ್ಲೂಕೋಮಾ ತಡೆಯಲು ಮುಖ್ಯ

ಸಲಹೆಗಳು: 40 ವರ್ಷಕ್ಕಿಂತ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಧುಮೇಹ ಇರುವವರು ನಿಯಮಿತ ಕಣ್ಣಿನ ಪರೀಕ್ಷೆ ಮಾಡಿಸಬೇಕು. ಕಣ್ಣಿನ ಒತ್ತಡವನ್ನು ಪರೀಕ್ಷಿಸುವುದು ಬಹಳ ಮುಖ್ಯ ಯಾವುದೇ ದೃಷ್ಟಿ ಸಮಸ್ಯೆ ಕಂಡುಬಂದರೆ ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಬೇಕು. ನಿಮ್ಮ ಕಣ್ಣುಗಳು ಅಮೂಲ್ಯವಾದವು. ಅವನ್ನು ಕಾಪಾಡುವುದು ನಿಮ್ಮ ಜವಾಬ್ದಾರಿ. ಗ್ಲೂಕೋಮಾವನ್ನು ಬೇಗ ಪತ್ತೆ ಮಾಡಿದರೆ ದೃಷ್ಟಿಯನ್ನು ಉಳಿಸಬಹುದು. ಇದು ಕೇವಲ ಸಾರ್ವಜನಿಕ ಆರೋಗ್ಯ ಜಗೃತಿ ಮಾಹಿತಿ ಮಾತ್ರ. ಚಿಕಿತ್ಸೆಗಾಗಿ ನೇತ್ರ ತಜ್ಞರನ್ನು ಸಂಪರ್ಕಿಸಲು ನಿವೃತ್ತ ನೇತ್ರಾಧಿಕಾರಿ (ಆಪ್ಟೊಮೆಟ್ರಿಸ್ಟ್) ಶಿವಮೊಗ್ಗ ಆಪ್ಟಿಕಲ್ಸ್ ನಂದೀಶ್ ಎನ್.ಟಿ. ಮನವಿ ಮಾಡಿದ್ದಾರೆ.

Department of Kannada and Culture ಪಿ.ಲಂಕೇಶ್ ಬಯಲು ರಂಗಮಂದಿರ ಉದ್ಘಾಟನೆ ಹಾಗೂ ಒಮ್ಮೆ ಹೆಣ್ಣಾಗು ನಾಟಕ ಪ್ರದರ್ಶನ

0

Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸುವರ್ಣ ಸಂಸ್ಕೃತಿ ಭವನ, ರಂಗಾಯಣ, ಶಿವಮೊಗ್ಗ ಇಲ್ಲಿ ನೂತನವಾಗಿ ನಿರ್ಮಿಸಲಾಗಿರುವ ‘ಪಿ ಲಂಕೇಶ್ ಬಯಲು ಮಂದಿರ’ ಉದ್ಘಾಟನಾ ಸಮಾರಂಭವನ್ನು ಮಾ.14 ರ ಸಂಜೆ 4.30 ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನೆರವೇರಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಇವರ ಘನ ಉಪಸ್ಥಿತಿ ಇರಲಿದ್ದು, ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಸದರು, ವಿಧಾನ ಸಭಾ ಮತ್ತು ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಅಧಿಕಾರಿಗಳು, ರಂಗ ಸಮಾಜದ ಸದಸ್ಯರು, ರಂಗ ಕಲಾವಿದರು ಪಾಲ್ಗೊಳ್ಳುವರು.
ಉದ್ಘಾಟನಾ ಕಾರ್ಯಕ್ರಮದ ನಂತರ ಗುಡ್ಡಪ್ಪ ಜೋಗಿ ಅವರಿಂದ ತತ್ವಪದ ಗಾಯನ ಹಾಗೂ ರಂಗಾಯಣ ಮೈಸೂರು ಪ್ರಸ್ತುತಿಯ ಹಿರಿಯ ಕಲಾವಿದರ ಅಭಿಯನದ ಡಾ.ಸವಿತಾರಾಣಿ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದ ಒಮ್ಮೆ ಹೆಣ್ಣಾಗು ನಾಟಕ ಪ್ರದರ್ಶನವಿದ್ದು ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.