Inner Wheel Club Shimoga ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು ಸಾಲು ಒಂದರ ಹಿಂದೆ ಒಂದು ಹಬ್ಬಗಳು ಬರುತ್ತಾ ಹೋಗುತ್ತವೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ವರಮಹಾಲಕ್ಷ್ಮಿ ಹಬ್ಬ ತುಂಬಾ ವಿಶೇಷವಾಗಿದೆ ಪುರಾಣ ಕಾಲದಿಂದಲೂ ಲಕ್ಷ್ಮಿಗೆ ತನ್ನದೇ ಆದ ಇತಿಹಾಸವಿದೆ ಹಾಗೂ ಶ್ರದ್ಧೆ ಮತ್ತು ಭಕ್ತಿಯಿಂದ ವರಮಹಾಲಕ್ಷ್ಮಿಯನ್ನು ಪೂಜಿಸಿದಲ್ಲಿ ಬೇಡಿದ ವರಗಳನ್ನು ಕರುಣಿಸುವ ವರಮಹಾಲಕ್ಷ್ಮಿ ಇಂದಿಗೂ ಸಹ ನಮ್ಮ ಮನೆ ಮನಗಳಲ್ಲಿ ನೆಲೆಸಿದ್ದಾಳೆ ಎಂದು ಇನ್ನರ್ ವೀಲ್ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅವರು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ವೀಣಾ ಸುರೇಶ್ ಅವರ ಮನೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾದ ವರಮಹಾಲಕ್ಷ್ಮಿ ವ್ರತದಲ್ಲಿ ಇನ್ನರ್ ವೀಲ್ ಕ್ಲಬ್ಬಿನ ಎಲ್ಲಾ ಗೆಳತಿಯರು ಈ ವಿಶೇಷ ಪೂಜೆ ಯಲ್ಲಿ ಪಾಲ್ಗೊಂಡು ಫಲ ಪುಷ್ಪ ತಾಂಬೂಲ ಪಡೆದುಕೊಂಡು ದೇವಿಯ ಕೃಪೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಅಧ್ಯಕ್ಷರಾದ ವೀಣಾ ಸುರೇಶ್ ಅವರು ಮಾತನಾಡುತ್ತಾ ದೇವಿಯಲ್ಲಿ ಆಯಸ್ಸು, ಆರೋಗ್ಯ ಹಾಗೂ ಮನ ಶಾಂತಿ ಮತ್ತು ಧೈರ್ಯ ಹಾಗೂ ಜೀವನದ ಸಮಗ್ರತೆಗೆ ಬೇಕಾದ ಎಲ್ಲಾ ಸಂಪತ್ತುಗಳನ್ನು ಅನುಗ್ರಹಿಸುವಂತೆ ದೇವಿಯನ್ನು ಭಕ್ತಿಯಿಂದ ನಾವೆಲ್ಲ ಪ್ರಾರ್ಥಿಸೋಣ ಎಂದು ನುಡಿದರು.
Inner Wheel Club Shimoga ಈ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಮಾಜಿ ಅಧ್ಯಕ್ಷರುಗಳಾದ. ಬಿಂದು ವಿಜಯ ಕುಮಾರ್. ರಾಜೇಶ್ವರಿ ಪ್ರತಾಪ್.. ವಿನೋದ ದಳವೆ. ಸುನಂದಾ ಜಗದೀಶ್. ಶ್ವೇತಾ ಅಶಿತ್. ಜಯಂತಿ ವಾಲಿ. ಗೀತಾ ಬಸವ ಕುಮಾರ್. ವಾಣಿ ಪ್ರವೀಣ್. ಹಾಗೂ ಇನ್ನರ್ ವೀಲ್ ಗೆಳತಿಯರು ಇದ್ದರು
Klive Special Article ‘ಸಂಗೀತ ಕಲೆಯೊಂದು, ಸಾಹಿತ್ಯ ಕಲೆಯೊಂದು, ಅಂಗಾಂಗಭಾವ ರೂಪಣದ ಕಲೆಯೊಂದು, ಸಂಗೊಳಿಸಲೀ ಕಲೆಗಳನುನಯವು ಚರ್ಯೆಯಲಿ, ಮಂಗಳೋನ್ನತ ಕಲೆಯೊ ಮಂಕುತಿಮ್ಮ’ ಎಂದು ಡಿವಿಜಿಯವರ ಕಗ್ಗದಲ್ಲಿ ಹೇಳಲಾಗಿದೆ. ಇಂತಹ ಅಂಗಾಂಗ ಭಾವ ರೂಪಣದ ಮಂಗಳೋನ್ನತ ಕಲೆಯಾದ ಭಾರತೀಯ ಶಾಸ್ತ್ರೀಯ ಭರತನಾಟ್ಯದ ಸುಧೀರ್ಘ ಶಿಕ್ಷಣ ಹಾಗೂ ತಪಸ್ಸಿನ ಸಾಕಾರವಾಗಿ ಏರ್ಪಾಡಾಗುವ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಕೇವಲ ಪ್ರದರ್ಶನವಾಗಿರದೆ ಒಂದು ರೀತಿಯ ಸತ್ವ ಪರೀಕ್ಷೆ ಯಾಗಿರುತ್ತದೆ.
ಪ್ರದರ್ಶನದಲ್ಲಿ ಪ್ರೇಕ್ಷಕರನ್ನು ಮೆಚ್ಚಿಸಿದರೆ ಸಾಕು ಆದರೆ ರಂಗಪ್ರವೇಶದಲ್ಲಿ ಪಂಡಿತರು ಮತ್ತು ವಿಮರ್ಶಕರು ಸಹಾ “ಸೈ” ಎನ್ನಬೇಕು. ನೃತ್ಯ ಪ್ರದರ್ಶನಕ್ಕಾದರೆ ಕೇವಲ ಅಭ್ಯಾಸ ಸಾಕು ಆದರೆ ರಂಗಪ್ರವೇಶಕ್ಕೆ ಅಭ್ಯಾಸದೊಂದಿಗೆ ಕುಶಲತೆಯೂ ಬೇಕು. ಪ್ರದರ್ಶನ ಎಂದರೆ ಗುರುಗಳು ಹೇಳಿ ಕಲಿಸಿಕೊಟ್ಟದ್ದನ್ನು ವಿನಯ ಪೂರ್ವಕವಾಗಿ ಒಪ್ಪಿಸುವುದು ಆದರೆ ರಂಗಪ್ರವೇಶದ ‘ಕುಶಲತೆ’ ಎಂದರೆ ಗುರುಗಳಿಂದ ಕಲಿತುಕೊಂಡುದುದರ ಆಧಾರದ ಮೇಲೆ ಶಿಷ್ಯರು ತಮ್ಮ ಸ್ವಂತ ವ್ಯಕ್ತಿತ್ವವನ್ನು ಬೀರಿ ಕಲೆಯನ್ನು ಅಭಿವೃದ್ಧಿ ಮಾಡಿಕೊಂಡು ತೋರಿಸುವುದಾಗಿರುತ್ತದೆ, ಇದನ್ನು ಕೌಶಲ್ಯ ಎನ್ನಲಾಗುತ್ತದೆ. ಇದು ಅಲ್ಪ ಕಾಲದಲ್ಲಿ ಸಿದ್ಧಿಸುವುದಲ್ಲ ಕನಿಷ್ಠ ಹತ್ತರಿಂದ ಹದಿನೈದು ವರ್ಷಗಳ ಕಾಲ ನಿರಂತರವಾಗಿ ತಪಸ್ಸಿನಂತೆ ಅಭ್ಯಾಸ ಮಾಡಬೇಕು. ಇದಕ್ಕಾಗಿ ಕಲಿಸುವ ಗುರುಗಳಲ್ಲಿ ತಾಳ್ಮೆ ಬೇಕು, ಕಲಿಯುವ ಶಿಷ್ಯರಲ್ಲಿ ಜಾಣ್ಮೆಯೂ ಬೇಕು.
ನೃತ್ಯ ಕಲೆಯು ಪ್ರಪಂಚದಾದ್ಯಂತ ಎಲ್ಲ ದೇಶಗಳಲ್ಲೂ ಇದೆಯಾದರೂ ಭಾರತೀಯವಾದ ಶಾಸ್ತ್ರೀಯ ನೃತ್ಯ ಕಲೆಗೆ ವಿಶ್ವದಲ್ಲಿಯೇ ಪುರಾತನವಾದ ಇತಿಹಾಸ ಹಾಗೂ ಪಾವಿತ್ರ್ಯತೆಯು ಸಹಾ ಇದೆ. ಭರತನಾಟ್ಯವು ಮನುಷ್ಯ ಸೃಷ್ಟಿಯಾಗಿರದೆ ದೈವ ಸೃಷ್ಟಿಯಾಗಿದೆ. Klive Special Article ದೇವತೆಗಳು ಮತ್ತು ಋಷಿಗಳು ಬ್ರಹ್ಮನ ಬಳಿಗೆ ಹೋಗಿ “ಎಲ್ಲರೂ ಕಲಿತು ನಲಿಯಬಹುದಾದ ಆನಂದ ದಾಯಕ ಕಲೆಯೊಂದನ್ನು ಸೃಷ್ಟಿಸಿ ಕೊಡು” ಎಂದು ಕೇಳಿದಾಗ “ಧರ್ಮ ಮರ್ಥಂ ಯಶಃಕಿಂತ್ಯ ಯೋಪದೇಶಂ ಸಂಗ್ರಹಂ, ಭವಿಷ್ಯತಶ್ಚ ಲೋಕಸ್ಯ ಸರ್ವಕರ್ಮಾನುದರ್ಶಕಂ, ಸರ್ವ ಅರ್ಥಶಾಸ್ತ್ರಾರ್ಥ ಸಂಪನ್ನಂ ಶಿಲ್ಪ ಪ್ರವರ್ತಕಂ, ನಾಟ್ಯಾಕಮ್ ಪಂಚಮಂ ವೇದಂ ಸ್ಯೇತಿಹಾಸಂ ಕರೋಮ್ಯಹಂ” ಅಂದರೆ “ಧರ್ಮ ಅರ್ಥ ಕೀರ್ತಿ ಉಪದೇಶ ಸರ್ವಶಾಸ್ತ್ರಗಳ ಸಂಪನ್ನತೆ ಸರ್ವ ಕಲೆಗಳ ಸೊಬಗು ಹಾಗೂ ಬೋಧನೀಯವೂ ರಂಜನೀಯವೂ ಆದ ನೃತ್ಯ ಗೀತೆಗಳ ಇತಿಹಾಸ ವಾಗುವಂಥದ್ದನ್ನು ವೇದಗಳಿಂದ ಹೊಸೆದು ಸೃಷ್ಟಿಸುವೆ” ಎಂದು ಹೇಳಿ “ಋಗ್ವೇದಾತ್ ಸಾಮೇಭ್ಯೋ ಗೀತಮೇವಚ, ಯಜುರ್ವೇದಾತ್ ಅಭಿನಯಂ, ರಸಾನಾಂ ಅಥರ್ವಣಾದಪಿ” ಅಂದರೆ ಋಗ್ ವೇದ ಮತ್ತು ಸಾಮವೇದಗಳಿಂದ ಗೀತವನ್ನು, ಯಜುರ್ವೇದದಿಂದ ಅಭಿನಯವನ್ನು, ಅಥರ್ವಣ ವೇದದಿಂದ ನವ ರಸಗಳನ್ನು ಪಡೆದು ನಾಟ್ಯ ವೇದವನ್ನು ಸೃಷ್ಟಿಸಿಕೊಟ್ಟ. ಇದಕ್ಕೆ ಶಿವನು ‘ಕರಣ’ಗಳನ್ನು ಸೇರಿಸಿದರೆ, ವಿಷ್ಣುವು ‘ವೃತ್ತಿ’ಗಳನ್ನು ಕೊಟ್ಟ. ಹೀಗಾಗಿ ಭರತನಾಟ್ಯವು ಹರಿ ಹರ ಬ್ರಹ್ಮಾದಿಗಳ ವರಪ್ರಸಾದವೆಂಬ ಪವಿತ್ರ ಭಾವನೆಯೂ ಇದೆ. ಇದನ್ನು ಭರತಮುನಿ ತನ್ನ ಮಕ್ಕಳ ಮೂಲಕ ಭರತನಾಟ್ಯವಾಗಿ ಸುಮಾರು 36,000 ಶ್ಲೋಕಗಳ ರೂಪದಲ್ಲಿ ಭೂಲೋಕಕ್ಕೆ ತಂದುಕೊಟ್ಟ ಎಂದು ಹೇಳಲಾಗುತ್ತದೆ. ಆದರೆ ಅದು ನಂತರ ದ್ವಾದಶ ಸಹಸ್ರಿ ಅಂದರೆ 12,000 ಶ್ಲೋಕಗಳ ಗ್ರಂಥವಾಯಿತು ಎನ್ನಲಾಗುತ್ತಿದ್ದು ನಮಗೀಗ ಲಭ್ಯವಿರುವುದು 6,000 ಶ್ಲೋಕಗಳ ಷಟ್ ಸಹಸ್ರಿ ನಾಟ್ಯಶಾಸ್ತ್ರವಾಗಿ ಮಾತ್ರ. ಇದನ್ನು ಅಭಿನವಗುಪ್ತನು 36 ಅಧ್ಯಾಯಗಳಾಗಿ ವ್ಯಾಖ್ಯಾನಿಸಿದ್ದಾನೆ. ಇದರೊಂದಿಗೆ ನಂದಿಕೇಶ್ವರನ ‘ಅಭಿನಯ ದರ್ಪಣ’, ‘ಭರತಾರ್ಣವ’, ‘ಭರತಾರ್ಥ ಚಂದ್ರಿಕಾ’, ‘ವಿಷ್ಣು ಧರ್ಮೋತ್ತರ’, ಸಾರಂಗ ದೇವನ ‘ಸಂಗೀತ ರತ್ನಾಕರ’, ‘ಹಸ್ತಲಕ್ಷಣ ದೀಪಿಕಾ’, ಅಭಿನವ ಗುಪ್ತನ ‘ಧ್ವನ್ಯಾಲೋಕ’, ಧನಂಜಯನ ‘ದಶರೂಪಕ’ ಮುಂತಾದ ಗ್ರಂಥಗಳು ಪ್ರಸ್ತುತ ಭರತನಾಟ್ಯಕ್ಕೆ ಆಧಾರವಾಗಿವೆ. “ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮುಚ್ಛತೆ” ಎಂಬಂತೆ ಭರತನಾಟ್ಯದಲ್ಲಿ ನೃತ್ಯದೊಂದಿಗೆ ಗಾಯನ ಮತ್ತು ವಾದ್ಯಗಳು ಸಹಾ ಮೇಳಯಿಸುತ್ತದೆ. ಯೋಗವು ‘ಚಿತ್ತವೃತ್ತಿ ನಿರೋಧ’ವಾದರೆ ನೃತ್ಯವು ‘ಚಿತ್ತ ವೃತ್ತಿ ವಿಲಾಸ’ ಎಂಬುದಾಗಿಯೂ ಪ್ರಾಜ್ಞರು ಹೇಳುತ್ತಾರೆ.
ಇಂತಹ ಭರತನಾಟ್ಯದ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತರ ಶಿಷ್ಯೆಯಾಗಿ ದಶಕಗಳ ಕಾಲ ಸುಧೀರ್ಘ ತಾಲೀಮನ್ನು ಪಡೆದಿರುವ ದಾವಣಗೆರೆಯ ಕು. ಯಶಸ್ವಿನಿ ಕೆ ವಿ ಆಚಾರ್ ನಗರದ ಬಾಪೂಜಿ ಸಭಾಂಗಣದಲ್ಲಿ ರಂಗಪ್ರವೇಶ ನೆರವೇರಿಸಲಿದ್ದು ಆರಂಭದಲ್ಲಿ ಜೋಗ್ ರಾಗ ರೂಪಕ ತಾಳದಲ್ಲಿ ‘ಪುಷ್ಪಾಂಜಲಿ’ ನೃತ್ಯವನ್ನು ನಂತರ ಅದೇ ರಾಗ ಆದಿತಾಳದಲ್ಲಿ ‘ಗಣೇಶ ಸ್ತುತಿ’ ನೃತ್ಯವನ್ನು ಪ್ರಸ್ತುತಪಡಿಸಿ ಆಮೇಲೆ ಕಷ್ಟ ತರವಾದ ಕಾಲು ಚಲನೆ ಮತ್ತು ತಾಳ ವೈಚಿತ್ರ್ಯಗಳಿಂದ ಕುಣಿಯುತ್ತ ಕೊನೆಗೊಂದು ತೀರ್ಮಾನವನ್ನು ಸ್ವರದ ಮೊದಲ ಮಾತ್ರೆಯೊಂದಿಗೆ ಕೊಡುವ ‘ಜತಿಸ್ವರ’ವನ್ನು ಭಾಗ್ಯಶ್ರೀ ರಾಗ ಹಾಗೂ ಆದಿತಾಳದಲ್ಲಿ ಪ್ರಸ್ತುತಪಡಿಸಲಿದ್ದಾಳೆ. ತದನಂತರ ಹಾಡಿನ ಶಬ್ದಗಳ ವರ್ಣನೆಗಳನ್ನು ಹಲವು ಸಂಚಾರಿ ಭಾವಗಳಿಂದ ಅಭಿನಯಿಸಲು ಅವಕಾಶವಿರುವ ತುಸು ಮಂದಗತಿಯಲ್ಲಿ ಸಾಗುವ ‘ಶಬ್ದಂ’ ನೃತ್ಯವನ್ನು ರಾಗ ಮಾಲಿಕೆ ಮಿಶ್ರಛಾಪು ತಾಳದಲ್ಲಿ ನೀಡಿದ ಮೇಲೆ ಸಂಪ್ರದಾಯದಂತೆ ವಿಷಮ ಅಡವು ಜೋಡಣೆ ಗಳೊಂದಿಗೆ ಭಾವ ರಾಗ ತಾಳಗಳಿಂದ ಕೂಡಿ ಪೂರ್ಣಾನಂದವನ್ನು ಕೊಡುವ ಶೃಂಗಾರಭಾವ ಪ್ರಮುಖವಾದ ‘ಪದವರ್ಣ’ ನೃತ್ಯವನ್ನು ಸಿಂಹೇಂದ್ರ ಮಧ್ಯಮ ರಾಗ ಆದಿತಾಳದಲ್ಲಿ, ‘ಪದಂ’ ನೃತ್ಯವನ್ನು ಗುರ್ಜರಿ ತೋಡಿ ರಾಗ ಮಿಶ್ರಛಾಪು ತಾಳದಲ್ಲಿ ನೀಡಲಿದ್ದು ಮುಂದುವರಿಸುತ್ತಾ ಬಿಲಹರಿ ರಾಗ ಆದಿತಾಳದಲ್ಲಿ ‘ಕೃತಿ’ಯನ್ನೂ, ಕಾಮವರ್ಧನಿ ರಾಗ ಏಕತಾಳದಲ್ಲಿ, ‘ಅಷ್ಟಪದಿ’ಯನ್ನೂ, ರತಿಪತಿ ಪ್ರಿಯ ರಾಗ ತ್ರಿಶ್ರಗತಿ ಏಕತಾಳದಲ್ಲಿ ‘ದೇವರನಾಮ’ ನೃತ್ಯಗಳ ನಂತರ ಭರತನಾಟ್ಯ ಪ್ರಸ್ತುತಿಯ ಕೊನೆಯ ಭಾಗವಾಗಿ ನೃತ್ಯಗಾರರ ತಾಳಜ್ಞಾನ ಹಾಗೂ ಪ್ರಜ್ಞಾಶಕ್ತಿಯ ಸಾಕ್ಷಿಯಾಗಿ ಆಕರ್ಷಕವಾದ ಭಂಗಿಗಳು ತಾಳವೇಗ ಅಡುವುಗಳ ವೈವಿಧ್ಯವುಳ್ಳ ತುಂಬಾ ಪ್ರೇಕ್ಷಣೀಯವಾದ ‘ತಿಲ್ಲಾನ’ವು ದೇಶ ರಾಗ ಆದಿತಾಳದೊಂದಿಗೆ ರಂಗ ಪ್ರವೇಶ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಜತಿಗಳ ರಚನೆಯನ್ನು ವಿದ್ವಾನ್ ವಿಶ್ವಂಭರ ಭಾಗವತರು ಮಾಡಿದ್ದರೆ ನಟುವಾಂಗವನ್ನು ಗುರು ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತ್, ಹಾಡುಗಾರಿಕೆ ಗುರುವಿದ್ವಾನ್ ರಾಜಗೋಪಾಲ ಭಾಗವತ್, ಮೃದಂಗವಾದನ ಮೈಸೂರಿನ ವಿದ್ವಾನ್ ಎಮ್ ಜೆ ಕಿರಣ್ ಕುಮಾರ್, ಕೊಳಲು ವಾದನ ಶ್ರೀರಂಗಪಟ್ಟಣದ ವಿದ್ವಾನ್ ಎಂ ಆರ್ ರಾಜೇಶ್, ಪಿಟೀಲು ವಾದನವನ್ನು ಮೈಸೂರಿನ ವಿದ್ವಾನ್ ಶ್ರೀಕಾಂತ್ ನೀಡಲಿದ್ದು ಕಾರ್ಯಕ್ರಮದ ನಿರೂಪಣೆಯನ್ನು ವಿದ್ವಾನ್ ವಿಶ್ವಂಭರ ಭಾಗವತ್ ಹಾಗೂ ಶ್ರೀಕಾಂತ್ ಭಟ್ ಮಾಡಲಿದ್ದಾರೆ. ರಂಗಪ್ರವೇಶದಲ್ಲಿ ನರ್ತಿಸುವ ಎಲ್ಲಾ ನೃತ್ಯ ಬಂಧಗಳ ಸಾಹಿತ್ಯ ರಚನೆ (ಜಯದೇವ ಕವಿಯ ಅಷ್ಟಪದಿಯನ್ನು ಹೊರತುಪಡಿಸಿ) ಸಂಗೀತ ಸಂಯೋಜನೆಯನ್ನು ವಿದ್ವಾನ್ ಶ್ರೀ ರಾಜಗೋಪಾಲ ಭಾಗವತರು ಮಾಡಿದ್ದಾರೆ. ನೃತ್ಯ ಸಂಯೋಜನೆ ಪರಿಕಲ್ಪನೆಯನ್ನು ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತರು ಮಾಡಿರುತ್ತಾರೆ.
-ನೃತ್ಯ ಗುರುಗಳ ಬಗ್ಗೆ-
ಭರತನಾಟ್ಯವನ್ನು ಹೇಳಿಕೊಡುವುದು ವಿಶೇಷವಲ್ಲ ಆದರೆ ರಂಗಪ್ರವೇಶದ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವುದು ಸಾಮಾನ್ಯ ಸಾಧನೆಯಲ್ಲ. ಬೆಂಗಳೂರು ಮೈಸೂರುಗಳಂತಹ ನಗರಗಳಲ್ಲಿ ಮಾತ್ರ ಇಂತಹ ಕೇಂದ್ರಗಳಿವೆ ಎಂದು ಭಾವಿಸುವ ಕಾಲವಿತ್ತು, ಆದರೆ ದಾವಣಗೆರೆಯಲ್ಲಿ ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ಈ ಸಾಧನೆಯನ್ನು ನಿರಂತರ ಮಾಡುತ್ತಿದ್ದು ಈಗಾಗಲೇ ವಿದುಷಿಯರಾದ ಶ್ರೀಮತಿ ನಯನ ಪ್ರಶಾಂತ್, ಶ್ರೀಮತಿ ನಂದನ, ಶ್ರೀಮತಿ ಡಾ. ಸಂಸ್ಕೃತಿ, ಶ್ರೀಮತಿ ಸಹನಾ, ಶ್ರೀಮತಿ ಡಾ. ಸುನಿಧೀ ಘಟೀಕರ್ ಈಗಾಗಲೇ ರಂಗಪ್ರವೇಶ ಮಾಡಿದ್ದು ಈಗ ಡಾ. ಯಶಸ್ವಿನಿ ರಂಗಪ್ರವೇಶ ಮಾಡುತ್ತಿರುವುದು ದಾಖಲೆ ಎನ್ನಬಹುದು. ಉಭಯ ಗಾನವಿದ್ವಾನ್ ಶ್ರೀ ರಾಜಗೋಪಾಲ ಭಾಗವತ್ ಹಾಗೂ ರುಕ್ಮಿಣಿ ದೇವಿ ಅರುಂಡೇಲ್ ಭರತನಾಟ್ಯ ಶೈಲಿಯ ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತ್ ಸಾಧಕ ದಂಪತಿಗಳ ಶಿಷ್ಯತ್ವದಲ್ಲಿ ಈ ದಾಖಲೆಯ ಭರತನಾಟ್ಯ ರಂಗ ಪ್ರವೇಶಗಳು ನಗರಕ್ಕೆ ಸಾಂಸ್ಕೃತಿಕ ಹೆಮ್ಮೆಯಾಗಿದೆ.
-ಕು.ಯಶಸ್ವಿನಿಯ ಬಗ್ಗೆ-
ಕಲೋಪಾಸಕರ ಕುಟುಂಬದಿಂದಲೇ ಬಂದಿರುವ ಯಶಸ್ವಿನಿಯು ಕುಶಲಕರ್ಮಿ ವಿಶ್ವನಾಥಾಚಾರ್ ಹಾಗೂ ಸಂಗೀತಜ್ಞೆ ಪುಷ್ಪಲತಾ ರವರ ಸುಪುತ್ರಿಯಾಗಿದ್ದು ತನ್ನ ಐದನೇ ವಯಸ್ಸಿನಿಂದಲೇ ಭರತನಾಟ್ಯ ಶಿಕ್ಷಣವನ್ನು ಆರಂಭಿಸಿಕೊಂಡು 2018ರಲ್ಲಿ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಪುರಸ್ಕಾರ ಗಳಿಸಿ ಕಳೆದೆರಡು ವರ್ಷಗಳಿಂದ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಭರತನಾಟ್ಯ ಜೂನಿಯರ್,ಸೀನಿಯರ್, ವಿದ್ವತ್ ಪರೀಕ್ಷೆಗಳ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಾ ನಾಡಿನ ವಿವಿಧ ಕಡೆಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡುವುದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಲಾದ ಯುವಸೌರಭ ಕಾರ್ಯಕ್ರಮ, ಮೈಸೂರಿನ ದಸರಾ ಮಹೋತ್ಸವ, ಲಕ್ಷ್ಮೇಶ್ವರದ ನೃತ್ಯ ಕಾರ್ಯಕ್ರಮ, ನವರಾತ್ರಿ ಸಂಭ್ರಮ ಸಮಾರಂಭಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ವಿಶೇಷ ಮೆಚ್ಚುಗೆ ಗಳಿಸಿದ್ದು ಜೊತೆಯಲ್ಲಿ ಶಿಕ್ಷಣದಲ್ಲೂ ಸಹಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಸರ್ಕಾರದ ವೈದ್ಯಕೀಯ ಸೀಟುಗಳಿಸಿಕೊಂಡು ನಗರದ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಪ್ರಸ್ತುತ ಅಧ್ಯಯನ ಮಾಡುತ್ತಿದ್ದಾರೆ. 2024ರ ‘ಮಿಸ್ ಮಂಗಳೂರು’ ಹಾಗೂ ‘ಮಿಸ್ ದಿವಾ’ ಪ್ರಶಸ್ತಿ ಗಳಿಸಿರುವ ಯಶಸ್ವಿನಿ ಸ್ವಯಂ ರೂಪದರ್ಶಿನಿ ಅಂದರೆ ಫ್ಯಾಶನ್ ಮಾಡೆಲ್ ಆಗಿ ಅನೇಕ ಪ್ರಸಿದ್ಧ ಬ್ರಾಂಡ್ ಗಳಿಗೆ ಆಡ್ ಮಾಡುತ್ತಿದ್ದಾರೆ. ಇಂದು ದಿನಾಂಕ 10.08.2025ರ ಭಾನುವಾರ ಸಂಜೆ 4 ಗಂಟೆಗೆ ಬಾಪೂಜಿ ಸಭಾಂಗಣದಲ್ಲಿ ಇವರ ರಂಗ ಪ್ರವೇಶ ಏರ್ಪಾಡಾಗಿದ್ದು ಎಲ್ಲಾ ಕಲಾಸಕ್ತರಿಗೂ ಮುಕ್ತ ಪ್ರವೇಶವಿದೆ.
-ವಿಶೇಷ ಲೇಖನ: ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-
Malnad Open Group 12ನೇ ವರ್ಷದ ಗೀತಭಾರತಿ-2025 ತಾಯಿ ಭಾರತಿಗೆ ಗೀತೆಗಳ ಆರತಿ ದೇಶಭಕ್ತಿಗೀತೆಗಳ ಕಾರ್ಯಕ್ರಮವು ಇದೇ ಆಗಸ್ಟ್ 10ರ ಭಾನುವಾರ ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಯ ಸುಮಾರು 950 ಕ್ಕೂ ಹೆಚ್ಚಿನ ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಲಿದ್ದಾರೆ.
ಈ ಬಾರಿ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತೀಯ ವಾಯುಸೇನೆಯ ನಿವೃತ್ತ ಸಾರ್ಜೆಟ್.ಎ.ತ್ರಿಲೋಕ್ ರವರು ಉದ್ಘಾಟಿಸಲಿದ್ದಾರೆ.
ಇವರು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಎ.ಎನ್-32 ವಿಮಾನದ ಬ್ಲಿಸ್ಟರ್ ಫೇರಿಂಗ್ ಬದಲಿ ಮತ್ತು ವಿಮಾನ/ಹೆಲಿಕಾಪ್ಟರ್ ರಚನಾತ್ಮಕ ಮಾರ್ಪಾಡು ಮತ್ತು ದುರಸ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2012ರಿಂದಲೂ ‘ಗೀತಭಾರತಿ’ ಕಾರ್ಯಕ್ರಮವನ್ನು ಮಲ್ನಾಡ್ ಓಪನ್ ಗ್ರೂಪ್ ಆಯೋಜಿಸುತ್ತ ಬರುತ್ತಿದ್ದು, ಪ್ರತೀ ಬಾರಿಯೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಶಿವಮೊಗ್ಗಕ್ಕೆ ಪರಿಚಯಿಸುವ, ಸೇನೆಯಲ್ಲಿ ಅವರು ಸಲ್ಲಿಸಿದ ಸೇವೆಯನ್ನು, ಯುದ್ಧದಲ್ಲಿ ಭಾಗವಹಿಸಿದ ವಿವರವನ್ನು ಅವರಿಂದಲೇ ತಿಳಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಗರದ ಜನತೆಗೆ ದೇಶಭಕ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ವಿಶೇಷ ಆಹ್ವಾನಿತರಾಗಿ ಎಸ್.ರುದ್ರೇಗೌಡ ಮಾಜಿ ಶಾಸಕರು, ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಮಾಚೇನಹಳ್ಳಿಯ ಮೆ.ವಿಜಯ್ ಟೆಕ್ನೋಕ್ರಾಟ್ಸ್.ಪ್ರೈ.ಲಿ ನ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಮಹೇಂದ್ರಪ್ಪ, ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಹಾಗೂ ಮಲ್ನಾಡ್ ಓಪನ್ ಗ್ರೂಪ್ ನ ಪರಮೇಶ್ವರ್.ಹೆಚ್ ಉಪಸ್ಥಿತರಿಲಿದ್ದಾರೆ.
Malnad Open Group ಇದೇ ಸಂದರ್ಭದಲ್ಲಿ ಗ್ರೂಪ್ ನ ಹಿರಿಯ ಸದಸ್ಯ ಯು.ಪಿ.ಎಸ್.ಸಿ ಯಲ್ಲಿ 615ನೇ ಶ್ರೇಯಾಕ ಪಡೆದ ಡಾ.ದಯಾನಂದ ಸಾಗರ್.ಎಲ್ ಸನ್ಮಾನಿತರಾಗಲಿದ್ದಾರೆ. ಇದರ ಜೊತೆಗೆ ಗ್ರೂಪ್ ನ ಮೊದಲ ಬ್ಯಾಚ್ ನ ರಾಷ್ಟ್ರಪತಿ ಸ್ಕೌಟ್ ಪುರಸ್ಕಾರ ಪಡೆದ ಲೋಕೇಶ್.ಹೆಚ್ ಮತ್ತು ಹೊನ್ನಾಳಿ ಆಕ್ಸ್ಫರ್ಡ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಚಿತ್ರ ಇವರುಗಳು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರೂಪ್ ನ ಅಧ್ಯಕ್ಷ ಶ್ರೀನಿವಾಸ ವರ್ಮ.ಎಸ್.ಟಿ ಇವರು ವಹಿಸಲಿದ್ದಾರೆ.
ತಾವುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ವಿನಂತಿ.
ತಮ್ಮ ವಿಶ್ವಾಸಿ ನಾಯಕರು ಮತ್ತು ಸದಸ್ಯರು, ಮಲ್ನಾಡ್ ಓಪನ್ ಗ್ರೂಪ್, ಶಿವಮೊಗ್ಗ
Karnataka Rakshana Vedike ಪುರಸಭೆ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಿರುವ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯನ್ನು ಉಳಿಸಿ, ಯಥಾ ಸ್ಥಳದಲ್ಲಿಯೇ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ವತಿಯಿಂದ ಸೊರಬ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಕೆಯ ನೇತೃತ್ವ ವಹಿಸಿದ್ದ ಸೇನೆಯ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್ ಮಾತನಾಡಿ, ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯು 1856ರಲ್ಲಿ ಆರಂಭಗೊಂಡಿದೆ. ಸುಮಾರು ಒಂದೂವರೆ ಶತಮಾನದ ಇತಿಹಾಸ ಇರುವ ಶಾಲೆಯನ್ನು ತೆರವುಗೊಳಿಸುವುದು ಸಲ್ಲದು. ಸ್ವಾತಂತ್ರ್ಯ ಪೂರ್ವದಿಂದಲೂ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣವನ್ನು ಕಲ್ಪಿಸಿದೆ. ಬಡವರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಮಕ್ಕಳಿಗೆ ದಾರಿ ದೀಪವಾಗಿದೆ. ಈ ಶಾಲೆಯಲ್ಲಿ ಕಲಿತವರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. Karnataka Rakshana Vedike ಈ ಮೂಲಕ ಶಾಲೆಯು ತಾಲೂಕಿಗೆ ಕೀರ್ತಿಯನ್ನು ತಂದಿದೆ. ಇಂತಹ ಶಾಲೆ ಸ್ವತ್ತಿನಲ್ಲಿ ಪುರಸಭೆ ನಿರ್ಮಾಣ ಮಾಡುವುದನ್ನು ಕರವೇ ಕನ್ನಡ ಸೇನೆ ಖಂಡಿಸುತ್ತದೆ ಎಂದರು. ಶಾಲೆಯ ಜಮೀನು ಮತ್ತು ಕಟ್ಟಡವನ್ನು ಶೈಕ್ಷಣಿಕ ಚಟುವಟಿಕೆಗೆ ಬಳಕೆ ಮಾಡಬೇಕು ವಿನಃ, ಇತರೆ ಇಲಾಖೆಗೆ ವರ್ಗಾವಣೆ ಮಾಡುವುದು ಸಮಂಜಸವಲ್ಲ. ಪುರಸಭೆಯ ನಡೆ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಅತೀವ ನೋವನ್ನು ತಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಕ್ರಾಂತಿ ಮಾಡಿದ ಶಾಲೆಯು ಹಳೇಯ ವಿದ್ಯಾರ್ಥಿಗಳ ಭಾವನಾತ್ಮಕ ಶಕ್ತಿಯಾಗಿದೆ. ಶಾಲೆಯ ಸ್ವತ್ತನ್ನು ಯಾವುದೇ ಸಂದರ್ಭದಲ್ಲಿಯೂ ಶೈಕ್ಷಣೇತರ ಚಟುವಟಿಕೆಗೆ ನೀಡಬಾರದು. ಒಂದು ವೇಳೆ ನೀಡಿದ್ದಲ್ಲಿ ಸಂಘಟನೆಯ ಜೊತೆಗೆ ಹಳೇ ವಿದ್ಯಾರ್ಥಿಗಳ ಜೊತೆಗೂಡಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರವೇ ಕನ್ನಡಸೇನೆ ಗೌರವಾಧ್ಯಕ್ಷ ಇ. ನಾಗರಾಜ್, ಪ್ರಮುಖರಾದ ಕೆ.ಪಿ. ಶ್ರೀಧರ ನೆಮ್ಮದಿ, ಎಸ್. ರಾಘವೇಂದ್ರ, ಶಿವಯೋಗಿ ಸ್ವಾಮಿ ಸುತ್ತೂರುಮಠ, ಎಂ.ಎಸ್. ಚೇತನ್, ಲಿಂಗರಾಜ ನೇರಲಗಿ, ಶ್ರೀನಿವಾಸ ನಾಯ್ಕ, ಅರುಣ್, ಕೇಶವ ಇತರರಿದ್ದರು.
Klive Special Article ರಕ್ಷಾ ಬಂಧನ” ಎಲ್ಲಾ ಹಬ್ಬಗಳಂತಲ್ಲದೆ ಹೆಣ್ಣು ಮಕ್ಕಳಿಗೆ ವಿಶೇಷವಾದ ಹಬ್ಬ. ಕಾರಣ ಹೆಣ್ಣು ಮಕ್ಕಳು ತಮ್ಮ ಅಣ್ಣ -ತಮ್ಮಂದಿರಿಗೆ (ರಕ್ತ ಸಂಬಂಧಿಯೇ ಆಗಿರಬೇಕಿಲ್ಲ) “ಶ್ರೀರಕ್ಷೆಯ” ಎರವಲಾಗಿ ರಾಖಿಯನ್ನು ಕಟ್ಟುವುದರ ಸಂಭ್ರಮವೇ ರಕ್ಷಾ ಬಂಧನ …. ಅಣ್ಣತಮ್ಮಂದಿರನ್ನೊಳಗೊಂಡ ನಾವು ಸಮಾಜದ ರೂಪವಾಗಿ ಎಲ್ಲಾ ಹೆಣ್ಣು ಮಕ್ಕಳಿಗೆ ಸುರಕ್ಷೆಯನ್ನು ನೀಡಬೇಕಿದೆ .. ಈ ಮಾತಿಗೆ ಕಾರಣ ಇತ್ತೀಚೆಗೆ ಕೆಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ವಿಷಯದ ಗಂಭೀರತೆಯನ್ನು ಅರಿತು ನಮ್ಮ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳು ,ಮಾನ್ಯ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ಅಧೀಕ್ಷಕರ ನೇತೃತ್ವದಲ್ಲಿ ನಮ್ಮ ಜಿಲ್ಲೆಯ ಮಕ್ಕಳ ಸುರಕ್ಷತೆಗೆ MISSION SURAKSHA – Safe Urban And Rural Areas for Knowing and Shielding All children rights ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ಹೇಮಂತ್ ರವರಂತೂ ನಮ್ಮ ಶಿವಮೊಗ್ಗ ಜಿಲ್ಲೆಯನ್ನು ಲೈಂಗಿಕ ದೌರ್ಜನ್ಯ ಮುಕ್ತ ಹಾಗೂ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸುವ ಮಹಾಭಿಲಾಷೆಯನ್ನು ಹೊತ್ತು ಎಲ್ಲಾ ಇಲಾಖೆಗಳನ್ನು ಸಮ್ಮಿಳಿತಗೊಳಿಸಿ ನಗರದ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಕಾವಲು ಸಮಿತಿಗಳನ್ನು ರಚಿಸಿ ಈ ಅಭಿಯಾನದ ಯಶಸ್ಸಿಗೆ ಸಿದ್ದರಾಗಿ ನಿಂತಿದ್ದಾರೆ. ಈ ಮಹತ್ಕಾರ್ಯಕ್ಕೆ ಟೊಂಕ ಕಟ್ಟಿ ನಿಂತು ಸದಾ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಮಾನ್ಯ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಭಿಲಾಷೆಗೆ ಸದಾ ಜೊತೆಯಾಗಿ ನಿಲ್ಲುವ ನಾವು ನಮ್ಮ ಜಿಲ್ಲಾ ಉಪ ನಿರ್ದೇಶಕರಾದ ಮಂಜುನಾಥ್ ರವರ ಸಲಹೆ ಮೇರೆಗೆ ಈ ಮಹತ್ತ್ಕಾರ್ಯದ ಒಳ್ಳೆಯ ಗುರಿಯನ್ನು ಮುಟ್ಟಲು ಹೊರಟು ನಿಂತಿದ್ದೇವೆ . ಹಾಗಾಗಿ ಪ್ರತಿ ಶಾಲೆಯಲ್ಲೂ 17 ಅಂಶಗಳನ್ನೊಳಗೊಂಡ ಕ್ರಿಯಾಯೋಜನೆ ತಯಾರಿಸಿ ಪ್ರತಿ ಗ್ರಾಮದಲ್ಲೂ ಈ ಎರಡು ಮಹಾಮಾರಿಗಳ ತಡೆಗೆ ಕಾರ್ಯ ಪ್ರವೃತ್ತರಾಗಲು ಸೂಚಿಸಲಾಗಿದೆ. Klive Special Article ಈ ಅಭಿಯಾನದ ಮುಖ್ಯ ಭಾಗ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವುದು. ಈ ನಿಟ್ಟಿನಲ್ಲಿ ನಾವು ನಮ್ಮ ತಾಲ್ಲೂಕಿನಲ್ಲಿ ಅಭಿಯಾನವನ್ನು ಕೈಗೊಂಡು ಎಲ್ಲಾ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ನಿರ್ಧರಿಸಿ ,ಪ್ರತಿ ಶಾಲೆಯಲ್ಲಿಯೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಪ್ರತಿದಿನ ಪೋಷಕರ ಮನೆಗೆ ತೆರಳಿ ಅವರ ಮನವೊಲಿಸಿ ಅವರನ್ನು ಶಾಲೆಗೆ ಕರೆ ತರಲು ಪ್ರಾರಂಭಿಸಿದ್ದೇವೆ…ಈಗಾಗಲೇ ಸಾಕಷ್ಟು ಮಕ್ಕಳನ್ನು ಶಾಲೆಯ ಮುಖ್ಯವಾಹಿನಿಗೆ ಕರೆ ತಂದಿದ್ದೇವೆ…… ಈ ಸಂದರ್ಭದಲ್ಲಿ ಒಂದು ಹಳ್ಳಿಗೆ ತೆರಳಿದಾಗ ನಮ್ಮ ಶಿಕ್ಷಕರು ಸಾಕಷ್ಟು ಬಾರಿ ಮನೆಗೆ ತೆರಳಿ ಶಾಲೆಗೆ ಮರುಹಾಜರಾಗಲು ತಿಳಿಸಿದರೂ “ನಾನು ಯಾವುದೇ ಕಾರಣಕ್ಕೂ ಶಾಲೆಗೆ ಬರುವುದಿಲ್ಲ” ಎಂಬ ದಿಟ್ಟ ನಿರ್ಧಾರವನ್ನು ಕೈಗೊಂಡ ಒಂದು ಮಗುವಿನ ಮನೆಗೆ ತೆರಳಿದೆನು ಆ ಮಗುವಿನ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಕೆಯ ನಿರ್ಧಾರ ಇನ್ನೂ ಅಚಲವಾಗಿಯೇ ಇತ್ತು. ಬಹಳಷ್ಟು ಪ್ರಯತ್ನ ನಡೆಸಿ, ಆ ಮಗುವಿಗೆ ಶಾಲೆಯನ್ನು ತೊರೆದರೆ ಹಾಗೂ ಜ್ಞಾನದ ಕೊರತೆಯಾದರೆ ಆಗುವ ನಷ್ಟಗಳನ್ನು ಮನವರಿಕೆ ಮಾಡಿಸಿ ಆಕೆಗೆ ಶಾಲೆಯಲ್ಲಿ ಸಂತಸದ ವಾತಾವರಣ ನಿರ್ಮಾಣದ ಭರವಸೆಯನ್ನು ನೀಡಿದ ನಂತರ ಆಕೆಯನ್ನು ಶಾಲೆಗೆ ಮರಳಿ ತರಲಾಯಿತು… ಮೊದಲು ಭೇಟಿ ನೀಡಿದಾಗ ಆ ಮಗುವಿಗೆ ಶಾಲೆಗೆ ಬರಲು ದುಃಖ ಉಮ್ಮಳಿಸಿ ಬರುತ್ತಿತ್ತು ..ಆದರೆ ಆ ಶಾಲೆಗೆ ಬಂದು ಕುಳಿತ ನಂತರ ಆಕೆಯ ಕಣ್ಣಲ್ಲಿ ಆನಂದ ಭಾಷ್ಪ ತುಂಬಿತ್ತು..ನಾನಿನ್ನೆಂದೂ ಶಾಲೆಯನ್ನು ಬಿಡುವುದಿಲ್ಲ ಎಂದು ಆಕೆ ನಮಗೆ ಭರವಸೆಯನ್ನೂ ನೀಡಿದಳು…..ಈ ಘಟನೆಯ ನಂತರ ನನಗೂ ನನ್ನ ಕೆಲಸದ ಮೇಲೆ ಗೌರವ ಹಾಗೂ ಸಾರ್ಥಕವೆನಿಸಿತು.
ಸಂವಿಧಾನದ 4A ಭಾಗದ 51A ವಿಧಿಯಲ್ಲಿ ಅಡಕವಾಗಿರುವ ಮೂಲಭೂತ ಕರ್ತವ್ಯಗಳಿಗೆ 2002ನೇ ಇಸವಿಯಲ್ಲಿ 86ನೇ ತಿದ್ದುಪಡಿ ಮೂಲಕ 11ನೇ ಕರ್ತವ್ಯವಾಗಿ ತಂದೆ ತಾಯಿ ಅಥವಾ ಪೋಷಕರು ಸಂದರ್ಭಾನುಸಾರ 6 ರಿಂದ 14 ವಯಸ್ಸಿನ ತಮ್ಮ ಮಗುವಿಗೆ ಅಥವಾ ತಮ್ಮ ಪರಿಪಾಲಿತ ಮಗುವಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸಬೇಕು ಎಂದು ಸ್ಪಷ್ಟಪಡಿಸಿದರೂ ಈ ರೀತಿಯ ಹೆಣ್ಣು ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಇನ್ನೂ ಮನೆಯಲ್ಲಿಯೇ ಉಳಿಯುವುದು ಹಾಗೂ ಕೂಲಿಗೆ ತೆರಳುತ್ತಿರುವುದು ಕಂಡುಬರುತ್ತಿದೆ …ಕಾರಣ ಬಡತನ ಮತ್ತಿತರ ತೊಂದರೆಗಳು ಎಂದು ಅವರು ಹೇಳುತ್ತಾರೆ . ಆದರೆ ಇಂತಹ ಮಕ್ಕಳನ್ನು ಮುಖ್ಯ ವಾಹಿನಿಗೆ ತಂದು ಅವರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಅವರ ಕುಟುಂಬದ ಸ್ಥಿತಿ ಸುಧಾರಣೆಯಾಗಿ ಅವರು ಸಮಾಜದಲ್ಲಿ ಸದೃಢರಾಗಿ ಬೆಳೆಯುತ್ತಾರೆ ಇಲ್ಲವಾದಲ್ಲಿ ಈ ರೀತಿಯ ಮಕ್ಕಳೇ ಸಮಾಜದ ಘಾತುಕ ಶಕ್ತಿಗೆ ಬಲಿಯಾಗುತ್ತಾರೆ…ಶಾಲೆಯಿಂದ ಹೊರಗುಳಿದ ಮಕ್ಕಳು ಮುಂದೊಂದು ದಿನ ಸಮಾಜದಿಂದಲೂ ಹೊರಗುಳಿದು ಸಮಾಜಘಾತಕ ಶಕ್ತಿಯಾಗಿಯಾಗಿಯೂ ಬದಲಾಗಬಲ್ಲರು.
ಈ ಬದಲಾವಣೆಗೆ ಕಾರಣ ನಾವುಗಳೇ ಅಂದರೆ ಸಮಾಜವೇ ಆಗಬಹುದು.. ಯಾವುದೇ ಅಭಿಯಾನ ಯಶಸ್ವಿಯಾಗಬೇಕಾದರೆ ಸಮಾಜದ ಅಂದರೆ ಸಾರ್ವಜನಿಕರ ಸಹಭಾಗಿತ್ವ ಬಹಳ ಮುಖ್ಯ “1098” ಸಹಾಯವಾಣಿಯನ್ನು ಮಕ್ಕಳೂ ಸೇರಿಕೊಂಡು ಪ್ರತಿಯೊಬ್ಬರೂ ಬಳಸಬಹುದಾಗಿದೆ ಯಾವುದಾದರೂ ಘಟನೆಗಳು ನಡೆದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಅದರ ಮುನ್ಸೂಚನೆಯನ್ನರಿತು ಮುಂಚಿತವಾಗಿಯೇ ಈ ತರದ ಘಟನೆಗಳನ್ನು ತಡೆಯಲು ಈ “1098”ಸಹಾಯವಾಣಿಯನ್ನು ಬಳಸುವುದರ ಮೂಲಕ ಹಾಗೂ ಸಂಬಂಧಿತ ಇಲಾಖೆಯ ಗಮನಕ್ಕೆ ತರುವುದರ ಮೂಲಕ ಸುರಕ್ಷಾ ಅಭಿಯಾನದ ಯಶಸ್ವಿಗೆ ಕರಣಿಭೂತರಾಗಿ ಈ “ರಕ್ಷಾಬಂಧನ” ದಿನದಿಂದ ಸುರಕ್ಷೆಯ ಭರವಸೆಯನ್ನು ನಮ್ಮ ಮಕ್ಕಳಿಗೆ ನೀಡೋಣ……
ರಮೇಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ
Horticulture Department 2025-26 ನೇ ಸಾಲಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆಗಳಾದ ಅಡಿಕೆ, ಮಾವು, ಕಾಳುಮೆಣಸು, ಮತ್ತು ಶುಂಠಿ ಬೆಳೆಗಳಿಗೆ ಬೆಳೆವಿಮೆ ಯೋಜನೆಯಡಿ ವಿಮೆಯನ್ನು ಪಾವತಿಮಾಡಲು ಆಗಸ್ಟ್ 14 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಈ ಬೆಳೆಗಳನ್ನು ಬೆಳೆದಿರುವ ರೈತರುಗಳು ಬೆಳೆವಿಮೆಯ ಪ್ರಯೋಜನವನ್ನು ಪಡೆಯಲು ಪ್ರತಿ ಎಕರೆಗೆ ಆಯಾ ಬೆಳೆಗಳಿಗೆ ನಿಗದಿ ಮಾಡಿರುವ ಹಣ ಪಾವತಿ ಮಾಡಿ ಇದರ ಸದುಪಯೋಗ ಪಡೆಯಬಹುದಾಗಿದ್ದು, ಅಡಿಕೆಗೆ ರೂ.2560/-, ಮಾವು ರೂ.3200/-, ಕಾಳುಮೆಣಸು ರೂ.1692/-, ಶುಂಠಿ ರೂ.2600/-, ರೈತರುಗಳು ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ. ಸೆಂಟರ್) ಗ್ರಾಮ ಒನ್, ಮತ್ತು ಬ್ಯಾಂಕ್ಗಳಲ್ಲಿ ವಿಮೆ ಕಂತನ್ನು ಪಾವತಿ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ತೋಟಗಾರಿಕೆ ಇಲಾಖೆ ಶಿಕಾರಿಪುರ ಕಛೇರಿ ಹಾಗೂ ದೂ.ಸಂ.08187-223544 ಸಂಪರ್ಕಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯತ್ ಶಿಕಾರಿಪುರ ತಿಳಿಸಿದ್ದಾರೆ
shivamogga veterinary college ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಖಾಲಿಯಿರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆ. 16 ರಂದು ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಪ್ರಾಣಿ ಆಹಾರ ಶಾಸ್ತ್ರ, ಪಶುವೈದ್ಯಕೀಯ ಪರೋಪಜೀವಿ ಶಾಸ್ತ್ರ, ಜಾನುವಾರು ಸಾಕಾಣಕಾ ಸಂಕೀರ್ಣ (ಕುಕ್ಕುಟ/ಜಾನುವಾರು ಉತ್ಪಾದನಾ ನಿರ್ವಹಣ ಶಾಸ್ತ್ರ), ಪಶುವೈದ್ಯಕೀಯ ಶರೀರ ಕ್ರಿಯಾ ಮತ್ತು ಜೀವ ರಸಾಯನ ಶಾಸ್ತ್ರ, ಪಶುವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ಕ್ಷ-ಕಿರಣ ಶಾಸ್ತ್ರ, ಪಶುವೈದ್ಯಕೀಯ ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ, ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ-ಚಿಕಿತ್ಸಾ ವಿಭಾಗ ಮತ್ತು ಶಸ್ತ್ರ ಚಿಕಿತ್ಸೆ ವಿಭಾಗಗಳಲ್ಲಿ ಸಹಾಯಕ ಪ್ರಾದ್ಯಾಪಕರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಭಾರತೀಯ ಕೃಷಿ shivamogga veterinary college ಅನುಸಂಧಾನ ಪರಿಷತ್ತಿನ ನಿಯಮಾವಳಿಯಂತೆ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸುವಂತೆ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.
Kuvempu University 2025-26ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಪದವಿ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಸ್ಟ್ 18ರವರೆಗೆ ಅವಧಿ ವಿಸ್ತರಿಸಲಾಗಿದೆ.
ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕವನ್ನು ಆಗಸ್ಟ್ 08ರವರೆಗೆ ನಿಗದಿಗೊಳಿಸಲಾಗಿತ್ತು.
ಆದರೆ ಕುವೆಂಪು ವಿಶ್ವವಿದ್ಯಾಲಯದ ರಿಪೀಟರ್ಸ್ ಪರೀಕ್ಷೆ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕ ಪದವಿಗಳ ಪರೀಕ್ಷೆಗಳ ಫಲಿತಾಂಶ ಪ್ರಕಟಣೆ ವಿಳಂಬವಾಗಿರುವುದನ್ನು ಗಮನಿಸಿ, ಅಂತಹ ವಿದ್ಯಾರ್ಥಿಗಳಿಗೂ ಅನುಕೂಲವಾಗಲೆಂದು ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಲಾಗಿದೆ.
ಯುಯುಸಿಎಂಎಸ್ ಪೊರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಸಂಬಂಧಿಸಿದ ವಿಭಾಗಗಳಿಗೆ ನೇರವಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
Kuvempu University ಪ್ರವೇಶಾತಿ ಕೌನ್ಸಿಲಿಂಗ್ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ವಿಶ್ವವಿದ್ಯಾಲಯದ ಪರಿಷ್ಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
MESCOM ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-08ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.10 ರಂದು ಬೆಳ್ಳಗ್ಗೆ 09:00 ರಿಂದ ಸಚಿಜೆ 05.30 ರವರೆಗೆ ಈ ವ್ಯಾಪ್ತಿಯ ಅರಣ್ಯ ಕಚೇರಿ, ಇಂದಿರಾಗಾಂಧಿ ಬಡಾವಣೆ, ಪ್ರಿಯದರ್ಶಿನಿ ಬಡಾವಣೆ, ಜಯದೇವ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಕಾಶೀಪ್ಮರ, ತಮಿಳ್ ಕ್ಯಾಂಪ್, ಕುವೆಂಪು ಬಡಾವಣೆ, ಎನ್.ಎಂ.ಸಿ. ಕಾಂಪೌಂಡ್, ಲಕ್ಷ್ಮೀ ಪುರ ಬಡಾವಣೆ, ಆದರ್ಶ ಕಾಲೋನಿ, ಕೆಂಚಪ್ಪ ಲೇಔಟ್, MESCOM ಕಾಮೋದರ ಕಾಲೋನಿ, ಕಲ್ಲಹಳ್ಳಿ ಎ ಇಂದ ಎಫ್ ಬ್ಲಾಕ್, ತಿಮ್ಮಕ್ಕ ಲೇಔಟ್, ಹುಡ್ಕೋ ಕಾಲೋನಿ, ಕರಿಯಣ್ಣ ಬಿಲ್ಡಿಂಗ್, ಹನುಮಂತಪ್ಪ ಬಡಾವಣೆ, ರೇಣುಕಾಂಬ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.