ಕ್ಯಾನ್ಸರ್, ಸಕ್ಕರೆ ಖಾಯಿಲೆಯನ್ನು ಆರಂಭ ಹಂತದಲ್ಲೇ ತಪಾಸಣೆ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ದಿಸೆಯಲ್ಲಿ 1,50,000 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಇದರ ಪೈಕಿ ಈಗಾಗಲೇ 79,000 ಕೇಂದ್ರಗಳು ದೇಶಾದ್ಯಂತ ಸಕ್ರಿಯವಾಗಿವೆ. ಹಳ್ಳಿ ಮತ್ತು ಪಟ್ಟಣಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ಕಾಯಿಲೆಗಳನ್ನು ಪತ್ತೆ ಹಚ್ಚಲು ಸೌಕರ್ಯಗಳು ಇರುತ್ತವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ದೇಶದಲ್ಲಿ ಆರೋಗ್ಯ , ಕ್ಷೇಮ ಕೇಂದ್ರಗಳು
ಪಕ್ಷ ನಿಷ್ಠೆಯಷ್ಟೇ ಸಮಾಜ ನಿಷ್ಠೆಯೂ ಅಗತ್ಯ
ರಾಜಕೀಯ ಅಧಿಕಾರ ಶಾಶ್ವತವಲ್ಲ. ಆದರೆ ಸಮುದಾಯದ ಮತಗಳು ಸೂರ್ಯ ಚಂದ್ರ ಇರುವವರೆಗೂ ಇರುತ್ತವೆ. ಸಮುದಾಯದವರು ಪಕ್ಷನಿಷ್ಠೆ ಜೊತೆಗೆ ಸಮಾಜಕ್ಕೆ ನಿಷ್ಠರಾಗಿರಬೇಕು. ಮಠದ ಕಾರ್ಯಗಳಿಗೆ ಸಮಾಜದವರು ಸಹಕರಿಸಬೇಕು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
‘ನೂರು ದಿನ ಸಾವಿರ ಹಳ್ಳಿ’ ಕಾರ್ಯಕ್ರಮದ ಪ್ರಯುಕ್ತ ಶಿಕಾರಿಪುರದ ಕನಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಠದೊಂದಿಗೆ ಭಕ್ತರು ನಿರಂತರ ಸಂಪರ್ಕ ಹೊಂದಬೇಕು. ನಮ್ಮ ಮತಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯಲು ಭಕ್ತರ ಸಹಕಾರ ಮುಖ್ಯವಾಗಿದೆ. ಪಕ್ಷ ರಾಜಕಾರಣಕ್ಕೆ ಸೀಮಿತರಾಗದೇ ಕುರುಬ ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಸಂಕ್ರಾಂತಿಯಿಂದ ಹೊಸದುರ್ಗ ಶಾಖಾ ಮಠದಿಂದ “ನೂರು ದಿನ ಸಾವಿರ ಹಳ್ಳಿ” ಕಾರ್ಯಕ್ರಮ ಆಯೋಜಿಸಿದ್ದು, ನೂರು ದಿನಗಳಲ್ಲಿ ಸಾವಿರ ಹಳ್ಳಿಗಳಿಗೆ ಭೇಟಿ ನೀಡಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುರುಬ ಸಮಾಜ ಉಪಾಧ್ಯಕ್ಷ ಭದ್ರಾಪುರ ಹಾಲಪ್ಪ, ತಾಲೂಕು ಗೌರವಾಧ್ಯಕ್ಷ ನಗರದ ಮಹಾದೇವಪ್ಪ, ಉಪಾಧ್ಯಕ್ಷ ಗೋಣಿ ಮಾಲತೇಶ್, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಜೆ. ಸುಕೇಂದ್ರಪ್ಪ, ಸಂಚಾರಿ ಕುರಿಗಾರರ ಸಂಘ ರಾಜ್ಯ ಉಪಾಧ್ಯಕ್ಷ ಡಾ.ಪ್ರಶಾಂತ್, ರಾಜ್ಯ ಪ್ರದೇಶ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಂ. ಶರತ್, ಹಾಗೂ ಚಂದ್ರಗುಪ್ತ ಮೌರ್ಯ ಸೊಸೈಟಿ ಅಧ್ಯಕ್ಷ ಸಕಲೇಶ್ ಹುಲ್ಮಾರ್, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಕುಲಾಂತರಿ ತಳಿ : ಕೃಷಿಗೆ ಧಕ್ಕೆ
ಬೆಳೆಗಳಲ್ಲಿ ಕುಲಾಂತರಿ ಪದ್ಧತಿ ಬಂಡವಾಳಶಾಹಿಗಳಿಗೆ ಮಣೆ ಹಾಕಿದಂತೆ. ಈ ಕುಲಾಂತರಿ ಪದ್ಧತಿ ಆಹಾರ ಮಾಲಿನ್ಯ, ಪರಿಸರ ಮಾಲಿನ್ಯದ ಜೊತೆಗೆ ರೈತರ ಮೂಲ ಬೇಸಾಯ ಪದ್ಧತಿ ಕಸಿದುಕೊಂಡಂತಾಗುತ್ತದೆ ಎಂದು ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ. ಹಲವು ದೇಶಗಳು ಕುಲಾಂತರಿ ಬೆಳೆಯನ್ನು ನಿಷೇಧಿಸಿವೆ. ಆದರೆ, ಭಾರತ ಮಾತ್ರ ಇದನ್ನು ಸ್ವೀಕರಿಸುತ್ತಿರುವುದು ದುಃಖದ ಸಂಗತಿಯಾಗಿದೆ. ಈ ತಂತ್ರಜ್ಞಾನದಿಂದ ಕೇವಲ ಪರಿಸರ ಮಾತ್ರ ನಾಶವಲ್ಲ. ಮನುಕುಲಕ್ಕೂ ತೊಂದರೆಯಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕುಲಾಂತರಿ ಪ್ರಯೋಗ ಅನಿವಾರ್ಯವಲ್ಲ. ಯುರೋಪ್ ನ 28ಕ್ಕೂ ಹೆಚ್ಚು ದೇಶಗಳು ಇದನ್ನು ಒಪ್ಪಿಲ್ಲ. ಒರಿಸ್ಸಾ, ಕೇರಳ, ಛತ್ತಿಸ್ ಗಢ್, ಬಿಹಾರ್, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಕೂಡ ಇದನ್ನು ವಿರೋಧಿಸುತ್ತಿವೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕುಲಾಂತರಿ ಪ್ರಯೋಗಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ವೀರೇಶ್, ಎಚ್.ಪಿ. ಹಿರಣ್ಣಯ್ಯ, ಸಣ್ಣ ರಂಗಪ್ಪ, ಮೋಹನ್, ಜಗದೀಶ್ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮಾದರಿ ಶಾಲೆ, ಶೈಕ್ಷಣಿಕ ಪ್ರಗತಿಗೆ ಮುನ್ನುಡಿ
ಕೋವಿಡ್ -19 ಪರಿಣಾಮದಿಂದ ಸುಮಾರು 2 ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿರುವುದು ಸುದ್ದಿಯಾಗಿತ್ತು. ಈ ಬಗ್ಗೆ ಶಿಕ್ಷಣ ಹಾಗೂ ಆರೋಗ್ಯ ತಜ್ಞರ ಸಲಹೆಯಂತೆ ಸರ್ಕಾರ ಶಾಲೆಯನ್ನು ಆರಂಭಿಸಿದೆ.
ಸಾರ್ವಜನಿಕ ವಲಯದಿಂದ ಹಲವರು ಈ ನಿರ್ಧಾರದ ಬಗ್ಗೆ ಟೀಕೆ-ಟಿಪ್ಪಣಿಗಳು ಬಂದವು. ಪ್ರಸ್ತುತ ಶಾಲೆಯ ಆರಂಭವಾಗಿದ್ದು ಮಕ್ಕಳು ಮತ್ತು ಪೋಷಕರಲ್ಲಿ ಸಂತಸ ಮನೆಮಾಡಿದೆ. ಮಕ್ಕಳು ಶಾಲೆಗಳಿಗೆ ಉತ್ಸಾಹದಿಂದ ತೆರಳುತ್ತಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳು ಶಾಲೆಗಳಲ್ಲಿ ಇಂದಿಗೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ನೀಡುವುದು ಸರ್ಕಾರದ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಪಂಚಾಯತಿಗೆ ಒಂದು ಮಾದರಿ ಶಾಲೆ ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಚಿಂತನೆಯ ನಡೆಸಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಬಿ.ಸಿ. ನಾಗೇಶ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮಾದರಿ ಶಾಲೆಯ ರೂಪರೇಷೆಗಳು ಹೇಗಿರಬೇಕು? ಅವುಗಳ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ಮುಂತಾದ ವಿಷಯಗಳನ್ನ ಸರ್ಕಾರವು ಒಂದು ಮಾರ್ಗ ಸೂಚಿಯಾಗಿ ಸಿದ್ಧಪಡಿಸಬೇಕಿದೆ. ಮಾದರಿ ಶಾಲೆ ಆಗುವಲ್ಲಿ ವೃಥಾ ಪೈಪೋಟಿಗೆ ಬಿಡದೆ ಗುಣಮಟ್ಟಕ್ಕೆ ಗಮನ ನೀಡುವಂತಾಗಬೇಕು. ಮಾದರಿ ಶಾಲೆಯ ಚಿಂತನೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾದರೆ ಸರ್ಕಾರದ ಶ್ರಮ ಸಾರ್ಥಕವಾಗುತ್ತದೆ.
ಪ್ರತಿ ಮನೆಗೆ ಪಡಿತರ ಸಧ್ಯದಲ್ಲೇ ನಿರ್ಧಾರ
ಪಡಿತರ ಚೀಟಿದಾರರಿಗೆ ಮನೆಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಯನ್ನು ನವೆಂಬರ್ ಒಂದರಂದು ಜಾರಿಗೆ ತರಲು ಸರ್ಕಾರ ಯೋಜಿಸಿದೆ.ಇದರ ಮೊದಲ ಹಂತವಾಗಿ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೆ ತರಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಹಾರ ಸಚಿವ ಉಮೇಶ್ ಕತ್ತಿ “ಮನೆಬಾಗಿಲಿಗೆ ಪಡಿತರ” ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಸಿದ್ಧತೆ ಆರಂಭಿಸುವಂತೆ ಆದೇಶ ನೀಡಿದ್ದೇವೆ ಎಂದರು.
ಆಂಧ್ರಪ್ರದೇಶದ ಮಾದರಿಯಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಯೋಜನೆಯನ್ನು ಸಿದ್ಧಪಡಿಸಿದೆ. ಯೋಜನೆಯ ಜಾರಿಗೆ ಬೇಕಿರುವ ಸೌಲಭ್ಯಗಳು, ವೆಚ್ಚ, ಮತ್ತಿತರ ವಿವರಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಪ್ರಸ್ತಾವದ ಪ್ರಕಾರ, ಮನೆ ಬಾಗಿಲಿಗೆ ಪಡಿತರ ಸಾಗಿಸುವುದಕ್ಕೆ ಪ್ರತಿ ನ್ಯಾಯಬೆಲೆ ಅಂಗಡಿಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಅವರು ಖರೀದಿಸುವ ವಾಹನಕ್ಕೆ ಸರಕು ಮತ್ತು ಸೇವಾ ತೆರಿಗೆ, ಸಹಾಯಧನ ಸೇರಿದಂತೆ ಶೇ.30 ರಷ್ಟು ನೆರವನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
“ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಇದೆ 28ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ. ಯೋಜನೆ ಅನುಷ್ಠಾನದ ದಿನಾಂಕ ಕುರಿತು ಸಭೆಯಲ್ಲಿ ನಿರ್ಧರಿಸಲಾಗುವುದು” ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇಡೀ ರಾಜ್ಯದಲ್ಲಿ ಯೋಜನೆಯ ಜಾರಿಗೆ 10,000 ವಾಹನಗಳ ಅಗತ್ಯವಿದೆ. ವಾಹನ ಖರೀದಿ ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಯೋಜನೆ ಆರಂಭ ದಿನಾಂಕವನ್ನು ಈಗಲೇ ಹೇಳುವುದು ಕಷ್ಟ ಎಂದು ಸಚಿವರು ತಿಳಿಸಿದ್ದಾರೆ.
ಆತಂಕ ಸೃಷ್ಟಿಸಿದ ಎವೈ 4.2 ವೈರಾಣು
ರಾಜ್ಯದಲ್ಲಿ ಬಹುತೇಕರು ಕೋವಿಡ್ ಲಸಿಕೆ ತೆಗೆದುಕೊಂಡಿರುವುದರಿಂದ ಎವೈ 4.2 ವೈರಾಣು ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ . ಅಶ್ವತ್ ನಾರಾಯಣ್ ಹೇಳಿದ್ದಾರೆ.
ವೈರಾಣುಗಳು ರೂಪಂತರ ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ರೋಗ ನಿರೋಧಕ ಲಸಿಕೆ ಪಡೆಯುವ ಮೂಲಕ ಕೋವಿಡ್ ನಿಯಂತ್ರಿಸಬಹುದು ಎಂದು ಹೇಳಿದರು.
ಸುಮಾರು ಎರಡು ವರ್ಷಗಳ ಹಿಂದೆ ಆರಂಭವಾದ ಕೋವಿಡ್-19 ಸಾಂಕ್ರಾಮಿಕ ರೋಗದ ಕಾಟ ಈಗ ಮತ್ತೊಮ್ಮೆ ಕಾಡುವ ಭೀತಿ ಆವರಿಸಿದೆ. ಬ್ರಿಟನ್, ರಷ್ಯಾ, ಯುರೋಪ್ ನ ಕೆಲವು ದೇಶಗಳಲ್ಲಿ ಪತ್ತೆಯಾಗಿರುವ ಕೋವಿಡ್ ನ ಹೊಸ ತಳಿಯ ವೈರಾಣು ಎವೈ 4.2 ರಾಜ್ಯಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಮೂರು ಸೇರಿ ರಾಜ್ಯದಲ್ಲಿ ಒಟ್ಟು ಏಳು ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿದು ಬಂದಿದೆ.
ಕೆಲದಿನಗಳ ಹಿಂದೆ ಸೋಂಕಿತರ ಮಾಹಿತಿಯನ್ನು ಅನುಕ್ರಮಣಿಕೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.
ಈ ವಿಚಾರವಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಹಿರಿಯ ಅಧಿಕಾರಿಗಳ ಜೊತೆಗೆ ಆರೋಗ್ಯ ಸಚಿವ ಡಾಕ್ಟರ್ ಕೆ.ಸುಧಾಕರ್ ಸಭೆ ನಡೆಸಿದರು.
‘ಬ್ರಿಟನ್ ಮತ್ತು ರಷ್ಯಾದಲ್ಲಿ ಪತ್ತೆಯಾಗಿರುವ ಎವೈ 4.2 ವೈರಾಣು ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಕೋವಿಡ್ ನ ಯಾವುದೇ ಹೊಸ ತಳಿ ಬಂದರೂ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ತಜ್ಞರ ಅಭಿಪ್ರಾಯವನ್ನು ಕೇಳಲಾಗುವುದು. ಎವೈ 4.2 ವೈರಾಣು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದನ್ನು ಗಮನಿಸಬೇಕಾಗಿದೆ ಎಂದು ಹೇಳಿದರು.
ಈ ಕುರಿತು ದೆಹಲಿಯ ವಂಶವಾಹಿ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಅನುರಾಗ್ ಅಗರ್ವಾಲ್ ರವರು, “ಪ್ರಯೋಗಾಲಯದಲ್ಲಿ ಈ ಕೆಲವೇ ವೈರಾಣುವನ್ನು ನೋಡಿರುವುದಾಗಿಯೂ ಆದರೆ, ಅವುಗಳನ್ನು ವರ್ಗೀಕರಿಸುವುದು ಕ್ಲಿಷ್ಟಕರವಾಗಿದೆ” ಎಂದಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸೂಖ್ ಮಾಂಡವಿಯಾ ಅವರು ಈ ಹೊಸ ವೈರಾಣುವಿನ ಬಗ್ಗೆ ತಜ್ಞರು ಅನ್ವೇಷಣೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಎಲ್ಲರ ಅಭಿಮಾನದ ಮನುಷ್ಯ, ಬಂಗಾರಪ್ಪ
ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಜನರ ಸಮಸ್ಯೆಗೆ ಧ್ವನಿಯಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರೆ.
ಸೊರಬದ ಬಂಗಾರ ಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 88ನೇ ಜನ್ಮದಿನದ ಅಂಗವಾಗಿ ಅವರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಕೃಪಾಂಕ, ರೈತರ ಪಂಪಸೆಟ್ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ತಳ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ರೈತರಿಗೆ ಭೂಮಿಯ ಹಕ್ಕನ್ನು ಕೊಡುವುದು ಬಂಗಾರಪ್ಪ ಅವರ ಮೊದಲ ಧ್ಯೇಯವಾಗಿತ್ತು ಎಂದು ಮಧು ಬಂಗಾರಪ್ಪ ನುಡಿದಿದ್ದಾರೆ.
ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡಿದ್ದಾರೆ ಇದು ಬಂಗಾರಪ್ಪ ಅವರ ಬಗೆಗಿನ ಎಲ್ಲರ ಅಭಿಮಾನವನ್ನು ತೋರಿಸುತ್ತದೆ ಎಂದರು.
ರಾಜ್ಯದಲ್ಲಿ ನವೋದ್ಯಮಗಳಿಗೆ ಸ್ವಾಗತ
ರಾಜ್ಯದ ನವೋದ್ಯಮಗಳಿಗೆ ಶೇ.90 ರಷ್ಟು ವಿದೇಶಿ ಹೂಡಿಕೆ ಇದೆ. ಸ್ಥಳೀಯರೂ ಬಂಡವಾಳ ಹೂಡಿದರೆ, ಆರ್ಥಿಕತೆಗೆ ವೇಗ ಸಿಗಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾಕ್ಟರ್ ಸಿ.ಎನ್. ಅಶ್ವತ್ ನಾರಾಯಣ್ ಹೇಳಿದರು.
ಮೈಸೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ‘ಬಿಯಾಂಡ್ ಬೆಂಗಳೂರು’ ಅಭಿಯಾನದಡಿಯಲ್ಲಿ ಆಯೋಜಿಸಿದ್ದ “ದಿ ಬಿಗ್ ಟೆಕ್ ಶೋ” ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಉದ್ಘಾಟಿಸಿದರು.
ಐಟಿ, ಬಿಟಿ , ಉದ್ಯೋಗಗಳು ಎಲ್ಲಾ ನಗರಗಳಲ್ಲಿ ದೊರೆಯಲೆಂದೇ ಭೂಸುಧಾರಣಾ ಕಾಯ್ದೆ ಮತ್ತು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ತರಲಾಗಿದೆ. ಎಲ್ಲಾ ಪದವಿಗಳಲ್ಲಿ ತಾಂತ್ರಿಕ ಶಿಕ್ಷಣದ ವಿಷಯವನ್ನು ಕಡ್ಡಾಯಗೊಳಿಸಲು ಚಿಂತಿಸಲಾಗಿದೆ. ಬೆಂಗಳೂರು ಹೊರತಾಗಿ ಇತರೆಡೆ ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 600 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ರಾಜ್ಯ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,ಮೇಯರ್ ಸುನಂದಾ ಫಾಲನೇತ್ರ , ಕೆಡಿಇಎಂ ಮುಖ್ಯಸ್ಥ ಬಿ.ವಿ.ನಾಯ್ಡು ಮತ್ತು ಇನ್ನಿತರರು ಉಪಸ್ಥಿತರಿದ್ದರು.
ಏತ ನೀರಾವರಿ ಯೋಜನೆ ಪ್ರಗತಿ ವೀಕ್ಷಿಸಿದ : ಬಿ ಎಸ್ ವೈ
ಶಿಕಾರಿಪುರ ತಾಲೂಕು ಕಸಬಾ ಹೋಬಳಿ ಕಾಳೇನಹಳ್ಳಿಯ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಮತ್ತು ಸಂಸದರಾದ ಬಿ. ವೈ. ರಾಘವೇಂದ್ರ ಅವರು ವೀಕ್ಷಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದು ಶಿಕಾರಿಪುರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ವಿಶ್ರಾಂತಿ ಪಡೆಯದೆ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.
