ಟಿ-20 ವಿಶ್ವ ಕಪ್ ಟೂರ್ನಿಯ ಸೂಪರ್ -12 ರ A- ಗುಂಪಿನ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾ ದೇಶದ ನಡುವೆ ಪಂದ್ಯ ನಡೆಯಿತು. ವೆಸ್ಟ್ ಇಂಡೀಸ್ ತಂಡ ಬಾಂಗ್ಲಾ ದೇಶದ ವಿರುದ್ಧ ಭರ್ಜರಿ ಜಯ ಗಳಿಸಿತು.
ಶಾರ್ಜಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.
ಕ್ರಿಸ್ ಗೇಲ್, ಎವಿನ್ ಲೂಯಿಸ್, ಶಿಮ್ರಾನ್ ಹೆಟ್ಮಿಯರ್ ಮತ್ತು ಆಂಡ್ರೆ ರಸೆಲ್ ಮುಂತಾದ ದಿಗ್ಗಜರ ಬೌಲಿಂಗ್ ವೈಫಲ್ಯದಿಂದ ವೆಸ್ಟ್ ಇಂಡೀಸ್ ತಂಡದ ರನ್ ರೇಟ್ ಕುಸಿತ ಕಂಡಿತ್ತು. ಈ ಸಂದರ್ಭದಲ್ಲಿ ಕೈ ಹಿಡಿದವರು ನಿಕೋಲಸ್ ಪೂರನ್ 22 ಎಸೆತ ಗಳಲ್ಲಿ 40 ರನ್ ಗಳಿಸಿದ ಪೂರನ್ ಅವರ ರೋಚಕ ಬ್ಯಾಟಿಂಗ್ ನಿಂದ ಸವಾಲಿನ ಮೊತ್ತ ಕಲೆ ಹಾಕಿದರು.
ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ ಅವರನ್ನ ಬಾಂಗ್ಲಾದೇಶದ ಬೌಲರ್ ಎರಡಂಕಿ ಮೊತ್ತ ಗಳಿಸುವಷ್ಟರ ಮೊದಲೇ ವಿಕೆಟ್ ತೆಗೆದು ವಾಪಸ್ ಕಳುಹಿಸಿದರು. ನಾಯಕ ಮಹಮ್ಮದ್ದುಲ್ಲ ಅವರ ನಿರ್ಧಾರ ಸಮರ್ಥಿಸಿಕೊಂಡು 3 ನೇ ಕ್ರಮಾಂಕದ ಬ್ಯಾಟಿಂಗ್ ಗೆ ಇಳಿದ ಕಾಸ್ಮಸ್ ಚೀಸ್ ಪಾದಾರ್ಪಣೆ ಪಂದ್ಯದಲ್ಲಿ ಬಹಳ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಆಸರೆಯಾದರು.
143 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಬಾಂಗ್ಲಾದೇಶ ಒಂದು ಹಂತದಲ್ಲಿ ಜಯ ಸಾಧಿಸುತ್ತ ಹೆಜ್ಜೆ ಹಾಕಿತ್ತು. ಆದರೆ, ನಂತರ ವೆಸ್ಟ್ ಇಂಡೀಸ್ ತಂಡದ ಬೌಲರ್ ಗಳ ಪ್ರಾಬಲ್ಯದಿಂದಾಗಿ ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶದ ಗೆಲುವಿಗೆ 13 ರನ್ ಬೇಕಾಗಿತ್ತು. ಆದರೆ ವೆಸ್ಟ್ ಇಂಡೀಸ್ ತಂಡದ ಪ್ರಭಾವಶಾಲಿ ಬೌಲರ್ ಆದ ಆಂಡ್ರೆ ರಸಲ್, ಅವರ ರೋಮಾಂಚಕ ಬೌಲಿಂಗ್ ನಿಂದ ನಿಯಂತ್ರಿಸಿದರು.
ವೆಸ್ಟ್ ಇಂಡೀಸ್ ತಂಡದ ಎಲ್ಲಾ ಆಟಗಾರರಿಂದ ಉತ್ತಮ ಪ್ರದರ್ಶನದ ಪ್ರತಿಫಲವಾಗಿ ಬಾಂಗ್ಲಾದೇಶದ ವಿರುದ್ಧ 3 ರನ್ ಗಳಿಂದ ಜಯ ಸಾಧಿಸಿ ಸತತ ಎರಡು ಸೋಲಿನ ನಂತರ ಚೇತರಿಸಿಕೊಂಡು ಹಾಲಿ ಚಾಂಪಿಯನ್ ಶಿಪ್ ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಸೆಮಿಫೈನಲ್ ನತ್ತ ವೆಸ್ಟ್ ಇಂಡೀಸ್
ತೈಲ ಬೆಲೆ ಏರಿಕೆ ಅಗತ್ಯ ವಸ್ತುಗಳ ಧಾರಣೆ ಏರಿಕೆಗೆ ಕಾರಣ

ತೈಲ ಬೆಲೆ ಏರಿಕೆ ಅಗತ್ಯ ವಸ್ತುಗಳ ಧಾರಣೆ ಏರಿಕೆಗೆ ಕಾರಣ
ಲೇ :ಪ್ರೊ.ಬಿ.ಎಂ. ಕುಮಾರಸ್ವಾಮಿ , ಶಿವಮೊಗ್ಗ
ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಳೆದ ಏಳು ಎಂಟು ತಿಂಗಳಿಂದ ವೇಗವಾಗಿ ಏರುತ್ತಿದೆ. ಅದರ ನೇರ ಪರಿಣಾಮವಾಗಿ ಎಲ್ಲ ಅಗತ್ಯ ವಸ್ತುಗಳ ಧಾರಣೆಗಳು ಏರುತ್ತಿವೆ ಜನಜೀವನ ಜರ್ಜರಿತವಾಗುತ್ತಿದೆ.
ತೈಲ ಬೆಲೆ ಏಕೆ ಏರುತ್ತಿದೆ?
ತೈಲ ಬೆಲೆ ಏರಿಕೆಗೆ ಮುಖ್ಯ ಮೂರು ಕಾರಣಗಳಿವೆ
*ಕಚ್ಚಾತೈಲದ ಬೆಲೆ ಏರಿಕೆ
ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರುತ್ತಿದೆ. 2020 ರ ಎಪ್ರಿಲ್ ನಲ್ಲಿ ಕಚ್ಚಾತೈಲದ ಬೆಲೆ 1ಬ್ಯಾರಲ್ ಗೆ (159 ಲೀಟರ್) 9 ಡಾಲರ್ ಇತ್ತು. 2021 ರ ಸೆಪ್ಟೆಂಬರ್ ಗೆ ಅದು 74.79 ಡಾಲರ್ ಆಗಿದೆ. ಅಕ್ಟೋಬರ್ 18 ರಂದು 84.84 ಡಾಲರ್ ಮುಟ್ಟಿತ್ತು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೆ ಇದು ಒಂದು ಕಾರಣ.
ರೂಪಾಯಿ ಡಾಲರ್ ವಿನಿಮಯ ದರ ಕುಸಿತ
ರೂಪಾಯಿನ ಡಾಲರ್ ವಿನಿಮಯ ದರ ಕುಸಿತ ಇನ್ನೊಂದು ಕಾರಣ. ಈ ವರ್ಷದ ಅಕ್ಟೋಬರ್ 4 ರಂದು ಡಾಲರ್ ಗೆ ರೂಪಾಯಿ 74.31 ಇದ್ದ ವಿನಿಮಯ ದರ 13 ರಂದು ಡಾಲರ್ ಗೆ ರೂಪಾಯಿ 75.26 ದಾಟಿ ಹೋಗಿದೆ. ಡಾಲರ್ ದುಬಾರಿಯಾದಂತೆ ಆಮದಾಗುವ ಕಚ್ಚಾ ತೈಲದ ಬೆಲೆಯೂ ರುಪಾಯಿ ನಲ್ಲಿ ಸಹಜವಾಗಿ ಏರುತ್ತಿದೆ.
ಪೆಟ್ರೋಲ್ ಡೀಸೆಲ್ ತೆರಿಗೆ ಏರಿಕೆ
ಪೆಟ್ರೋಲ್ ಡೀಸೆಲ್ ದರಗಳ ವಿಪರೀತ ಏರಿಕೆಗೆ ಮೂರನೆಯ ಹಾಗೂ ಅತ್ಯಂತ ಪ್ರಮುಖ ಕಾರಣ, ತೆರಿಗೆಗಳು. ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಡೀಸೆಲ್ ಮೇಲೆ ಬೇರೆ ಬೇರೆ ತೆರಿಗೆಗಳನ್ನು ವಿಧಿಸುತ್ತವೆ. ಕೇಂದ್ರ ಸರ್ಕಾರ ಎಕ್ಸೈಸ್ ಡ್ಯೂಟಿ ಹಾಕಿದರೆ, ರಾಜ್ಯ ಸರ್ಕಾರಗಳು ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಹಾಕುತ್ತವೆ. ಅದರದರ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ. ತೈಲ ಬೆಲೆಯ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಹೊರೆ ಎಷ್ಟಿದೆ ಎಂದರೆ, ಬೆಲೆಯ ಶೇ.60 ಪಾಲು ತೆರಿಗೆಯೇ. ಪೆಟ್ರೋಲಿಯಂ ಸಚಿವಾಲಯದ ವರದಿಯ ಪ್ರಕಾರ 2014 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಮೂಲ ಬೆಲೆಯ ಶೇಕಡ 34 ರಷ್ಟಿತ್ತು. ಫೆಬ್ರುವರಿ 2021 ರ ಹೊತ್ತಿಗೆ ತೆರಿಗೆ ಹೊರೆ ಶೇ. 60 ಕ್ಕೆ ಏರಿತ್ತು ( ಕೇಂದ್ರ ತೆರಿಗೆ ಶೇ. 37 ಹಾಗೂ ರಾಜ್ಯ ತೆರಿಗೆ ಶೇಕಡ 23).
ಪೆಟ್ರೋಲ್ ಡೀಸೆಲ್ ಬೆಲೆ ಇಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ದರ ಕಡಿಮೆ ಮಾಡುವುದು ಒಂದೇ ದಾರಿ.
ಪೆಟ್ರೋಲ್ ಡೀಸೆಲ್ ಪ್ರಧಾನ ಸಾರಿಗೆ ಇಂಧನಗಳಾಗಿದ್ದರಿಂದ ಅವುಗಳ ಬೆಲೆ ಏರಿಕೆಯೇ ಸಕಲ ಸರಕು-ಸೇವೆಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಅಗತ್ಯ ವಸ್ತುಗಳ ಬೆಲೆ ಏರುತ್ತಿರುವುದಕ್ಕೆ ತೈಲ ಬೆಲೆ ಏರಿಕೆ ಪ್ರಮುಖ ಕಾರಣ ಎನ್ನಬಹುದು.
ಪೆಟ್ರೋಲ್ ಡಿಸೇಲ್ ಗಳ ತೆರಿಗೆಯನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುವ ಬಗ್ಗೆ ಚಿಂತನೆ ಪ್ರಾರಂಭವಾಗಿದೆ. ಜಿ.ಎಸ್ ಟಿ ಯಲ್ಲಿ ಅತಿ ಹೆಚ್ಚಿನ ತೆರಿಗೆ ದರ ಶೇಕಡಾ 28. ಐಷಾರಾಮಿ ವಸ್ತುಗಳ ಮೇಲೆ ಈ ತೆರಿಗೆ ವಿಧಿಸಲಾಗುತ್ತದೆ. ಪೆಟ್ರೋಲ್ ಡೀಸೆಲ್ ಗೆ ತೆರಿಗೆ ವಿಧಿಸಿದರೂ ಸಹ ಅವುಗಳ ಬೆಲೆ ಶೇಕಡ 50ರಷ್ಟು ಕಡಿಮೆಯಾಗುತ್ತದೆ.
ಆದರೆ ಇದಕ್ಕೆ ಕೇಂದ್ರ ಸರಕಾರವಾಗಲೀ, ಯಾವುದೇ ರಾಜ್ಯ ಸರ್ಕಾರವಾಗಲೀ ಸಿದ್ಧವಿಲ್ಲ. ಕಾರಣ ಎರಡೂ ಸರ್ಕಾರಗಳಿಗೆ ಅದು ಪ್ರಮುಖ ಆದಾಯ ಮೂಲ.
2020 – 21 ರಲ್ಲಿ ಕೇಂದ್ರಕ್ಕೆ ಪೆಟ್ರೋಲ್ ಡೀಸೆಲ್ ಮೇಲಿನ ಎಕ್ಸೈಸ್ ಡ್ಯೂಟಿಯಿಂದ ಬಂದ ಆದಾಯ 3.35 ಲಕ್ಷ ಕೋಟಿ ರೂಪಾಯಿ. 2019 -20 ರಲ್ಲಿ ಕೇವಲ 1.78 ಲಕ್ಷ ಕೋಟಿ ರೂಪಾಯಿ.
ಕರ್ನಾಟಕ ಸರ್ಕಾರಕ್ಕೆ ತೆರಿಗೆಯಿಂದ 2020- 21 ರ ಮೊದಲ ಆರು ತಿಂಗಳಲ್ಲಿ ಬಂದ ಆದಾಯ ರೂಪಾಯಿ 6,492 ಕೋಟಿ. 2021 22 ರ ಇದೇ ಅವಧಿಯಲ್ಲಿ ರೂಪಾಯಿ 9,723 ಕೋಟಿ ಆದಾಯ ಬಂದಿದೆ.
ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?
ಮೊಳಗಿದ ಕನ್ನಡ ಕಹಳೆ
ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸುವ ನಿಮಿತ್ತ ಜಿಲ್ಲಾದ್ಯಂತ ಐತಿಹಾಸಿಕ ಸ್ಥಳಗಳಲ್ಲಿ ಆಯೋಜಿಸಿದ್ದ ಲಕ್ಷಾಂತರ ಕಂಠಗಳಲ್ಲಿ ಗೀತ ಗಾಯನ ಎಲ್ಲರ ಕಣ್ಮನ ಸೆಳೆಯಿತು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಶಿವಮೊಗ್ಗ ಡಿಸಿ ಕಚೇರಿ, ಕಿಮ್ಸ್ ವೈದ್ಯಕೀಯ ವಿಜ್ಞಾನ ಸಂಸ್ಥೆ ಶಿವಮೊಗ್ಗ, ಕುವೆಂಪು ವಿಶ್ವವಿದ್ಯಾಲಯ ಸೇರಿದಂತೆ 9 ಸ್ಥಳಗಳಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಶ್ವೇತವರ್ಣದ ವಸ್ತ್ರವನ್ನು ಧರಿಸಿ, ವಿವಿಧ ತಂಡಗಳು ಗೀತ ಗಾಯನವನ್ನು ಪ್ರಸ್ತುತಪಡಿಸಿದರು.
ರಾಷ್ಟ್ರಕವಿ ಕುವೆಂಪು ರಚಿತ ಬಾರಿಸು ಕನ್ನಡ ಡಿಂಡಿಮವ, ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮದ್ ರಚನೆಯ ಜೋಗದ ಸಿರಿ ಬೆಳಕಿನಲ್ಲಿ, ಮತ್ತು ಹಂಸಲೇಖ ಅವರ ರಚನೆಯ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
ಶಿವಮೊಗ್ಗ ಮಹಾನಗರಪಾಲಿಕೆ ಸಹಯೋಗದಲ್ಲಿ ಶಿವಪ್ಪ ನಾಯಕ ಮಾಲ್ನಲ್ಲಿ ಸಾಮೂಹಿಕ ಗೀತಗಾಯನ ನೆರವೇರಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾರ್ಗದರ್ಶನ ಮತ್ತು ಇತರೆ ಸಹಯೋಗದೊಂದಿಗೆ ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಗಿ, ಸರ್ಕಾರ ನಿಗದಿಪಡಿಸಿದ ಮೂರು ಕನ್ನಡ ಗೀತೆಗಳ ಗಾಯನ ನಂತರ ಸಮಾಪ್ತಿಗೊಂಡಿತು.

ವಿಶ್ವವಿಖ್ಯಾತ ಜೋಗ ಜಲಪಾತದ ಎದುರು ವಸುಧ ಶರ್ಮ ಮತ್ತು ತಂಡದವರು ಕೆ ಎಸ್ ನಿಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯನ್ನು ಪ್ರಸ್ತುತಪಡಿಸಿದರು. ಇಲ್ಲಿ ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿದಂತೆ ನೂರಕ್ಕೂ ಹೆಚ್ಚು ಜನ ಪಾಲ್ಗೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನೆರವೇರಿಸಿದರು.
ಕನ್ನಡ ನಾಡು, ನುಡಿ ಗಾಯನಕ್ಕೆ ಜೋಗ ಜಲಪಾತದ ಸೌಂದರ್ಯ ಮಾರು ಹೋದಂತೆ ಭಾಸವಾಗುತ್ತಿತ್ತು.
ಕನ್ನಡ ಉಳಿಸಿ ಬೆಳೆಸುತ್ತೇನೆ ಎನ್ನುವ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ಉಪವಿಭಾಗಧಿಕಾರಿ ಡಾ.ಎಲ್. ನಾಗರಾಜ್ ಬೋಧಿಸಿದರು.
ಶಿವಮೊಗ್ಗ ಲೀಡ್ ಬ್ಯಾಂಕ್ ಕೆನರಾ ಮತ್ತು ರಾಜ್ಯ ಮಟ್ಟದ ಬ್ಯಾಂಕ್ ಗಳ ಸಮಿತಿ ಆಯೋಜಿಸಿದ್ದ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್ ಗಳ ಸಾಲಮೇಳದಲ್ಲೂ ಕನ್ನಡ ಡಿಂಡಿಮ ಬಾರಿಸಿತು.
T – 20 ಅಸಿಸ್ ಗೆಲುವಿನ ನಗೆ
ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ A-ಗುಂಪಿನಲ್ಲಿರುವ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಿತು. ಶ್ರೀಲಂಕಾ ತಂಡದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಜಯ ಗಳಿಸಿತು.
ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಆಡಿದ ಶ್ರೀಲಂಕಾ ತಂಡವು ಉತ್ತಮ ಆರಂಭ ಮಾಡಿತು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 154 ರನ್ ಸಾಧಾರಣ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಆಸ್ಟ್ರೇಲಿಯಾ ತಂಡ ಕೇವಲ 17 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 155 ರನ್ ಬಾರಿಸಿ 7 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಲಂಕಾ ಇನ್ನಿಂಗ್ಸ್ ನ 3 ನೇ ಓವರ್ ನಲ್ಲಿಯೇ ಪ್ಯಾಟ್ – ಕಮಿನ್ಸ್ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಪಥುಮ್ – ನಿಸಾಂಕಾ 7 ರನ್ ಗಳಿಗೆ ಔಟಾದರು. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 27 ರನ್ ಗಳಿಗೆ 2 ವಿಕೆಟ್ ತೆಗೆದರು.ಮತ್ತು ಪ್ಯಾಡ್ ಕಮಿನ್ಸ್ 34 ರನ್ ಗಳಿಗೆ 2 ವಿಕೆಟ್ ತೆಗೆದರು. ಹಾಗೆಯೇ ಸ್ಪಿನ್ನರ್ ಯಾಡಂ ಜಂಪಾ 12 ರನ್ ಗಳಿಗೆ 2 ವಿಕೆಟ್ ತೆಗೆದರು. ಇವರ ಉತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡವು ಉತ್ತಮ ಮೊತ್ತ ಕಲೆಹಾಕದಂತೆ ತಡೆಯೊಡ್ಡಿದರು. ಆದರೆ ಅಂಕಣದಲ್ಲಿದ್ದ ಕುಶಾಲ ಪರೆಕಾ ಕೇವಲ 25 ಎಸೆತಕ್ಕೆ 35 ರನ್ ಗಳಿಸಿದರು. ಹಾಗೆಯೇ ಅವರೊಂದಿಗೆ ಸೇರಿಕೊಂಡು ಆಟ ಆಡಿದ ಅಸಲಂಕಾ 27 ಎಸೆತಕ್ಕೆ 35 ರನ್ ಗಳಿಸಿ ಇವರ ಜೊತೆಯಾಟದಲ್ಲಿ 63 ರನ್ ಸೇರಿಸಿ ರನ್ ರೇಟ್ ಹೆಚ್ಚಿಸಿದರು.
ಆದರೆ ಆಸ್ಟ್ರೇಲಿಯಾ ತಂಡದ ಬೌಲರ್ ಗಳಾದ ಸ್ಪಿನ್ನರ್ ಯಾಡಮ್ ಜಂಪಾ ಮತ್ತು ಮಿಚೆಲ್ ಸ್ಟಾರ್ಕ್ ಇವರ ರೋಮಂಚಕ ಬೌಲರ್ ನಿಂದ 2 ವಿಕೆಟ್ ಕಳೆದುಕೊಂಡ ಶ್ರೀಲಂಕಾ ತಂಡ ರನ್ ಗಳಿಕೆಯ ವೇಗ ಕಡಿಮೆ ಮಾಡಿಕೊಂಡಿತು.
ಅಂತೆಯೇ ನಂತರ ಅಂಕಣಕ್ಕೆ ಇಳಿದ ರಾಜಪಕ್ಸ ಔಟಾಗದೆ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 26 ರನ್ ಗಳ ಬಿರುಸಿನ ಬ್ಯಾಟಿಂಗ್ ನಿಂದಾಗಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. ಆದರೆ ಇವರೆಲ್ಲ ಎಷ್ಟೇ ಪ್ರಯತ್ನಿಸಿದರು ಗೆಲ್ಲಲು ಸಾಧ್ಯವಾಗದ ಕಾರಣ ಆಸ್ಟ್ರೇಲಿಯ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 17 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಭರ್ಜರಿ ಜಯ ಗಳಿಸಿತು.
ಟಿ-20 : ಸ್ಕಾಟ್ ವಿರುದ್ಧ ನಮಿ ಜಯ
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ತಂಡಗಳ ನಡುವಿನ ಪಂದ್ಯದಲ್ಲಿ ಕ್ರಿಕೆಟ್ ಶಿಶು ನಮಿಬಿಯ ಜಯಭೇರಿ ಬಾರಿಸಿದೆ.
ಅಬುಧಾಬಿಯಲ್ಲಿ ಬುಧವಾರ ನಡೆದ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ನಮೀಬಿಯ ತಂಡವು ಫೀಲ್ಡಿಂಗ್
ಆಯ್ಕೆಮಾಡಿಕೊಂಡರು. ಟಾಸ್ ಸೋತ ಸ್ಕಾಟ್ಲೆಂಡ್ ತಂಡ ಮೊದಲ ಬ್ಯಾಟಿಂಗ್ನಲ್ಲಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತ್ತು.
109 ರನ್ ಗುರಿಯನ್ನು ಬೆನ್ನಟ್ಟಿದ ನಮೀಬಿಯಾ ತಂಡವು ಜಾನ್ ಸ್ಮಿತ್ ಅವರ ಜವಾಬ್ದಾರಿಯುತ ಆಟದಿಂದಾಗಿ 19.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಜಯಭೇರಿ ಬಾರಿಸಿದೆ. ನಮೀಬಿಯಾ ತಂಡದ ಜಾನ್ ಸ್ಮಿತ್ ಅವರು 23 ಎಸೆತಕ್ಕೆ 2 ಬೌಂಡರಿ, 2 ಸಿಕ್ಸರ್ ಬಾರಿಸಿ 32 ರನ್ ಗಳನ್ನು ಕಲೆಹಾಕಿದರು. ವಿಲಿಯಮ್ಸ್ 23, ಮೈಕಲ್ ವ್ಯಾನ್ ಲಿಂಗೆನ್ 18, ಡೇವಿಡ್ ವೀಸ್ 16 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.
ವಿಜ್ಞಾನಿಗಳಿಗೆ ಅಭಿನಂದನೆ ಅರ್ಪಣೆ
ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರುವಾಸಿಯಾದ ಶಿವಮೊಗ್ಗ ಜಿಲ್ಲೆ ಈಗ ವಿಜ್ಞಾನ ರಂಗದಲ್ಲೂ ಪ್ರಪಂಚ ಗಮನಿಸುವ ಸಾಧನೆ ಮಾಡುತ್ತಿದೆ. ಇತ್ತೀಚೆಗಷ್ಟೇ ಜಗತ್ತಿನ ಶ್ರೇಷ್ಠ ಶೇ.2 ವಿಜ್ಞಾನಿಗಳ ಪಟ್ಟಿಯನ್ನ ಅಮೆರಿಕದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ.
ಅದರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರತಿಭಾವಂತರಾದ ಡಾ.ಬಿ.ಇ. ಕುಮಾರಸ್ವಾಮಿ ಮತ್ತು ಡಾ.ಬಿ.ಜೆ. ಗಿರೀಶ್ ಅವರು ವಿಜ್ಞಾನಿಗಳ ಸ್ಥಾನ ಪಡೆದಿದ್ದಾರೆ.

ಈ ಸಂತೋಷವನ್ನು ಹಂಚಿಕೊಳ್ಳಲು ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಅವರನ್ನು ಪುರಸ್ಕರಿಸಲಾಯಿತು.
ಈ ಸಮಾರಂಭದಲ್ಲಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ, ಸಿಂಡಿಕೇಟ್ ಸದಸ್ಯರುಗಳಾದ ಜಿ.ಧರ್ಮಪ್ರಸಾದ್, ಬಳ್ಳೇಕೆರೆ ಸಂತೋಷ್, ಪ್ರೊ. ಕಿರಣ್ ದೇಸಾಯಿ, ರಾಮಲಿಂಗಪ್ಪ.ಹೆಚ್, ಬಿ.ನಿರಂಜನ್ ಮೂರ್ತಿ, ಎನ್.ಆರ್ ಮಂಜುನಾಥ್, ಎಸ್.ಆರ್. ನಾಗರಾಜ್ ಮತ್ತಿತರು ಉಪಸ್ಥಿತರಿದ್ದರು.
ಪೆಗಾಸಸ್ : ತನಿಖಾ ಸಮಿತಿ ರಚನೆ
ಇಸ್ರೇಲ್ ನಿರ್ಮಿತ ಪೆಗಾಸಸ್ ತಂತ್ರಾಂಶ ಬಳಸಿ ಗೂಢಚರ್ಯೆ ಮಾಡಲಾಗುತ್ತಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಯು ಆಗಾಗ ಕಾಣಿಸಿಕೊಳ್ಳುತ್ತಿದೆ.
ಕೇಂದ್ರ ಸರ್ಕಾರವು ಈಗಾಗಲೇ ಸುಪ್ರೀಂ ಗೆ ಉತ್ತರಿಸಿದ್ದರೂ, ಅದು ತೃಪ್ತಿಕರವಲ್ಲವೆಂದು ಅಭಿಪ್ರಾಯ ಪಟ್ಟ ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡಿಸಿತ್ತು.ಈ ವಿಚಾರವಾಗಿ ತನಿಖೆ ನಡೆಸುವುದಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ಪೆಗಾಸಸ್ ಕುರಿತ 12 ದಾವೆಗಳ ಸಂಯೋಜಿತ ಕೇಸ್ ನ ವಿಚಾರಣೆಯ ತೀರ್ಪು ಪ್ರಕಟಿಸುವ ಮುನ್ನ ಸಿಜೆಐ ಎನ್.ವಿ. ರಮಣ ಅವರು,’ಒಂದು ರಹಸ್ಯವನ್ನು ಕಾಪಾಡಬೇಕು ಎಂದು ನೀವು ಬಯಸಿದರೆ, ಅದನ್ನು ನೀವು ನಿಮ್ಮಿಂದಲೇ ಬಚ್ಚಿಟ್ಟುಕೊಳ್ಳಬೇಕು’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ದೇಶದಲ್ಲಿ ಖಾಸಗೀತನದ ಹಕ್ಕುಗಳ ರಕ್ಷಣೆ ಕುರಿತು ಆಗಾಗ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ‘ ಡಿಜಿಟಲ್ ಅತ್ಯವಶ್ಯಕ’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ದೆಸೆಯಲ್ಲಿ ಕೇಂದ್ರವೇ ಸಮಿತಿಯನ್ನು ರಚಿಸಿದರೆ ಪೂರ್ವಾಗ್ರಹಕ್ಕೆ ಅವಕಾಶವಾದಂತಾಗುತ್ತದೆ. ಆದ ಕಾರಣ ಸುಪ್ರೀಂ ಮಧ್ಯ ಪ್ರವೇಶ ಮಾಡಿ ನ್ಯಾಯಯುತ ಸಮಿತಿಗೆ ಅವಕಾಶ ಕೊಟ್ಟಿದೆ.
ಮುಖ್ಯವಾಗಿ ಈ ತನಿಖೆಯು ಭಾರತೀಯ ನಾಗರಿಕರ ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಪೆಗಾಸಸ್ ರಹಸ್ಯ ಜಾಲ ಬೀಸಿದೆಯೇ ? ಅವುಗಳಲ್ಲಿನ ದತ್ತಾಂಶವನ್ನು ಪಡೆಯಲಾಗಿದೆಯೇ? ಎಂಬ ಮುಂತಾದ ಗಹನೀಯ ಅಂಶಗಳ ಕುರಿತು ತನಿಖೆ ಬೆಳಕು ಚೆಲ್ಲಬೇಕಿದೆ.
ಈ ಸಮಿತಿಯಲ್ಲಿ ತನಿಖೆಯ ಉಸ್ತುವಾರಿಯಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಕಾರ್ಯನಿರ್ವಹಿಸಲಿದ್ದಾರೆ.
ಇವರ ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ್ ಜೋಶಿ, ಅಂತರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಯ ಸಂದೀಪ್ ಒಬೆರಾಯ್, ನವೀನ್ ಕುಮಾರ್ ಚೌಧರಿ, ಗಾಂಧಿನಗರದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಸೈಬರ್ ಭದ್ರತೆ ಮತ್ತು ಡಿಜಿಟಲ್ ವಿಜ್ಞಾನ ವಿಭಾಗದ ಡೀನ್, ಪ್ರಭಾಹರನ್ ಪಿ., ಅಮೃತ ವಿಶ್ವ ವಿದ್ಯಾಪೀಠಂ, ಹಾಗೂ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಅಶ್ವಿನ್ ಅನಿಲ್ ಗುಮಸ್ತೆ, ಕಾರ್ಯನಿರ್ವಹಿಸಲಿದ್ದಾರೆ.
ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಆಯ್ಕೆ ಪಟ್ಟಿ
ಒಲಿಂಪಿಕ್ ಸ್ವರ್ಣ ವಿಜೇತ ನೀರಜ್ ಚೋಪ್ರಾ, ಫುಟ್ಬಾಲ್ ತಾರೆ ಸುನಿಲ್ ಛೇಟ್ರಿ,ಮಹಿಳಾ ಕ್ರಿಕೆಟರ್ ಮಿಥಾಲಿ ಸೇರಿದಂತೆ 11 ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪುರಸ್ಕಾರ, ಮತ್ತು 35 ಕ್ರೀಡಾ ಸಾಧಕರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಟೋಕಿಯೋದಲ್ಲಿ ಬೆಳ್ಳಿ ಪದಕ ಗೆದ್ದ ಕುಸ್ತಿಪಟು ರವಿ ದಹಿಯಾ, ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಬೋರ್ಗೂಹೈನ್, ಭಾರತದ ಹಾಕಿ ತಂಡದ ಗೋಲ್ ಕೀಪರ್ ಶ್ರೀಜೇಶ್,
ಪ್ಯಾರಾಲಿಂಪಿಕ್ಸ್ ಪದಕ ವಿಜೇತರಾದ ಶೂಟರ್ ಅವನಿ ಲೇಖರ, ಮನೀಷ್ ನರ್ವಾಲ್, ಜಾವೆಲಿನ್ ಥ್ರೋ ಅಥ್ಲೀಟ್ ಸುಮಿತ್ ಅಂಟಿಲ್, ಬ್ಯಾಡ್ಮಿಂಟನ್ ಆಟಗಾರರಾದ ಪ್ರಮೋದ್ ಭಗತ್, ಕೃಷ್ಣ ನಾಗರ್ ಅವರಿಗೆ ಖೇಲ್ ರತ್ನ, ಹಾಗೂ ಹೆಮ್ಮೆಯ ಕನ್ನಡಿಗ ಸುಹಾಸ್ ಯತಿರಾಜ್ ಅವರ ಹೆಸರು ಅರ್ಜುನ ಪ್ರಶಸ್ತಿ ಆಯ್ಕೆ ಪಟ್ಟಿಯಲ್ಲಿದೆ. ಈ ಎಲ್ಲಾ ಹೆಸರುಗಳನ್ನು ಶಿಫಾರಸು ಮಾಡಿ ಆಯ್ಕೆ ಪಟ್ಟಿಯನ್ನು ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.
ಅತಿಥಿ ಉಪನ್ಯಾಸಕರ ನೇಮಕಾತಿ
ರಾಜ್ಯಾದ್ಯಂತ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ 2021-22 ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 3,522 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿ ಸರ್ಕಾರ ಅನುಮೋದನೆ ನೀಡಿದೆ.
ಹೊಸ ನೇಮಕದ ಬದಲು ಈ ಹಿಂದೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಂದ ಅರ್ಜಿ ಪಡೆದು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಪರಿಶೀಲಿಸಿ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ.
1,3,5 ನೇ ಸೆಮಿಸ್ಟರ್ ಅವಧಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿನ ಕಾರ್ಯಭಾರಕ್ಕೆ ಅನುಗುಣವಾಗಿ ಉಪನ್ಯಾಸಕರ ನೇಮಕ ಮಾಡಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ವರ್ಷ ತೆರವಾಗಿದ್ದ ಒಟ್ಟು 2,832 ಉಪನ್ಯಾಸಕ ಹುದ್ದೆಗಳ ಪೈಕಿ 1,835 ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗಿತ್ತು.ಆದರೆ, ಈ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಗೊಂಡಿದೆ.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಮನವಿ ಸಲ್ಲಿಸಿತ್ತು. ಸರ್ಕಾರವು ಎಂಟು ತಿಂಗಳ ಅವಧಿಗೆ 3,522 ಅತಿಥಿ ಉಪನ್ಯಾಸಕರ ನೇಮಕಕ್ಕೆ ಒಪ್ಪಿಗೆ ಸೂಚಿಸಿದೆ.
ರಾಜ್ಯ ನೌಕರರಿಗೆ ತುಟ್ಟಿಭತ್ಯೆ ಕೊಡುಗೆ
ರಾಜ್ಯದ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸರ್ಕಾರ ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವದ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಕೆಲ ದಿನಗಳ ಹಿಂದೆಯಷ್ಟೇ ಶೇ.3 ರಷ್ಟು ತುಟ್ಟಿಭತ್ತೆ ಹೆಚ್ಚಿಸಿತ್ತು. ಈಗ ರಾಜ್ಯ ಸರ್ಕಾರಿ ನೌಕರರಿಗೂ ಇದೇ ಸೌಲಭ್ಯ ಒದಗಿಸಲಾಗಿದ್ದು ಹಣಕಾಸು ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.
ಮೂಲ ವೇತನದಲ್ಲಿ ಶೇಕಡಾ ಮೂರರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಿಸಿ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಆದೇಶಿಸಿದೆ.
ರಾಜ್ಯದ 5.50 ಲಕ್ಷ ನೌಕರರು ಹಾಗೂ 5 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟು 10.50 ಲಕ್ಷ ಮಂದಿ ತುಟ್ಟಿಭತ್ಯೆ ಹೆಚ್ಚಳದ ಲಾಭ ಪಡೆಯಲಿದ್ದಾರೆ.
ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 6,616 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರೊಂದಿಗೆ ವೇತನ ಮತ್ತು ಪಿಂಚಣಿ ಭರಿಸಲೆಂದು ವಾರ್ಷಿಕ 75,000 ಕೋಟಿ ರೂಪಾಯಿಗಳನ್ನು ಸರ್ಕಾರ ವ್ಯಯ ಮಾಡುತ್ತಿದೆ ಎಂದು ತಿಳಿದುಬಂದಿದೆ.
