ದೇಶದಲ್ಲಿ ಸಾಮಾನ್ಯ ಪಟಾಕಿಗಳನ್ನು ನಿಷೇಧಿಸಿ, ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಸುಪ್ರೀಂಕೋರ್ಟ್ 2018ರಲ್ಲಿ ಆದೇಶ ನೀಡಿತ್ತು. ಆದರೆ ಈ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂದು ಸುಪ್ರೀಂಕೋರ್ಟ್ ಕಳೆದ ವಾರವಷ್ಟೇ ಅಸಮಾಧಾನ ವ್ಯಕ್ತಪಡಿಸಿತ್ತು. ತನ್ನ ಆದೇಶವನ್ನು ಸಂಪೂರ್ಣವಾಗಿ ಮತ್ತು ಯಥಾವತ್ತಾಗಿ ಜಾರಿಗೆ ತರುವ ಪ್ರಯತ್ನಗಳು ಸರ್ಕಾರಗಳು ಮಾಡಬೇಕು ಎಂದು ಸೂಚಿಸಿದೆ.
ಹಸಿರು ಪಟಾಕಿ ಎಂಬುವುದು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ಪರಿಕಲ್ಪನೆ. ಪರಿಸರ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಲಾಗಿದೆ.
ಹಸಿರು ಪಟಾಕಿಗಳು ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ಕಡಿಮೆ ಅಪಾಯ ಉಂಟು ಮಾಡುತ್ತವೆ. ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಪಟಾಕಿಗಳನ್ನು ಬಳಸುವ ಕಚ್ಚಾ ವಸ್ತುಗಳಿಗೆ ಬದಲಾಗಿ, ಪರ್ಯಾಯ ಕಚ್ಚಾವಸ್ತುಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ. ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇಕಡಾ 30ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ. ಬೇರಿಯಂ ನೈಟ್ರೇಟ್ ರಾಸಾಯನಿಕವು ಹೆಚ್ಚು ಹೊಗೆಹೊರಸೂಸುತ್ತದೆ. ಆದರೆ ಹಸಿರು ಪಟಾಕಿಗಳಿಗೆ ಬೇರೆಯ ನೈಟ್ರೇಟನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ ಅಥವಾ ಈ ರಾಸಾಯನಿಕ ಇಲ್ಲದೆ ಪಟಾಕಿ ತಯಾರಿಸುವುದರಿಂದ ಹೊರಸೂಸುವಿಕೆ ಇರುವುದಿಲ್ಲ ಎಂದು ಹೇಳುತ್ತಾರೆ.
ಎಲ್ಲಾ ಅನುಕೂಲಗಳು ಕಂಡುಬಂದರೂ, ಈ ಪಟಾಕಿಗಳು ಸಾಮಾನ್ಯ ಪಟಾಕಗಳಿಗಿಂತ ದುಬಾರಿಯಾಗಿವೆ. ಸರ್ಕಾರದಿಂದ ನೊಂದಣಿಯಾಗಿರುವ ಮಾರಾಟಗಾರರಿಂದ ಅಥವಾ ಆನ್ಲೈನ್ನಲ್ಲಿ ಹೆಸರು ಪಟಾಕಿ ಖರೀದಿಸಬಹುದು. ಮಾರುಕಟ್ಟೆಯಲ್ಲಿರುವ ಯಾವುದು ಹಸಿರು ಪಟಾಕಿ ಎಂದು ಗುರುತಿಸಲು ಜನರಿಗೆ ಅನುಕೂಲವಾಗಲಿ ಎಂದು ಪೊಟ್ಟಣಗಳ ಮೇಲೆ ಲೋಗೋ ಮುದ್ರಿತವಾಗಿರುತ್ತದೆ. ಜೊತೆಗೆ ಕ್ಯೂಆರ್ ಕೋಡ್ ಸಹ ಇದ್ದು, ಜನರು ಅವುಗಳನ್ನು ಸ್ಕ್ಯಾನ್ ಮಾಡಿ ಗುರುತಿಸಬಹುದು.
ಪರಿಸರ ಸ್ನೇಹಿ : ಹಸಿರು ಪಟಾಕಿ
ಭೇಷ್… ಜಗ್ಗೇಶ್…ಭೇಷ್!
ಕನ್ನಡದ ಚಿತ್ರರಂಗವೇಕೆ ಇಡೀ ಕನ್ನಡಿಗರೇ ಸ್ಥಂಭೀಭೂತ. ಯುವ ತಾರಾ ಕಣ್ಮಣಿ,ಪುನೀತ್ ಹಠಾತ್ ನಿಧನಕ್ಕೆ ಗಾಢ ದುಃಖಕ್ಕೆ ಜಾರಿದ್ದಾರೆ. ಸಾವು ಕಟ್ಟಿಟ್ಟ ಬುತ್ತಿ.ಅದರೆ ಇಡೀ ಕಲಾವಿದ ಗಣವೇ ಗರಬಡಿದಂತಾಗಿದೆ.!
ಎಲ್ಲರ ಮನದಲ್ಲೂ ಕಟ್ಟುಮಸ್ತಾದ ಹುಡುಗ,ಪುನೀತ್ ಸುಮ್ಮಸುಮ್ಮನೇ
ವಿಧಿವಶನಾದನಲ್ಲ!. ಪುನೀತರ ಸಾವಿನ ಬಗ್ಗೆ ಹಲವಾರು ಗಣ್ಯರು,ವೈದ್ಯರು
ತಮ್ಮದೇ ವಿಶ್ಲೇಷಣೆ ನೀಡುತ್ತಿದ್ದಾರೆ.
ಗಮನ ಸೆಳೆಯುವುದೆಂದರೆ ನಮ್ಮ ದೈಹಿಕ ಕಸರತ್ತು ಮಾಡುವ ಯುವಜನ. ಅವರೀಗ ಈಗ ಆಸ್ಪತ್ರೆಗೆ ಹೃದಯ ತಪಾಸಣೆಗೆ ನುಗ್ಗುತ್ತಿರುವುದು.!
ಈಗಾಗಲೇ ತಜ್ಞ ಡಾ.ಮಂಜುನಾಥ್ ಅವರು ಸ್ಯಾಚುರೇಟೆಡ್ ಎಣ್ಣೆ ಬಳಸದೇ
ಗಾಣೋತ್ಪನ್ನ ಎಣ್ಣೆಯನ್ನ ಆಹಾರದಲ್ಲಿ ಬಳಸಲು ಸೂಚಿಸಿದ್ದಾರೆ.
ಭವಿಷ್ಯದಲ್ಲಿ ಪ್ರಜ್ವಲ ತಾರೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಪುನೀತ್
ಹೀಗೆ ಥಟ್ಟನೆ ಬಿಟ್ಟುಹೋಗಬಾರದಿತ್ತು.
ಈಗ ಅವರ ಸಾಮಾಜಿಕ ಸೇವಾಕಾರ್ಯಗಳು ಸಾರ್ವಜನಿಕರಿಗೆ ಗೊತ್ತಾಗುತ್ತಿವೆ. ಅವರ ಗೆಳೆಯ, ತಮಿಳು ಚಿತ್ರ ನಟ ವಿಶಾಲ್ ,ಮಿತ್ರ ಪುನೀತರ ಒಂದಿಷ್ಟು ಸೇವಾ ಹೊಣೆಯನ್ನ ಹೊತ್ತಿರುವುದು ಮಾದರಿಯಾಗಿದೆ.
ಈ ಸನ್ನಿವೇಶದಲ್ಲಿ ನವರಸನಾಯಕ ಜಗ್ಗೇಶ್ ಅವರ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ” ನಾವೆಲ್ಲರೂ ಶಾರದೆಯ ಮಕ್ಕಳು. ಚಿತ್ರರಂಗವೇ ನಮ್ಮ ಮನೆ.ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲು ಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೇ ಮುಂದುವರೆಯಲಿ ..ಲವ್ ಆಲ್..!”
ನಿಜಕ್ಕೂ ತಾರೆಯರು ಪರಸ್ಪರ ಮುನಿಸು ಮರೆಯಬೇಕು. ಚಿತ್ರರಂಗದಲ್ಲಿ ವ್ಯವಹಾರ ಕೇವಲ ಒಂದು ಮುಖ.ಅಷ್ಟೆ.! ಆದರೆ ಅದಕ್ಕೆ ಮಿತ್ರತ್ವ, ಬಂಧುತ್ವ,ಮಾನವೀಯತೆ ಎಂಬ ಹಿನ್ನೆಲೆಯೂ ಇದೆ. ಇಡೀ ಚಿತ್ರ ರಸಿಕರ ಅಭಿಮಾನವೇ ಎಲ್ಲರನ್ನ ಕಾಯುವ ಪ್ರಬಲ ಶಕ್ತಿ. ಇದನ್ನ ನಟ ಸಾರ್ವಭೌಮ ಡಾ.ರಾಜ್ ,ಆರಂಭದಿಂದಲೂ ಸಾಕ್ಷಾತ್ಕರಿಸಿಕೊಂಡು ಬಂದಿದ್ದಾರೆ. ಅವರನ್ನ ಮಾದರಿಯಾಗಿಸಿ ಮಿಕ್ಕ ತಾರಾವಳಿ ಮುನ್ನಡೆಯಬೇಕಿದೆ.ಅದೇ ಯುವರತ್ನ
ಪುನೀತ್ ಗೆ ನೀಡುವ ಶ್ರದ್ಧಾಂಜಲಿಯೂ ಹೌದು.
ಕ್ರಿಕೆಟ್ ತಡೆ ಗೋಡೆ ಈಗ ಮುಖ್ಯ ಕೋಚ್
ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಇದೇ ತಿಂಗಳು ಭಾರತದಲ್ಲಿಯೇ
ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾರ್ಯರಂಭ ಮಾಡಲಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವುದು ಬಹುದೊಡ್ಡ ಗೌರವ. ಇದಕ್ಕೆ ಪ್ರತಿಯಾಗಿ ಉತ್ತಮ ಕೆಲಸ ಮಾಡುವತ್ತ ಗಮನ ಹರಿಸುತ್ತೇನೆ. ಎಂದು ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ದುಬೈನಲ್ಲಿ ಹೋದ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ನಡೆಯುವ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ದ್ರಾವಿಡ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಕೋಚ್ ಹುದ್ದೆ ಸ್ವೀಕರಿಸಲು ದ್ರಾವಿಡ್ ಅವರನ್ನು ಮನವೊಲಿಸಿದರು.
2023ರ ಏಕದಿನ ವಿಶ್ವಕಪ್ ಟೂರ್ನಿಯ ವರೆಗೂ ಅವರು ಕೆಲಸ ಮಾಡಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಮತಿ ಸುಲಕ್ಷಣ ನಾಯ್ಕ, ಶ್ರೀ ಆರ್ ಪಿ ಸಿಂಗ್, ಅವರನ್ನ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅವಿರೋಧವಾಗಿ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾ ತರಬೇತುದಾರರನ್ನಾಗಿ ಆಯ್ಕೆ ಮಾಡಿದೆ.
ಅವರಿಗೆ ನೀಡುವ ವಾರ್ಷಿಕ ಸಂಭಾವನೆ 10 ಕೋಟಿ ರೂಪಾಯಿಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಭಾರತ – ಬ್ರಿಟನ್ ಗ್ರಿಡ್ ಯೋಜನೆ
ವಿಶ್ವದ ಬಡರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್ ಅನ್ನು ಪೂರೈಸುವ ವಿಶ್ವ ವಿದ್ಯುತ್ ಗ್ರಿಡ್ ಯೋಚನೆಗೆ ಭಾರತ ಮತ್ತು ಬ್ರಿಟನ್ ಚಾಲನೆ ನೀಡಿದೆ.
ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತವು, ಪಳೆಯುಳಿಕೆ ಇಂಧನ ಕಡಿತದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿಯೇ ಗುರಿಯನ್ನು ಹಾಕಿಕೊಂಡಿದೆ. ಜಾಗತಿಕ ವಿದ್ಯುತ್
ಗ್ರಿಡ್ ಯೋಜನೆಯು ಭಾರತದ ಇಂಗಾಲ ಕಡಿತದ ಸಾಧ್ಯತೆಗಳನ್ನು ತೋರಿಸುತ್ತದೆ ಎಂದು ಇನ್ಫೆಕ್ಟೆಡ್ ಮ್ಯಾನೇಜ್ಮೆಂಟ್ ಹಿರಿಯ ಉಪಾಧ್ಯಕ್ಷ ಜೂನಿ ಗೋರ್ಟೆ ಹೇಳಿದ್ದಾರೆ.
ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆಗೆ 80 ದೇಶಗಳು ಬೆಂಬಲ ಸೂಚಿಸಿವೆ.
ವಿಶ್ವವು ಶುದ್ಧ ಮತ್ತು ನವೀಕರಿಸಬಹುದಾದ ವಿದ್ಯುತ್ ನತ್ತ ಚಲಿಸಬೇಕಾದರೆ, ಎಲ್ಲ ದೇಶಗಳನ್ನು ಒಳಗೊಂಡ ಈ ಜಾಗತಿಕ ಗ್ರಿಡ್ ಮಾತ್ರವೇ ಏಕೈಕ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗ್ಲಾಸ್ಗೊ ಹವಾಮಾನ ವ್ಯತಿರೀತ್ಯ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿಯವರು ದೆಹಲಿಗೆ ವಾಪಸಾಗಿದ್ದಾರೆ. ಅದಕ್ಕೂ ಮುನ್ನ ಹಲವು ದೇಶಗಳ ಪ್ರಧಾನಿ ಮತ್ತು ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದರು. ಈ ಭೇಟಿಯ ವೇಳೆ, ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ನೆರವು ನೀಡಿದ್ದಕ್ಕೆ ನೇಪಾಳವು ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ.
ಮನೆ ಮನೆಗೂ ಲಸಿಕೆ ವಿತರಣೆ
ಪ್ರಸ್ತುತ ಮನೆ ಮನೆಗೂ ತೆರಳಿ ಕೋವಿಡ್ ಲಸಿಕೆ ನೀಡುವ ಅಭಿಯಾನದ ಅಗತ್ಯವಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ದೇಶದಲ್ಲಿ ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿರುವ 45 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಲು ವಿವಿಧ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈವರೆಗೆ ಒಂದೂ ಲಸಿಕೆಯನ್ನು ತೆಗೆದುಕೊಳ್ಳದವರಿಗೆ ಮೊದಲ ಆದ್ಯತೆ ನೀಡಬೇಕು. ಅದರೊಂದಿಗೆ ಎರಡನೆಯ ಲಸಿಕೆ ಪಡೆಯಬೇಕಿರುವ ಜನರ ಕಡೆಯೂ ಅಷ್ಟೇ ಗಮನ ನೀಡಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ
ಆರೋಗ್ಯ ಸಂಸ್ಥೆಯು ಭಾರತ್ ಬಯೋಟಿಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆ ತುರ್ತುಬಳಕೆಗೆ ಅನುಮತಿ ನೀಡಿದೆ. ಇದು ಭಾರತವು ಹೆಮ್ಮೆ ಪಡುವ ಸಂಗತಿಯಾಗಿದೆ.
ಪೆಟ್ರೋಲ್ – ಡಿಸೆಲ್ ದರ ಕಡಿತ
ಶತಕದ ಗಡಿ ದಾಟಿದ ಪೆಟ್ರೋಲ್ ಡೀಸೆಲ್ ದರದಿಂದ ಬೇಸರಗೊಂಡಿದ್ದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ರೂ.10 ಹಾಗೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿಗೆ ಕಡತಗೊಳಿಸಿದೆ.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ತಲಾ ಏಳು ರೂಪಾಯಿಯವರೆಗೆ ಕಡತ ಗೊಳಿಸಿದೆ.
ಕೇಂದ್ರ ಸರಕಾರ ಡಿಸೇಲ್ ಮೇಲೆ 10 ರೂಪಾಯಿ ಹಾಗೂ ಪೆಟ್ರೋಲ್ ಮೇಲೆ ಐದು ರೂಪಾಯಿ ಕಡಿಮೆಗೊಳಿಸಿದ್ದು, ಸ್ವಾಗತಾರ್ಹ. ಕರ್ನಾಟಕ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ತಲೆ ಹೇಳಿ ರೂಪಾಯಿ ಕಡಿಮೆಗೊಳಿಸಲು ನಿರ್ಧರಿಸಿದೆ. ಇದರಿಂದಾಗಿ ಸರ್ಕಾರಕ್ಕೆ 2,100 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ದೇಶದ ರೈತರು ತಮ್ಮ ಶ್ರಮದ ಮೂಲಕ ಆರ್ಥಿಕ ಪ್ರಗತಿಯ ಗತಿಯನ್ನು ಕಾಪಾಡಿಕೊಂಡಿದ್ದರು. ಡೀಸೆಲ್ ಮೇಲಿನ ಎಕ್ಸೈಟ್ ಸುಂಕವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಿರುವುದು ಮುಂಬರುವ ಬಿತ್ತನೆ ಸಮಯದಲ್ಲಿ ಅವರಿಗೆ ಉತ್ತೇಜನ ನೀಡಲಿದೆ ಎಂದು ಕೇಂದ್ರವು ಹೇಳಿದೆ.
ಎಕ್ಸೈಸ್ ಸುಂಕ ಇಳಿಕೆ ತೀರ್ಮಾನವು ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿಸಲು ನೆರವಾಗಲಿದೆ. ಹಣದುಬ್ಬರದ ಒತ್ತಡವನ್ನು ತಗ್ಗಿಸಲಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಜನರ ಓಡಾಟ ಹೆಚ್ಚಲಿದ್ದು, ಇದು ಕೇಂದ್ರದ ವರಮಾನ ನಷ್ಟದ ಪ್ರಮಾಣವನ್ನು ತಗ್ಗಿಸಲಿದೆ ಎಂದು ಐಸಿಆರ್ ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅಧಿತಿ ನಾಯರ್ ಹೇಳಿದ್ದಾರೆ.
ಮಿಥೇನ್ ಹೊರಸೂಸುವಿಕೆಗೆ ತಡೆ ; ಗ್ಲಾಸ್ಗೊ ಸಮಾವೇಶ
ಹವಾಮಾನ ಬದಲಾವಣೆಗೆ ಕಾರಣವಾಗುವ ಹಸಿರುಮನೆ ಅನಿಲ ಮಿಥೇನ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಗ್ಲಾಸ್ಗೊದಲ್ಲಿ ನಡೆದ ಹವಾಮಾನ ವೈಪರಿತ್ಯ ತಡೆ ಸಮಾವೇಶದಲ್ಲಿ ಹಲವು ನಾಯಕರು ಪ್ರತಿಜ್ಞೆ ಮಾಡಿದ್ದಾರೆ.
ಮಿಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಅಮೆರಿಕ ಹಾಗೂ ಐರೋಪ್ಯ ನೇತೃತ್ವದ ನಿರ್ಧಾರವನ್ನು ನೂರು ದೇಶಗಳು ಬೆಂಬಲಿಸಿವೆ. 2030ರ ವೇಳೆಗೆ ಶೇಕಡ 30ರಷ್ಟು ಮಿಥೇನ್ ಕಡಿತಗೊಳಿಸುವುದಾಗಿ ದೇಶಗಳು ಒಪ್ಪಿಕೊಂಡಿವೆ ಎಂದು ಅಮೆರಿಕ ಸರ್ಕಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿಥೇನ್ ನಾವು ವೇಗವಾಗಿ ಕಡಿತಗೊಳಿಸಬಹುದುದಾದ ಅನಿಲಗಳಲ್ಲಿ ಒಂದಾಗಿದೆ. ಇದರಿಂದ ಹವಾಮಾನ ಬದಲಾವಣೆ ತಕ್ಷಣವೇ ನಿಧಾನಗೊಳ್ಳುತ್ತದೆ ಎಂದು ಐರೋಪ್ಯ ಆಯೋಗದ ಅಧ್ಯಕ್ಷರಾದ ಉರ್ಸುಲಾವಾನ್ ಡೇರ್ ಲೇಯೆನ್ ಹೇಳಿದ್ದಾರೆ.
ನಮ್ಮ ಮಿಥೇನ್ ನ್ನು ಶೇ.30ರಷ್ಟು ಕಡಿಮೆಗೊಳಿಸಲು ಬದ್ಧರಾಗಿದ್ದೇವೆ. ನಾವು ಬಹುಷಃ ಅದನ್ನು ಮೀರಿ ಸಾಧಿಸಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೊಬೈಡನ್ ಹೇಳಿದ್ದಾರೆ. ಹಸುಗಳ ಜೀರ್ಣಾಂಗ ವ್ಯವಸ್ಥೆ,ಭೂ ತ್ಯಾಜ್ಯ ಮತ್ತು ತೈಲ ಅನಿಲ ಉತ್ಪಾದನೆಯಲ್ಲಿ ಮಿಥೇನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಜಾಗತಿಕ ಮಿಥೇನ್ ಹೊರಸೂಸುವ 5 ದೇಶಗಳಲ್ಲಿ ಬ್ರೆಜಿಲ್ ಪ್ರಮುಖವಾಗಿದೆ. ಚೀನಾ,ರಷ್ಯಾ, ಮತ್ತು ಭಾರತ ಇನ್ನೂ ಇದಕ್ಕೆ ಸಹಿ ಮಾಡಿಲ್ಲ. ಹಾಗೂ ಈ ಘೋಷಣೆಯನ್ನು ಬೆಂಬಲಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದೆ.
ಈ ದಶಕದಲ್ಲಿ ಮಿಥೇನ್ ಹೊರಸುಸುವಿಕೆಯನ್ನು ಕಡಿತ ಗೊಳಿಸುವುದರಿಂದ 2040ರ ವೇಳೆಗೆ ಸುಮಾರು 0.3 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವನ್ನು ಕಡಿತ ಮಾಡಬಹುದು ಎಂದು ವಿಶ್ವಸಂಸ್ಥೆ ಮೇ ತಿಂಗಳಲ್ಲಿ ವರದಿ ಸಲ್ಲಿಸಿದೆ.
100 ಕ್ಕೂ ಹೆಚ್ಚು ದೇಶಗಳು ಶೇ.30 ರಷ್ಟು ಮಿಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಸಂಘಟಿತ ಪ್ರಯತ್ನ ಮಾಡಲಿವೆ ಎಂದು ವರದಿಯಾಗಿದೆ.
ಆಯುರ್ವೇದ ವಿವಿ : ಶೀಘ್ರ ಕ್ರಮ
ಶಿವಮೊಗ್ಗ ನಗರದಲ್ಲಿ ಆಯುರ್ವೇದ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು.
ಆಯುರ್ವೇದ ಕಾಲೇಜು ದೇವರಿಲ್ಲದ ದೇವಸ್ಥಾನ ಆಗಬಾರದು. ಹಿಂದೆ ಡಿ.ಎಚ್. ಶಂಕರಮೂರ್ತಿ, ಕೆ.ಎಸ್. ಈಶ್ವರಪ್ಪ ಅವರ ಪ್ರಯತ್ನದ ಫಲವಾಗಿ ಆಯುರ್ವೇದ ಕಾಲೇಜು ಆರಂಭವಾಗಿದೆ. ಯಡಿಯೂರಪ್ಪ ಅವರು ರಾಜ್ಯದ 105 ಆಯುಷ್ ಕಾಲೇಜುಗಳಿಗೆ ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಆಗಬೇಕು ಎಂದು 100 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಜೊತೆಗೆ 10 ಕೋಟಿ ರೂ. ಅನುದಾನವನ್ನು ಇರಿಸಿದರು. ಅಧಿಕಾರಿಗಳು ಇದನ್ನು ಕಾರ್ಯಗತ ಮಾಡಬೇಕು. ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದರು.
“ಚಿಕಿತ್ಸೆಗೆ ಬರುವ ಸಾರ್ವಜನಿಕರಲ್ಲಿ ಆಯುಷ್ ವೈದ್ಯರು ಆಯುರ್ವೇದ ಚಿಕಿತ್ಸೆ ಬಗ್ಗೆ ವಿಶ್ವಾಸ ತುಂಬಬೇಕು. ಜನರು ಒಪ್ಪುವ ರೀತಿ ಮಾತನಾಡಬೇಕು. ಆಯುರ್ವೇದ ಔಷಧಗಳು ಪರಿಣಾಮ ಬೀರುವುದು ನಿಧಾನವಾದರೂ, ದೇಹದ ಬೇರೆ ಯಾವುದೇ ಅಂಗಾಂಗಗಳಿಗೆ ತೊಂದರೆ ಉಂಟು ಮಾಡುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅಲೋ ಪತಿ ಔಷಧಗಳಿಗೆ ಅವಲಂಬಿತರಾಗುವುದನ್ನು ಬಿಡಬೇಕು. ಆಯುರ್ವೇದ ಔಷಧ ಪ್ರಾಧಿಕಾರ ನಿರ್ಮಾಣವಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗಲಿದೆ” ಎಂದು ವಿಧಾನಪರಿಷತ್ ಸದಸ್ಯ ಎಸ್ ರುದ್ರೇಗೌಡ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎಸ್ ಎಸ್. ಜ್ಯೋತಿಪ್ರಕಾಶ್, ಕಾಡ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಈ.ಎಸ್. ಪುಷ್ಪ, ಪಾಲಿಕೆ ಸದಸ್ಯೆ ಸುವರ್ಣ ಶಂಕರ್, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ದೊಡ್ಡಮನಿ, ಡಿಎಚ್ ಒ ಡಾ. ರಾಜೇಶ್ ಸುರಗಿಹಳ್ಳಿ, ಅಂಚೆ ಇಲಾಖೆಯ ಉಪನಿರ್ದೇಶಕ ಡಾ. ಅನಿಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಿ -20 ಬಾಂಗ್ಲಾ ಕನಸು ಭಗ್ನ
ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ A – ಗುಂಪಿನ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪಂದ್ಯ ನಡೆಯಿತು. ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾ ಜಯ ಸಾಧಿಸಿದೆ.
ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ 18.2 ಓವರ್ ಗಳಲ್ಲಿ ಆಲ್ ಔಟ್ ಆಗಿ ಕೇವಲ 84 ರನ್ ಗಳನ್ನ ಗಳಿಸಿತು. 84 ರನ್ ಗಳನ್ನ ಗಳಿಸಿ ಭದ್ರ ಮಾಡಿಕೊಳ್ಳಲು ಸಾಧ್ಯವಾಗದೆ ಸೋತು ಇದು ಬಾಂಗ್ಲಾದೇಶದ ಪಾಲಿಗೆ ಸತತ 4 ನೇ ಸೋಲು ಕಂಡು ಇದರೊಂದಿಗೆ ಗುಂಪಿನ ಹಂತದಲ್ಲಿ 1 ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲಿಗೆ ತೇರ್ಗಡೆಗೊಳ್ಳುವ ಅವಕಾಶ ಕಳೆದುಕೊಂಡಿತು.
84 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ದಕ್ಷಿಣ ಆಫ್ರಿಕಾ ತಂಡ ಕೇವಲ 13.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 86 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು. ಯನ್ರಿಚ್ ಸೋರ್ಜೆ 8 ರನ್ ಗಳಿಗೆ 3 ವಿಕೆಟ್ ತೆಗೆದುಕೊಂಡರು. ಮತ್ತು ರಬಾಡ 20 ಓವರ್ ಗಳಿಗೆ 3 ವಿಕೆಟ್ ತೆಗೆದುಕೊಂಡರು.ಇವರಿಬ್ಬರ ಜೋಡಿಯ ನೇರ ಮತ್ತು ನಿಖರ ದಾಳಿಗೆ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್-12 ರ ಹಂತದ ತನ್ನ 4 ನೇ ಪಂದ್ಯದಲ್ಲಿ 6 ವಿಕೆಟ್ ಗಳ ಅಂಕಗಳೊಂದಿಗೆ ಸೆಮಿಫೈನಲ್ ಹಂತದತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.
ಆರಂಭಿಕ ಹಿನ್ನಡೆ ಹೊರತಾಗಿಯೂ ರಾಸಿ ವ್ಯಾನ್ ಡೆಲ್ ಡುಸ್ಸನ್ 22 ರನ್ ಗಳಿಸಿ ಮತ್ತು ನಾಯಕ ತೆಂಬ ಬಹುಮಾ 31 ರನ್ ಗಳನ್ನ ಗಳಿಸಿ ತಂಡದ ಸುಲಭ ಜಯಕ್ಕೆ ಕಾರಣರಾದರು.
ಕ್ಷಯ ರೋಗ ತಡೆಗೆ ಕ್ರಮ
ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗಳ ಸಕಾಲಿಕ ಪರಿಹಾರಕ್ಕೆ ಸರ್ಕಾರ ಎಲ್ಲಾ ಸಂದರ್ಭಗಳಲ್ಲಿಯೂ ಆರ್ಥಿಕ, ತಾಂತ್ರಿಕ ಹಾಗೂ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಿ ಸಹಕರಿಸಿದ್ದು, ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಪಕ್ಕದಲ್ಲಿ ನಿರ್ಮಿಸಿರುವ ಕ್ಷಯ ರೋಗ ಪ್ರಯೋಗಾಲಯವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸಿದರು.
ಕೋವಿಡ್ ಸೇರಿದಂತೆ ಅನೇಕ ಸಂದಿಗ್ಧ ಸಂದರ್ಭಗಳಲ್ಲಿ ಎಲ್ಲಾ ಹಂತದ ಆರೋಗ್ಯ ಇಲಾಖೆ ಸಿಬ್ಬಂಧಿಗಳು, ವೈದ್ಯಾಧಿಕಾರಿಗಳು ಮತ್ತು ತಂತ್ರಜ್ಞರ ಸಂಘಟಿತ ಪ್ರಯತ್ನದಿಂದಾಗಿ ಉತ್ತಮ ಸೇವೆ ಒದಗಿಸಲು ಸಾಧ್ಯವಾಗಿದೆ ಎಂದರು.
ಕ್ಷಯ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೋಗಿಯು ತಕ್ಷಣ ವೈದ್ಯರ ಮಾತನ್ನು ಒಪ್ಪಿ ಚಿಕಿತ್ಸೆಗೆ ಮುಂದಾಗುವುದು ಕಡಿಮೆ. ಆದ್ದರಿಂದ ವೈದ್ಯರು ರೋಗಿಯನ್ನು ವಿಶ್ವಾಸದಿಂದ ಉಪಚರಿಸಿ ಸೇವೆ ಒದಗಿಸಬೇಕು. ಈ ಹಂತದಲ್ಲಿ ವೈದ್ಯರಿಗೆ ತಾಳ್ಮೆ, ಸಮಾಧಾನ ಅಗತ್ಯ. ಇದರಿಂದಾಗಿ ನಿರೀಕ್ಷಿತ ಯೋಜನೆಯ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷಯ ರೋಗ ಘಟಕದ ನೋಡಲ್ ಅಧಿಕಾರಿ ಡಾ.ಅನಿಲ್ ಅವರು ಮಾತನಾಡಿ, ದೇಶದಲ್ಲಿ ಸುಮಾರು 26 ಲಕ್ಷ ಮಂದಿ ಕ್ಷಯರೋಗ ಬಾಧಿತರಿದ್ದು, ಪ್ರತಿವರ್ಷ 4 ಲಕ್ಷ ಮಂದಿ ಮರಣ ಹೊಂದುತ್ತಿದ್ದಾರೆ. ಕೊರೋನದಂತಹ ಸಮಯದಲ್ಲಿ ರಾಜ್ಯದ 57000 ಮಂದಿಗೆ ಕ್ಷಯ ರೋಗ ನಿಯಂತ್ರಣಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದರು.
ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸಂಘಟಿತ ಪ್ರಯತ್ನದಿಂದಾಗಿ 5000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕ್ಷಯ ರೋಗ ಇನ್ನಿಲ್ಲದಂತೆ ನಿಯಂತ್ರಿಸಬಹುದಾಗಿದೆ ಎಂದ ಅವರು, ಈ ಅವಧಿಯಲ್ಲಿ ರೋಗದ ನಿಯಂತ್ರಣಕ್ಕಾಗಿ ಹಲವು ಪ್ರಯೋಗಗಳನ್ನು ನಡೆಸಲಾಗಿದೆ. ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಪ್ರಸ್ತತ 2025ಕ್ಕೆ ಕ್ಷಯ ರೋಗ ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಕ್ಷಯ ರೋಗ ಗುಣವಾಗ ಬಹುದಾದ ಕಾಯಿಲೆಯಾಗಿದ್ದು, ಬಾಧಿತರಿಗೆ ಸಕಾಲಿಕ ಸಮಾಲೋಚನೆ ಮೂಲಕ ರೋಗ ನಿಯಂತ್ರಣಕ್ಕೆ ಮುನ್ನಡಿ ಬರೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ಡಾ.ಅನಿಲ್, ಡಾ. ಸ್ಫೂರ್ತಿಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಡಾ.ರಘುನಂದನ್ ಮುಂತಾದವರು ಉಪಸ್ಥಿತರಿದ್ದರು.
