Wednesday, February 18, 2026
Wednesday, February 18, 2026
Home Blog Page 179

Government Employees’ Housing Cooperative Society ರಾಜ್ಯ ಸರ್ಕಾರಿ ನೌಕರರ ಗೃಹನಿರ್ಮಾಣ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಪ್ರಕಟಣೆ

0

Government Employees’ Housing Cooperative Society ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಶಿವಮೊಗ್ಗ ಇದರ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ದಿನಾಂಕ: 21-09-2025ರ ಭಾನುವಾರ ಬೆಳಗ್ಗೆ 12.00 ಗಂಟೆಗೆ. ಸಂಘದ ಅಧ್ಯಕ್ಷರಾದ ಸಿ. ಎಸ್. ಷಡಾಕ್ಷರಿ ಅವರ ಅಧ್ಯಕ್ಷತೆಯಲ್ಲಿ

‘ಶ್ರೀ ದ್ವಾರಕ ಕನ್ವೆನ್ಸನ್ ಹಾಲ್’, ಆಯನೂರು ಗೇಟ್ ಹತ್ತಿರ, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಆಯೋಜಿಸಲಾಗಿದೆ.

ಸಂಘದ ಎಲ್ಲಾ ಸದಸ್ಯರು ಈ ಸಭೆಗೆ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡುವಂತೆ ಎಸ್.ಆರ್. ಗೌರವ ಕಾರ್ಯದರ್ಶಿ
ನರಸಿಂಹಮೂರ್ತಿ
ಆವರು ಕೋರಿದ್ದಾರೆ.

Rotary Club Shivamogga ಜನಪದ ಕಲೆ & ಕ್ರೀಡೆಗಳ ಉಳಿವಿಗೆ ಎಲ್ಲರೂ ಮುಂದಾಗಬೇಕು- ಡಾ.ಹೆಚ್.ಇ.ಜ್ಞಾನೇಶ್.

0

Rotary Club Shivamogga ಗ್ರಾಮೀಣ ನೆಲದ ಮೂಲ ಸಂಸ್ಕೃತಿಯಾದ ಜನಪದ ಕಲೆ ಮತ್ತು ಕ್ರೀಡೆಗಳ ಉಳಿವಿಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಇ. ಜ್ಞಾನೇಶ್ ಹೇಳಿದರು.

ಶಿವಮೊಗ್ಗ ಪಟ್ಟಣದ ಮುರುಘಾಮಠದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ಮತ್ತು ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಹಾಗೂ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಪೆಟ್ಲು ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಕ್ರೀಡೆಗಳು ಸಾಂಪ್ರದಾಯಿಕ ಜೀವನದ ಅವಿಭಾಜ್ಯ ಅಂಗವಾಗಿದ್ದು, ಆಧುನಿಕತೆಯ ಪ್ರಭಾವದಲ್ಲಿ ಮಲೆನಾಡಿನ ಅಪ್ಪಟ್ಟ ಗ್ರಾಮೀಣ ಕ್ರೀಡೆ ಪೆಟ್ಲು ಕಣ್ಮರೆಯಾಗುತ್ತಿದೆ. ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ನಾಡಿನ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ಪ್ರತಿಯೊಬ್ಬರು ಕಟಿಬದ್ಧರಾಗಿರಬೇಕು ಎಂದ ಅವರು, ಒಂದು ಕಾಲದಲ್ಲಿ ಜುಮ್ಮನಕಾಯಿ, ಪೆಟ್ಲುಕಾಯಿ ಎನ್ನುವ ವಿವಿಧ ಸಣ್ಣ ಕಾಯಿಗಳನ್ನು ಬಳಸಿ ಪಟ್ ಎಂದು ಬಂದೂಕಿನಂತೆ ಹೊಡೆಯುವಂತೆ ಪೆಟ್ಲು ಮೂಲಕ ಹೊಡೆಯುತ್ತಾ ಸಡಗರದಿಂದ ಗ್ರಾಮದ ತುಂಬಾ ಓಡಾಡುವುದೇ ಒಂದು ಆನಂದಮಯವಾಗಿತ್ತು ಎಂದು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.

ಸಾನ್ನಿಧ್ಯ ವಹಿಸಿದ್ದ ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ಹಬ್ಬ ಹರಿದಿನಗಳು ಅನೇಕ ವೈಶಿಷ್ಟತೆಗಳನ್ನು ಹೊಂದಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಯುವಜನತೆ ಸೇರಿದಂತೆ ಮಕ್ಕಳು ಸಹ ಮೊಬೈಲ್ ಗೀಳು ಬೆಳೆಸಿಕೊಂಡಿದ್ದಾರೆ. ಅದರಿಂದ ಹೊರಬಂದು ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶದ ಕ್ರೀಡೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಸಾಪ ಮತ್ತು ರೋಟರಿ ಕ್ಲಬ್ ಹಾಗೂ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯವರು ಉತ್ತಮ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

Rotary Club Shivamogga ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ್ ಬಹುಮಾನ ವಿತರಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎನ್. ಷಣ್ಮುಖಾಚಾರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ನಾಮನಿರ್ದೇಶನ ಸದಸ್ಯ ಪರಶುರಾಮ ಸಣ್ಣಬೈಲ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನಾಗರಾಜ ಗುತ್ತಿ, ಕಾರ್ಯದರ್ಶಿ ಕೃಷ್ಣಪ್ಪ ಓಟೂರು, ತಾಲೂಕು ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಎಚ್. ಗುರುಮೂರ್ತಿ, ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಎಸ್.ಆರ್. ಮಧುರಾಮ್, ಕಸಾಪ ಕೋಶಾಧ್ಯಕ್ಷ ಮೋಹನ್ ಸುರಭಿ, ಗೌರವ ಕಾರ್ಯದರ್ಶಿ ಲಿಂಗರಾಜ ಗೌಡ, ರೇವಣಪ್ಪ ಬಿದರಗೇರಿ, ಮಾಲತೇಶ ಮಾಸ್ತರ್, ಡಿ. ಶಿವಯೋಗಿ, ರೂಪಾ ಮಧುಕೇಶ್ವರ್, ವಾಸಂತಿ ನಾವುಡಾ, ವಿನಯ ಪ್ರಶಾಂತ್, ಭಾರತಿ ಭಂಡಾರಿ, ಸೇರಿದಂತೆ ಇತರರಿದ್ದರು.

Teachers day ನೈತಿಕ ಅಧಃಪತನದ ‌ಕಾಲಘಟ್ಟದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದಡಾ.ರಾಧಾಕೃಷ್ಣನ್- ಎಸ್,ಎನ್.ಚನ್ನಬಸಪ್ಪ

0

Teachers day ನೈತಿಕತೆ ಅಧಃಪತನಕ್ಕೆ ಇಳಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳು ಪ್ರಸ್ತುತವಾಗುತ್ತವೆ ಎಂದು ಶಾಸಕ ಎನ್.ಎನ್‌.ಚನ್ನಬಸಪ್ಪ ಅವರು ಹೇಳಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಉಜ್ವಲ ಭವಿಷ್ಯಕ್ಕೆ ಶಿಕ್ಷಕರ ಮಹತ್ವವನ್ನು ಚೆನ್ನಾಗಿ ಅರಿತಿದ್ದ ರಾಧಾಕೃಷ್ಣನ್‌ಅವರು ಮಹಾನ್‌ಸಾಧಕರಲ್ಲಿ ಮೇಲ್ಪಂಕ್ತಿಯಲ್ಲಿ ಗುರುತಿಸಿಕೊಳ್ಳುವವರಾಗಿದ್ದಾರೆ ಎಂದವರು ನುಡಿದರು.
ದೇಶವನ್ನು ಮಾದರಿಯಾಗಿ ನಿರ್ಮಿಸುವಲ್ಲಿ ಟೊಂಕಕಟ್ಟಿ ನಿಲ್ಲುವ ಪ್ರತಿ ವ್ಯಕ್ತಿಯ ಹಿಂದೆ ಓರ್ವ ಆದರ್ಶ ಶಿಕ್ಷಕನ ನೆರಳಿರುವುದನ್ನು ಮರೆಯಲಾಗದು ಎಂದ ಅವರು, ಶಿಕ್ಷಣ ಮತ್ತು ಶಿಕ್ಷಕ ಪ್ರಧಾನವಾಗಿ ಗುರುತಿಸಲ್ಪಡುತ್ತಾರೆ ಎಂದರು.
ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ವ್ಯವಸ್ಥೆಯ ನಡುವೆ ಸಂಘರ್ಷ ಕಂಡುಬರುತ್ತಿದೆ. ಈ ವಿಷಯದ ಕುರಿತು ಗಂಭೀರಸ್ವರೂಪದ ಚರ್ಚೆಗಳು ನಡೆದು ಅಂತಿಮವಾಗಿ ಶಿಕ್ಷಣಕ್ಕೆ ಪ್ರಾಧಾನ್ಯತೆ ದೊರೆಯುವಂತಾಗಬೇಕು, ಜನಸಾಮಾನ್ಯರಿಗೆ ಉನ್ನತ ಶಿಕ್ಷಣ ದೊರೆಯುವಂತಾಗಬೇಕು ಎಂದ ಅವರು, ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಸಲ್ಲದು ಎಂದ ಅವರು, ಇಂದಿನ ಪ್ರತಿ ವಿದ್ಯಾರ್ಥಿಗಳು ದೇಶದ ಭವಿಷ್ಯ ನಿರ್ಮಿಸುವ ವಿಶೇಷ ವ್ಯಕ್ತಿತ್ವದ ವ್ಯಕ್ತಿಗಳಾಗಿ ಹೊರಹೊಮ್ಮಬೇಕೆಂದವರು ನುಡಿದರು.
ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ರಾಧಾಕೃಷ್ಣನ್‌ಅವರು ಭಾರತ ರತ್ನ ಪದವಿಯವರೆಗೆ ಏರಿದ್ದು, ಹರ್ಷದಾಯಕ ಸಂಗತಿ. ಆವ್ಯಕ್ತಿತ್ವದ ಹಿಂದಿನ ಶಕ್ತಿ ಶಿಕ್ಷಕರೇ ಆಗಿದ್ದರು ಎಂಬುದು ಗಮನಾರ್ಹ ಎಂದ ಅವರು, ಜಿಲ್ಲೆಯಲ್ಲಿ ಪ್ರತಿಭಾವಂತ ಶಿಕ್ಷಕರನ್ನು ಗುರುತಿಸಿ, ಗೌರವಿಸುತ್ತಿರುವುದು ಸಂತಸದ ಸಂಗತಿಯಾದರೂ ಮುಂದಿನ ದಿನಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು ಸಲ್ಲುವಂತಾಗಬೇಕೆಂದವರು ಆಶಿಸಿದರು.
Teachers day ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್‌ಸದಸ್ಯೆ ಶ್ರೀಮತಿ ಬಲ್ಕೀಸ್‌ಬಾನು ಅವರು ಮಾತನಾಡಿ, ಪ್ರವರ್ಧಮಾನಕ್ಕೇರಿದ ಪ್ರತಿ ವ್ಯಕ್ತಿಯ ಬೆಳವಣಿಗೆ ಮತ್ತು ಆತನ ಸಾಧನೆಯ ಹಿಂದೆ ಶಿಕ್ಷಕರ ಅರ್ಪಣಾ ಭಾವವನ್ನು ನೆನಪಿಸಿಕೊಳ್ಳಬೇಕು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜಕಾರಣಿಗಳ ಜೊತೆಜೊತೆಗೆ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿತ್ತು ಎಂದರು.
ಶಿಕ್ಷಕರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿನ ಬೆಳವಣಿಗೆಗಳನ್ನು ಸಮೀಪದಿಂದ ಬಲ್ಲವರಾಗಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಶಿಕ್ಷಕರು ಮಕ್ಕಳಲ್ಲಿ ಅಭಿಮಾನ ಮೂಡುವಂತೆ ನೋಡಿಕೊಳ್ಳಬೇಕು. ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿನ ಸಾಧಕರು ಶಿಕ್ಷಕರ ಮಾರ್ಗದರ್ಶನದಿಂದಲೇ ಗುರುತಿಸಿಕೊಂಡವರಾಗಿರುತ್ತಾರೆ ಎಂದರು.
ಸಮಾಜದಲ್ಲಿ ಅಲ್ಲಲ್ಲಿ ಕಂಡುಬರುವ ಮೌಢ್ಯ, ಡಂಬಾಚಾರಗಳನ್ನು ತೊಲಗಿಸುವ ನಿಟ್ಟಿನಲ್ಲಿ ಶಿಕ್ಷಕರು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಬಾಲ್ಯವಿವಾಹ, ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ಸರ್ಕಾರದೊಂದಿಗೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಶಿಕ್ಷಣ ಮತ್ತು ಶಿಕ್ಷಕರ ವೃತ್ತಿ ಅತ್ಯಮೂಲ್ಯವಾದುದು ಎಂದರು.
ಶಿಕ್ಷಕರ ವಿನಃ ಸ್ವಾಸ್ಥ್ಯ ಸಮಾಜ ನಿರ್ಮಾಣ ಅಸಾಧ್ಯ. ಪ್ರತಿಭಾವಂತ ಶಿಕ್ಷಕರೇ ಸರ್ಕಾರಿ ಶಾಲೆಗಳಲ್ಲಿದ್ದಾರೆ. ಶಿಕ್ಷಕರು ಸರ್ಕಾರಿ ಶಾಲೆಗಳ ಉನ್ನತಿ ಬಗ್ಗೆ ವಿಶೇಷ ಗಮನಹರಿಸಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಇತ್ತೀಚಿನ ಒತ್ತಡದ ಬದುಕು ಹಾಗೂ ಕೌಟುಂಬಿಕ ಸಮಸ್ಯೆಗಳ ನಡುವೆಯೂ ಉತ್ತಮ ಸಮಾಜವನ್ನು ಕಟ್ಟುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶಿಕ್ಷಕರ ವರ್ಗಾವಣೆ ಸಮಯದಲ್ಲಿ ಮಕ್ಕಳು ಕಣ್ಣೀರಾಗುವುದನ್ನು ನೋಡಿದರೆ ಸರ್ಕಾರಿ ಶಾಲೆಗಳಲ್ಲಿ ಇನ್ನು ಶಿಕ್ಷಣದ ಮೌಲ್ಯ ಉಳಿದಿದೆ ಎನಿಸುತ್ತದೆ. ವಿದ್ಯಾರ್ಥಿಗಳು ನನ್ನ ಮಕ್ಕಳ ರೀತಿಯಲ್ಲಿ ಬೆಳೆಯಬೇಕು ಎನ್ನುವ ಶಿಕ್ಷಕರ ನಿಸ್ವಾರ್ಥ ಸೇವೆ, ಇದು ನಮ್ಮ ಶಾಲೆ ನಮ್ಮ ಮಕ್ಕಳು ಎಂಬ ಮನೋಭಾವ ಪ್ರಶಂಸನಾರ್ಹ ಎಂದರು.
ಶಿಕ್ಷಕರು ಕೇವಲ ಶಿಕ್ಷಕರ ಕೆಲಸ ಮಾತ್ರವಲ್ಲದೆ ಶಿಕ್ಷಕರೇತರ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಅನೇಕ ಒತ್ತಡಗಳಿಗೆ ಅಂಜದೆ ಕಾಯಕವೇ ಕೈಲಾಸ ಎಂಬ ಬಸವಣ್ಣನ ಆಶಯದಂತೆ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಶಿಕ್ಷಕರ ವೃತ್ತಿ ಗೌರವವನ್ನು ಎತ್ತಿ ಹಿಡಿಯುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಜ್ಞಾನದ ಯುಗ. ಜ್ಞಾನದಿಂದ ವಿಜ್ಞಾನ ವಿಜ್ಞಾನದಿಂದ ತಂತ್ರಜ್ಞಾನ ರೂಪಕೊಂಡಿದೆ. ಇಂತಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕಾಗಿದೆ ಎಂದರು.
ಸೂಡಾ ಅಧ್ಯಕ್ಷ ಸುಂದರೇಶ್‌ಅವರು ಮಾತನಾಡಿ, ಬಹುತೇಕರಿಗೆ ಶಿಕ್ಷಣ ಮತ್ತು ಶಿಕ್ಷಕರ ಮೌಲ್ಯ ಅವರ ಮಹತ್ವ ತಿಳಿದಿಲ್ಲ. ಪೋಷಕರ ನಂತರ ಶಿಕ್ಷಕರ ಸ್ಥಾನ ಹೆಚ್ಚಿನ ಮಹತ್ವ ಪಡೆದಿದೆ. ಶಿಕ್ಷಕರು ಸಮಾಜದ ಶಿಲ್ಪಿಗಳು ಎಂದವರು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಪ್ರತಿಭಾವಂತ ಶಿಕ್ಷಕರು, ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಗುರುತಿಸಿ, ಗೌರವಿಸಲಾಯಿತು.
ಸಮಾರಂಭದಲ್ಲಿ ಸಾಹಿತಿ, ಚಿಂತಕ ವೈ.ವಿ.ಗುಂಡೂರಾವ್‌ಅವರು ಶಿಕ್ಷಕರು ಕೈಗೊಳ್ಳಬಹುದಾದ ಪರಿಣಾಮಕಾರಿ ಬೋಧನಾ ವಿಧಾನಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ್‌, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಧು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ‍ಧ್ಯಕ್ಷ ಆರ್.ಮೋಹನ್‌ಕುಮಾರ್‌, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ರುದ್ರಪ್ಪ, ಧರ್ಮಪ್ಪ, ದಿನೇಶ್‌, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್‌, ಮತ್ತಿತರರು ಉಪಸ್ಥಿತರಿದ್ದರು.

Kuvempu University ಕುವೆಂಪು ವಿವಿ ಸ್ನಾನಕೋತ್ತರ ಅಧ್ಯಯನ ಪ್ರವೇಶಾತಿಗೆ ಅರ್ಜಿ ಆಹ್ವಾನ

0

Kuvempu University ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದಲ್ಲಿ 2025-26ನೇ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ವಿಭಾಗದಲ್ಲಿ ಭರ್ತಿಯಾಗದೆ ಉಳಿದಿರುವ ಖಾಲಿ ಸ್ಥಾನಗಳಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿಯನ್ನು ಸೆ.15 ರೊಳಗಾಗಿ ಸಲ್ಲಿಸುವಂತೆ ವಿಶ್ವವಿದ್ಯಾಲಯದ ಉಪ ಕುಲಸಚಿವರು ತಿಳಿಸಿದ್ದಾರೆ.

Kuvempu University ಕುವೆಂಪು ವಿವಿ ಈಗ ದೇಶದ ಟಾಪ್ 100 ರಲ್ಲಿ ಪ್ರಮುಖ ಸ್ಥಾನ

0

Kuvempu University ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಗುರುವಾರ ಬಿಡುಗಡೆಗೊಳಿಸಿರುವ 2025ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ (ಎನ್‌ಐಆರ್‌ಎಫ್) ನಲ್ಲಿ ದೇಶದ ಸರ್ಕಾರಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಕುವೆಂಪು ವಿಶ್ವವಿದ್ಯಾಲಯ 51ರಿಂದ 100ರ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಳಿಸುವುದರೊಂದಿಗೆ ಮತ್ತೊಮ್ಮೆ ರಾಷ್ಟ್ರದ ಗಮನ ಸೆಳೆದಿದೆ. ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಮೂರನೇ ಸ್ಥಾನ ಪಡೆದಿದೆ.

ದೇಶದ 4,100ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಿದ್ದ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿ.ವಿ. ಸರ್ಕಾರಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 51ರಿಂದ 100ರೊಳಗೆ ಸ್ಥಾನ ಪಡೆದಿದೆ. ಉಳಿದಂತೆ ಮೈಸೂರು ವಿವಿ 20ನೇ ಸ್ಥಾನ, ಬೆಂಗಳೂರು ವಿವಿ 26ನೇ ಸ್ಥಾನ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ 37ನೇ ಸ್ಥಾನ ಮತ್ತು ವಿಶ್ವೇಶ್ವರಾಯ ತಾಂತ್ರಿಕ ವಿವಿ 50ನೇ ಸ್ಥಾನ ಪಡೆದಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳು, ಕೇಂದ್ರ ಸರ್ಕಾರದ ಉನ್ನತ ಶೈಕ್ಷಣಿಕ ಸಂಸ್ಥೆಗಳು, ಎಂಜಿನಿಯರಿಂಗ್ ನಂತಹ ವೃತ್ತಿಪರ ಕೋರ್ಸ್ ಗಳನ್ನು ನಡೆಸುವ ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶಾದ್ಯಂತ (4,100) ಶಿಕ್ಷಣ ಸಂಸ್ಥೆಗಳು ಶ್ರೇಣೀಕರಣಕ್ಕೆ ಒಳಪಟ್ಟಿವೆ.

ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟವನ್ನು ಉತ್ತಮಪಡಿಸಲು ಮತ್ತು ಒಟ್ಟಾರೆ ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2015ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಪ್ರಾರಂಭಿಸಿದ್ದು, ಈಗ ಹತ್ತನೇ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ವೈದ್ಯಕೀಯ, ವಾಸ್ತುಶಿಲ್ಪ, ಕಾನೂನು ವಿಷಯಗಳ ಶಿಕ್ಷಣ ಸಂಸ್ಥೆಗಳ ಜೊತೆಗೆ ವಿಶ್ವವಿದ್ಯಾಲಯಗಳ ಶ್ರೇಣೀಕರಣವನ್ನು ಎನ್‌ಐಆರ್‌ಎಫ್ ಅಡಿಯಲ್ಲಿ ಮಾನವ ಸಂಪನ್ಮೂಲ ಇಲಾಖೆ ಪ್ರತಿ ವರ್ಷ ಕೈಗೊಳ್ಳುತ್ತದೆ.

Kuvempu University ವಿಶ್ವವಿದ್ಯಾಲಯದ ರ‍್ಯಾಂಕಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ದೇಶದ ಶೈಕ್ಷಣಿಕ ರಂಗವನ್ನು ಹಲವಾರು ಸಮಸ್ಯೆಗಳು ಭಾದಿಸುತ್ತಿದ್ದರೂ, ವಿಶ್ವವಿದ್ಯಾಲಯದ ಅಧ್ಯಾಪಕರು ಗುಣಮಟ್ಟದ ಸಂಶೋಧನೆ, ಪ್ರಕಟಣೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಶೈಕ್ಷಣಿಕ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಮುಂಬರುವ ದಿನಗಳಲ್ಲಿ ರ‍್ಯಾಂಕಿಂಗ್ ಉತ್ತಮಪಡಿಸುವ ನಿಟ್ಟಿನಲ್ಲಿ ಸುಧಾರಣೆ ತರಲಾಗುವುದು ಎಂದು ತಿಳಿಸಿದರು.

ಎನ್‌ಐಆರ್‌ಎಫ್ ರ‍್ಯಾಂಕಿಂಗ್ ಮಾನದಂಡಗಳು: ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ ಫ್ರೇಂವರ್ಕ್ ಐದು ಪ್ರಮುಖ ಮಾನದಂಡಗಳ ಆಧಾರದ ಮೇಲೆ ಶ್ರೇಣೀಕರಣ ನೀಡುತ್ತದೆ. ರ‍್ಯಾಂಕಿಂಗ್‌ಗೆ ಒಳಪಡುವ ಶೈಕ್ಷಣಿಕ ಸಂಸ್ಥೆಗಳಲ್ಲಿನ ಬೋಧನೆ, ಕಲಿಕೆಗಾಗಿ ಅಸ್ತಿತ್ವದಲ್ಲಿರುವ ಸಂಪನ್ಮೂಲಗಳ ಸೌಲಭ್ಯ, ಸಂಸ್ಥೆಗಳಲ್ಲಿ ನಡೆಯುತ್ತಿರುವ ಸಂಶೋಧನೆ ಮತ್ತು ವೃತ್ತಿಪರ ಚಟುವಟಿಕೆಗಳು, ಕೋರ್ಸ್ಗಳ ಮೂಲಕ ಸಂಸ್ಥೆ ಸೃಷ್ಟಿಸುತ್ತಿರುವ ಉದ್ಯೋಗಾವಕಾಶ ಮತ್ತು ಪರೀಕ್ಷೆಯ ಉತ್ತೀರ್ಣದ ಪ್ರಮಾಣ ಸೇರಿದಂತೆ ಉನ್ನತ ಶಿಕ್ಷಣದ ಫಲಿತಾಂಶ, ಶೈಕ್ಷಣಿಕ ಸಂಸ್ಥೆಯ ಮೂಲಕ ನಡೆಯುತ್ತಿರುವ ವಿಸ್ತರಣೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ಚಟುವಟಿಕೆಗಳು ಮತ್ತು ಸಂಸ್ಥೆಯ ಕುರಿತು ಸಿಬ್ಬಂದಿ, ಸಂಶೋಧಕರು, ಸಾರ್ವಜನಿಕರ ಗ್ರಹಿಕೆ ಮತ್ತು ಅಭಿಪ್ರಾಯ, ಈ ಐದು ಮಾನದಂಡಗಳ ಮೂಲಕ ಮೌಲ್ಯಮಾಪನ ಮಾಡಿ ಶ್ರೇಣೀಕರಣ ನೀಡಲಾಗುತ್ತದೆ.

Klive Special Aricle ಗುರುವಿನ ಗುಲಾಮನಾಗುವ ತನಕ….

0

Klive Special Aricle ಪ್ರತಿವರ್ಷದಂತೆ ಈ ವರ್ಷವು ಸಹ ನಮ್ಮೆಲ್ಲ ನೆಚ್ಚಿನ ಶಿಕ್ಷಕರನ್ನು ನೆನೆದು, ಅವರು ನಮಗೆ ನೀಡಿದ ಮಾರ್ಗದರ್ಶನ, ಶಿಕ್ಷಣ, ಕಲಿಸಿದ ನೈತಿಕ ಶಿಕ್ಷಣ, ಸಹಕಾರ, ವ್ಯಕ್ತಿತ್ವ ರೂಪುಗೊಳ್ಳಲು ನೀಡಿದ ಹಿತನುಡಿ ಎಲ್ಲವನ್ನು ಸ್ಮರಿಸಿ ಅವರಿಗೆ ಗೌರವ ಸಮರ್ಪಣೆ ನೀಡುವ ದಿನ ‘ಶಿಕ್ಷಕರ ದಿನ’ ಬಂದಿದೆ.

ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಭಯದಿಂದ ನಿರ್ಭಯದ ಕಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯೇ ಗುರು.

ಇಂತಹ ಗುರುಗಳು ನೀಡಿದ ಮಾರ್ಗದರ್ಶನ, ಶಿಕ್ಷಣ, ನೈತಿಕ ಬುದ್ದಿ, ಸಹಕಾರ, ವ್ಯಕ್ತಿತ್ವ ರೂಪುಗೊಳ್ಳಲು ನೀಡಿದ ಹಿತನುಡಿ ಎಲ್ಲವನ್ನು ಸ್ಮರಿಸಲು , ಅವರಿಗೆ ಗೌರವ ಸಮರ್ಪಣೆ ನೀಡಲು ಇರುವ ದಿನವೇ ‘ಶಿಕ್ಷಕರ ದಿನ’…

ಪುರಂದರ ದಾಸರ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ….
ಇವುಗಳು ಕೇವಲ ಪದಗಳಲ್ಲ. ಶಿಕ್ಷಕರ ಮಹತ್ವ ಸಾರುವ ಸಾಲುಗಳು.

ಗುರುಕುಲದಿಂದ ಹಿಡಿದು ಆಧುನಿಕತೆಯ ತಂತ್ರಜ್ಞಾನದವರೆಗೂ ಗುರುವಿಗೆ ಇರುವ ಮಹತ್ವ ಬಹು ದೊಡ್ಡದು.
ಬದುಕು ಕೊಡುವ ತಂದೆ ತಾಯಿಯಂತೆ ಜೀವನ ರೂಪಿಸುವ ಗುರುಗಳು ದೇವರಿಗೆ ಸಮಾನ ಎಂಬ ಮಾತಿದೆ. ಹಾಗಾಗಿಯೇ ಗುರು ದೇವೋ ಗುರು ಬ್ರಹ್ಮ ಗುರು ವಿಷ್ಣು ಮಹೇಶ್ವರಹ ಎಂದು ಗುರುಗಳನ್ನು ದೇವರಿಗೆ ಹೋಲಿಸಲಾಗಿದೆ. ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಗುರುಗಳ ಮಾರ್ಗದರ್ಶನ, ಸಲಹೆ ಅಗತ್ಯ ಅವಶ್ಯಕ. ಈಗಿನ ಆಧುನಿಕ ಯುಗದಲ್ಲಿ, ಕಂಪ್ಯೂಟರ್ ,ಮೊಬೈಲ್ ಫೋನ್, ಟ್ಯಾಬ್, ಮುಂತಾದ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೂಲಕ ಜಗತ್ತಿನ ಯಾವುದೇ ಮೂಲೆಯಲ್ಲಿನ ವಿಷಯಗಳನ್ನು ತಿಳಿದುಕೊಳ್ಳಬಹುದು. ಆದರೆ ಶಾಲೆಯ ನಾಲ್ಕು ಗೋಡೆಯ ಮಧ್ಯದಲ್ಲಿ ಕುಳಿತು ಶಿಕ್ಷಕರು ಹೇಳಿಕೊಡುವ ಪಾಠದ ಮುಂದೆ ಅದೆಲ್ಲವೂ ಗೌಣ.

Klive Special Aricle ಜಗತ್ತು ಎಷ್ಟೇ ಮುಂದುವರೆದಿದ್ದರೂ ಗುರುವಿನ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಪ್ರತಿಯೊಂದು ಹಂತದಲ್ಲಿ ಗುರುವಿನ ಮಾರ್ಗದರ್ಶನ, ಸಲಹೆ , ಸಹಕಾರ ಅತ್ಯಗತ್ಯ. ಮನುಷ್ಯ ತನ್ನ ಜೀವನವನ್ನು ರೂಪಿಸಿಕೊಳ್ಳಲು ಗುರುವಿನ ಮೊರೆ ಹೋಗಬೇಕಾಗುತ್ತದೆ. ಉತ್ತಮ ವ್ಯಕ್ತಿತ್ವದೊಂದಿಗೆ ಜೀವನ ಪಾಠವನ್ನ ಹೇಳಿಕೊಡುವ ಎಲ್ಲಾ ಶಿಕ್ಷಕ ವೃಂದದವರಿಗೆ ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತಾ ಶಿಕ್ಷಕರ ದಿನಾಚರಣೆಯನ್ನು ಮಹತ್ವಪೂರ್ಣವಾಗಿಸೋಣ.

Teacher’s Day ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕ ವೃಂದ

0

Teacher’s Day ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5 ರಂದು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ 2025-26 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಜಿಲ್ಲೆಯಿಂದ 40 ಶಿಕ್ಷಕ/ಶಿಕ್ಷಕಿಯರು ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲಾ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ -07, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07, ಪ್ರೌಢಶಾಲಾ ವಿಭಾಗದಲ್ಲಿ ಅತ್ಯುತ್ತಮ ಶಿಕ್ಷಕಿ/ಶಿಕ್ಷಕ ಪ್ರಶಸ್ತಿಗೆ-07 ಹಾಗೂ ವಿಶೇಷ ಶಿಕ್ಷಕ ಪ್ರಶಿಸ್ತಿಗೆ -19 ಶಿಕ್ಷಕರುಗಳು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಹ ಶಿಕ್ಷಕರುಗಳಾದ ಶೀಲಾ ಪಿ.,- ಸಾಗರ, ಮಂಜಪ್ಪ ಡಿ.,-ಹೊಸನಗರ, ಜ್ಯೋತಿ ಹೆಚ್.ಎಂ., -ತೀರ್ಥಹಳ್ಳಿ, ಶಾರದಾ ಎಸ್.,-ಭದ್ರಾವತಿ, ಗಣೇಶ್ ನಾಯ್ಕ ಎನ್., -ಸೊರಬ, ಸುರೇಶ್ ಕೆ.,-ಶಿಕಾರಿಪುರ, ತಸ್ನಿಂ ಕೌಸರ್-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಡ್ತಿ ಮುಖ್ಯ ಶಿಕ್ಷಕರಗಳಾಗಿ ಸುಮ ಹೆಚ್.ಎ,-ತೀರ್ಥಹಳ್ಳಿ, ರಾಧಾಬಾಯಿ-ಶಿವಮೊಗ್ಗ, ಕೃಷ್ಣಪ್ಪ ಹೆಚ್.ವಿ.-ಸೊರಬ ಹಾಗೂ ಸಹ ಶಿಕ್ಷಕರುಗಳಾದ ಬೂದ್ಯಪ್ಪ ಡಿ.,-ಸಾಗರ, ಶಿಲ್ಪ ಜೆ., -ಹೊಸನಗರ, ಭಾರತಿ ಎಸ್.,-ಭದ್ರಾವತಿ, ಮಹೇಶಪ್ಪ ಬಂಡಿಬೈರನಹಳ್ಳಿ -ಶಿಕಾರಿಪುರ ಇವರುಗಳು ಆಯ್ಕೆಯಾಗಿದ್ದಾರೆ.
ಸರ್ಕಾರಿ ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯ ಶಿಕ್ಷಕರುಗಳಾದ ಗಜೇಂದ್ರ ಎಸ್.ಹೆಚ್., -ಸಾಗರ, ರಾಮಚಂದ್ರ ಎಸ್.ಜೆ. -ಸೊರಬ ಹಾಗೂ ಸಹ ಶಿಕ್ಷಕರುಗಳಾದ ಚಂದ್ರು ಸಿ.,-ಹೊಸನಗರ, ಕೃಷ್ಣಪ್ಪ ಡಿ.,-ತೀರ್ಥಹಳ್ಳಿ, ಛಾಯಾ ಶ್ಯಾಮಸುಂದರ- ಭದ್ರಾವತಿ, ನಾಗರಾಜಪ್ಪ ಪಿ.-ಶಿಕಾರಿಪುರ, ಹಸನ್ ಸಾಬ್ ಕೆ.ಹೆಚ್.-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.
Teacher’s Day ವಿಶೇಷ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಸರ್ಕಾರಿ ಶಾಲೆಯ ಬಡ್ತಿ ಮುಖ್ಯ ಶಿಕ್ಷಕರುಗಳಾದ ಶರಣ್ಣಪ್ಪ ಎ,-ಸಾಗರ, ಆಶಾ ಬಿ.ಕೆ,-ತೀರ್ಥಹಳ್ಳಿ, ಮುಖ್ಯ ಶಿಕ್ಷಕರಾದ ಭಾರತಿ ಎ.,-ಹೊಸನಗರ, ಸಹ ಶಿಕ್ಷಕರುಗಳಾದ ಶಬಿನಾ-ಭದ್ರಾವತಿ, ದುರುಗಪ್ಪ ಡಿ.ಬಿ.-ಸೊರಬ, ಸಂಜೀವ ನಾಯ್ಕ-ಶಿಕಾರಿಪುರ, ಪುಟ್ಟಸ್ವಾಮಿ ಕೆ.ಕೆ.-ಹೊನಸಗರ, ತಿಪ್ಪೆಸ್ವಾಮಿ ಆರ್.-ಭದ್ರಾವತಿ, ರವಿ ಎಸ್.ಟಿ.-ಶಿವಮೊಗ್ಗ, ಜಯ ಎಂ. ಶೇಟ್-ಶಿವಮೊಗ್ಗ, ಸಂಜಿದಾ ಬಾನು-ಶಿವಮಸೊಗ್ಗ, ಶಿಲ್ಪ ಜಿ.ಎಸ್.-ಶಿಕಾರಿಪುರ, ಆಶಾರಾಣಿ ಎ. ಆರ್.-ಶಿಕಾರಿಪುರ, ಅಪರ್ಣ ವಿ. ಎಂ-ಸೊರಬ., ಕಲಾವತಿ ಎ.-ಸೊರಬ, ಅಂಥೋನಿ ಫರ್ನಾಂಡಿಸ್-ಸಾಗರ, ಗೋಪಿ ವಿ.-ತೀರ್ಥಹಳ್ಳಿ, ಚಿತ್ರಕಲಾ ಶಿಕ್ಷಕರಾದ ಅರವಿಂದ ಟಿ.ಎನ್.-ತೀರ್ಥಹಳ್ಳಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಸುಶೀಲಮ್ಮ ಎಸ್.-ಶಿವಮೊಗ್ಗ ಇವರುಗಳು ಆಯ್ಕೆಯಾಗಿದ್ದಾರೆ.

Klive Special Article ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ಸಿ.ವಿ.ತಿರುಮಲರಾವ್. ಲೇ:ಟಿ.ನಾರಾಯಣ ಭಟ್, ರಾಮಕುಂಜ

0

ನೆನಪುಗಳ ಸಂಕಲನ

Klive Special Article ಕೇವಲ ವೇತನಕ್ಕಾಗಿ ಯಾರು ಕೆಲಸ ಮಾಡುವರೋ ಅವರು ಶಿಕ್ಷಕರು. ಯಾರು ವೇತನದ ಜೊತೆ ಜೊತೆ ಸಮಾಜದ ಬಗ್ಗೆ ಕಳಕಳಿ ಹೊಂದಿರುತ್ತಾರೋ ಅವರು ಗುರುಗಳು. ಶಿಕ್ಷಕರು ನಾಲ್ಕಕ್ಷರ ಕಲಿಸಬಹುದಷ್ಟೇ…. ಗುರು ಅಕ್ಷರದ ಜೊತೆ ಬದುಕು ಕಲಿಸುವನು.

ಒಳ್ಳೆಯತನ ಸೋಲಬಹುದು – ಆದರೆ ಸಾಯುವುದಿಲ್ಲ. ಕೆಟ್ಟತನ ಗೆಲ್ಲಬಹುದು – ಆದರೆ ಉಳಿಯುವುದಿಲ್ಲ. ಅಕ್ಷರ ಕಲಿತವನು ಭ್ರಷ್ಟನಾಗಬಹುದು- ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗಲಾರ.

ಸಿ.ವಿ. ತಿರುಮಲ ರಾವ್ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಉನ್ನತ ಅಧಿಕಾರಿಯಾಗಿ ದುಡಿದ ಅನುಭವಿ. ರಾಜ್ಯದೆಲ್ಲೆಡೆ ದುಡಿದು ಶಿಕ್ಷಣ ಕ್ಷೇತ್ರದ ಒಳಿತು- ಕೆಡುಕು, ಒಳ- ಹೊರಗುಗಳ ಬಲ್ಲವರು. ಶಿಕ್ಷಕರ ನಾಡಿಮಿಡಿತ ಅರಿತವರು. ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡ ಶಿಕ್ಷಣ ತಜ್ಞರು. ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ಇವರು ದೇಶ ಕಂಡ ಆಮೂಲಾಗ್ರ ಬದಲಾವಣೆಗಳಿಗೆ ಒಗ್ಗಿಕೊಂಡವರು. ಹಳೆಬೇರು ಹೊಸ ಚಿಗುರು ಕಂಡವರು. ಕುಟುಂಬದ ಸಂಸ್ಕಾರಗಳೇ ಇವರ ಬದುಕಿನ ಸಂಪತ್ತಾಯಿತು. ವೃತ್ತಿಯಾದ್ಯಂತ ನಡೆನುಡಿಯಲ್ಲಿ ಪ್ರಕಟವಾಯಿತು. ನಿವೃತ್ತಿಯ ನಂತರವೂ ಬಳಲದೆ- ಗುಣುಗುಟ್ಟದೆ ಸುಮಾರು 20 ವರ್ಷಗಳ ಕಾಲ ಬೆಂಗಳೂರಿನ ಅಂತರಾಷ್ಟ್ರೀಯ ಇಸ್ಕಾನ್ ಸೇವಾ ಸಂಸ್ಥೆಯ ಅಕ್ಷಯಪಾತ್ರೆ ವಿಭಾಗದ ಶೈಕ್ಷಣಿಕ ಸಲಹೆಗಾರರಾಗಿ ಕಾಯ೯ನಿವ೯ಹಣೆ.

ಬಡವರ ಮಕ್ಕಳಿಗೆ ಗೌರವದ ಬಾಳು ಬಾಳಲು ಮಾರ್ಗದರ್ಶನವಿತ್ತರು. ಹಸಿವು ನೀಗಿಸಲು ನೆರವಾದರು. ಸರಕಾರಿ ಸೌಲಭ್ಯಗಳ ಒದಗಿಸುವಲ್ಲಿ ಶ್ರಮಿಸಿದರು. ಸರಕಾರದ ಅನ್ನದ ಋಣವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಹಿಂತುರುಗಿಸಿದ ಸೇವಾ ಧುರಂಧರ. ವಯಸ್ಸು ಎಪ್ಪತ್ತೊಂಬತ್ತು ಆದರೂ ಉಲ್ಲಸಿತರಾಗಿದ್ದಾರೆ.ಇವರು ಸಮಾಜದೊಂದಿಗೆ ಬೆರೆತು ಹೋದುದಕ್ಕೆ ಸಿಕ್ಕಿರುವ ಪ್ರತಿಫಲ ಎನ್ನುತ್ತಾರೆ. ಅಮ್ಮನ ಮಡಿಲು- ಅಪ್ಪನ ಹೆಗಲು- ಗೆಳೆಯರ ತೋಳು -ಗುರುಗಳ ಕಾರುಣ್ಯ ಬದುಕೆಲ್ಲ ಆಸರೆಯಾಯಿತು ಎಂದು ನೆನೆಯುವರು.

ಇವರ ತಂದೆ ಸಿ.ಎಸ್. ವೆಂಕಟರಾವ್. ತಾಯಿ ತಾರಾಬಾಯಿ. ತಂದೆ ಊರ ಶಾನುಭೋಗರು – ಬಡವ ಬಲ್ಲಿದರಿಗೆ ಉಪಕಾರಿಯಾಗಿ ನಿಂತವರು. ಗೌರವದ ಮನೆತನ. ಊರಿಗೆ ಊರೇ ಅವರ ಬೆನ್ನ ಹಿಂದೆ ಇತ್ತು.ತಾಯಿ ಗೃಹಿಣಿ. ಸಂಸ್ಕಾರವೇ ಮನೆದೇವರು ಎಂಬಂತಿದ್ದರು. ಎಂಟು ಮಕ್ಕಳ ಸಾಕಿ ಸಲಹಿದ ಮಹಾ ಮಾತೆ. ಅವರು ಜನಿಸಿದ ಚನ್ನಗಿರಿ, ದಾವಣಗೆರೆಯ ಸಮೀಪದ ಒಂದೂರು. ಕೆಳದಿಯ ರಾಣಿ ಚೆನ್ನಮ್ಮ,ಇತಿಹಾಸದ ಪುಟದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ವೀರ ವನಿತೆ. ಶತ್ರುಗಳ ದಮನಸಿ ಕೀರ್ತಿ ಮೆರೆದ ನಾಡು ಅದು. ಯುದ್ಧ ಗೆದ್ದು ನಾರಿಯರಿಗೆಲ್ಲ ಸ್ಪೂರ್ತಿ ಧಾತೆಯಾದರು. ಗೆದ್ದ ನಾಡಿಗೆ ಕಲಶವಿಟ್ಟಂತೆ ಕೋಟೆ ಕೊತ್ತಲಗಳ ಕಟ್ಟಿ ಸಾಕ್ಷಿಯಾದರು. ಅಂತಹ ನಾಡಿನ ಕರುಳ ಕುಡಿ ತಿರುಮಲ ರಾವ್. ಎಚ್.ಎಸ್. ವೆಂಕಟೇಶಮೂರ್ತಿ ಅವರಂತಹ ಶ್ರೇಷ್ಠ ಸಾಹಿತಿಗಳ ಶಿಷ್ಯತ್ವ ಗಳಿಸಿದರು. ಸಾಹಿತ್ಯ -ಸಂಸ್ಕಾರ -ಕೆಚ್ಚು – ಮಾನವೀಯತೆ -ಸೇವಾ ಭಾವ ಎಲ್ಲವೂ ಮಂದೈಸಿದ ಅಜಾತಶತ್ರು.

ದೊಡ್ಡ ಸಂಸಾರದಲ್ಲಿ ಹುಟ್ಟಿದ ಇವರು ಚನ್ನಗಿರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಒಂದಷ್ಟು ಉತ್ತಮ ಶಿಕ್ಷಣ ಕೊಡೋಣವೆಂದು ಕಂದಾಯ ಇಲಾಖೆಯಲ್ಲಿ ದುಡಿಯುತ್ತಿದ್ದ ತಾತಯ್ಯ ಬೆಂಗಳೂರು ನಗರಕ್ಕೆ ಕರೆಸಿಕೊಂಡರು. ನ್ಯಾಷನಲ್ ಹೈಸ್ಕೂಲ್ – ನ್ಯಾಷನಲ್ ಕಾಲೇಜು ಹೀಗೆ ಬಿಎಸ್ಸಿ- ಬಿ ಎಡ್ ಪದವಿಗಿಟ್ಟಿಸಿ ಸ್ನಾತಕೋತ್ತರ ಪದವಿ ಪೂರೈಸಿದರು.

Klive Special Article ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ನ್ಯಾಷನಲ್ ಕಾಲೇಜು ಶೈಕ್ಷಣಿಕ -ಸಾಂಸ್ಕೃತಿಕ -ಸಾಹಿತ್ಯಿಕ ಕ್ಷೇತ್ರಗಳಲ್ಲಿ ಬಹಳ ವರ್ಷಗಳಿಂದ ದೊಡ್ಡ ಹೆಸರು. ಇಂತಹ ಹಿರಿಯ ವಿದ್ಯಾಸಂಸ್ಥೆಯಲ್ಲಿ ಪ್ರಕಾಂಡ ಪಾಂಡಿತ್ಯವಿದ್ದ ಪ್ರಾಧ್ಯಾಪಕರ ತಂಡವೇ ಇದ್ದಿತು. ಅವರ ಭಾಷಾ ಸಂಪತ್ತು, ಭಾಷೆಯನ್ನು ಬಳಸಿಕೊಂಡ ಚಾತುರ್ಯ ಅದ್ಭುತ. ಹೆಸರಾಂತ ಸಾಹಿತ್ಯ ಕೃಷಿಕ ಪ್ರಾಧ್ಯಾಪಕ ತಂಡ ಕಾಲೇಜಿನ ಕೀರ್ತಿ ಗೌರವಗಳನ್ನು ಬಾನಿಗೇರಿಸಿತ್ತು. ವಿದ್ಯಾರ್ಥಿಗಳೂ ಅಷ್ಟೇ, ವಿವಿಧ ಕ್ಷೇತ್ರಗಳಲ್ಲಿ ಕೀರ್ತಿ ಶಿಖರವೇರಿದವರಿದ್ದರು. ಇವೆಲ್ಲ ತಿರುಮಲರಾಯರಿಗೆ ಸ್ಪೂರ್ತಿಯಾಯಿತು. ವಿದ್ಯಾಲಯದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಬರುತ್ತಿದ್ದ ಸಾಹಿತಿಗಳು- ಪಂಡಿತರು – ಸಾಮಾಜಿಕ ಕಾರ್ಯಕರ್ತರು – ಮಂತ್ರಿ ಮಾಗದರಿಂದ ಸಂಸ್ಥೆಯು ಒಳ್ಳೆಯ ಹೆಸರು ಪಡೆಯಿತು. ಸಂಗೀತ- ಸಾಂಸ್ಕೃತಿಕ ವೈಭವಗಳಿಗೂ ಅದು ಕೇಂದ್ರ ಬಿಂದುವಾಗಿದೆ. ಹಬ್ಬ ಹರಿದಿನಗಳ ಸಮಯದಲ್ಲಿ ಅನೇಕ ವಿದ್ವತ್ಪೂರ್ಣ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ . ಇಂತಹ ವಿಶಿಷ್ಟ ಕ್ಷೇತ್ರ ಇವರ ಬದುಕನ್ನು ಸಮೃದ್ಧಗೊಳಿಸಿತು. ಸಾಹಿತ್ಯದ ಗೀಳು ಅಂಟಿತು. ಅಂದು ಸಿನಿಮಾರಂಗದಲ್ಲಿ ಬಣ್ಣ ಹಚ್ಚುವ ಕಲೆಗಾರಿಕೆಯ ಶ್ರೇಷ್ಠ ಹೆಸರು ಮೇಕಪ್ ನಾಣಿ. ಅಂತಹವರಿಂದ ಬಣ್ಣ ಹಚ್ಚಿಸಿಕೊಂಡು ಶಾಲಾ ಕಾಲೇಜು ನಾಟಕಗಳ ಕಿರು ಪಾತ್ರಗಳಲ್ಲಿ ಅಭಿನಯಿಸಿ ಸುಂದರ ವ್ಯಕ್ತಿತ್ವ ರೂಪಿಸಿಕೊಂಡರು.

ಶಾಲಾ ಓದು ಮುಗಿದಂತೆ ಶಿವಮೊಗ್ಗದಲ್ಲಿ ಸಾಂಖ್ಯಿಕ ಇಲಾಖೆಯಲ್ಲಿ ಉದ್ಯೋಗ ಪಡೆದರು. ಒಂದಷ್ಟು ಕಾಲ ಅಲ್ಲಿ ದುಡಿದು ವಿಧಾನಸೌಧದಲ್ಲಿದ್ದ ನೀರಾವರಿ ಇಲಾಖೆಯಲ್ಲಿ ದುಡಿದರು. ಅದು ಸಮಾಜ ಕಲ್ಯಾಣ ಕಾರ್ಯಗಳಿಗೆ ಪೂರಕ ಅಂಕಿ ಸಂಖ್ಯೆ ಒದಗಿಸುವ ಇಲಾಖೆಗಳು. ಭೂ ಸಂಪನ್ಮೂಲ, ಜಲಸಂಪನ್ಮೂಲಗಳ ಲಭ್ಯತೆ – ಬಳಕೆ -ವಿತರಣೆಗಳಿಗೆ ಸರಕಾರಿ ಇಲಾಖೆಗಳಿಗೆ ಅವಶ್ಯಕ ಮಾಹಿತಿ ಒದಗಿಸಬೇಕಾಗಿತ್ತು . ಇದರಿಂದ ಲೋಕಾನುಭವ ಪ್ರಾಪ್ತಿಯಾಯ್ತು.

ಓದುವ ಹವ್ಯಾಸ ಬಿಡದ ಇವರು, ಪ್ರೌಢಶಾಲಾ ಮುಖ್ಯ ಶಿಕ್ಷಕ ಹುದ್ದೆಗೆ ಪರೀಕ್ಷೆಗೆ ಬರೆದು ಪ್ರೌಢಶಾಲಾ ಪ್ರೊಬೆಷನರಿ ಮುಖ್ಯ ಶಿಕ್ಷಕರಾಗಿ ಸಕಲೇಶಪುರದಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಭದ್ರಾವತಿಯಲ್ಲಿ ಮುಖ್ಯ ಶಿಕ್ಷಕರು – ದಾವಣಗೆರೆಯಲ್ಲಿ ಸಹಾಯಕ ಶಿಕ್ಷಣಾಧಿಕಾರಿ – ಮಂಡ್ಯದಲ್ಲಿ ವಯಸ್ಕರ ಶಿಕ್ಷಣಾಧಿಕಾರಿ – ಮಂಗಳೂರು ಮತ್ತು ಚಿಕ್ಕಮಂಗಳೂರುಗಳಲ್ಲಿ ವಿದ್ಯಾಂಗ ಉಪನಿರ್ದೇಶಕರಾಗಿ ದುಡಿದರು. 2005ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹ ನಿರ್ದೇಶಕರಾಗಿ ನಿವೃತ್ತರಾದರು.

ಶೈಕ್ಷಣಿಕ ಕ್ಷೇತ್ರ ವಿಶಾಲ ಆಕಾಶವಿದ್ದಂತೆ. ಅಲ್ಲಿ ಸಾಧಿಸಬೇಕೆಂಬವರಿಗೆ- ದುಡಿಯಬೇಕೆಂಬವರಿಗೆ ಮುಗಿಯದಷ್ಟು ಅವಕಾಶಗಳಿವೆ. ಆಕಾಶವೇ ಮಿತಿಯಲ್ಲ. ಎಷ್ಟು ದುಡಿದರು ಇನ್ನೂ ದುಡಿಯಬಹುದೆಂಬಷ್ಟು ಕನಸುಗಳು ಹಾಗೇ ಉಳಿದಿರುತ್ತವೆ. ತಾಲೂಕಿನ ಒಬ್ಬೊಬ್ಬ ಶಿಕ್ಷಣಾಧಿಕಾರಿ ಇರಲಿ, ಜಿಲ್ಲೆಯ ಒಬ್ಬೊಬ್ಬ ವಿದ್ಯಾಂಗ ಉಪನಿರ್ದೇಶಕರು ಇರಲಿ, ಅವರ ಹೆಗಲೇರುವ ನಿತ್ಯ ಸಮಸ್ಯೆಗಳು ಅಗಾಧ. ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳಿರುವವು. ಅಲ್ಲಿ ತರಗತಿಗೊಬ್ಬ ಶಿಕ್ಷಕರಿದ್ದರು ಕಡಿಮೆ ಅನ್ನಿಸುವಷ್ಟು ಕಾರ್ಯಭಾರಗಳಿರುವವು. ತಾಲೂಕಿನ ಒಳಗಿರುವ ಶಿಕ್ಷಕರ ಸಂಖ್ಯೆ ಸಾವಿರ – ಎರಡು ಸಾವಿರ ಇದ್ದರೂ ಇರಬಹುದು.

ಒಂದೆಡೆ ಶಿಕ್ಷಕರ ವರ್ಗಾವಣೆ, ಇನ್ನೊಂದೆಡೆ ಶಿಕ್ಷಕರ ಕೊರತೆ, ನೇಮಕಾತಿಯ ವಿಳಂಬ, ಶಿಕ್ಷಕರ ವೈಯಕ್ತಿಕ ಸಮಸ್ಯೆಗಳು, ಶಾಲಾಡಳಿತ ಹೀಗೆ ಹತ್ತು ಹಲವು ಕಾಡುವ ನಿತ್ಯ ಸಮಸ್ಯೆಗಳು. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳು, ಶಾಲಾ ಕಟ್ಟಡಗಳು, ಶೌಚಾಲಯ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳು ಇತ್ಯಾದಿ ಬೇಡಿಕೆಗಳು ಬೆಟ್ಟದಷ್ಟು. ಸರಕಾರ ಸಂಗ್ರಹಿಸುವ ಕಂದಾಯದ ಬಹುಪಾಲು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿದ್ದರು, ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬಷ್ಟು ಮಾತ್ರ. ಸ್ವಾತಂತ್ರ್ಯದೊರೆತ ನಂತರ ಶಾಲಾ ಶಿಕ್ಷಣ ಕ್ಷೇತ್ರದ ಪ್ರಗತಿಗೂ ಸಮಾಜದ ದಾನಿಗಳ ಕೊಡುಗೆ ಅಪಾರ. ಆಸ್ತಿಪಾಸ್ತಿ ಕೊಟ್ಟವರಿದ್ದಾರೆ – ಪೀಠೋಪಕರಣ ಒದಗಿಸಿದವರಿದ್ದಾರೆ.ಉಚಿತ ಪಾಠ ಸೇವೆ ಸಲ್ಲಿಸಿದವರಿರುವರು. ಸಾಂಸ್ಕೃತಿಕ ಚಟುವಟಿಕೆಗಳು – ಬಡವರ ಮಕ್ಕಳಿಗೆ ಪುಸ್ತಕ ಕೊಡುಗೆ -ಆಟದ ಮೈದಾನ ವಿಸ್ತರಣೆ – ಬಟ್ಟೆ ಬರೆಯ ವಿತರಣೆ ಹೀಗೆ ಬಹು ವಿಧದಲ್ಲಿ ಸಹಕಾರವಿತ್ತು ಊರ ಜನ ಬಲ ತುಂಬಿದವರಿದ್ದಾರೆ.

ಶಿಕ್ಷಣ ಇಲಾಖೆ ಸರಕಾರಕ್ಕೆ ಒಂದಿಷ್ಟೂ ಆದಾಯ ತರಬಲ್ಲ ಕ್ಷೇತ್ರವಲ್ಲ. ಶಾಲೆಗಳ ನಿತ್ಯ ಕೆಲಸ ಕಾರ್ಯಗಳಿಗೆ ಆಳುಕಾಳುಗಳಿಲ್ಲ. ನಿರ್ವಹಣೆಗೆ ಒದಗುವ ಹಣಕಾಸು ಅಷ್ಟಕ್ಕಷ್ಟೇ. ಇವನ್ನೆಲ್ಲ ಕಂಡು ಕಾಣದಂತಿರಲು ಶಿಕ್ಷಕರಿಗೆ ಅದೆಲ್ಲಿ ಸಾಧ್ಯ? ತಮ್ಮ ಮಕ್ಕಳಿಲ್ಲದೇ ಹೋದರು ನೂರಾರು ಮಕ್ಕಳ ಕಂಡಾಗ ಸಮಸ್ಯೆಗಳಿಗೆ ಸ್ಪಂದಿಸುವ – ಸ್ಪಂದಿಸಿದ ಶಿಕ್ಷಕರ ಸೇವೆ ಹೇಳತೀರದು. ಬಡ ಮಕ್ಕಳು ಬಳಪ -ಪುಸ್ತಕಗಳಿಲ್ಲವೆಂದು ಪರದಾಡುವುದನ್ನು ಕಂಡು ಕಣ್ಣು ಮುಚ್ಚಿ ಕುಳಿತಿರಲು ಹೇಗೆ ಸಾಧ್ಯ? ಸ್ವಚ್ಛತೆಯ ಕಾಳಜಿ ಇಲ್ಲದ ಮಕ್ಕಳಿಗೆ ಶಿಕ್ಷಕರೇ ತಂದೆ ತಾಯಿಯಂತಿರ ಬೇಕಾಗುವುದು. ಹೀಗೆ ತನ್ನತನ ಕಳಚಿಟ್ಟು ಅನೇಕ ರೀತಿಯ ಸೇವೆ ಮಾಡಿದ ಲಕ್ಷಾಂತರ ಶಿಕ್ಷಕರು ಇರುವರು. ಇಂತಹವರಿಗೆ ತಿರುಮಲರಾಯರು ಸ್ಪೂರ್ತಿಯಾದರು. ಬೆನ್ನು ತಟ್ಟಿ ಕೆಲಸ ಮಾಡಿಸಿದರು. ಅನೇಕ ವಿದ್ಯಾ ಸಂಸ್ಥೆಗಳು ಉನ್ನತಿಗೇರಿದವು. ಇಂತಹ ಹೃದಯವಂತಿಕೆ ಉಳ್ಳ ಅಧಿಕಾರಿಗಳು ಇದ್ದಾಗ ಶಿಕ್ಷಕರಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಲು ಸಾಧ್ಯ.

ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ಇದ್ದಾಗ ಊರ ಜನರ- ಉದ್ಯಮಿಗಳ ಕಾಡಿಬೇಡಿ ಸಹಾಯಧನ ಪಡೆಯ ಬೇಕಾಗುವುದು. ಶಾಲಾ ಅಭಿವೃದ್ಧಿ ಸಮಿತಿಗಳ ಒಲವು ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಬೇಕಾಗುತ್ತದೆ. ಬದುಕು ಮುಡಿಪಾಗಿಡಬೇಕು. ಪಠ್ಯೇತರ ಚಟುವಟಿಕೆ ಹುಟ್ಟು ಹಾಕಿ, ಕಲಿಯ ಬೇಕೆಂದಿದ್ದರೆ ಮಕ್ಕಳ ಜೊತೆ ಮಕ್ಕಳಂತೆ ಇರಬೇಕು. ಶಿಕ್ಷಕ ಸಕಲಕಲಾವಲ್ಲಭನಾಗಿದ್ದರೆ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಈ ತೆರನಾದ ವ್ಯಕ್ತಿತ್ವ ರೂಪಿಸಿಕೊಂಡವರು ಪ್ರತಿಭಾವಂತ ಶಿಕ್ಷಕ ಹಾಗೂ ಶಿಕ್ಷಣಾಧಿಕಾರಿ ತಿರುಮಲ ರಾಯರು. ಶಿಕ್ಷಣ ಕ್ಷೇತ್ರದಲ್ಲಿ ಒಂದು ಮಾತಿದೆ. ಮುಖ್ಯಸ್ಥ ಹೇಗಿರುವನೋ ಹಾಗೇ ವಿದ್ಯಾಸಂಸ್ಥೆಗಳು ಇರುತ್ತವೆ ಎಂದು. ತಾನು ಬೆಳೆದರು ವಿದ್ಯಾಸಂಸ್ಥೆಗಳನ್ನು ಬೆಳೆಸಿದರು.

ಅವರು ವೃತ್ತಿ ಬದುಕಲ್ಲಿ ಶಿಕ್ಷಕರಾಗಿಯೂ ದುಡಿದರು . ಶಿಕ್ಷಣಾಧಿಕಾರಿಯಾಗಿಯೂ ದುಡಿದರು. ಶಿಕ್ಷಕನಾಗಿ ದುಡಿದು ಪಾಠ ಹೇಳಬಲ್ಲ ಕಷ್ಟಗಳ ಅರಿವು ಇದ್ದಾಗ ಅಧಿಕಾರಿಯಾಗಿ ಶಿಕ್ಷಕರ ಕಷ್ಟ ಸುಖ ತಿಳಿಯಬಲ್ಲನು. ಕಮಲಾ ಹಂಪನಾ ಅವರಂತಹ ಖ್ಯಾತನಾಮರು ಕಲಿತ ಭದ್ರಾವತಿ ಬಾಲಕಿಯರ ಶಾಲೆಯನ್ನು ಮುನ್ನಡೆಸಿದ ಅನುಭವಿ. ಸಹಸ್ರಾರು ಶಿಕ್ಷಕರ ನೋವು ಕಷ್ಟಗಳಿಗೆ ಹಿರಿಯಣ್ಣನಂತೆ ಸ್ಪಂದಿಸಿದವರು.

ಕೆಲವರು ತಮ್ಮ ತಪ್ಪಿನಿಂದ ಕಲಿತರೆ- ಇನ್ನು ಕೆಲವರು ಇತರರ ತಪ್ಪಿನಿಂದ ಹಾಗೂ ಎಚ್ಚರದ ನುಡಿಗಳಿಂದ ಕಲಿಯುವರು. ಸಹಾಯಕ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಹಿಡಿದಾಗ ಉತ್ಸಾಹ ಪುಟಿದೇಳುತ್ತಿದ್ದ ಯುವಕ ಈತ. ಅಂದಿನ ಕಾಲದಲ್ಲಿ ಎಲ್ಲರಂತೆ ಉದ್ದ ಕೂದಲು, ಬೆಲ್ ಬಾಟಮ್ ಪ್ಯಾಂಟು ಹಾಕುತ್ತಿದ್ದರಂತೆ. ಸಕಲೇಶಪುರದಲ್ಲಿ ಸ್ಕೌಟ್ಸ್ ವತಿಯಿಂದ ರಾಜ್ಯಮಟ್ಟದ ಜಾಂಬೂರಿ ನಡೆಯಲಿತ್ತು . ಇವರೇ ಅಲ್ಲಿಯ ಸ್ಥಳೀಯ ಕಾಯ೯ದಶಿ೯ಯಾಗಿ ಹೊಣೆ ಹೊತ್ತವರು.ಅದರ ಪೆರೇಡಿಗೆ ಕೊಡಗಿನ ಹುಲಿ ಮಾತ್ರವಲ್ಲ, ದೇಶದ ನಿವೃತ್ತ ಸೇನಾ ದಂಡನಾಯಕ ಜನರಲ್ ಕಾರ್ಯಪ್ಪ ಬರುವವರಿದ್ದರು . ಸಾಯಂಕಾಲ ಅವರ ಸ್ವಾಗತಕ್ಕೆ ನಡೆದರು.ಇವರನ್ನು ಕಂಡ ಕಾರ್ಯಪ್ಪರಿಗೆ ಈ ಯುವಕ ಯಾರಿರಬಹುದೆಂದು ತಬ್ಬಿಬ್ಬಾದರು. ಯಾರು ನೀವು ಅಂದರಂತೆ.ಸರ್ -ನಾನು ಕ್ಷೇತ್ರ ಶಿಕ್ಷಣಾಧಿಕಾರಿ ಅನ್ನುತ್ತಿದ್ದಂತೆ, ನಾಳೆ ಬೆಳಿಗ್ಗೆ ಬರುವಾಗ ನನ್ನಂತೆ ನುಣುಪಾಗಿ ಕೂದಲು ಕತ್ತರಿಸಿ ಬರಬೇಕೆಂದು ಕಟ್ಟಪ್ಪಣೆ ಮಾಡಿದರಂತೆ. ತನ್ನ ತಪ್ಪಿನ ಅರಿವು ಮೂಡಿಸಿದ ದಂಡನಾಯಕರ ಆಜ್ಞೆಯನ್ನು ಶಿರಸಾವಹಿಸಿ ಮಾರನೆಯ ದಿನ ಹೋದಾಗ ಹತ್ತಿರ ಕರೆದು ಬೆನ್ನು ತಟ್ಟಿದರಂತೆ. ಶಿಕ್ಷಣಾಧಿಕಾರಿ ಹೀಗಿರಬೇಕು ಅಂದರಂತೆ. ಅದು ನನ್ನ ಬದುಕು ಬದಲಾಯಿಸಿತು ಅನ್ನುವರು.

ಶಿವಮೊಗ್ಗದಲ್ಲಿ ಬಿ ಎಡ್ ಮಾಡುತ್ತಿದ್ದಾಗ ರಾಮೋತ್ಸವದ ದಿನದಂದು ದ.ರಾ.ಬೇಂದ್ರೆ ಅತಿಥಿಯಾಗಿ ಬಂದಿದ್ದರಂತೆ. ಸಮಯಕ್ಕೆ ಮೊದಲೇ ಬಂದವರು ಇವರ ವಾಸ್ತವ್ಯದ ಕೊಠಡಿಯಲ್ಲಿ ಅರ್ಧ ಗಂಟೆ ವಿರಮಿಸಬೇಕಾಗಿತ್ತು. ಬೇಂದ್ರೆಯಂತಹ ವರಕವಿಯ ಕಂಡು ಪುಳಕಿತರಾದರು. ನೀನೇನು ಆಗಬೇಕೆಂದು ಕನಸು ಕಾಣುತ್ತಿರುವೆ ಎಂದು ಕೇಳಿದರಂತೆ. ಕವಿಯಾಗುವ ಆಸೆ ನನ್ನದು ಎಂದು ನುಡಿದರು. ನೋಡು ಚೆನ್ನಾಗಿ ಕೃಷಿ ಮಾಡಿದರೆ ಮಾತ್ರ ಆಸೆ ಈಡೇರಲು ಸಾಧ್ಯವೆಂದು ಹರಿಸಿದ್ದು ನನ್ನ ಬದುಕಿನ ಅವಿಸ್ಮರಣೀಯ ಘಟನೆ ಎನ್ನುವರು. ಹೀಗೆ ಪು.ತಿ. ನರಸಿಂಹಾಚಾರ್ – ರಾಶಿ – ಶಿವರಾಮ ಕಾರಂತ ಮುಂತಾದ ಸಾಹಿತ್ಯ ದಿಗ್ಗಜರ ಒಡನಾಟ ನನ್ನಲ್ಲಿ ಸಾಹಿತ್ಯದ ಗೀಳು ಹಚ್ಚಿತು ಎನ್ನುವರು.

ಎಪ್ಪತ್ತೊಂಬತ್ತರ ಹರೆಯದಲ್ಲೂ ಉತ್ಸಾಹ ಬತ್ತಿ ಹೋಗಲಿಲ್ಲ. ಇಂದಿಗೂ ಸಾಮಾಜಿಕ ಕಾರ್ಯಕರ್ತರಾಗಿ – ಭಾರತ್ ಸ್ಕೌಟ್ಸ್ ಗೈಡ್ಸ್ ಮುಖವಾಣಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿರುವರು. ಬೆಂಗಳೂರು ಪರಿಸರ ಸಂಘ- ನಿವೃತ್ತ ಶಿಕ್ಷಣಾಧಿಕಾರಿಗಳ ಸಂಘ – ಅಕ್ಷಯ ಪಾತ್ರೆ ಫಲಾನುಭವಿಗಳ ತರಬೇತುದಾರ ಹೀಗೆ ನಿತ್ಯ ಚಟುವಟಿಕಾ ನಿರತರು.

ಇವರ ಪತ್ನಿ ಸುಧಾಮಣಿ. ಚಿನ್ನದ ನಾಡು ಕೋಲಾರದ ಕುವರಿ. ತಂದೆ ಬಿ ಎಸ್ ಕೇಶವಮೂರ್ತಿ. ತಾಯಿ ಸಾವಿತ್ರಮ್ಮ. ಇವರು ಸಾಮಾಜಿಕ ಕಾರ್ಯಕರ್ತೆ ಹಾಗೂ ದಾಸ ಸಾಹಿತ್ಯದ ಅಧ್ಯಯನಗಾತಿ. ಇವರಿಗೆ ಮಕ್ಕಳಿಬ್ಬರು. ಹಿರಿಯ ಮಗ ಸುಮಂತ್. ಎರಡನೇ ಮಗ ಸುಜಯ. ಅವರ ಪತ್ನಿ ಸುಪ್ರಿಯ. ಮೊಮ್ಮಗಳು ತಾರಾ.

ಉಡುಪಿಯಲ್ಲಿ ಉಪಾಧ್ಯಾಯ ಸಮ್ಮಾನ್, ಭಾರತ್ ಸೇವಾದಳ, ಸ್ಕೌಟ್ ಗೈಡ್ಸ್ ಸಂಸ್ಥೆ ಇನ್ನೂ ಅನೇಕ ಸಂಘ ಸಂಸ್ಥೆಗಳಿಂದ ಮಾನ -ಸನ್ಮಾನ ಪಡೆದ ಶ್ರೇಷ್ಠ ಶಿಕ್ಷಣ ತಜ್ಞ ಇವರು. ಆದರ್ಶ ದಂಪತಿ ಸ್ಪರ್ಧೆಯಲ್ಲೂ ಗೆದ್ದ ಚತುರ. ಸಂಘಜೀವಿ.ನಮ್ಮಿಬ್ಬರದು ಅನೇಕ ವರ್ಷಗಳ ಶೈಕ್ಷಣಿಕ ನಂಟು.

ಟಿ ನಾರಾಯಣ ಭಟ್ ರಾಮಕುಂಜ
ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು.

B.Y.Raghavendra ಸೆ.5 ರಿಂದ 10 ವರೆಗೆ ಸಂಸದ ರಾಘವೇಂದ್ರ ಸಾರ್ವಜನಿಕ ಸಂಪರ್ಕಕ್ಕೆ ಅಲಭ್ಯ

0

B.Y.Raghavendra ಕಮಿಟಿ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲು, ಉಪರಾಷ್ಟ್ರಪತಿ ಚುನಾವಣೆ ನಿಮಿತ್ತ ಅಭ್ಯಾಸ ವರ್ಗದಲ್ಲಿ ಭಾಗಿಯಾಗಲು ಹಾಗೂ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸಲು ದಿನಾಂಕ 05.09.25 ರಿಂದ 10.09.25 ರವರೆಗೆ ದೆಹಲಿ ಪ್ರವಾಸದಲ್ಲಿರುವ ಕಾರಣ ಸ್ಥಳೀಯವಾಗಿ ಲಭ್ಯವಿರುವುದಿಲ್ಲ. B.Y.Raghavendra ಸಾರ್ವಜನಿಕರಿಗೆ ಯಾವುದೇ ರೀತಿಯ ಕುಂದು ಕೊರತೆ ಇದ್ದಲ್ಲಿ ನನ್ನ ಅಧಿಕೃತ ಲೋಕಸಭಾ ಕಚೇರಿಯನ್ನು ಸಂಪರ್ಕಿಸಲು ಕೋರಿದೆ‌ ಎಂದು ಸಂಸದ ಬಿ.ವೈ.ರಾಘವೇಂದ್ರ ಕ್ಷೇತ್ರದ ಜನತೆಗೆ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಮಟ್ಟದ ಪ್ರಗತಿಪರ ರೈತ/ ರೈತ ಮಹಿಳೆಯರ ಪ್ರಶಸ್ತಿ ಆಯ್ಕೆಗಾಗಿ ಅರ್ಜಿ ಆಹ್ವಾನ

0

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರತಿ ವರ್ಷದಂತೆ ಈ ವರ್ಷವೂ ಕೃಷಿಮೇಳ-2025 ರಲ್ಲಿ “ಜಿಲ್ಲಾ ಮಟ್ಟದ ಪ್ರಗತಿಪರ ರೈತ/ರೈತ ಮಹಿಳೆ” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲು ತೀರ್ಮಾನಿಸಲಾಗಿದೆ. ಆಸಕ್ತ ರೈತ/ರೈತ ಮಹಿಳೆಯರಿಂದ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಶಿವಮೊಗ್ಗ ಜಿಲ್ಲೆಯ ಆಸಕ್ತರ ರೈತ/ರೈತ ಮಹಿಳೆಯರು ಅರ್ಜಿಗಳನ್ನು ಕೃಷಿ ವಿಜ್ಞಾನ ಕೇಂದ್ರ, ನವುಲೆ, ಶಿವಮೊಗ್ಗ ಅಥವಾ ಕೃಷಿ ಇಲಾಖೆ, ಓ.ಟಿ.ರಸ್ತೆ, ಶಿವಮೊಗ್ಗ ಇಲ್ಲಿ ಖುದ್ದಾಗಿ ಅಥವಾ uahs.edu.in ವೆಬ್‌ಸೈಟ್ ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪಹಣಿಯನ್ನು ಲಗತ್ತಿಸಿ ಸೆ. 15 ರೊಳಗೆ ಸಲ್ಲಿಸುವುದು. ಆಯ್ಕೆಯಾದ ರೈತರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಪುರಸ್ಕಾರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಡಾ.ಮಂಜುನಾಥ ಕುದರಿ, ವಿಜ್ಞಾನಿ (ಕೃಷಿ ವಿಸ್ತರಣೆ), ಮೊಬೈಲ್ ನಂ.9480751606 ಅಥವಾ ಡಾ. ನಾಗರಾಜ ಆರ್., ಹಿರಿಯ ತಾಂತ್ರಿಕ ಅಧಿಕಾರಿ, ಕೆ.ವಿ.ಕೆ., ಶಿವಮೊಗ್ಗ, ಮೊಬೈಲ್ ನಂ. 9353493824 ಗಳನ್ನು ಸಂಪರ್ಕಿಸುವುದು.