Thursday, February 5, 2026
Thursday, February 5, 2026
Home Blog Page 10

ಗಣರಾಜ್ಯೋತ್ಸವದ ಅಂಗವಾಗಿ ಮೊಬೈಲ್ ರಿಪೇರ್ ಸಂಘದ ವತಿಯಿಂದ ಸಿಹಿ ಹಚ್ಚುವ ಕಾರ್ಯಕ್ರಮ

0

ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಮೊಬೈಲ್ ರಿಪೇರ್ ಸಂಘದ ವತಿಯಿಂದ ಸಿಹಿ ಹಚ್ಚುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.

ದಿನಾಂಕ 26/1/26 ಸೋಮವಾರ ಬೆಳಿಗ್ಗೆ 11.30 ಕೇ ಶಿವಮೊಗ್ಗ ನಗರದ ಶಿವಪ್ಪ ನಾಯಕ ಸರ್ಕಲ್ ಬಳಿ ಕಾರ್ಯಕ್ರಮ ನಡೆಸಲಾಯ್ತು .
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನ ಮಾಡಲಾಯಿತು ಅದರಲ್ಲಿ ಕನ್ನಡ ಜನಮನ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷರಾದ ಜನಾರ್ಧನ್ ಸಾಲಿಯಾನ್ ಮಲೆನಾಡ ಕನ್ನಡ ಪಡೆ ಜಿಲ್ಲಾಧ್ಯಕ್ಷರಾದ ಶ್ರುತಿ ಪ್ರಮೋದ್ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಾಲತೇಶ್ ಎನ್ ಹಾಗೂ ಪತ್ರಕರ್ತರಾದ ಅರವಿಂದ್ ರವರಿಗೂ ಸನ್ಮಾನ ಮಾಡಲಾಯಿತು.

ಗಣರಾಜ್ಯೋತ್ಸವದ ಅಂಗವಾಗಿ ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಪೌರಕಾರ್ಮಿಕರಿಗೆ ಸನ್ಮಾನ

0

ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಶಿವಮೊಗ್ಗ ಗಣರಾಜ್ಯೋತ್ಸವದ ಅಂಗವಾಗಿ ಪೌರಕಾರ್ಮಿಕರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಖೆಯ ವ್ಯವಸ್ಥಾಪಕರಾದ ಶ್ರೀಯುತ ಗಣಪತಿ ಷಣೆ ರವರು ಹಾಗೂ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಶಿವಮೊಗ್ಗ ನಗರದ ನಗರಸಭೆಯ ಸುಮಾರು ಹತ್ತು ಜನ ಪೌರ ಕಾರ್ಮಿಕರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ ಹಾಗೂ ಆಭರಣ ಜ್ಯುವೆಲರ್ಸ್ ಸಂಸ್ಥೆಯ ಮುಮೆಂಟೊ ಕೊಡುವುದರ ಮೂಲಕ ಮತ್ತು ಬಂದ ಎಲ್ಲಾ ಪೌರಕಾರ್ಮಿಕರಿಗೆ ಗಿಫ್ಟ್ ವೋಚರ್ ಗಳನ್ನು ಕೊಡುವುದರ ಮೂಲಕ ಸನ್ಮಾನಿಸಲಾಯಿತು. ಹಾಗೂ ಶಾಖೆಯ ವ್ಯವಸ್ಥಾಪಕರು ಮಾತನಾಡಿ ಪ್ರತಿದಿನ ನಾವು ನಿದ್ದೆಯಿಂದ ಹೇಳುವ ಮುನ್ನವೇ ನಗರದ ರಸ್ತೆಯನ್ನು ಬಡಾವಣೆಗಳನ್ನು ಸ್ವಚ್ಛಗೊಳಿಸಿ ನಮ್ಮ ಆರೋಗ್ಯವನ್ನು ಕಾಪಾಡುವ ಮಹಾನ್ ವ್ಯಕ್ತಿಗಳೇ ಈ ಪೌರ ಕಾರ್ಮಿಕರು ಇವರು ಕೇವಲ ಸ್ವಚ್ಛತಾ ಕಾರ್ಮಿಕರಲ್ಲ.ಇವರು ಸಮಾಜದ ನಿಜವಾದ ಆರೋಗ್ಯ ಕಾವಲುಗಾರರು ಅಥವಾ ‘ವೈದ್ಯರು’ ಎಂದರೆ ತಪ್ಪಾಗಲಾರದು. ಎಂದು ಹೇಳುತ್ತಾ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಸೊರಬದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ

0

ಮಲೆನಾಡು ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ, ಸಾಂಪ್ರದಾಯಿಕ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ಪಟ್ಟಣದ ಹೊರವಲಯದ ಹಳೇಸೊರಬ ಗ್ರಾಮದಲ್ಲಿ ಜರುಗಿತು.

ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರೀಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.

ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಪ್ರೀತಿಗಾಗಿ ಹಳೇಸೊರಬದ ಹುಚ್ಚ ರಾಕ್ ಸ್ಟಾರ್, ಎನ್.ಟಿ.ಸಿ. ಸಾಹುಕಾರ, ಕರ್ಜಿಗಿ ಜೂನಿಯರ್ ಪವರ್, ಮಾವಲಿ ಸುರಂಗ, ಮುಗಳಿಕೊಪ್ಪದ ಅಂಜನಾದ್ರಿ, ಕುಪಗಡ್ಡೆ ಬುಲೆಟ್, ಸಾರೆಕೊಪ್ಪ ಕಿಂಗ್, ಹರೂರು ಘಟಸರ್ಪ, ಆರ್.ಸಿ.ಬಿ. ಕಿಂಗ್ , ಕಣ್ಣೂರ್ ವಿಧೂರ, ಜಡೆ ಕೇಪೇಗೌಡ, ಗುಡಗಿನಕೊಪ್ಪ ಶ್ರೀ ಕೃಷ್ಣ, ಶಾಂತಗೇರಿ ಪೈಲ್ವಾನ್, ಸಿಗಂಧೂರ್ ಎಕ್ಸ್‌ಪ್ರೆಸ್‌, ಸೊರಬದ ರಾವಣ, ಮಲೆನಾಡು ಮಹಾರಾಜ, ಶಿರಾಳಕೊಪ್ಪ ಎಚ್.ಎಫ್. ಡಾನ್, ಅಂಬಿಗಾರ ಡಾನ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.

ಹಳೇಸೊರಬದ ಶ್ರೀ ರಾಮೇಶ್ವರ ಯುವಕ ಸಂಘದವರು ಅಖಾಡದಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು. ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

ಸೈಲ್-ವಿಐಎಸ್‌ಎಲ್‌ನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

0

ವಿಐಎಸ್‌ಎಲ್ ಸಿಲ್ವರ್ ಜ್ಯೂಬಿಲಿ ಸ್ಟೇಡಿಯಂನಲ್ಲಿ ೨೬ನೇ ಜನವರಿ ೨೦೨೬ರಂದು ರಾಷ್ಟçದ ೭೭ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಪಾಲಕ ನಿರ್ದೇಶಕರಾದ ಶ್ರೀಯುತ ಅನುಪ್ ಕುಮಾರ್ ಅವರು ರಾಷ್ಟçಧ್ವಜ ಅನಾವರಣ ಮಾಡಿದರು.

ವಿಐಎಸ್‌ಎಲ್ ಸೆಕ್ಯುರಿಟಿ, ಎನ್.ಸಿ.ಸಿ, ಭದ್ರಾವತಿಯ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಲಿಟ್ಲಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಐಕ್ಯತೆ ಮತ್ತು ದೇಶಪ್ರೇಮ ವಿಷಯಗಳ ಕುರಿತು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು ಮತ್ತು ಸಮೂಹಗಾನ ಹಾಡಿದರು.

ವಿಐಎಸ್‌ಎಲ್ ಉದ್ಯೋಗಿಗಳು ಕಳೆದ ವರ್ಷದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ವಿಶೇಷ ಪ್ರಶಸ್ತಿ, ಜವಹಾರ್, ನೆಹರು ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳಿಗೆ ಹಾಗೂ ಮಿಕ್ಕ ಎಲ್ಲಾ ಪಥಸಂಚಲನ ತಂಡಗಳಿಗೆ ಈ ಸಂದರ್ಭದಲ್ಲಿ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು. ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಶಾಲಾ ಮಕ್ಕಳು, ಪೋಷಕರು, ಅಧ್ಯಾಪಕ ವೃಂದದವರು, ಭದ್ರಾವತಿಯ ನಾಗರೀಕರು ಕಾಯಕ್ರಮದಲ್ಲಿ ಭಾಗವಹಿಸಿದ್ದರು.

ಉಪ ಪ್ರಬಂಧಕರಾದ ಶ್ರೀ ಎಮ್. ಕೃಷ್ಣ, ಮತ್ತು ಆರ್. ಹರೀಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದ ಸಂಯೋಜನೆಯನ್ನು ಶ್ರೀ ನವೀನ್ ರಾಹುಲ್, ಉಪ ಮಹಾಪ್ರಬಂಧಕರು (ನಗರಾಡಳಿತ ಮತ್ತು ಸಾರ್ವಜನಿಕ ಸಂಪರ್ಕ) ಮಾಡಿದ್ದರು.

Madhu Bangappa ‘‘ಕ್ರಾಫ್ಟ್ ಆಫ್ ಮಲ್ನಾಡ್’ ವೆಬ್‌ಸೈಟ್‌ಗೆ ಚಾಲನೆ ಕಲೆಗೆ ಉತ್ತೇಜನ ನೀಡಿ ಬೆಳೆಸಬೇಕು : ಎಸ್ ಮಧು ಬಂಗಾರಪ್ಪ

0

Madhu Bangappa ಸ್ವಸಹಾಯ ಗುಂಪುಗಳ ಮಹಿಳೆಯರು, ಕುಶಲಕರ್ಮಿಗಳು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಲೆಗೆ ಉತ್ತೇಜನ ನೀಡಿ, ಬೆಳೆಸಬೇಕು ಹಾಗೂ ನಮ್ಮ ಈ ಕಲೆ-ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಎಂದು ತಿಳಿಸಿದರು.
ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಲ್ಲಮ ಪ್ರಭು ಮೈದಾನ(ಫ್ರೀಡಂ ಪಾರ್ಕ್)ದಲ್ಲಿ ಜ.24 ರಿಂದ 27 ರವರೆಗೆ ಏರ್ಪಡಿಸಲಾಗಿರುವ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63 ನೇ ಫಲ ಪುಷ್ಪ ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಉತ್ಪನ್ನಗಳನ್ನು, ಕಲಾತ್ಮಕ ವಸ್ತುಗಳನ್ನು ಈ ಪ್ರದರ್ಶನದಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದ್ದು ಇಂತಹ ನಮ್ಮ ಹಳೆಯ ಕಲೆಗಳು ಉಳಿಯಬೇಕಾದರೆ ಅವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಆದ್ದರಿಂದ ಶಾಲಾ ಹಂತದಲ್ಲೇ ಆಯಾ ಭಾಗದ ಕಲೆಯನ್ನು ಅಲ್ಲಿಯ ಶಾಲೆಗಳಲ್ಲಿ ಕಲಿಸುವ ಚಿಂತನೆ ಮಾಡಲಾಗುತ್ತಿದೆ ಎಂದರು.
ಪ್ರದರ್ಶನದಲ್ಲಿ ನಮ್ಮ ಜಿಲ್ಲೆಯ, ನಾಡಿನ ವಿವಿಧ ರೀತಿಯ ಕಲಾತ್ಮಕ ಉತ್ಪನ್ನಗಳು, ಸಿರಿಧಾನ್ಯಗಳು-ಖಾದ್ಯಗಳು, ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ವಿವಿಧ ಉತ್ಪನ್ನಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಆಗಮಿಸಿರುವ ಹ್ಯಾಂಡ್ ಲೂಂ ಸೀರೆಗಳು, ಉತ್ಪನ್ನಗಳು ಮತ್ತು ರೈತರು ಬೆಳೆದ ಕೃಷಿ-ತೋಟಗಾರಿಕೆ ಉತ್ಪನ್ನಗಳು, ವಿವಿಧ ಜಾತಿಯ ಹಣ್ಣು, ತರಕಾರಿಗಳನ್ನು ಉತ್ತಮವಾಗಿ ಪ್ರದರ್ಶಿಸಲಾಗಿದೆ.
ಕ್ರಾಫ್ಟ್ ಆಫ್ ಮಲ್ನಾಡ್ ಎಂಬ ಹೆಸರಿನಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಬ್ರಾಂಡಿಗ್ ಮಾಡಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ವೆಬ್‌ಸೈಟ್ ರಚನೆ ಮಾಡಿರುವುದು ಅತ್ಯುತ್ತಮ ಕೆಲಸವಾಗಿದ್ದು, ಇದರ ಹಿಂದಿನ ಶ್ರಮ ಕಾಣುತ್ತಿದೆ ಎಂದು ಶ್ಲಾಘಿಸಿದ ಅವರು ಈ ವೆಬ್‌ಸೈಟ್ ಕುರಿತು ಇನ್ನೂ ಹೆಚ್ಚಿನ ಪ್ರಚಾರ ಆಗಬೇಕು. ಈ ಕುರಿತು ಸಣ್ಣ ವಿಡಿಯೋ ತುಣುಕುಗಳು, ಕ್ಯುಆರ್ ಕೋಡ್‌ನ್ನು ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಬೇಕು ಎಂದ ಅವರು ನಮ್ಮ ನಾಡಿನ ಕರಕುಶಲತೆಯನ್ನು ರಾಜ್ಯಾದ್ಯಂತ ತಿಳಿಸಲು ಕ್ರಾಫ್ಟ್ ಆಫ್ ಮಲ್ನಾಡ್-ಕರಕುಶಲ ಉತ್ಪನ್ನಗಳ ಪ್ರದರ್ಶವನ್ನು ರಾಜ್ಯ ಮಟ್ಟದಲ್ಲಿ ಮಾಡೋಣ ಎಂದರು.
ಮಲೆನಾಡು ಕರಕುಶಲ ಮತ್ತು ಫಲ ಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಶಲಕರ್ಮಿಗಳು, ಮಹಿಳೆಯರು ಸಿದ್ದಪಡಿಸಿದ ಉತ್ಪನ್ನಗಳನ್ನು ಖರೀದಿಸಿ, ಅವರಿಗೆ ಆರ್ಥಿಕವಾಗಿ ಸಹಕಾರ ಹಾಗೂ ಕಲೆಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಚಿವರು ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಬ್ರಾಂಡ್ ‘ಕ್ರಾಫ್ಟ್ ಆಫ್ ಮಲ್ನಾಡ್’ ವೆಬ್‌ಸೈಟ್ ಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಜವಳಿ ಮೂಲಸೌಲಭ್ಯ(ವಿದ್ಯುತ್ ಮಗ್ಗಗಳ)ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಆಡಳಿತ ಮಂಡಳಿ ಸದಸ್ಯರಾದ ದೇವಿಕುಮಾರ್, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎ.ಬಿ.ಸಂಜಯ್, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್, ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ಖಜಾಂಚಿ ಜಿ.ಎಂ.ರಘು, ಪದಾಧಿಕಾರಿಗಳು, ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು

ಸವಿತಾ ಸಮಾಜದ ಆರಾಧ್ಯ ದೈವ ಸವಿತಾ ಮಹರ್ಷಿಗಳು : ಅಭಿಷೇಕ್ ವಿ.

0

ಸವಿತಾ ಸಮಾಜದ ಆರಾಧ್ಯ ದೈವವಾಗಿರುವ ಸವಿತಾ ಮಹರ್ಷಿಗಳು ಸಮಾಜದ ಮೂಲ ಪುರುಷರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಸವಿತಾ ಸಮಾಜ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರ ಸವಿತಾ ಸಮಾಜದವರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಪ್ರತಿ ತಾಲ್ಲೂಕಿಗೆ 5 ರಿಂದ 10 ಜನರಿಗೆ ರೂ.50 ರಿಂದ 1 ಲಕ್ಷದವರೆಗೆ ಸಾಲವನ್ನು ನೀಡುತ್ತಿದ್ದು ಅರ್ಹರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಆಕಾಶವಾಣಿ ಸುಗಮ ಸಂಗೀತ ಕಲಾವಿದರು ಹಾಗೂ ಉಪನ್ಯಾಸಕಾರದ ಮಂಜುನಾಥ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸವಿತಾ ಎಂದರೆ ಬೆಳಕು ಅಥವಾ ಜ್ಞಾನ ಎಂದರ್ಥ. ಸವಿತಾ ಸಮಾಜದ ಮೂಲ ಪುರುಷರಾದ ಸವಿತಾ ಮಹರ್ಷಿಗಳು ಪರಶಿವನ ಬಲಗಣ್ಣಿನಿಂದ ಜನಿಸಿದವರಾಗಿದ್ದು ಸೂರ್ಯವಂಶದ ಕುಲದೈವರಾಗಿದ್ದಾರೆ. ಅಪಾರ ಜ್ಞಾನ ಹೊಂದಿದ್ದ ಇವರು ಸಾಮವೇದವನ್ನು ರಚಿಸಿದ್ದು, ಸಂಗೀತದ ಪ್ರತೀಕವಾಗಿದ್ದಾರೆ ಎನ್ನಬಹುದು. ಇವರ ಪುತ್ರಿ ಗಾಯತ್ರಿ ದೇವಿಯು ಶ್ರೇಷ್ಟ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ. ಈ ಸಮಾಜದಲ್ಲಿ 27 ಉಪಜಾತಿಗಳಿದ್ದು, 2ಎ ವರ್ಗದಲ್ಲಿ ಬರುತ್ತದೆ ಎಂದು ವಿವರಿಸಿದರು.
ಸವಿತಾ ಸಮಾಜಕ್ಕೆ ಸೇರಿದ ಬಿಹಾರಿನ ಕರ್ಪೂರಿ ಠಾಕೂರ್‌ರವರಿಗೆ ಭಾರತ ಸರ್ಕಾರ ಮರಣೋತ್ತರ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಇವರು ಶೋಷಿತ ವರ್ಗದವರನ್ನು ಶೈಕ್ಷಣಿಕವಾಗಿ ಮೇಲೆ ತರಲು ಹೋರಾಡಿದ್ದರು. ಇಂತಹ ವ್ಯಕ್ತಿಗಳನ್ನು ಪಡೆದ ಸಮಾಜವು ಕೀಳರಿಮೆಯನ್ನು ತೊರೆಯಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಇದರಿಂದ ಸಮಾಜದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಹಾಗೂ ಜಯಂತಿಯAತಹ ಆಚರಣೆಯ ಮೂಲಕ ಸಮುದಾಯದವರು ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಎಂ.ಜಿ.ಬಾಲು, ತಾಲ್ಲೂಕು ಅಧ್ಯಕ್ಷರಾದ ಬಿ ಎನ್ ಧರ್ಮರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರವಾಸದಿಂದ ಹೊಸ ಪ್ರಾಕೃತಿಕ ಸಂಪತ್ತಿನ ಪರಿಚಯ

0

ಪ್ರವಾಸ ಮಾಡುವುದರಿಂದ ಹೊಸ ಪ್ರಾಕೃತ್ತಿನ ಸಂಪತ್ತಿನ ಪರಿಚಯ ಆಗುವುದರ ಜತೆಯಲ್ಲಿ ಜೀವನದಲ್ಲಿ ಉತ್ಸಾಹ ವೃದ್ಧಿಸುತ್ತದೆ ಎಂದು ಜಿಲ್ಲಾ ಪ್ರವಾಸ ಮತ್ತು ಅಭಿವೃದ್ಧಿ ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದಿಂದ ಆಯೋಜಿಸಿದ್ದ ಭೂತಾನ್ ದೇಶಕ್ಕೆ ಪ್ರವಾಸ ಹೊರಟ 30 ಸದಸ್ಯರ ತಂಡಕ್ಕೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಪ್ರವಾಸದಲ್ಲಿ ಹೊಸಬರನ್ನು ಭೇಟಿಯಾಗುವ ಸಂದರ್ಭ ಬರುತ್ತದೆ. ಹೊಸಬರ ಪರಿಚಯವಾಗುತ್ತದೆ. ಮನಸ್ಸಿಗೆ ಉಲ್ಲಾಸ ಹಾಗೂ ಹೊಸ ಚೈತನ್ಯ ಇರುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ನಗರದ ಜನತೆ ಪ್ರವಾಸದ ಬಗ್ಗೆ ಅತ್ಯಂತ ಹೆಚ್ಚು ಅಭಿರುಚಿ ಹೊಂದಿದ್ದು, ಎಲ್ಲರಿಗೂ ಅನುಕೂಲ ಆಗುವಂತಹ ಕಾರ್ಯಕ್ರಮ ಆಯೋಜನೆ ಮಾಡಲು ಈಗಾಗಲೇ ಹಲವು ಯೋಜನೆಗಳನ್ನು ನಮ್ಮ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಪ್ರಾರಂಭಿಸಿದ್ದು, ಶ್ರೀಲಂಕ ಪ್ರವಾಸ ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ತಿಂಗಳು ಭೂತಾನ್ ದೇಶಕ್ಕೆ ಮೂವತ್ತು ಸದಸ್ಯರ ತಂಡ ಹೊರಟಿದೆ. ಮುಂದಿನ ದಿನಗಳಲ್ಲಿ ಅಂಡಮಾನ್ ಪ್ರವಾಸ ಮತ್ತು ಇನ್ನೂ ಅನೇಕ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.

ಸಹ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ಮಾತನಾಡಿ, ಎಲ್ಲರಿಗೂ ಪ್ರವಾಸ ಮಾಡುವ ಹಂಬಲ ಇರುತ್ತದೆ. ಆದರೆ ದುಬಾರಿ ಹಣದ ಕಾರಣಕ್ಕೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ. ಗೊತ್ತಿಲ್ಲದ ಭಾಷೆ, ಅಲ್ಲಿಯ ಆಚಾರ ವಿಚಾರಗಳು, ಕಾನೂನು ಬೇರೆ. ಆದ್ದರಿಂದ ಯಾವುದೇ ಹೆಚ್ಚಿನ ಲಾಭಾಂಶ ಇಲ್ಲದೆ ಅತ್ಯಂತ ಕಡಿಮೆ ವೆಚ್ಚದಲ್ಲಿ, ಉತ್ತಮ ಸೌಲಭ್ಯ ಹಾಗೂ ಸ್ನೇಹಮಯ ನುರಿತ ತಂಡ ಹೊಂದಿದ ಎಸ್‌ಜಿಎಸ್ ಟೂರ್ಸ್ ನಮ್ಮೊಂದಿಗೆ ಕೈ ಜೋಡಿಸಿದ್ದು, ಅವರ ಸಹಕಾರದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ನಿರ್ದೇಶಕ ಧ್ವಜ ನಾಗರಾಜ್, ಕಾರ್ಯದರ್ಶಿ ಜಿ.ವಿಜಯಕುಮಾರ್, ತರುಣೋದಯ ಘಟಕದ ಚೇರ್ಮನ್ ವಾಗೇಶ್, ಮಲ್ಲಿಕಾರ್ಜುನ್ ಕಾನೂರು, ರವೀಂದ್ರ, ಲಕ್ಷ್ಮೀ, ದಿಲೀಪ್ ನಾಡಿಗ್, ಡಾ. ಧನಂಜಯ, ಜಿ.ಎನ್.ಎನ್.ಮೂರ್ತಿ, ಎನ್.ರಾಜು, ರವಿಕುಮಾರ್, ಶೋಭಾ, ಸುಮತಿ, ಜ್ಯೋತಿ, ಉಷಾ, ನಾಗಾರ್ಜುನ್, ಸಿಂಧು ಇತರರಿದ್ದರು.

ಜನವರಿ 25ರಂದು ‘ಗ್ಲೋಬಲ್ ಉತ್ಸವ–2026’ ವೈಭವ

0

ಮಾಲ್ನಾಡ್ ಎಜುಕೇಶನಲ್ & ಚಾರಿಟಬಲ್ ಟ್ರಸ್ಟ್ (ಆರ್) ಹಾಗೂ ಗ್ಲೋಬಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಆಶ್ರಯದಲ್ಲಿ ‘ಗ್ಲೋಬಲ್ ಉತ್ಸವ–2026’ ಕಾರ್ಯಕ್ರಮವು ಜನವರಿ 25, ಭಾನುವಾರ ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಹರ್ಷ ದ ಫರ್ನ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಪಥ ಸ್ವೀಕಾರ ಸಮಾರಂಭ (Oath Taking Ceremony), ವೈಟ್ ಕೋಟ್ ಸೆರೆಮನಿ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಲೀಂ ಅಹಮದ್ ಅವರು ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ಶೋಭೆ ತರಲಿದ್ದಾರೆ.
ಗೌರವ ಅತಿಥಿಗಳಾಗಿ ಮಾಲ್ನಾಡ್ ಎಜುಕೇಶನಲ್ & ಚಾರಿಟಬಲ್ ಟ್ರಸ್ಟ್ (ಆರ್) ಅಧ್ಯಕ್ಷರಾದ ಕೆ.ಬಿ. ಬಶೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಡಾ. ಸಿ.ವಿ. ಯೋಗರಾಜ ಗೌಡ, ಡಾ. ಧನಂಜಯ ಸರ್ಜೀ, ಬಲ್ಕೀಸ್ ಬಾನು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಸುಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಸೋನಾ ಗ್ರೂಪ್ಸ್ ವ್ಯವಸ್ಥಾಪಕ ನಿರ್ದೇಶಕ ಅಲ್ ಹಾಜ್ ಇಕ್ಬಾಲ್ ಹಬೀಬ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಡಾ. ಇರ್ಫಾನ್ ಅಹಮದ್ ಎಚ್.ಬಿ. (ಎಂಬಿಬಿಎಸ್, ಎಂಡಿ) ವಹಿಸಲಿದ್ದು, ಗ್ಲೋಬಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡುವ ಈ ಸಮಾರಂಭವು ಶಿಸ್ತು, ಮೌಲ್ಯ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಲಿದೆ ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾಕ್ಟರ್ ಇರ್ಫಾನ್ ಅಹಮದ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Klive Special Article ಕೂಡಿ ಬಾಳಿದರೆ ಸ್ವರ್ಗ ಸುಖ ಲೇ: ಶ್ವೇತಾ ಸುಧೀರ್ , ಶೃಂಗೇರಿ

0

ಸಂಬಂಧದೊಳಗಿನ ಬಂಧನ:

Klive Special Article ಸಂಭಂದ ಅಂದ್ರೆ ಏನು ಎಂದು ಯೋಚನೆ ಮಾಡುತ್ತಾ ಕುಳಿತಾಗ, “ಬಂಧಗಳನ್ನು ಸೇರಿಸಿದಾಗ ಸಿಗೋದೇ ಸಂಬಂಧ” ಅನ್ನೋ ಕಲ್ಪನೆ ಮನಸ್ಸಿಗೆ ಬರುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ಸಂಭಂದಗಳೇ ಬಂಧನ ಅನ್ನೋ ಮನಸ್ಥಿತಿ ಹೆಚ್ಚಾಗಿ ಕಾಣಿಸುತ್ತಿದೆ. ಯಾರಿಗೂ ಯಾರೂ ಬೇಕಿಲ್ಲ ಅನ್ನೋ ಭಾವನೆ ಬೆಳೆದುಬಿಟ್ಟಿದೆ.
ಸಂಭಂದ ಅನ್ನೋ ಪದದ ಮೂಲ ಹುಡುಕುತ್ತ ಹೋದರೆ, “ಕೋಳಿ ಮೊದಲಾ, ಮೊಟ್ಟೆ ಮೊದಲಾ” ಅನ್ನೋ ಗೊಂದಲದಂತೆಯೇ ಇದು. ಹಾಗಾದರೆ ಸಂಭಂದದ ಆರಂಭ ಎಲ್ಲಿ? ಯಾರಿಂದ ಶುರು? ಇದು ಉತ್ತರವಿಲ್ಲದ ಪ್ರಶ್ನೆಯಂತೆಯೇ. ಭೂಮಿಯ ಮೇಲಿರುವ ಎಲ್ಲ ಜೀವಿಗಳನ್ನೂ ದೇವರ ಸೃಷ್ಟಿ ಎಂದು ನೋಡಿದರೆ, ಇಲ್ಲಿ ಇರುವ ಎಲ್ಲರೂ ಪರಸ್ಪರ ಸಂಬಂಧಿಕರೇ, ಎಲ್ಲರೂ ನಮ್ಮವರೇ.
ಹೀಗಿರುವಾಗ, ಯಾಕೆ ಇಷ್ಟು ಭಿನ್ನಾಭಿಪ್ರಾಯಗಳು?
ಯಾಕೆ “ನನ್ನದು”, “ನಾನು” ಅನ್ನೋ ಅಹಂಕಾರ?
ಯಾಕೆ ಮೇಲು–ಕೀಳು ಅನ್ನೋ ಭಾವನೆ?

ಎಲ್ಲವನ್ನೂ ಕೊಡುವುದು ದೇವರು. ನಮ್ಮದು ಅನ್ನೋದೇನೂ ಇಲ್ಲ ಇಲ್ಲಿ. ಇರುವಷ್ಟು ದಿನ ಎಲ್ಲರ ಒಳಿತನ್ನೇ ಬಯಸುತ್ತ, ಸಂತೋಷದಿಂದ ಬದುಕಿದರೆ ಎಷ್ಟು ಚೆನ್ನ. ಬರುವಾಗ ಒಂಟಿಯಾಗಿ ಬರುತ್ತೇವೆ, ಹೋಗುವಾಗಲೂ ಒಂಟಿಯಾಗೇ ಹೋಗುತ್ತೇವೆ. ಮಧ್ಯದಲ್ಲಿ ಅಪ್ಪ–ಅಮ್ಮ, ತಮ್ಮ–ತಂಗಿ, ಅಣ್ಣ–ಅಕ್ಕ, ಗಂಡ-ಹೆಂಡತಿ, ಮಕ್ಕಳು, ಅತ್ತೆ–ಮಾವ, ಗೆಳೆಯರು… ಹೀಗೆ ಅನೇಕ ಸಂಬಂಧಗಳು ನಮ್ಮ ಜೀವನಕ್ಕೆ ಬಂದು ಹೋಗುತ್ತವೆ. ಇದ್ದಷ್ಟು ದಿನ ನಗುತ್ತಾ, ಎಲ್ಲರನ್ನು ನಗಿಸುತ್ತಾ ಬದುಕಲು ಯಾಕೆ ಸಾಧ್ಯವಾಗಬಾರದು?
ನಮ್ಮದು ಅನ್ನೋದು ಶಾಶ್ವತ ಅಲ್ಲ ಅನ್ನೋದು ಗೊತ್ತಿದ್ದರೂ, ಯಾಕೆ ದ್ವೇಷ, ಕೋಪ, ಭಿನ್ನಾಭಿಪ್ರಾಯ? ಸಿ. ಅಶ್ವಥ್ ಅವರು ಹಾಡಿದ ಹಾಡಿನಂತೆ “ಒಳಿತು ಮಾಡು ಮನುಷಾ, ನೀ ಇರೋದು ಮೂರು ದಿವಸಾ ” , “ಮೂರು ದಿನದ ಜೀವನವೆಂಬ ಸಂತೆಯಲ್ಲಿ, ದ್ವೇಷವೆಂಬ ಕಂತೆಯನ್ನು ಸುಟ್ಟು ಹಾಕಿ ನಗು ನಗುತ್ತ ಬದುಕೋದು ಯಾಕೆ ಕಷ್ಟ” .
ಒಬ್ಬ ಶ್ರೀಮಂತನ ಕಥೆ ಕೇಳಿದ್ದೇನೆ—ಅವನು ಅಪಾರ ಸಂಪತ್ತು ಗಳಿಸಿದ್ದ, ಆದರೆ ಸಂಪತ್ತು ಗಳಿಸುವ ಭರದಲ್ಲಿ ಎಲ್ಲರ ಪ್ರೀತಿಯನ್ನು ಗಳಿಸಲು ಮರೆತೇಬಿಟ್ಟ, ಅವನು ಮರಣಹೊಂದಿದಾಗ ಅವನ ಚಟ್ಟ ಹೊರಲು ಬಂದಿದ್ದು ಮೂವರು ಮಾತ್ರ! ಜನರ ಪ್ರೀತಿಯನ್ನು ಸಂಪಾದನೆ ಮಾಡಲು ಆಗದಂತಹ ಶ್ರೀಮಂತಿಕೆ ಯಾಕೆ ಬೇಕು?
ಸತ್ತಮೇಲೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ. ಇರುವಾಗ ಬೇಕಾದದ್ದು ಸಂಭಂದಗಳನ್ನ ಉಳಿಸಿಕೊಳ್ಳೋ ಪ್ರಯತ್ನ. ನಾವು ಸತ್ತಮೇಲೆ ಜನ ಎಷ್ಟು ದಿನ ಅಳ್ತಾರೆ? ಒಂದು ದಿನ, ಒಂದು ವಾರ, ಮೂರು ತಿಂಗಳು… ನಂತರ ಪರಿಸ್ಥಿತಿ ಎಲ್ಲವನ್ನೂ ಮರೆಸುತ್ತದೆ. ವರ್ಷಕ್ಕೆ ಒಮ್ಮೆ ನೆನಪಾಗೋದು ಕೂಡಾ ಕಷ್ಟಕರ ಅನ್ನೋ ಬಾಳು ನಮ್ಮ ಜೀವನ. ಯಾರಾದರೂ ನಮಗೆ ಆಗೋದೇ ಇಲ್ಲ ಅಂದ್ಕೊಂಡರೆ ಇರೋದು ಎರಡು ಮಾರ್ಗ—ಮಾತಾಡದೆ ಇರೋದು, ಅಥವಾ ಅಪಪ್ರಚಾರ ಮಾಡದೇ ದೂರವಿರೋದು. ಆದರೆ ದ್ವೇಷಿಸೋದು, ಕೋಪ ಮಾಡಿಕೊಳ್ಳೋದು, ಮನಸ್ಸು ಹಾಳು ಮಾಡಿಕೊಳ್ಳೋದು—ಇವುಗಳಿಂದ ಏನು ಲಾಭ?
Klive Special Article ” ದ್ವೇಷ ” ಮಾಡಿದರೂ ಸಾಯ್ತೀವಿ, ಪ್ರೀತಿ ಮಾಡಿದರೂ ಸಾಯ್ತೀವಿ, ಹಾಗಿದ್ದಾಗ ಯಾಕೆ ದ್ವೇಷದ ಹೊರೆ ಹೊತ್ತು ಬದುಕಬೇಕು? ದ್ವೇಷವಿರುವ ವ್ಯಕ್ತಿಯ ಜೊತೆ ಒಮ್ಮೆ ಪ್ರೀತಿಯಿಂದ ಮಾತನಾಡಿದರೆ, ಅವರ ಮನಸ್ಸು ಕೂಡಾ ಬದಲಾಗೋ ಸಾಧ್ಯತೆ ಇದೆ. ಇಷ್ಟು ಸುಲಭವಾಗಿ ಉಳಿಸಬಹುದಾದ ಸಂಬಂಧವನ್ನು ಯಾಕೆ ಭಿನ್ನಾಭಿಪ್ರಾಯಗಳಿಂದ ಹಾಳು ಮಾಡಿಕೊಳ್ಳಬೇಕು? ಭಾಂದವ್ಯ ಅನ್ನೋದು ಅಷ್ಟು ಸುಲಭವಾಗಿ ಬರೋಲ್ಲ ಅಲ್ಲವೇ, ಒಮ್ಮೆ ನಮ್ಮವರು, ನಮ್ಮ ಪ್ರೀತಿಪಾತ್ರರು ಅನ್ನೋ ಮನಸ್ಥಿತಿ ಬಂದಮೇಲೆ ಸಂಭಂದ ಉಳಿಸೋದು ಅಷ್ಟು ಕಷ್ಟವಲ್ಲ. ಬೇಕಾಗಿರುವುದು ಪ್ರೀತಿಯ ಮಾತು, ನಂಬಿಕೆ, ವಿಶ್ವಾಸ..
ಒಂದು ಸಂಭಂದ ಕೆಟ್ಟರೆ, ಅದಕ್ಕೆ ಇಬ್ಬರೂ ಕಾರಣ. ಎರಡೂ ಕೈ ಇಲ್ಲದೇ ಚಪ್ಪಾಳೆಯಾಗಲು ಸಾಧ್ಯವೇ? ಇದಕ್ಕೆ ಪ್ರಮುಖ ಕಾರಣ “ನಾನು” ಅನ್ನೋ ಅಹಂಕಾರ. “ನಾನೇ ಏಕೆ ಬಗ್ಗಬೇಕು?” ಅನ್ನೋ ಹಠ. ಸಂಭಂದ ಉಳಿಸಬೇಕಾದರೆ ಒಬ್ಬರು ಬಗ್ಗಬೇಕು ಅಥವಾ ಇಬ್ಬರೂ ಬಗ್ಗಬೇಕು; ಅಷ್ಟೂ ಮಾಡಲು ಸಾಧ್ಯವಿಲ್ಲ ಅಂದರೆ ಅದು ನಿಜವಾದ ಸಂಭಂದವೇ? ಅಥವಾ ಕೇವಲ ಬಂಧನವೇ?
ಅಹಂಕಾರ ಇರುವ ತನಕ ಸಂಭಂದ ಗಟ್ಟಿ ಆಗೋದಿಲ್ಲ. “ನಾನು ” “ನನ್ನದು” ಅನ್ನೋ ಅಹಂಕಾರವೇ ಸಂಭಂದಗಳನ್ನು ಮುರಿಯುತ್ತದೆ. ಎಲ್ಲರಿಗಾಗಿ ಬದುಕಬೇಕು. ನಮಗೆ ಬದುಕುವ ಹಕ್ಕು ಇದ್ದಂತೆ ಎಲ್ಲರಿಗೂ ಇರುತ್ತದೆ. ಎಲ್ಲರೂ ನಮ್ಮವರೇ ಅನ್ನೋ ಮನಸ್ಸು ಸಂಭಂದಗಳನ್ನು ಜೋಡಿಸುವ ಮೂಲ. ಪ್ರೀತಿ ಕೊಟ್ಟು ಪ್ರೀತಿ ಪಡೆಯಬೇಕು. ನಂಬಿಕೆಗೆ ಅರ್ಹರಾಗಿ ನಂಬಿಕೆ ಗಳಿಸಬೇಕು. ಪ್ರೀತಿ ಮತ್ತು ನಂಬಿಕೆ—ಇವೇ ಸಂಭಂದದ ತಳಹದಿ. ಅಪನಂಬಿಕೆ ಬಂದ ಕ್ಷಣದಿಂದಲೇ ಸಂಭಂದದಲ್ಲಿ ಬಿರುಕುಮೂಡುತ್ತದೆ. ಸಂಭಂದಗಳಲ್ಲಿ ಗಳಿಸಿದ ಪ್ರೀತಿ–ವಿಶ್ವಾಸವನ್ನು ಸಣ್ಣ ಪುಟ್ಟ ವಿಷಯಗಳಿಗಾಗಿ ನಾಶ ಮಾಡಿಕೊಳ್ಳದೇ ಸಾಗೋದು ಜೀವನದ ಉತ್ತಮ ಮಾರ್ಗ. ಪರಸ್ಪರ ಪ್ರೀತಿ ಗೌರವ ನಂಬಿಕೆ ಇವುಗಳೇ ಉತ್ತಮ ಬಾಂಧವ್ಯದ ಬುನಾದಿ. ಎಲ್ಲರೂ ನಮ್ಮವರೆಂದು ಪ್ರೀತಿಸುತ್ತ, ಇರುವಷ್ಟು ದಿನ ಸಂತೋಷವಾಗಿ ಬದುಕೋಣ.

ಬಿದನೂರಿನ ಬೆಲ್ಲ, ಸವಿಯಿರಿ ಎಲ್ಲ

0

ಐತಿಹಾಸಿಕ ನಗರಿ, ಹಲವು ಪ್ರಥಮಗಳನ್ನು, ಕೌತುಕಗಳನ್ನೂ ತನ್ನ ಒಡಲಿನೊಳಗಿಟ್ಟುಕೊಂಡು ಇಂದಿಗೂ ಸಂಶೋಧಕರಿಗೆ, ಅಧ್ಯಯನಕಾರರಿಗೆ ಸವಾಲು ಒಡ್ಡುವ ಬಿದನೂರು(ವೇಣುಪು ರ) ದ ಮಾರಿ ಜಾತ್ರೆ. ಬಿದನೂರಿನ ಅರಸರು ಸಾಂಪ್ರದಾಯಿಕ ಶೈಲಿಯ ಹಬ್ಬವನ್ನು ಬಿಡದೆ ಆಚರಿಸಿದವರು, ವರುಷಕ್ಕೊಮ್ಮೆ ಮಾರಿ(ದಂಡಿನ ಮಾರಮ್ಮ) ಗೆ ಬಲಿ ನೈವೇದ್ಯಮಾಡಿ ಯುದ್ದಕಾಲದಲ್ಲಿ ಶತೃವಿನ ರಕ್ತದ ಕಲೆಯನ್ನು ತಮ್ಮ ಶಸ್ತ್ರದಲ್ಲಿ ಉಳಿಸಿಕೊಂಡವರು. ಗುಜರಿಪೇಟೆ ವೆಂಕಟರಮಣ, ಕಂಬದ ನರಸಿಂಹ, ಕಂಬದ ಆಂಜನೇಯರಂತೂ ಕಣ್ಮನ ತಣಿಸು ಮೂರ್ತಿಗಳು.

ಇನ್ನು ಕೆಳದಿ, ಬಿದನೂರು,(ನಗರ) ಕಪಿಲೆ ದುರ್ಗ(ಕವಲೇ ದುರ್ಗ ಕೆಳದಿ ಮನೆತನಕ್ಕೆ ಒಂದಕ್ಕೊಂದು ಬೆಸೆದ ಕೊಂಡಿ. ಕೆಳದಿಯನ್ನು ಸುಮಾರು ೩೦೦ ವರ್ಷಗಳ ಕಾಲ ಆಳಿದ ಹಿರಿಮೆ ಕೆಳದಿಯ ಅರಸುಮನೆತನದ್ದಾಗಿದೆ. ಕೆಳದಿ, ಇಕ್ಕೇರಿ, ನಗರ(ಬಿದನೂರು, ವೇಣುಪುರ) ಪ್ರಾಚೀನ ಕಾಲದ ನಗರಗಳು. ಈ ನಗರಗಳು ಶಿವಮೊಗ್ಗ ಜಿಲ್ಲೆಯ ಕಣ್ಣುಗಳು ಇದ್ದಂತೆ.

ಅಲ್ಲದೆ ಕೆಳದಿ ಅರಸರ ಬಿರುದಾವಳಿಗಳು ಹೀಗಿದೆ. ಪರಯಡವಮುರಾರಿ
ಕೋಟೆಕೋಲಾಹಲೇನ
ಪ್ರವಿಚಲಿತವಿಶುದ್ಧಾದ್ವೈತಸಿದ್ಧಾಂತಭೂಮ್ನಾ|
ಅಸಿಯುಗಲಭೃತಾ ಚ ವೈರಿಸಪ್ತಾಂಗಲಕ್ಷ್ಮೀ ಹರಹರಿತ ಪಟೋದ್ಯತ್ಕೇತನಶ್ರೀಯುತೇನ|
ಚೌಡಪ್ಪನಾಯಕ ಸಮುನ್ಮಿಷಿತಾನ್ಚವಾಯ
ದುಗ್ದಾಬ್ಧಿವೃದ್ದಿಕರಕೈರವಬಾಂಧವೇನ| ಏಕಾಂಗಿವೀರರಣರಂಗವಿಹಾರಧೀರ ದೋನೇಜ ಪಶ್ಚಿಮ ಸರಸ್ವದಧೀಶ್ವರೇಣ. ಇವುಗಳು ಬಿರುದುಗಳು.

ಸಿಸ್ತಿನ ಶಿವಪ್ಪನಾಯಕರ ಕಾಲದಲ್ಲಿ ಕೃಷಿಗೆ ಕೊಟ್ಟಷ್ಟು ಮಹತ್ವ ಬಹುಶಃ ಕನ್ನಡದ ಅರಸರು ಮತ್ಯಾರು ಕೊಟ್ಟಿಲ್ಲವೆಂದೇ ಹೇಳಬೇಕು.‌ಸಾಂಪ್ರದಾಯಿಕ ಬೆಳೆಗಳು, ನೀರಾವರಿ ಕಾಲುವೆ, ಆಲೆಮನೆಗಳು ಇವರ ಕಾಲದಲ್ಲಿ ಉನ್ನತಿ ಪಡೆಯಿತು.

ತಿಗಳರ ಕುಲದೇವರಾದ ಧರ್ಮರಾಯನ ಕರಗವನ್ನು ಮೊಟ್ಟಮೊದಲು ಆರಂಭಿಸಿದ್ದು
ಕೆಳದಿ ಅರಸು ಮನೆತನದ ಕಾಲದಿಂದಲೇ.

ಮರೆಯಾಗುತ್ತಿರುವ ಸಾಂಪ್ರದಾಯಿಕ ಆಲೆಮನೆಗಳು.

ಕಬ್ಬು ಭೂಮಿಯಲ್ಲಿ ಅವತರಿಸಿ ಅದರಿಂದ ಬೆಲ್ಲ ಮಾಡುವ ವಿಧಾನವನ್ನು ಮನುಷ್ಯ ಅದ್ಯಾವಾಗ ಕಂಡುಹಿಡಿದನೋ ಭಗವಂತನೇ ಬಲ್ಲ, ಅಂದಿನಿಂದಿಲೂ ಇಂದಿನವರೆಗೂ ಕಬ್ಬಿನ ಹಾಲಿನಿಂದ ಬೆಲ್ಲವನ್ನು ತಯಾರಿಸುತ್ತಲೇ ಇದ್ದಾರೆ. ಹಿಂದೆಲ್ಲಾ ಕೋಣವನ್ನು, ಎತ್ತನ್ನು ಕಟ್ಟಿ ಗಾಣವನ್ನು ಹೂಡಿ ಕಬ್ಬನ್ನು ಅರೆದು ರಸತೆಗೆದು ಭೂಮಿಯ ಆರೇಳು ಅಡಿಗಳ ಆಳದಲ್ಲಿ ಒಲೆಗಳನ್ನು ನಿರ್ಮಿಸಿ ಕಟ್ಟಿಗೆಗಳನ್ನು, ದಪ್ಪ ದಪ್ಪ ಕೊರಡನ್ನು ಹಾಕಿ ಹದವಾದ ಬೆಂಕಿಯನ್ನು ಮಾಡಿಕೊಂಡು ದೊಡ್ಡ ದೊಡ್ಡ ತಪ್ಪಲೆಗಳಿಗೆ ಹಾಲನ್ನು ಸುರಿದು ಹದವಾಗಿ ಕೈಯಾಡಿಸುತ್ತಾ ಹಾಲನ್ನು ಚೆನ್ನಾಗಿ ಕುದಿಸಿ ಪಾಕವನ್ನು ಮಾಡುತ್ತಲೇ ಅದನ್ನು ದೊಡ್ಡ ಹರಿವಾಣಕ್ಕೆ ಸುರಿದು ಆರಲು ಬಿಟ್ಟರೆ ಅದು ನೊರೆ ಬೆಲ್ಲವಾಗಿ ಅದನ್ನು ತಿನ್ನುವುದೇ ಒಂದು ಮಹದಾನಂದ. ನೊರೆಬೆಲ್ಲ, ಜೋನಿಬೆಲ್ಲ, ಅಚ್ಚು ಬೆಲ್ಲ, ವಾಲೆಬೆಲ್ಲ, ಶುಂಠಿ ಬೆರೆಸಿದ ಬೆಲ್ಲ ಎಲ್ಲವೂ ಸಾಂಪ್ರದಾಯಿಕ ರೀತಿಯಲ್ಲಿ ರಾಸಾಯನಿಕ ಮುಕ್ತವಾಗಿ ತಯಾರಾಗುತಿತ್ತು.

ಈಗ ಕೋಣ, ಎತ್ತಿನ ಬದಲು ಯಾಂತ್ರಿಕ ಮೋಟಾರು ಬಳಸಿ ಕಬ್ಬನ್ನು ಅರೆಯಲಾಗುತ್ತಿದೆ. ಕಬ್ಬನ್ನು ಹಲ್ಲಿನಲ್ಲಿ ಸಿಗಿದು ಕಚ್ಚಿ ತಿಂದು ರಸವನ್ನು ನುಂಗುವ ಕಲೆಯೂ ತಿಳಿಯದ ಇಂದಿನ ಪೀಳಿಗೆಗೆ ಸಾಂಪ್ರದಾಯಿಕ ಶೈಲಿಯ ಆಲೆಮನೆ ಎಂದರೇನೆಂದು ಚಿತ್ರದಲ್ಲಿ ಮಾತ್ರ ತೋರಿಸಬೇಕಾಗಿದೆ. ಕಬ್ಬುಡೊಂಕಾದರೇನು ಸಿಹಿ ಡೊಂಕೆ ವಿಠ್ಠಲ.

ವಿಶೇಷ ಧನ್ಯವಾದಗಳು:
ಚಿತ್ರ ಕೃಪೆ: ಡಾ. ಶಾಂತಾರಾಮ್ ಸಾಮಕ್,
ಶ್ರೀಕಂಠ ಶರ್ಮ,‌ಪತ್ರಕರ್ತರು,
ಹೊಸನಗರ

✍️ದಿಲೀಪ್ ನಾಡಿಗ್
6361124316