Thursday, July 23, 2026
Thursday, July 23, 2026

ಭೀಕರ ಪರಿಣಾಮ ತರಲಿರುವ”ಎಲ್ ನಿನೋ”. ಮುನ್ನಚ್ಚರಿಕೆ ಮಾಹಿತಿ ಲೇ: ಡಾ.ಶಾಲಿನಿ ರಜನೀಶ್.ಸರ್ಕಾರದ ಮುಖ್ಯ ಕಾರ್ಯದರ್ಶಿ

Date:

ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ‘ಎಲ್ ನಿನೋ’ (El Niño) ಹವಾಮಾನ ವೈಪರೀತ್ಯದ ಪರಿಣಾಮವಾಗಿ ಉಂಟಾಗಬಹುದಾದ ತಾಪಮಾನ ಏರಿಕೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ಕರ್ನಾಟಕ ಸರ್ಕಾರವು ಸಮಗ್ರ ಮತ್ತು ದೂರದೃಷ್ಟಿಯ ಕಾರ್ಯತಂತ್ರವನ್ನು ಕೈಗೆತ್ತಿಕೊಂಡಿದೆ.

​ಏನಿದು ಎಲ್ ನಿನೋ? :

ದಕ್ಷಿಣ ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಕಾಯುವ ವಿದ್ಯಮಾನವನ್ನು ‘ಎಲ್ ನಿನೋ’ (ಸ್ಪ್ಯಾನಿಷ್ ಭಾಷೆಯಲ್ಲಿ ‘ಪುಟ್ಟ ಬಾಲಕ’ ಅಥವಾ ‘ಯೇಸು ಕ್ರಿಸ್ತ’) ಎನ್ನಲಾಗುತ್ತದೆ.

​ಈ ಘಟನೆಯು ಜಾಗತಿಕ ಗಾಳಿಯ ಮಾದರಿ ಹಾಗೂ ಮಳೆಯ ಪ್ರಮಾಣವನ್ನು ಏರುಪೇರು ಮಾಡುತ್ತದೆ. ಕಳೆದ 150 ವರ್ಷಗಳಲ್ಲೇ ಅತ್ಯಂತ ಪ್ರಬಲ ಎಲ್ ನಿನೋ ಆವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದರ ಪರಿಣಾಮವಾಗಿ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಕ್ಷೀಣಿಸಿ ಬರದ ಛಾಯೆ ಮೂಡುವ ಭೀತಿ ಎದುರಾಗಿದೆ.

ತಾಪಮಾನ ಏರಿಕೆ ಮತ್ತು ಬರದ ಮುನ್ನೆಚ್ಚರಿಕೆ :

​ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (INCOIS) ನೀಡಿದ ಸೂಚನೆಯಂತೆ, ಈ ಹವಾಮಾನ ವೈಪರೀತ್ಯವು 2027ರ ಮೇ ತಿಂಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ.

ತಾಪಮಾನ ವೃದ್ಧಿ :

ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಲಿದ್ದು, ತೀವ್ರ ಕಾವು ಉಂಟಾಗಲಿದೆ.
​ಮುಂಗಾರು ವೈಫಲ್ಯ ಹಾಗೂ ಜಲಕ್ಷಾಮ, ಮಳೆಯ ಕೊರತೆಯಿಂದ ಜಲಾಶಯಗಳ ಮಟ್ಟ ಕುಸಿದು, ಕೃಷಿ ಹಾಗೂ ಕುಡಿಯುವ ನೀರಿಗೆ ಅಭಾವ ತಲೆದೋರಬಹುದು.

ಆರ್ಥಿಕ ನಷ್ಟ :

ಕೃಷಿ ಉತ್ಪಾದನೆ ಕುಸಿದು ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಸರ್ಕಾರದ ಪ್ರಮುಖ ರಕ್ಷಣಾತ್ಮಕ ಕ್ರಮಗಳು ಹಾಗೂ ಕಾರ್ಯಕ್ರಮಗಳು:

ಬೋರ್‌ವೆಲ್ ಮರುಪೂರಣ (Recharge) ಮತ್ತು ಅಂತರ್ಜಲ ರಕ್ಷಣೆ, ​K-GIS ಡಿಜಿಟಲ್ ನೋಂದಣಿ, ರಾಜ್ಯದಲ್ಲಿರುವ ಸುಮಾರು 37 ಲಕ್ಷ ಬೋರ್‌ವೆಲ್‌ಗಳ ಸಮಗ್ರ ಮಾಹಿತಿಯನ್ನು KSRSACನ K-GIS ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ.

ತಾಂತ್ರಿಕ ತರಬೇತಿ ಹಾಗೂ ಪ್ರಗತಿ ಪರಿಶೀಲನೆ :

ಬೋರ್‌ವೆಲ್‌ಗಳ ತಾಂತ್ರಿಕ ಪರಿಶೀಲನೆ, ರಿಪೇರಿ ಮತ್ತು ಮರುಪೂರಣ ಕಾರ್ಯಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ.

ತೀವ್ರವಾಗಿ ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ (ಅತಿ ಹೆಚ್ಚು ಬಳಕೆಯಾದ ವಲಯಗಳಲ್ಲಿ) ಹೊಸ ಬೋರ್‌ವೆಲ್ ಕೊರೆಯುವುದನ್ನು ನಿರ್ಬಂಧಿಸಲಾಗಿದೆ.

ಜಲ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ :

​VBGRAMG ಯೋಜನೆ: ಗ್ರಾಮೀಣ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಣೆ, ವಿವಿಧ ಚೆಕ್ ಡ್ಯಾಮ್‌ಗಳ ನಿರ್ಮಾಣ (ಮಣ್ಣಿನ ತಡೆ, ಕಲ್ಲು ತುಂಬಿದ ತಂತಿ ಜಾಲದ ತಡೆ, ಕಲ್ಲಿನ ತಡೆ check-dams) ಹಾಗೂ ಸಾಂಪ್ರದಾಯಿಕ ನೀರಿನ ಮೂಲಗಳ ಪುನರುಜ್ಜೀವನವನ್ನು ಕೈಗೆತ್ತಿಕೊಳ್ಳಲಾಗಿದೆ.

ಕಲುಷಿತ ನೀರು ಮರುಬಳಕೆ : ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೈಗಾರಿಕೆ, ಉದ್ಯಾನವನ ಹಾಗೂ ನಿರ್ಮಾಣ ಕಾಮಗಾರಿಗಳಿಗೆ ಬಳಸುವ ವ್ಯವಸ್ಥೆ ಮಾಡಲಾಗುತ್ತಿದೆ.

ವಾಟರ್ ಬಜೆಟಿಂಗ್ : ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನೀರಿನ ಸರಿಯಾದ ನಿರ್ವಹಣೆಗಾಗಿ ‘ಜಲ ಆಯವ್ಯಯ’ (Water Budgeting) ಜಾರಿಗೆ ತರಲಾಗುತ್ತಿದೆ.

ರೈತರಿಗೆ ಆಸರೆ: ಬರನಿರೋಧಕ ಬೆಳೆಗಳ ಪ್ರೋತ್ಸಾಹ :

​ಮಳೆ ಅಭಾವದಿಂದ ಉಂಟಾಗುವ ನಷ್ಟ ತಪ್ಪಿಸಲು ರೈತರು ಕಡಿಮೆ ನೀರು ಬಳಸುವ ಮತ್ತು ತೀವ್ರ ಶಾಖವನ್ನು ತಡೆಯಬಲ್ಲ ಬೆಳೆಗಳನ್ನು ಬೆಳೆಯಲು ಸರ್ಕಾರ ಉತ್ತೇಜಿಸುತ್ತಿದೆ.

​ಸಿರಿಧಾನ್ಯಗಳು (Millets) : ಶೇಂಗಾ, ಜೋಳ, ರಾಗಿ ಇತ್ಯಾದಿ, ಕೇವಲ 250–400 ಮಿ.ಮೀ. ಮಳೆಯಲ್ಲೇ ಬೆಳೆಯಬಹುದು.

ದ್ವಿದಳ ಧಾನ್ಯಗಳು : ಕಡಲೆ, ತೊಗರಿ, ಅಲಸಂದಿ ಮುಂತಾದ ಬೆಳೆಗಳು. ಇವುಗಳ ಬೇರುಗಳು ಆಳಕ್ಕೆ ಇಳಿದು ತೇವಾಂಶ ಪಡೆಯುತ್ತವೆ ಹಾಗೂ ಮಣ್ಣಿನ ಸಾರ ಹೆಚ್ಚಿಸುತ್ತವೆ.

ಎಣ್ಣೆಕಾಳುಗಳು : ಸೂರ್ಯಕಾಂತಿ, ಎಳ್ಳು ಮತ್ತು ಹುಚ್ಚೆಳ್ಳು ಇತ್ಯಾದಿ. 400–750 ಮಿ.ಮೀ. ಮಳೆಯ ಅಗತ್ಯವಿದ್ದು, ಒಣ ಹವಾಮಾನ ತಡೆಯಬಲ್ಲವು.

​ಹವಾಮಾನ ವೈಪರೀತ್ಯದ ಈ ಕಠಿಣ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಪ್ರತಿಯೊಬ್ಬ ನಾಗರಿಕರೂ ಇಂಧನ ಬಳಕೆಯನ್ನು ಮಿತಿಗೊಳಿಸಬೇಕು, ಪುನರ್ಬಳಕೆ ಮಾಡಬಹುದಾದ ಇಂಧನ ಮೂಲಗಳಿಗೆ ಆದ್ಯತೆ ನೀಡಬೇಕು ಮತ್ತು ನೀರನ್ನು ಅತ್ಯಂತ ಮಿತವಾಗಿ ಬಳಸಿ ಸಂರಕ್ಷಿಸಬೇಕು.

ಸರ್ಕಾರದ ಈ ಬೃಹತ್ ಜಲ ಸಂರಕ್ಷಣಾ ಅಭಿಯಾನಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...

Dr. G. Parameshwara ಎಸ್ ಐ ಆರ್ ಪ್ರಕ್ರಿಯೆ: ಜನರಿಗೆ ತೊಂದರೆಯಾಗದಂತೆ ಕ್ರಮ- ಡಾ.ಜಿ.ಪರಮೇಶ್ವರ

Dr. G. Parameshwara ಕೇಂದ್ರ ಸರ್ಕಾರದ ಎಸ್‌ಐಆರ್‌ ಪ್ರಕ್ರಿಯೆಗೆ ಅಗತ್ಯ...