ಖಾಸಗಿ ಬ್ಯಾಂಕುಗಳು ಆದ್ಯತಾ ವಲಯಗಳಾದ ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಿ ನಿಗದಿತ ಗುರಿ ಸಾಧಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್.ಎನ್ ಸೂಚನೆ ನೀಡಿದರು.
ಜಿ.ಪಂ. ಸಭಾಂಗಧಲ್ಲಿ ಏರ್ಪಡಿಸಲಾಗಿದ್ದ ಡಿಸಿಸಿ-ಡಿಎಲ್ ಆರ್ ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಹಣಕಾಸು ವರ್ಷದ ಆದ್ಯತಾ ವಲಯಗಳಾದ ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ ಎಂಇ) ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ನಿಗದಿಪಡಿಸಿದ ಸಾಲದ ಗುರಿಯನ್ನು ತಲುಪಲು ಬ್ಯಾಂಕುಗಳು ಆದ್ಯತೆ ನೀಡಬೇಕು.
ಆದರೆ ಖಾಸಗಿ ಬ್ಯಾಂಕುಗಳು ಆದ್ಯತಾ ವಲಯಕ್ಕೆ ಪ್ರಾಮುಖ್ಯತೆ ನೀಡಿಲ್ಲ. ಪ್ರಗತಿಯೇ ಇಲ್ಲವಾಗಿದೆ. ಈ ಕುರಿತು ಸಮರ್ಪಕವಾದ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ವಿವಿಧ ಜನಪರ ಯೋಜನೆಗಳು ಮತ್ತು ಸಬ್ಸಿಡಿ ಸಾಲ ಸೌಲಭ್ಯಗಳು ಕಾಲಮಿತಿಯೊಳಗೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಬ್ಯಾಂಕುಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಿಡಿ ರೇಷಿಯೋ ಕಡಿಮೆ ಇರುವ ಬ್ಯಾಂಕುಗಳು ನಿಗದಿತ ಗುರಿ ತಲುಪಲು ಕಾರ್ಯೋನ್ಮುಖರಾಗಬೇಕು ಎಂದ ಅವರು ಡಿಎಲ್ ಆರ್ಸಿ ಸಭೆಗೆ ಗೈರಾದ ಖಾಸಗಿ ಬ್ಯಾಂಕುಗಳಿಗೆ ನೋಟಿಸ್ ನೀಡಲು ಸೂಚನೆ ನೀಡಿದರು.
ಪಿಎಂಇಜಿಪಿ ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ವಿಲೇ ಮಾಡಬೇಕು. ಹಾಗೂ ಮಂಜೂರಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸೌಲಭ್ಯ ವಿತರಣೆ ಮಾಡಬೇಕು. ವಿಶ್ವಕರ್ಮ ಯೋಜನೆಯಡಿ ವಿತರಣೆಗೆ ಬಾಕಿ ಇರುವ 678 ಅರ್ಜಿಗಳ ಕುರಿತು ಪರಿಶೀಲಿಸಿ ಕ್ರಮ ವಹಿಸಲು ತಿಳಿಸಿದ ಅವರು ಫಲಾನುಭವಿಗಳಿಗೆ ಸೂಕ್ತ ತರಬೇತಿ ಮತ್ತು ಸೌಲಭ್ಯ ನೀಡುವಂತೆ ತಿಳಿಸಿದರು.
ಪಿಎಂ ಸ್ವನಿಧಿ ಯೋಜನೆಯಡಿ 2ನೇ ಹಂತದ ಸಾಲದಲ್ಲಿ 210 ಅರ್ಜಿಗಳು ಬಾಕಿ ಇವೆ. ಯಾವೆಲ್ಲ ಬ್ಯಾಂಕುಗಳಲ್ಲಿ ಎರಡು, ಮೂರನೇ ಹಂತ ಸಾಲದ ಅರ್ಜಿಗಳು ಬಾಕಿ ಇವೆ ಎಂಬುದನ್ನು ವಿವರ ನೀಡಲು ಸೂಚಿಸಿದರು.
ಪಿಎಂ ಸೂರ್ಯ ಗರ್ ಮುಫ್ತ್ ಬಿಜಲಿ ಯೋಜನೆಯಡಿ ಜಿಲ್ಲೆಯಲ್ಲಿ ಕೇವಲ 413 ಅರ್ಜಿ ಬಂದಿವೆ. ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕೆಂದರು.
ಬ್ಯಾಂಕುಗಳು ಮತ್ತು ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಉತ್ತಮ ಸಮನ್ವಯತೆ ಇರಬೇಕು. ಪ್ರಗತಿಯಲ್ಲಿ ಹಿಂದುಳಿದಿರುವ ಬ್ಯಾಂಕ್ಗಳ ಅಧಿಕಾರಿಗಳು ಮುಂದಿನ ತ್ರೈಮಾಸಿಕದ ವೇಳೆಗೆ ನಿಗದಿತ ಗುರಿ ಸಾಧಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಎನ್ ಆರ್ ಎಲ್ ಎಂ ಯೋಜನೆಯಡಿ ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕುಗಳು ಸಮರ್ಪಕವಾಗಿ ಸಾಲ ಸೌಲಭ್ಯ ನೀಡಬೇಕು. ಈ ಗುಂಪುಗಳು ಕೆಲವು ದೂರುಗಳನ್ನು ನೀಡಿದ್ದು ಅವನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮುದ್ರಾ ಯೋಜನೆಯಡಿ ಬ್ಯಾಂಕುಗಳಿಲು ನಿಗದಿತ ಗುರಿ ಸಾಧಿಸಬೇಕು. ಕೃಷಿ ವಲಯಕ್ಕೆ ಸಕಾಲದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ರೈತರಿಗೆ ನೆರವಾಗಬೇಕು. ಹಾಗೂ ವಿವಿಧ ಯೋಜನೆಗಳಡಿ ಬ್ಯಾಂಕುಗಳು ಸಾಲ ತಡೆ ಹಿಡಿದ ಮಾಹಿತಿಯನ್ನು ಪ್ರತಿ ತಿಂಗಳು ನೀಡಬೇಕು. ಹಾಗೂ ಅರ್ಜಿಗಳು ತಿರಸ್ಕೃತವಾಗಿತ್ತಿರುವ ಬಗ್ಗೆ ಸಹ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಗೋವಿಂದಾಪುರ ಆಶ್ರಯ ಮನೆಗಳ ಇಸ್ವತ್ತು ಅನುಮೋದನೆ ಆಗಿದ್ದು ಸಂಬಂಧಿಸಿದ ನೌಕರರು ಇವನ್ನು ನಿಗದಿತ ಅವಧಿಯೊಳಗೆ ಡೌನ್ ಲೋಡ್ ಮಾಡಿಕೊಂಡು ಕ್ರಮ ವಹಿಸಲು ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳು: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಮತ್ತು ಅಟಲ್ ಪೆನ್ಷನ್ ಯೋಜನೆಗಳ ಕುರಿತು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಪ್ರತಿಯೊಬ್ಬರನ್ನೂ ಈ ಯೋಜನೆಗಳ ವ್ಯಾಪ್ತಿಗೆ ತರಬೇಕು ಎಂದರು. ಹಾಊ
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಡಿಜಿಎಂ ಸಂಜೀವ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ವಾರ್ಷಿಕ ಸಾಲ ಯೋಜನೆ ರೂ.16,334.07 ಕೋಟಿಗಳ ಗುರಿಗೆ ಪ್ರತಿಯಾಗಿ ರೂ.17,970.62 ಕೋಟಿ ಸಾಧನೆ ಮಾಡುವ ಮೂಲಕ ಜಿಲ್ಲೆಯು ಶೇ. 110.02 ರಷ್ಟು ಪ್ರಗತಿ ದಾಖಲಿಸಿದೆ.
ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 23.93 ರಷ್ಟು ವಾರ್ಷಿಕ ಬೆಳವಣಿಗೆಯನ್ನು ತೋರಿಸುತ್ತದೆ.
ಆದ್ಯತಾ ವಲಯ ಸಾಧನೆ: ಕೃಷಿ ವಲಯಕ್ಕೆ ನಿಗದಿಪಡಿಸಿದ್ದ ರೂ.7,918.12 ಕೋಟಿಗಳ ಗುರಿಯಲ್ಲಿ ರೂ. 8,739.14 ಕೋಟಿಗಳನ್ನು ತಲುಪುವ ಮೂಲಕ ಶೇ. 110.37 ರಷ್ಟು ಸಾಧನೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಶೇ. 21.90 ರಷ್ಟು ಹೆಚ್ಚಿನ ಪ್ರಗತಿ ಕಂಡುಬಂದಿದೆ.
ಎಂ.ಎಸ್.ಎಂ.ಇ : ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯದಲ್ಲಿ ರೂ.3,773.70 ಕೋಟಿ ಸಾಲ ನೀಡಲಾಗಿದ್ದು, ಶೇ. 94.83 ರಷ್ಟು ಗುರಿ ತಲುಪಲಾಗಿದೆ (ಶೇ. 12.86 ವಾರ್ಷಿಕ ಬೆಳವಣಿಗೆ).
ಒಟ್ಟಾರೆಯಾಗಿ ಆದ್ಯತಾ ವಲಯದಲ್ಲಿ ಶೇ. 103.30 ರಷ್ಟು ಸಾಧನೆಯಾಗಿದ್ದು, ರೂ.12,785.48 ಕೋಟಿ ವಿತರಿಸಲಾಗಿದೆ.
ಆದ್ಯತಾ ವಲಯದ ಅಡಿಯಲ್ಲಿ ಬರುವ ರಫ್ತು ಸಾಲ ಸಾಮಾಜಿಕ ಮೂಲಸೌಕರ್ಯ ನವೀಕರಿಸಬಹುದಾದ ಇಂಧನ ಮತ್ತು ಇತರ ವಲಯಗಳು ಹಾಗೂ ಆದ್ಯತೇತರ ವಲಯದ ಶಿಕ್ಷಣ ಕ್ಷೇತ್ರವು ಕಳೆದ ಮಾರ್ಚ್ 2025 ಕ್ಕೆ ಹೋಲಿಸಿದರೆ ನಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ.
ಆದ್ಯತೇತರ ವಲಯ:
ಆದ್ಯತೇತರ ವಲಯದಲ್ಲಿ ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚಿನ ಅಂದರೆ ಶೇ. 131.05 ರಷ್ಟು ಸಾಧನೆ ಮಾಡಲಾಗಿದ್ದು, ಒಟ್ಟು ರೂ.5,185.14 ಕೋಟಿ ಸಾಲ ವಿತರಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ. 41.34 ರಷ್ಟು ಭಾರಿ ಬೆಳವಣಿಗೆಯನ್ನು ಕಂಡಿದೆ. ವಿಶೇಷವಾಗಿ ವೈಯಕ್ತಿಕ ಸಾಲಗಳು ಶೇ. 141.09 ರಷ್ಟು ಪ್ರಗತಿ ಸಾಧಿಸಿಲಾಗಿದೆ ಎಂದರು.
ಸಭೆಯಲ್ಲಿ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಯಿತು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಪಿ, ಆರ್ಬಿಐ ಎಫ್ಐಡಿಡಿ ಎಜಿಎಂ ಬಬುಲ್ ಬೊರ್ಡೊಲೈ(ವರ್ಚುಲವ್ ಮೂಲಕ), ನಬಾರ್ಡ್ ಡಿಡಿಎಂ ಶರತ್ ಗೌಡ, ಜಿಲ್ಲಾ ಸಂಯೋಜಕ ಬ್ಯಾಂಕುಗಳು, ಇತರೆ ಬ್ಯಾಂಕುಗಳ ಅಧಿಕಾರಿಗಳು ಹಾಜರಿದ್ದರು.
