ಆಸ್ತಿ ಹಂಚಿಕೆ ವಿವಾದ ಹಾಗೂ ವೈಷಮ್ಯದ ಹಿನ್ನೆಲೆ ವೃದ್ಧೆಯೊಬ್ಬರನ್ನು ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಆರೋಪಿಗಳಿಗೆ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 30,000 ದಂಡ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದ ಹನುಮಂತ್ ನಾಯ್ಕ್ (48) ಶಿಕ್ಷೆಗೆ ಒಳಗಾದ ಆರೋಪಿಗಳು
ಆರೋಪಿ ಹನುಮಂತ ನಾಯ್ಕ್ ತನ್ನ ಮನೆಯ ಭಾಗವೊಂದರಲ್ಲಿ ಜ್ಯೋತಿ ಬಾಯಿ (35) ಎಂಬುವರು ಉಳಿದುಕೊಳ್ಳಲು ನೀಡಿದ್ದ. ಇತ್ತ ಆಸ್ತಿ ಹಂಚಿಕೆ ವಿಚಾರದಲ್ಲಿ ರತ್ನಾಬಾಯಿ (60) ಎಂಬುವರು ತಮಗೆ ಮೋಸ ಮಾಡಿದ್ದಾರೆ ಹಾಗೂ ಊರಿನವರ ಮುಂದೆ ನಿಂದಿಸುತ್ತಿದ್ದಾರೆ ಎಂದು ಜ್ಯೋತಿ ಬಾಯಿ ಮತ್ತು ಹನುಮಂತ್ ನಾಯ್ಕ್ ವೈಷಮ್ಯ ಹೊಂದಿದ್ದರು.
2023ರ ಮಾರ್ಚ್ 15ರ ರಾತ್ರಿ ರತ್ನಾಬಾಯಿ ಅವರು ಹನುಮಂತ ನಾಯ್ಕ್ ಮನೆಯ ಮುಂದಿನ ಕಟ್ಟೆಯ ಮೇಲೆ ಮಲಗಿದ್ದರು.
ಆಗ ಆರೋಪಿ ಹನುಮಂತ ನಾಯ್ಕ್ ಚಾಕುವಿನಿಂದ ಅವರ ಕುತ್ತಿಗೆ ಕೋಯ್ದು ಕೊಲೆ ಮಾಡಿದ್ದ. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್ಸ್ಪೆಕ್ಟರ್ ತಿಪ್ಪೆಸ್ವಾಮಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು ಜೂನ್ 24ರಂದು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.
