Bharat Scouts and Guides ಮಹಿಳೆಯರು ಸ್ವಾವಲಂಬಿಗಳಾಗುವುದರ ಜೊತೆಗೆ ಸಕಾರಾತ್ಮಕ ಮನೋಭಾವನೆಯನ್ನು ವೃದ್ಧಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಮಾಜಿ ಮಂತ್ರಿಗಳು ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ನ ರಾಜ್ಯ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯಾ ರವರು ಅಭಿಮತ ವ್ಯಕ್ತಪಡಿಸಿದರು.
ಅವರು ಶಿವಮೊಗ್ಗದ ಭಾರತ್ ಸ್ಕೌಟ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನದ ಪ್ರೇರಣ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಕುಟುಂಬ ನಿರ್ವಹಣೆಯಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾಗಿದೆ. ಹೆಣ್ಣು, ಎಷ್ಟೋ ನೋವುಗಳನ್ನು ಅನುಭವಿಸಿದರೂ ಮಮತೆ ತೋರುವ ತಾಯಿಯಾಗಿ, ಮುದ್ದಿನ ಮಗಳಾಗಿ, ತಂಗಿಯಾಗಿ, ಆದರ್ಶ ಮಡದಿಯಾಗಿ, ಪ್ರೀತಿಯ ಅಜ್ಜಿಯಾಗಿ, ತನ್ನ ಜವಾಬ್ದಾರಿಯನ್ನು ಜೀವನ ಉದ್ದಕ್ಕೂ ಯಶಸ್ವಿಯಾಗಿ ನಿರ್ವಹಿಸುವ ಪ್ರಯತ್ನದಲ್ಲಿ ತನ್ನ ಎಲ್ಲಾ ನೋವುಗಳನ್ನು ಮರೆಯುತ್ತಾಳೆ. ಇದು ಹೆಣ್ಣಿಗೆ ಪ್ರಕೃತಿ ನೀಡಿರುವ ವರ ಎಂದು ಶ್ಲಾಘಿಸಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಪ್ರಪಂಚಾದ್ಯಂತ ತನ್ನದೇ ಆದ ಮಾನವೀಯ ಸೇವೆಗಳ ಮುಖಾಂತರ ಜನಮಾನಸವನ್ನು ತಲುಪುತ್ತಿದೆ. ಈ ನಿಟ್ಟಿನಲ್ಲಿ ಸ್ಕೌಟ್ಸ್ ಅಂಡ್ ಗೈಡ್ ಚಳುವಳಿ ಪ್ರತಿಯೊಂದು ಮನೆ ಮನಗಳಿಗೆ ತಲುಪಬೇಕು. ಇದರಿಂದ ಸಂಸ್ಕಾರಯುತ ಸದೃಢವಾದ ಸಮಾಜ ನಿರ್ಮಾಣವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಮಾತನಾಡಿ, ನಮ್ಮ ಭಾರತ ಸ್ಕೌಟ್ಸ್ ಅಂಡ್ ಗೈಡ್ ಶಿವಮೊಗ್ಗ ಜಿಲ್ಲಾ ಶಾಖೆ ಎಲ್ಲಾ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ನಡೆಸುತ್ತಾ ಬಂದಿದೆ. ಇಂದು ಮಹಿಳೆಯರಿಗಾಗಿ ಹಮ್ಮಿಕೊಂಡ ಈ ಕಾರ್ಯಕ್ರಮ ತುಂಬಾ ಫಲಪ್ರದವಾಗಿದೆ. ಇದರಿಂದ ಮಹಿಳೆಯರು ಪರಿಪೂರ್ಣ ವ್ಯಕ್ತಿಗಳಾಗುತ್ತಾರೆ. ಇಂತಹ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು.
Bharat Scouts and Guides ಶಿಬಿರದಲ್ಲಿ ಕರ್ನಾಟಕ ರಾಜ್ಯ ರೇಂಜರ್ ಸಂಯೋಜಕರು ಹಾಗೂ ಶಿಬಿರದ ನಾಯಕರಾದ ಮಲ್ಲೇಶ್ವರಿ ಜುಜಾರೆ, ಗೈಡ್ ಆಯ್ತಾರಾದ ಲಕ್ಷ್ಮಿ ಕೆ ರವಿ, ಸ್ಕೌಟ್ ಆಯುಕ್ತರಾದ ಎಸ್.ಜಿ.ಆನಂದ್, ರೋವರ್ ಆಯುಕ್ತರಾದ ಕೆ ರವಿ, ಜಿಲ್ಲಾ ಖಜಾಂಚಿ ಚೌಡಮಣಿ ಈ ಪವರ್, ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ, ಕೇಂದ್ರ ಸ್ಥಾನಿಕ ಆಯುಕ್ತರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ.ವಿಜಯ್ ಕುಮಾರ್, ತರಬೇತಿಯ ಆಯುಕ್ತರಾದ ಹೆಚ್ ಶಿವಶಂಕ್ರಪ್ಪ, ಸಹ ಕಾರ್ಯದರ್ಶಿ ವೈ ಆರ್ ವಿರೇಶಪ್ಪ, ಸಹಾಯಕ ಆಯ್ತುರಾದ ಮಲ್ಲಿಕಾರ್ಜುನ್ ಕಾನೂರು, ರಾಜ್ಯ ಸಂಘಟನಾ ಆಯುಕ್ತರಾದ ಸುಮನಾಶೇಖರ್, ಕೃಷ್ಣಸ್ವಾಮಿ, ರುದ್ರಪ್ಪ ಚೀಲೂರು, ಎಎಸ್ಐ ಚಂದ್ರಶೇಖರ್, ಗಿರೀಶ್, ಅಶ್ವಿನಿ ದೊರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
