Dr. Dhananjaya Sarji ಸಂಗೀತ ನಮ್ಮ ಸಂಸ್ಕೃತಿಯ ಬಹು ವಿಶಿಷ್ಟವಾದ ಕಲೆ. ಈ ಕಲೆಗೆ ಮನುಷ್ಯನ ಆರೋಗ್ಯ ಮತ್ತು ಆಯುಸ್ಸು ಎರಡನ್ನೂ ವೃದ್ಧಿಸುವ ಶಕ್ತಿಯಿದೆ ಎಂದು ವಿಧಾನ ಪರಿಷತ್ತಿನ ಸದಸ್ಯರೂ ನುರಿತ ವೈದ್ಯರೂ ಆದ ಡಾ. ಧನಂಜಯ ಸರ್ಜಿ ಅವರು ಹೇಳಿದರು.
ಅವರು ಶಿವಮೊಗ್ಗ ಸಮೀಪ ಹೊಸಹಳ್ಳಿಯಲ್ಲಿ 27-05-2026ಂದು ಅಲ್ಲಿನ “ಸಂಕೇತಿ ಸಂಗೀತ ಸಭಾ”ದ ಬೆಳ್ಳಿಹಬ್ಬದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಚಿಂತೆ, ಅಶಾಂತಿಗಳನ್ನು ದೂರಮಾಡಿ ಸಂತೃಪ್ತಿ, ಆತ್ಮಶಾಂತಿಗಳನ್ನು ನೀಡಿ ವ್ಯಕ್ತಿಯ ಹೃದಯದ ಆರೋಗ್ಯಕ್ಕೆ ಸಂಗೀತ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ಜೀವನದಲ್ಲಿನ ಒತ್ತಡಗಳನ್ನು ದೂರಮಾಡಿ ವ್ಯಕ್ತಿಯ ಭಾವನಾತ್ಮಕ ಹೃದಯದ ಸಂತಸಕ್ಕೆ ಈ ಕಲೆ ಕಾರಣವಾಗುತ್ತದೆ, ದೀರ್ಘ ಉಸಿರಾಟದಿಂದ ಸಂಗೀತ ವ್ಯಕ್ತಿಯ ಶ್ವಾಸಕೋಶದ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಎಂದರು.
ಹೊಸಹಳ್ಳಿ-ಮತ್ತೂರು ಗ್ರಾಮಗಳ “ಸಂಕೇತಿ ಸಂಗೀತ ಸಭಾ” 2000ನೇ ಇಸವಿ ಡಿಸೆಂಬರ್ನಲ್ಲಿ ಆರಂಭಗೊಂಡು ಇದೀಗ ತನ್ನ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಇದರ ಅಂಗವಾಗಿ ಮೇ 27ರಿಂದ ಮೇ 31ರ ವರೆಗೆ 5 ದಿನಗಳ ಕಾಲ ವಿಶೇಷ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 30ರ ಸಂಜೆ 6ರಿಂದ 31ರ ಸಂಜೆ 6ರವರೆಗೆ 24 ಗಂಟೆಗಳ ನಿರಂತರ (ಅಹೋರಾತ್ರಿ) ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಎಲ್ಲ ಕಾರ್ಯಕ್ರಮಗಳು ಹೊಸಹಳ್ಳಿಯ ಗಮಕ ಭವನದಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದರು.
Dr. Dhananjaya Sarji ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕ ಹೆಚ್. ಉಮೇಶ್ ಅವರು, ಸಂಕೇತಿ ಸಂಗೀತ ಸಭಾ ಸದಾ ಚಟುವಟಿಕೆಯಿಂದ ಇದ್ದು ಸಂಗೀತ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದಿಂದ ಅನುದಾನ ಬರಲಿ, ಬಿಡಲಿ ತನ್ನ ಕೆಲಸವನ್ನು ಮಾಡುತ್ತ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಬೆಳ್ಳಿಹಬ್ಬಕ್ಕೆ ಶುಭ ಕೋರಿದರು.
ಸಭಾದ ಅಧ್ಯಕ್ಷರಾದ ವಿದ್ವಾನ್ ಹೊಸಹಳ್ಳಿ ಕೆ. ವೆಂಕಟರಾಮ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಆರಂಭದಲ್ಲಿ ಭಾರ್ಗವ ಮತ್ತು ಸಂಧಾತ ಅವರಿಂದ ವೇದಘೋಷ, ವಿದ್ವಾನ್ ಗೀತಾ ವೆಂಕಟೇಶ್ ಅವರಿಂದ ಪ್ರಾರ್ಥನೆ, ಹೆಚ್.ಕೆ. ಕೇಶವಮೂರ್ತಿ ಅವರಿಂದ ಸ್ವಾಗತ ನಡೆಯಿತು. ಸಭಾದ ಕಾರ್ಯದರ್ಶಿ ಹೆಚ್.ಎಸ್. ವೆಂಕಟೇಶ ಕಾರ್ಯಕ್ರಮವನ್ನು ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ನಂತರದಲ್ಲಿ ಮೊದಲ ದಿನದ ಸಂಗೀತ ಕಾರ್ಯಕ್ರಮ ವಿ-ವಿ-ವಿ (ವೀಣೆ-ವೇಣು-ವಯೊಲಿನ್) ನಡೆಯಿತು. ವಿದ್ವಾನ್ ಜೆ. ಯೋಗವಂದನಾ ಅವರಿಂದ ವೀಣೆ, ವಿದ್ವಾನ್ ಸ್ಮಿತಾ ಶ್ರೀಕಿರಣ್ ಅವರಿಂದ ವೇಣು ಮತ್ತು ವಿದ್ವಾನ್ ಅದಿತಿ ಕೃಷ್ಣಪ್ರಕಾಶ್ ಅವರಿಂದ ವಯೊಲಿನ್ ವಾದನವಿತ್ತು. ವಿದ್ವಾನ್ ದೀಪಿಕಾ ಶ್ರೀನಿವಾಸನ್ (ಮೃದಂಗ) ಮತ್ತು ವಿದ್ವಾನ್ ಭಾಗ್ಯಲಕ್ಷಿö್ಮÃ ಎಂ. ಕೃಷ್ಣ (ಮೋರ್ಚಿಂಗ್) ಪಕ್ಕವಾದ್ಯ ಸಹಕಾರ ನೀಡಿದರು. ಕಲಾವಿದರು ಬೆಂಗಳೂರು ಮತ್ತು ಮೈಸೂರಿನಿಂದ ಆಗಮಿಸಿದ್ದರು. 3 ಗಂಟೆಗಳ ಕಾಲ ಬಹಳ ಉತ್ತಮವಾಗಿ ಮೂಡಿಬಂದ ಸಂಗೀತ ಕಾರ್ಯಕ್ರಮ ಸಂಗೀತ ಕಲಾಭಿಮಾನಿಗಳಿಗೆ ಮುದ ನೀಡಿತು.
