ಶಿವಮೊಗ್ಗ ನಗರದಲ್ಲಿ ಫುಟ್ಪಾತ್ ಮತ್ತು ರಸ್ತೆಗಳ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಶಿವಪ್ಪನಾಯಕ ಪ್ರತಿಮೆ ಬಳಿ ಇದ್ದ ಹೂವಿನ ಮಾರುಕಟ್ಟೆಯನ್ನು ಇಂದು ಬೆಳಗ್ಗೆ ತೆರವುಗೊಳಿಸಲಾಗಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಂಚಾರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅನಧಿಕೃತ ಮಳಿಗೆಗಳ ತೆರವುಗೊಳಿಸಲಾಯಿತು. ಶಿವಪ್ಪನಾಯಕ ಪ್ರತಿಮೆ ಎದುರಿನ ರಸ್ತೆಯಲ್ಲಿ ಎನ್ಡಿವಿ ಹಾಸ್ಟೆಲ್ವರೆಗೆ ಇದ್ದ ಮಳಿಗೆಗಳನ್ನು ತೆರವು ಮಾಡಲಾಯಿತು.
ಹೂವು, ಹಣ್ಣು, ತರಕಾರಿ ಮಾರಾಟಕ್ಕೆ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡಲಾಗುತ್ತಿತ್ತು. ಇದರಿಂದಾಗಿ ಈ ಭಾಗದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗಿತ್ತು ಮತ್ತು ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿತ್ತು. ಹಾಗಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಅನಧಿಕೃತ ಮಳಿಗೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
ಇನ್ನು, ಈ ಹಿಂದೆ ಸಂಚಾರ ಠಾಣೆ ಪೊಲೀಸರು ಈ ಮಳಿಗೆಗಳು ರಸ್ತೆಯ ಹೊರಗೆ ಇರಬೇಕೆಂದು ಸೂಚಿಸಿದ್ದರು. ರಸ್ತೆಯ ಎರಡು ಬದಿಗಿದ್ದ ಬಿಳಿ ಪಟ್ಟಿಯ ಹೊರಗೆ ಮಳಿಗೆಗಳನ್ನು ಇರಿಸುವಂತೆ ಗಡುವು ನೀಡಿದ್ದರು. ಆದರೆ ದಿನ ಕಳೆದಂತೆ ಪುನಃ ಮಳಿಗೆಗಳು ರಸ್ತೆಯನ್ನೇ ಆಕ್ರಮಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ಸಂಚಾರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ. ಸಂಚಾರ ಠಾಣೆ ಇನ್ಸ್ಪೆಕ್ಟರ್ ದೇವರಾಜ್ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಯಿತು.
ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಸುತ್ತಲ ಪ್ರದೇಶದ ಹೂವಿನ ಮಾರುಕಟ್ಟೆ ತೆರವು ,ಕ್ಷಿಪ್ರ ಕಾರ್ಯಾಚರಣೆ
Date:
