S. N. Channabasappa ದೇಶದ ಹಿತದೃಷ್ಟಿಯಿಂದ ಹಾಗೂ ಮುಂಬರುವ ಪೀಳಿಗೆಯ ಸುಸ್ಥಿರ ಭವಿಷ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಜನರಲ್ಲಿ ಶಿಸ್ತು ಮತ್ತು ಮಿತವ್ಯಯದ ಬಗ್ಗೆ ಮಾಡಿರುವ ಮನವಿಯನ್ನು ಕಾಂಗ್ರೆಸ್ ನಾಯಕರು “ವೈಫಲ್ಯ” ಎಂದು ಕರೆಯುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಶಾಸಕರಾದ ಎಸ್.ಎನ್. ಚೆನ್ನಬಸಪ್ಪ ಅವರು ತಿಳಿಸಿದ್ದಾರೆ.
ಚುನಾವಣೆ ಮುಗಿದ ಮೇಲೆ ದೇಶದ ವಾಸ್ತವ ಸ್ಥಿತಿಯನ್ನು ಮರೆಮಾಚದೆ, ಜನರನ್ನು ಜವಾಬ್ದಾರಿಯುತವಾಗಿ ಮುನ್ನಡೆಸುವ ಸಾಹಸ ಕೇವಲ ಮೋದಿಯವರಿಗೆ ಮಾತ್ರ ಸಾಧ್ಯ. ಆದರೆ ಸ್ವಾರ್ಥ ರಾಜಕಾರಣದಲ್ಲಿ ಮುಳುಗಿರುವ ಕಾಂಗ್ರೆಸ್ಸಿಗರಿಗೆ ದೇಶದ ಆರ್ಥಿಕ ಸ್ವಾವಲಂಬನೆ ಎನ್ನುವುದು ವೈಫಲ್ಯದಂತೆ ಕಾಣುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಮೋದಿಯವರನ್ನು ಪ್ರಶ್ನಿಸುವ ಮೊದಲು ತಮ್ಮ ಪಕ್ಷದ ಆಡಳಿತಾವಧಿಯ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಲಿ. 1970ರ ದಶಕದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಆರ್ಥಿಕ ಸಂಕಷ್ಟ ಎದುರಾದಾಗ, ಸರ್ಕಾರಿ ನೌಕರರ ವೇತನದ ಒಂದು ಭಾಗವನ್ನು ಕಡ್ಡಾಯವಾಗಿ ಠೇವಣಿ ಇಡುವ ‘Compulsory Deposit Scheme’ ಜಾರಿಗೆ ತಂದು ಜನರ ಹಣವನ್ನೇ ಕಸಿದುಕೊಂಡಿದ್ದರು ಮತ್ತು ತೈಲ ಉಳಿತಾಯಕ್ಕಾಗಿ ಜನರ ಮೇಲೆ ಕಠಿಣ ನಿರ್ಬಂಧ ಹೇರಿದ್ದರು.
2012ರಲ್ಲಿ ದೇಶದ ಆರ್ಥಿಕತೆ ಹದಗೆಟ್ಟಾಗ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಇದೇ ರೀತಿ ದೇಶದ ಜನರಲ್ಲಿ ‘ಚಿನ್ನ ಖರೀದಿಸುವುದನ್ನು ನಿಲ್ಲಿಸಿ’ ಎಂದು ಬಹಿರಂಗವಾಗಿ ಬೇಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ‘ಹಣವೇನು ಮರದಲ್ಲಿ ಬೆಳೆಯುವುದಿಲ್ಲ’ ಎಂದು ಹೇಳುವ ಮೂಲಕ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಜನಸಾಮಾನ್ಯರ ಸಂಕಷ್ಟವನ್ನು ಹೀಗಳೆದಿದ್ದರು. ಅಂದು ಅವರು ಮಾಡಿದ ಇಂತಹ ಆರ್ಥಿಕ ಅಶಿಸ್ತಿನ ಪರಿಣಾಮವಾಗಿ ಭಾರತವು ವಿಶ್ವದ ಅತ್ಯಂತ ದುರ್ಬಲ ಆರ್ಥಿಕತೆಗಳ (Fragile Five) ಪಟ್ಟಿಗೆ ಸೇರಿತ್ತು ಎಂಬ ಸತ್ಯವನ್ನು ರಾಹುಲ್ ಗಾಂಧಿಯವರು ಮರೆತಂತಿದೆ. ಎಂದು ಹೇಳಿದ್ದಾರೆ.
ಮೋದಿಯವರು ಮೆಟ್ರೋ ಬಳಸಿ ಅಥವಾ ಇಂಧನ ಉಳಿಸಿ ಎಂದು ಕರೆ ನೀಡುತ್ತಿರುವುದು ಕೇವಲ ಪೆಟ್ರೋಲ್ ಉಳಿಸಲು ಮಾತ್ರವಲ್ಲ, ಅದು ಮುಂದಿನ ತಲೆಮಾರಿಗೆ ಮಾಲಿನ್ಯಮುಕ್ತ ಪರಿಸರವನ್ನು ನೀಡುವ ಉದ್ದೇಶವನ್ನು ಹೊಂದಿದೆ. ವಿದೇಶಿ ವಸ್ತುಗಳ ವ್ಯಾಮೋಹ ಬಿಟ್ಟು ದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಿ ಎಂದು ಹೇಳುವುದು ‘ಆತ್ಮನಿರ್ಭರ ಭಾರತ’ದ ಸಂಕಲ್ಪವೇ ಹೊರತು ಅಸಹಾಯಕತೆಯಲ್ಲ. ರೈತರಿಗೆ ಕಡಿಮೆ ರಸಗೊಬ್ಬರ ಬಳಸಿ ಎಂದು ಹೇಳುತ್ತಿರುವುದು ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಮತ್ತು ವಿಷಮುಕ್ತ ಕೃಷಿಯನ್ನು ಉತ್ತೇಜಿಸಲೆಂದೇ ಹೊರತು ಗೊಬ್ಬರದ ಕೊರತೆಯಿಂದಲ್ಲ. ಕಾಂಗ್ರೆಸ್ಸಿಗರು ಜನರ ಮನಸ್ಸಿನಲ್ಲಿ ಭಯ ಬಿತ್ತುವುದನ್ನು ಬಿಟ್ಟು, ದೇಶದ ಪ್ರಗತಿಯಲ್ಲಿ ಸಕಾರಾತ್ಮಕವಾಗಿ ಪಾಲ್ಗೊಳ್ಳುವುದನ್ನು ಕಲಿಯಲಿ. ಮೋದಿಯವರು ದೇಶವನ್ನು ಕಟ್ಟುವ ಹಾದಿಯಲ್ಲಿದ್ದಾರೆ, ಅದನ್ನು ಕೆಡವಲು ಯತ್ನಿಸುತ್ತಿರುವವರು ಯಾರು ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.
S. N. Channabasappa ಇತಿಹಾಸದುದ್ದಕ್ಕೂ ಹಗರಣಗಳಲ್ಲೇ ಮುಳುಗಿ, ದೇಶದ ಬೊಕ್ಕಸವನ್ನು ಲೂಟಿ ಮಾಡಿ, ಭಾರತವನ್ನು ವಿಶ್ವದ ಮುಂದೆ ಭಿಕ್ಷಾಪಾತ್ರೆಯೊಂದಿಗೆ ನಿಲ್ಲಿಸಿದ್ದ ಕಾಂಗ್ರೆಸ್ಸಿಗರಿಗೆ ಇಂದು ದೇಶಭಕ್ತಿ ಮತ್ತು ಶಿಸ್ತಿನ ಪಾಠ ಅರ್ಥವಾಗುತ್ತಿಲ್ಲ. ದೇಶಕ್ಕಾಗಿ ‘ಝೋಳಿಗೆ’ ಹಿಡಿದು ಹೊರಡಲು ಸಿದ್ಧವಿರುವ ಮೋದಿಯವರ ತ್ಯಾಗದ ಬಗ್ಗೆ ಮಾತನಾಡುವ ನೈತಿಕತೆ, ವಿದೇಶಿ ಮಣ್ಣಿನಲ್ಲಿ ನಿಂತು ಸ್ವದೇಶವನ್ನು ನಿಂದಿಸುವ ರಾಹುಲ್ ಗಾಂಧಿಯವರಿಗಾಗಲಿ ಅಥವಾ ಅವರ ಗುಲಾಮರಿಗಾಗಲಿ ಖಂಡಿತ ಇಲ್ಲ. ಹನ್ನೆರಡು ವರ್ಷಗಳ ಆಡಳಿತದ ನಂತರವೂ ನಮಗೆ ಮಾರ್ಗದರ್ಶನ ನೀಡುವ ಪ್ರಧಾನಿ ಬೇಕೇ ಹೊರತು, ಹನ್ನೆರಡು ನಿಮಿಷವೂ ದೇಶದ ಹಿತದೃಷ್ಟಿಯಿಂದ ಯೋಚಿಸದ ಇಂತಹ ದಿವಾಳಿ ಕಾಂಗ್ರೆಸ್ ನಾಯಕರು ಬೇಕಿಲ್ಲ.
ನಿಮ್ಮ ಈ ಕಪಟ ನಾಟಕಕ್ಕೆ ಈಗಾಗಲೇ ದೇಶಾದ್ಯಂತ ಜನತೆ ತಕ್ಕ ಪಾಠ ಕಲಿಸುತ್ತಿದ್ದಾರೆ. ನಿಮ್ಮ ಈ ಸುಳ್ಳಿನ ಸಾಮ್ರಾಜ್ಯವನ್ನು ದೇಶದ ಜನರು ಎಂದಿಗೂ ಒಪ್ಪುವುದಿಲ್ಲ ಮತ್ತು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ಗೆ ಅಸ್ತಿತ್ವವೇ ಇಲ್ಲದಂತೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
