ಮನೋಬಲ ಮತ್ತು ಬುದ್ಧಿಚಾತುರ್ಯವಿಲ್ಲದೆ ಕೇವಲ ವಿದ್ಯೆಯಿಂದಲೇ ಬದುಕಿನ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಹೇಳಿದರು.
ದಾವಣಗೆರೆ ನಗರ ಸಮೀಪದ ಶಾಸ್ತ್ರೀಹಳ್ಳಿಯ ಅಭಯಾಶ್ರಮದಲ್ಲಿ ಋಷಿ ಪ್ರಜ್ಞೆ ಹಾಗೂ ದುರ್ಗಾ ಸಪ್ತಶತಿ ಆಂದೋಲನ ವತಿಯಿಂದ ಏರ್ಪಾಡಾಗಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಭಾಷಣ ಮಾಡುತ್ತಾ ಶಾಲಾ ಪಠ್ಯದ ಜ್ಞಾನದಿಂದ ವಾರ್ಷಿಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಬಹುದು ಆದರೆ ಜೀವನ ಪರೀಕ್ಷೆಯನ್ನು ಎದುರಿಸಿ ಸಫಲವಾಗಲು ಮಾನಸಿಕ ಸ್ತೈರ್ಯ ಮತ್ತು ಬುದ್ಧಿ ಚಾತುರ್ಯಗಳೂ ಬೇಕು, ಇವೆರಡೂ ಸದುದ್ದೇಶಗಳಿಂದ ಕೂಡಿರಬೇಕು, ಶಾಲೆಗಳಲ್ಲಿ ಇದನ್ನು ಕೊಡಲು ಸಾಧ್ಯವಿಲ್ಲದಾಗ ಇಂತಹ ಶಿಬಿರಗಳು ಅತ್ಯವಶ್ಯ ಎಂದರಲ್ಲದೆ ನಮ್ಮ ಭಾರತೀಯವಾದ ಸನಾತನ ಚಿಂತನೆಗಳಲ್ಲಿ ಈ ಮೌಲ್ಯಗಳ ಪ್ರತಿಪಾದನೆಯು ತುಂಬಾ ಸಮರ್ಪಕವೂ ಸರಳವೂ ಆಗಿದೆ ಎಂಬುದನ್ನು ಸ್ವಾರಸ್ಯಕರ ನಿದರ್ಶನ ಕಥೆ ಗಳ ಮೂಲಕ ಡಾ. ಎಚ್ ಬಿ ಮಂಜುನಾಥ ವಿವರಿಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ಶ್ರೀಕಾಂತ ಭಟ್ ರವರು ಮಾತನಾಡಿ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ರಾತ್ರಿ ಬೆಳಗಾಗುವುದರೊಳಗಾಗಿ ಹೀರೋಗಳಾಗಬೇಕೆಂದು ನಿರೀಕ್ಷಿಸುತ್ತಾರೆ ಹೊರತು ಸಾತ್ವಿಕ ಪ್ರಜೆಗಳಾಗಬೇಕೆಂದು ನಿರೀಕ್ಷಿಸುವುದಿಲ್ಲ, ಸಾತ್ವಿಕತೆ ಮೈಗೂಡಿಸಿಕೊಳ್ಳಲು ಇಂತಹ ಶಿಬಿರಗಳು ಪರಿಣಾಮಕಾರಿ ಎಂದರು.
ಗುರುಗಳಾದ ನರೇಂದ್ರ ಕುಮಾರರವರ ಅಧ್ಯಕ್ಷತೆಯಲ್ಲಿ ಹಿರಿಯ ಶಿಕ್ಷಕ ಮಂಜಪ್ಪನವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ ನಿರೂಪಣೆಯನ್ನು ಶಿಬಿರ ಶಿಕ್ಷಕಿ ಮಾತಾ ಉಷಾರವರು ಮಾಡಿದರೆ ಶೈಲಾ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಮಾತಾ ಅನಂತ ಲಕ್ಷ್ಮೀ ಸ್ವಾಗತ ಕೋರಿದರು. ಅತಿಥಿಗಳ ಪರಿಚಯವನ್ನು ಮುದಗಲ್ ಶ್ರೀಕಾಂತ ಶ್ರೇಷ್ಠಿ ಮಾಡಿದರೆ ಪ್ರಾಸ್ತಾವಿಕ ನುಡಿಗಳನ್ನು ಮಾತಾ ರಶ್ಮಿ ಪ್ರಸ್ತುತಪಡಿಸಿದರು. ಗಿರೀಶ್, ಶ್ರೀಶೈಲ ಮುದಗಲ್, ಮಾತಾ ಕುಸುಮಾ, ಕೇಶವ ಶೇಟ್ ಮುಂತಾದವರು ಭಾಗವಹಿಸಿದ್ದು ವಂದನೆಗಳನ್ನು ಮಾತಾ ಅರ್ಚನಾ ಸಲ್ಲಿಸಿದರು.
