ಫೆ. 21 ಹಾಗೂ 22 ರಂದು ಬೆಳ್ಳೂರಿನಲ್ಲಿ ನಡೆಯುವ 10 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡುವ ಪ್ರತಿಷ್ಠಿತ “ಸಾಹಿತ್ಯ ಸಿರಿ ಪ್ರಶಸ್ತಿ”ಗೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಗೋಪಾಲ್ ಎಸ್ ಯಡಗೆರೆ ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ತಿಳಿಸಿದ್ದಾರೆ.
ಗೋಪಾಲ್ ಎಸ್ ಯಡಗೆರೆ ಅವರ ಪರಿಚಯ :
ನರಸಿಂಹರಾಜಪುರ ತಾಲ್ಲೂಕಿನ ಯಡಗೆರೆಯಲ್ಲಿ ಜನಿಸಿದ ಗೋಪಾಲ್, ಹುಟ್ಟೂರು ಯಡಗೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಗೋಪಾಲ್ ಎಸ್ ಯಡಗೆರೆ ಅವರು ಶಿವಮೊಗ್ಗದ ಕನ್ನಡಪ್ರಭ ಪತ್ರಿಕೆಯ ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ 3 ಪುಸ್ತಕಗಳನ್ನು ಅವರು ಬರೆದಿದ್ದು ಲೋಕಾರ್ಪಣೆಗೊಂಡಿದೆ. “ನಾನಾಗದ ನಾನು” ಎಂಬ ಕವನ ಸಂಕಲನ, “ಸೋಲನ್ನು ಸೋಲಿಸು” ಹಾಗೂ “ಮಿಸ್ಡ್ ಕಾಲ” ಎಂಬ ಪುಸ್ತಕ ಬಿಡುಗಡೆಯಾಗಿದೆ. “ಸೋಲನ್ನು ಸೋಲಿಸು” ಕೃತಿಗೆ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಗೋಪಾಲ್ ಎಸ್ ಯಡಗೆರೆ ಅವರು 1988 ರಿಂದ ಪತ್ರಿಕೋದ್ಯಮ ಆರಂಭಿಸಿದ್ದು, ಉದಯವಾಣಿ ದಿನ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ, ಕನ್ನಡ ಪ್ರಭ ಪತ್ರಿಕೆಯಲ್ಲಿ ಶಿವಮೊಗ್ಗ ಪ್ರಧಾನ ವರದಿಗಾರರಾಗಿ ಕಾರ್ಯಾರಂಭ ಮಾಡಿ, ಪದೋನ್ನತಿ ಹೊಂದಿ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉದಯವಾಣಿ, ಕನ್ನಡಪ್ರಭ ಪತ್ರಿಕೆಯ ಜೊತೆಗೆ ತರಂಗ, ತುಷಾರ ಪತ್ರಿಕೆಗಳಲ್ಲಿ ಹಲವಾರು ಲೇಖನ, ಮುಖಪುಟ ಲೇಖನ ಪ್ರಕಟಗೊಂಡಿದೆ. ಆಕಾಶವಾಣಿಯಲ್ಲಿ ಕವನ ವಾಚನ ಮಾಡಿದ್ದಾರೆ. 2021 ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ಮಾದ್ಯಮ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿತ್ತು.
