Monday, December 8, 2025
Monday, December 8, 2025

Klive Special Article ಬಣ್ಣಗಳ ಮೂಲಕ ಲೋಕ ಜೀವನ ಪ್ರಸ್ತುತಿ. ಅದ್ಭುತ ಚಿತ್ರಗಾರಿಕೆ

Date:

ಲೇ: ಆದಿತ್ಯ ಪ್ರಸಾದ್.
ಹಿರಿಯ ಛಾಯಾ ಚಿತ್ರಗ್ರಾಹಕರು.ಶಿವಮೊಗ್ಗ.

Klive Special Article ಚಿತ್ರಕಲೆ ಎಂದಾಗ ಅದು ಬರೇ ಬಣ್ಣಗಳಿಂದ ತುಂಬಿದ ಚೌಕಟ್ಟು ಎಂದಲ್ಲ. ಅದು ಒಬ್ಬ ಕಲಾವಿದನ ಕಲ್ಪನೆಯ ಹೃದಯಯದ ಭಾವನೆಗಳ ದೃಶ್ಯಗಳಾಗಿರುತ್ತದೆ. ಹಾಗೆಯೇ ಮಾನವ ಕಲ್ಪನೆಯ ಅಭಿವ್ಯಕ್ತಿಯ ಕಲಾತ್ಮಕ ಸಾಧನವೂ ಹೌದು. ಮಾನವ ಸಂಸ್ಕೃತಿಯ ಪುರಾತನ ಭಾಗವಾಗಿ ರೂಪಾಂತರಗೊಂಡು ಇಂದಿಗೂ ತನ್ನ ಇರುವಿಕೆಯನ್ನ ಉಳಿಸಿಕೊಂಡು ಬಂದ ಒಂದು ಸಾಂಪ್ರದಾಯಿಕ ಕಲೆ ಎನ್ನಬಹುದು. ಬಣ್ಣಗಳ ಮೂಲಕ ಲೋಕವನ್ನು ಹಾಗೆಯೇ ಸಮಾಜದ ಅನೇಕ ಮುಖಗಳನ್ನು ವಿವರವಾಗಿ ತಿಳಿಸಲು ಮತ್ತು ಆಂತರ್ಯದ ಭಾವನೆಗಳನ್ನ ವ್ಯಕ್ತಪಡಿಸಲು ಇರುವ ಮಹೋನ್ನತ ಕಲೆಯಾಗಿದೆ.
ಇಂದು ಚಿತ್ರಕಲೆಯು ಹಲವು ಪ್ರಕಾರಗಳನ್ನು ಹೊಂದಿದೆ. ಪೈಂಟಿಂಗ್, ಡಿಜಿಟಲ್ ಆರ್ಟ್, ಸ್ಕೆಚ್, ಕ್ಯಾನ್ವಾಸ್ ಪೇಂಟಿಂಗ್, ವಾಟರ್ ಕಲರ್, ಅಕ್ರಿಲಿಕ್, ಓಯಿಲ್ ಪೇಂಟಿಂಗ್ ಹೀಗೆ ಅನೇಕ ಶೈಲಿಗಳು ಇವೆ. ಅಷ್ಟೆ ಅಲ್ಲದೆ, ಕಾಮಿಕ್ ಬುಕ್ ಇಲೆಸ್ಟ್ರೇಷನ್, ಅನಿಮೇಶನ್, ಗೇಮ್ ಡಿಸೈನ್, ಫ್ಯಾಷನ್ ಡಿಸೈನ್, ವೃತ್ತಿಪರ ಪ್ರಚಾರಚಿತ್ರಗಳು (Advertising Illustration) ಇವೆಲ್ಲವೂ ಚಿತ್ರಕಲೆಯ ಅಸ್ತಿತ್ವವನ್ನೇ ಮುಂದುವರೆಸಿದಂತವು ಎನ್ನಬಹುದು.
ಚಿತ್ರಕಲೆ ಒಂದು ಶಾಶ್ವತ ಜಗತ್ತು. ಅದು ಕಾಲವನ್ನು ಮೀರಿ ಜೀವಿಸುತ್ತದೆ. ನಾವು ಅದನ್ನು ನೋಡಬಹುದು, ಭಾವಿಸಬಹುದು, ಅನುಭವಿಸಬಹುದು. ನಾವು ಕಲಾವಿದರ ದೃಷ್ಟಿಕೋನದಿಂದ ಲೋಕವನ್ನು ನೋಡಲು ಕಲಿತರೆ, ಈ ಜಗತ್ತೇ ಬಣ್ಣದಿಂದ ತುಂಬಿರುವ ಕ್ಯಾನ್ವಾಸ್ ಎನ್ನುವ ಭಾವನೆ ಮೂಡುತ್ತದೆ.
ಇಂತಹ ಚಿತ್ರಗಳು ನಿನ್ನೆಯ ದಿನ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಸಂಘ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ವಿಪ್ರ ಯುವ ಮಹೋತ್ಸವದ ಅಂಗವಾಗಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ನೋಡುಗನ ಮನಸೂರೆಗೊಂಡವು. ಈ ಪ್ರದರ್ಶನದಲ್ಲಿ ಶಿವಮೊಗ್ಗದವರೇ ಆದ ವಿಕ್ರಮ್ ಆರ್ಟ್ಸ್‌ನ ವಾಸು ಅವರ ಹಲವು ಚಿತ್ರಗಳು ಪ್ರದರ್ಶನಗೊಂಡಿದ್ದವು.
ಕಲಾಲೋಕದಲ್ಲಿ ತನ್ನದೇ ಶೈಲಿಯಲ್ಲಿ ಚಿತ್ರಗಳನ್ನು ಮೂಡಿಸುವ ವಾಸು ಅವರು ಉಡುಪಿಯ ವೈದಿಕ ಮನೆತನದಿಂದ ಬಂದ ಯು. ನಾರಾಯಣಮೂರ್ತಿ ಹಾಗೂ ಯು. ಶಾರದಾಂಬಾ ದಂಪತಿಗಳಿಗೆ ಜನಿಸಿದ ಮೂವರು ಮಕ್ಕಳಲ್ಲಿ 1962ರ ಏಪ್ರಿಲ್ 3ರಂದು, ಎರಡನೇ ಮಗನಾಗಿ ಜನಿಸಿದರು. ಹಳೇ ಅಂಚೆಕಛೇರಿ ರಸ್ತೆಯಲ್ಲಿದ್ದ ಇವರು ಪ್ರಾಥಮಿಕ ಶಿಕ್ಷಣವನ್ನು ಮೇರಿ ಮ್ಯಾಕ್ಯುಲೇಟ್ ಶಾಲೆಯಲ್ಲಿ ಹಾಗೂ ಬಿ.ಕಾಮ್ ಪದವಿ ಶಿಕ್ಷಣವನ್ನು ಎನ್‌ಇಎಸ್ ಸಂಸ್ಥೆಯ ಸಂಜೆ ಕಾಲೇಜಿನಲ್ಲಿ ಪಡೆದರು.
Klive Special Article ಕಲಾವಿದರಾದ ಅವರ ತಂದೆ ಯು. ನಾರಾಯಣಮೂರ್ತಿ ಅವರು 1952ರಲ್ಲೇ ವಿಕ್ರಮ್ ಆರ್ಟ್ಸ್ ಮತ್ತು ಕ್ರಾಫ್ಟ್ ಆರಂಭಿಸಿದರು. ಕಾಲಾನಂತರ 1990ರಲ್ಲಿ ವಾಸು ಅವರು ಅದನ್ನು ಮಾರಿಗದ್ದಿಗೆ ಸಮೀಪ ಸ್ಥಳಾಂತರಿಸಿ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.

ಅಂದಿನ ದಿನಮಾನಗಳಲ್ಲಿ ತಮ್ಮ ಬದುಕು ನಡೆಸಿಕೊಂಡು ಬರಲು ಆಸರೆಯಾಗಿದ್ದ ಕಲಾವಿದನಿಗೆ ವಾಣಿಜ್ಯ ಉದ್ಯಮವಾಗಿ ಬೆಳೆಯಲಾರಂಭಿಸಿದ ಚಿತ್ರಕಲೆಯನ್ನು ಸಾಂಪ್ರದಾಯಿಕ ಶೈಲಿಯಲ್ಲೂ ಕೂಡ ಉಳಿಸಿಕೊಂಡು ಬರುವ ಕಾರ್ಯ ಜತಜತೆಗೇ ನಡೆಸಿಕೊಂಡು ಬಂದಿರುವುದು ಕಲೆಯ ಮೇಲಿನ ಅವರ ಅದಮ್ಯ ಆಸಕ್ತಿ, ಶ್ರದ್ಧೆ ಹಾಗೂ ಗೌರವ ಎನ್ನಬಹುದು.
ಇವರ ಕುಂಚದಲ್ಲಿ ಮೂಡಿಬಂದ ಚಿತ್ರಗಳು ನಗರವಲ್ಲದೇ ದೇಶದ ನಾನಾ ಕಡೆಯೂ ರಾರಾಜಿಸುತ್ತಿರುವುದು ವಿಶೇಷ. ಕಂಚಿ ಕಾಮಕೋಟಿ ಪೀಠ ಹಾಗೂ ಮೇಲುಕೋಟೆಗಳಲ್ಲಿಯು ಕೂಡ ಇವರ ಕುಂಚದ ಕಲೆಯನ್ನ ಕಾಣಬಹುದು. ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಏರ್ಪಡಿಸುವ ಪ್ರದರ್ಶನ ಹಾಗೂ ಶಿವಮೊಗ್ಗ ದಸರಾಗಳಲ್ಲಿ ಇವರ ಹಲವು ಕೃತಿಗಳು ಪ್ರದರ್ಶನಗೊಂಡು ಜನಮನ ಗೆದ್ದಿದೆ.
ಮುಂದುವರಿಯುತ್ತಿರುವ ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕವಾದ ಕಲಾಶೈಲಿ ಹಿಂದೆ ಸರಿಯುತ್ತಿರುವುದನ್ನ ಮನಗಂಡು ಇಂದಿನ ಜನತೆಗೆ ಕಲಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ಯುವಕರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಆದಿತ್ಯಪ್ರಸಾದ್ ಎಂ
ಛಾಯಾಗ್ರಾಹರು,
ಹವ್ಯಾಸಿ ಲೇಖಕರು, ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddaramaiah ವಿಧಾನಸಭೆ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಸಜ್ಜು.

CM Siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಳಿಗಾಲದ ಅಧಿವೇಶನದ ಪ್ರಯುಕ್ತ ಸುವರ್ಣ...

Shimoga News ಜೀವರಕ್ಷಣಾ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು- ಸೀಮಾ ಆನಂದ್

Shimoga News ಜೀವ ರಕ್ಷಿಸುವ ಕೌಶಲ್ಯವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವುದು ಅತ್ಯಂತ...

Gurudutt Hegde ಧ್ವಜವಂತಿಗೆ ನೀಡುವ ಮೂಲಕ ನಿವೃತ್ತ ಸೈನಿಕರಿಗೆ & ಅವರ ಅವಲಂಬಿತರಿಗೆ ನೆರವಾಗೋಣ- ಗುರುದತ್ತ ಹೆಗಡೆ

Gurudutt Hegde ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸೈನಿಕರನ್ನು ಗೌರವಿಸುವ ಉದ್ದೇಶದಿಂದ...

D S Arun ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕರಾಗಿ ಶಾಸಕ ಡಿ.ಎಸ್.ಅರುಣ್ ಆಯ್ಕೆ.

D S Arun ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯ...