ಲೇ; ಎನ್.ಎನ್.ಕಬ್ಬೂರ್
ಬೆಳಗಾಂ
ಕನ್ನಡದ ಪ್ರಥಮಗಳಲ್ಲಿ ಕೆ.ಶಿವರಾಂ ಅಜರಾಮರ
KLive Special Article ಕನ್ನಡದಲ್ಲಿ ಪ್ರಥಮಗಳನ್ನು ನೆನೆಯುವಾಗ ಪ್ರಥಮ ಬಾರಿಗೆ ಕನ್ನಡದಲ್ಲೇ ಬರೆದು ಐಎಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣತೆ ಸಾಧಿಸಿದ್ದ ಕೆ.ಶಿವರಾಂ ಅವರನ್ನು ನೆನೆಯಲೇಬೇಕು. ಈ ಮಹತ್ವದ ಸಾಧಕರು ಕರ್ನಾಟಕದಲ್ಲಿ ಅಧಿಕಾರಿಗಳಾಗಿ, ಚಲನಚಿತ್ರ ಕಲಾವಿದರಾಗಿ ಮತ್ತು ಸಮಾಜಸೇವೆಯಲ್ಲೂ ಹೆಸರಾಗಿದ್ದರು. ಕಳೆದ ದಶಕದಲ್ಲಿ ರಾಜಕೀಯದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ಎಲ್ಲರಿಂದಲೂ ಪ್ರೀತಿಯಿಂದ ಶಿವರಾಮು ಎಂದು ಕರೆಸಿಕೊಂಡಿದ್ದ ಕೆ. ಶಿವರಾಂ ನಿಧನರಾಗಿದ್ದಾರೆ.
ಕೆ.ಶಿವರಾಂ 1985ರಲ್ಲಿ ಕೆಎಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಬಳಿಕ, ಕನ್ನಡದಲ್ಲಿಯೇ ಐಎಎಸ್ ಪರೀಕ್ಷೆ ಬರೆದು, ಐಎಎಸ್ ಅಧಿಕಾರಿಯೂ ಆಗಿದ್ದರು. ಆ ಮೂಲಕ, ಕನ್ನಡದಲ್ಲಿ ಐಎಎಸ್ ಬರೆದು, ಅಧಿಕಾರಿಯಾದ ಮೊದಲ ಕನ್ನಡಿಗರೆಂಬ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು. ಕೆ. ಶಿವರಾಮ್ ಅವರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು.
● ಆರಂಭಿಕ ಜೀವನ:- ಕೆ.ಶಿವರಾಮ್ 1953ರ ಏಪ್ರಿಲ್ 6 ರಂದು ರಾಮನಹಗರ ಜಿಲ್ಲೆಯ ಉರಗಳ್ಳಿಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹಳ್ಳಿಯಲ್ಲಿ ಮುಗಿಸಿದ ಇವರು, ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದರು. ವಿವಿ ಪುರಂನ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಡಿಗ್ರಿ ಮುಗಿದ ಶಿವರಾಮ್, ನಂತರ 1982ರಲ್ಲಿ ಮೈಸೂರು ಯುನಿವರ್ಸಿಟಿಯಿಂದ ಇತಿಹಾಸ ವಿಷಯದಲ್ಲಿ ಮಾಸ್ಟರ್ ಆಫ್ ಆಟ್ಸ್ ಪದವಿ ಪಡೆದರು. 1985 ರಲ್ಲಿ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದರು. ನಂತರ ಕನ್ನಡ ಭಾಷೆಯಲ್ಲಿಯೇ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
● ಸಿನಿಮಾರಂಗ:- 1993ರಲ್ಲಿ ತೆರೆಕಂಡ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಮೂಲಕ ಕೆ ಶಿವರಾಮ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ 1996 ರಲ್ಲಿ ವಸಂತ ಕಾವ್ಯ, 1997 ರಲ್ಲಿ ಸಾಂಗ್ಲಿಯಾನ ಭಾಗ–3 , 1999 ರಲ್ಲಿ ಪ್ರತಿಭಟನೆ, ಖಳನಾಯಕ, 2001 ರಲ್ಲಿ ಯಾರಿಗೆ ಬೇಡ ದುಡ್ಡು , 2003 ರಲ್ಲಿ ಗೇಮ್ ಪ್ರೀತಿಗಾಗಿ, 2006 ರಲ್ಲಿ ನಾಗಾ, 2007 ರಲ್ಲಿ ಓ ಪ್ರೇಮ ದೇವತೆ, 2017 ರಲ್ಲಿ ಹುಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು.
● ರಾಜಕೀಯ ಜೀವನ:- 2013 ರಲ್ಲಿ, ಕೆ. ಶಿವರಾಮು ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನಿವೃತ್ತರಾದ ನಂತರ ರಾಜಕೀಯಕ್ಕೆ ಸೇರಿದರು. ದಶಕಗಳ ಕಾಲ ರಾಜಕೀಯದಲ್ಲಿ ಸಾಮಾಜಿಕ ಸೇವೆಯನ್ನೂ ಸಹ ಮಾಡಿದ್ದಾರೆ.
KLive Special Article ಹೀಗೆ ಕನ್ನಡದ ಪ್ರಥಮಗಳನ್ನು ನೆನಪಿಸಿಕೊಂಡಾಗ ಕೆ.ಶಿವರಾಂ ಅಜರಾಮರಾಗಿ ಉಳಿಯುತ್ತಾರೆ. ಅದೇ ರೀತಿ ಅಧಿಕಾರಿಯಾಗಿ, ಕಲಾವಿದನಾಗಿ ಕೆ.ಶಿವರಾಂ ಅಮರರೂ ಹೌದು, ಹಾಗೂ ಕನ್ನಡದಲ್ಲಿ ಐ.ಎ.ಎಸ್ ಪರೀಕ್ಷೆ ಬರೆಯಲು ಸಾದ್ಯವಾ? ಎಂದು ಪ್ರಶ್ನೆ ಹಾಕಿಕೊಂಡಾಗ ಅದಕ್ಕೆ ಉತ್ತರವಾಗಿ ಕೆ.ಶಿವರಾಂ ನೆನಪಾಗುತ್ತಾರೆ ಅಲ್ಲವೇ ಸ್ನೇಹಿತರೇ….
ಬರಹ : ಎನ್.ಎನ್.ಕಬ್ಬೂರ, ಶಿಕ್ಷಕರು, ಬೆಳಗಾವಿ