Uttaradi Mutt ಇಡೀ ಜಗತ್ತಿಗೆ ಮಂದಹಾಸದಿಂದ ಪುಷ್ಟಿಯನ್ನು ಕೊಡುವ ಪರಮಾತ್ಮನಿಗೆ ಪುಷ್ಪಅರ್ಚನೆ ಅತ್ಯಂತ ಔಚಿತ್ಯ ಪೂರ್ಣವಾದದ್ದು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಉತ್ತರಾದಿ ಮಠದ ಸಹಯೋಗದಲ್ಲಿ ನಡೆದ ನಡೆದ ತಿರುಪತಿಯ ಶ್ರೀಭೂ ಸಹಿತ ಶ್ರೀನಿವಾಸ ದೇವರಿಗೆ ಪುಷ್ಪಅರ್ಚನೆಯ ಬಳಿಕ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.
ತಿರುಪತಿಯ ಶ್ರೀನಿವಾಸ ದೇವರ ವೈಭವವನ್ನು ನೀವೆಲ್ಲರೂ ಕಣ್ಣು ತುಂಬಿಕೊಂಡಿದ್ದೀರಿ. ಇಂತಹ ಸಂದರ್ಭವನ್ನು ಒದಗಿಸಿದ ಟಿಟಿಡಿ ಅವರಿಗೆ ಹಾಗೂ ಇದರ ಅನುಭವ ಪಡೆದ ನಿಮ್ಮೆಲ್ಲರಿಗೂ ದೇವರ ವಿಶೇಷ ಅನುಗ್ರಹ ಆಗಲಿ ಎಂದು ಆಶೀರ್ವದಿಸಿದರು.
ವಸುದೇವ-ದೇವಕಿಯ ಭಾಗ್ಯ :
ನಾವೆಲ್ಲರೂ ದೇವರ ಪ್ರತಿಮೆಗಳನ್ನು ನೋಡಿ ಆನಂದಪಟ್ಟರೆ ವಸುದೇವ ದೇವಕಿಯರು ಸಾಕ್ಷಾತ್ ಪರಮಾತ್ಮನನ್ನೇ ಕಣ್ಣುತುಂಬಿಕೊಂಡಿದ್ದಾರೆ. ಎಂತಹ ಭಾಗ್ಯ ಅವರದ್ದಾಗಿರಬೇಕು. ಎಂತಹ ಆನಂದ ಅವರಿಗೆ ಸಿಕ್ಕಿರಬೇಕು ಎಂದು ಶ್ರೀಗಳು ಹೇಳಿದರು.
ಟಿಟಿಡಿ ಪರವಾಗಿ ಪುಷ್ಪ ಅರ್ಚನೆಗೆ ಆಗಮಿಸಿದ್ದ ಪ್ರಧಾನ ಅಧ್ವರ್ಯು ಕೋರೇಶಾಚಾರ್ಯ ಮತ್ತು ದಾಸಸಾಹಿತ್ಯ ಪ್ರಾಜೆಕ್ಟ್ನ ವಿಶೇಷಾಧಿಕಾರಿ ಪಂಡಿತ ಆನಂದತೀರ್ಥಾಚಾರ್ಯ ಪಗಡಾಲ ಅವರನ್ನು ಚಾತುರ್ಮಾಸ್ಯ ಸಮಿತಿಯ ಪರವಾಗಿ ಶ್ರೀಗಳು ಅಭಿನಂದಿಸಿದರು.
Uttaradi Mutt ನಂತರ ನಡೆದ ವಿದ್ವತ್ ಸಭೆಯಲ್ಲಿ ಪಂಡಿತ ವಾಸುದೇವಾಚಾರ್ಯ ಸತ್ತಿಗಿರಿ ಪ್ರವಚನ ನೀಡಿದರು. ಬೆಳಗ್ಗೆ ಪೂಜಾ ಸಂದರ್ಭದಲ್ಲಿ ಸಂಶೋಧಕರು ಹಾಗೂ ಪಂಡಿತರಾದ ಕಾಂತೇಶಾಚಾರ್ಯ ಕದರಮಂಡಲಗಿ ಪ್ರವಚನ ನೀಡಿದರು.
ಈ ವೇಳೆ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಪಂಡಿತರಾದ ಸತ್ಯಧ್ಯಾನಾಚಾರ್ಯ ಕಟ್ಟಿ, ಶ್ರೀಕಾಂತಾಚಾರ್ಯ ಮುಕ್ಕುಂದಿ, ಕಡೂರು ಮಧುಸೂಧನಾಚಾರ್ಯ, ಆದ್ಯ ವರದಾಚಾರ್ಯ, ಉತ್ತರಾದಿ ಮಠದ ದಿವಾನರಾದ ಶಶಿಆಚಾರ್ಯ, ಶ್ರೀಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಿದಾಸಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಮೊದಲಾದವರಿದ್ದರು.
