ಕಳಸ: ಮುಂದಿನ ಭವಿಷ್ಯದಲ್ಲಿ ಉಜ್ವಲಿಸುವ ಯುವ ಪೀಳಿಗೆಯ ಮಕ್ಕಳು ಬಾಳಿನಲ್ಲಿ ಎಂದಿಗೂ ದ್ವೇಷ, ಅಸೂಯೆ ಎಂಬ ವಿಷಬೀಜವನ್ನು ಮನಸ್ಸಿನಲ್ಲಿ ಬಿತ್ತಿಕೊಳ್ಳದೇ ಭವ್ಯ ಭಾರತದ ಉತ್ತಮ ಪ್ರಜೆಗಳಾಗಬೇಕು ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರ ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿ ಹೇಳಿದರು.
ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಮಾಂಗಲ್ಯ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ ಸೇವಾದಳ ಜಿಲ್ಲಾ ಸಮಿತಿ, ಮೂಡಿಗೆರೆ ತಾಲ್ಲೂಕು ಸಮಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ತಾಲ್ಲೂಕು ಮಟ್ಟದ ಭಾರತ ಸೇವಾದಳದ ವಿದ್ಯಾರ್ಥಿ ನಾಯಕತ್ವ ತರಬೇತಿ ಶಿಬಿರ ಹಾಗೂ ಮಕ್ಕಳ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ತೋಟಗಳ ಬೆಳೆಗಳಿಗೆ ಹಾಕುವ ಗೊಬ್ಬರವು ಫಸಲು ಉತ್ತಮವಾಗಿ ದೊರಕಲೆಂದು ಆಶಿಸುತ್ತೇವೆ. ಕೆಲವೊಮ್ಮೆ ಅದೇ ಗೊಬ್ಬರದಿಂದ ಅಕ್ಕಪಕ್ಕದಲ್ಲಿ ಬೇಡದ ಸಸಿಗಳು ಬೆಳೆಯುವುದನ್ನು ಕಂಡರೆ ಕಿತ್ತೊಗೆದು ಬದಿಗೆ ಸರಿಸುವ ರೀತಿಯಲ್ಲೇ ಮಕ್ಕಳು ಬೇಡದ ವಿಷಯದ ಬಗ್ಗೆ ಹೆಚ್ಚಾಗಿ ಅವಲೋಕಿಸದೇ ಮನಸ್ಸಿನಿಂದ ಬದಿಗೆ ಸರಿಸಿ ಮುಂದೆ ಸಾಗಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಇರುವಷ್ಟು ದಿನ ನಾವುಗಳು ಇತರರೊಂದಿಗೆ ಪ್ರೀತಿ, ವಿಶ್ವಾಸ, ಗೌರವ, ಒಳ್ಳೆಯ ಸಂಬಂಧ ಮತ್ತು ಧಾರ್ಮಿಕ ವಿಚಾರಗಳನ್ನು ಶ್ರೇಷ್ಟವಾಗಿ ಉಳಿಸಿಕೊಳ್ಳುವ ಜೊತೆಗೆ ಎಲ್ಲಾ ಧರ್ಮವನ್ನು ಪ್ರೀತಿಯಿಂದ ಕಾಣಬೇಕು. ನಾವು ಅನುಸರಿಸುವ ಧರ್ಮಗಳಿಗೆ ಗೌರವಿಸಿದಂತೆ ಇತರೆ ಧರ್ಮಗಳಿಗೆ ಗೌರವಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಸೇವಾದಳ ಅಧ್ಯಕ್ಷ ಪಿ.ಕೆ.ಹಮೀದ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಬಿರ ಹಾಗೂ ಮಕ್ಕಳ ಮೇಳವನ್ನು ಆಯೋಜಿಸಲಾಗಿದ್ದು ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿ ತರಬೇತಿ ಪಡೆಯುತ್ತಿರುವುದು ಸಂತಸ ವಿಷಯ ಎಂದರು.
ಈ ಸಂದರ್ಭದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಹೆಚ್.ನರೇಂದ್ರ ಪೈ, ಕೇಂದ್ರ ಸಮಿತಿ ಸದಸ್ಯ ಐ.ಬಿ.ಶಂಕರ್, ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಘಟಕ ಕೆ.ಬಿ.ಚಂದ್ರಕಾಂತ್, ತಾಲ್ಲೂಕು ಸಂಘಟಕ ಫೈರೋಜ್ ಅಹಮದ್, ದೈಹಿಕ ಶಿಕ್ಷಣಾಧಿಕಾರಿ ಕೆ.ಬಿ.ಶ್ರೀನಿ ವಾಸ್ ಮತ್ತಿತರರು ಹಾಜರಿದ್ದರು.
