“ಚಾರ್ಟ್ಸ್” ಕಾಲದಲ್ಲಿ “ಚಾಟು” ಬಗ್ಗೆ ನಾಲ್ಕು ಮಾತು ಬರೆಯೋದು ಒಂಥರಾ ಖುಷಿ ಕೊಡ್ತಿದೆ. ಹೇಳಿ ತಿಳಿಸೋದು; ತಿಳಿ ಹೇಳೋದು ಸಾರಳ್ಯ. ಹೇಳ್ದೆ ತಿಳಿಸೋದು; ಹೇಳದ್ದು ಕೂಡ ತಿಳಿಸುವುದು ವಿಶೇಷ. ಅದನ್ನ ರೋಚಕಗೊಳಿಸಿ ಹೃದಯಕ್ಕೆ ನಾಟೋ ಹಾಗೆ ಹೇಳಿದ್ರೆ ಅದು ಚಮತ್ಕಾರ, ವಾಕ್ಚಾತುರ್ಯ.
ಅನ್ಯೋಕ್ತಿ, ಅನ್ಯಾಪದೇಶ, ವ್ಯಾಜಸ್ತುತಿ ಅನ್ನೊ ಶಬ್ದಗಳಿಂದ ಗುರುತಿಸೋದು ಬಿಡಿ ಪದ್ಯವೊಂದನ್ನು ಸರಳವಾಗಿ ಸುಭಾಷಿತ ಅಥವಾ “ಚಾಟೂಕ್ತಿ” ಅಂದ್ರೂ ತಪ್ಪಾಗಲಾರದು. ಇಂತಹ ಪದ್ಯಕ್ಕೆ (ಶ್ಲೋಕ) ವ್ಯಕ್ತಿಯನ್ನು ಚುಚ್ಚುವ, ಪರಚುವ, ಆತ್ಮಾವಲೋಕನಕ್ಕೊಳ ಪಡಿಸುವ, ಸೆಳೆಯುವ, ಸಂಸ್ಕರಿಸುವ ಶಕ್ತಿಯಿರುತ್ತದೆ. ವ್ಯಕ್ತಿಯನ್ನು ತಿದ್ದೋವಾಗ ಚಾಟೂಕ್ತಿ ನೇರವಾಗಿ ಉಪದೇಶ ಮಾಡಲ್ಲ… ಬದಲಾಗಿ ಅದೇನೊ ಹೇಳ್ತಾರಲ್ಲ.. ಸುತ್ತಿ ಹೊಡೆಯೋದು .… ಹಾಗೆ ತಿದ್ದುತ್ತೆ…
ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಮ್|
ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ದುರಾತ್ಮನಾಮ್||
(ಮಹಾತ್ಮರು ಅಥವಾ ಉತ್ತಮರು ಮನಸ್ಸಿನಲ್ಲಿ, ಮಾತಿನಲ್ಲಿ ಮತ್ತು ಕೃತಿಯಲ್ಲಿ ಒಂದೇ ರೀತಿಯಾಗಿರುತ್ತಾರೆ. ದುರಾತ್ಮರು /ನೀಚರು ಮಾತಿನಲ್ಲೊಂದು, ಮನಸ್ಸಿನಲ್ಲೊಂದು ಮತ್ತು ಕೃತಿಯಲ್ಲೊಂದು ರೀತಿ ಇರುತ್ತಾರೆ).
ಈ ಚಾಟೂಕ್ತಿಯನ್ನು ಕೇಳಿದವರೆಲ್ಲರೂ ಚಪ್ಪಾಳೆ ತಟ್ಟಿ ಪ್ರಶಂಸೆ ಸೂಚಿಸುವುದು ಸಹಜ. ಆದರೆ ಇವರೆಲ್ಲ ಉತ್ತಮರಾ? ಅಲ್ಲವೆಂಬುದು ಕೂಡ ಸತ್ಯ. ಆದರೆ, ಇವರ್ಯಾರೂ ತಾವು ಒಳಗೊಳಗೇ ಅನುಭವಿಸಿದ ಚಾಟುವಿನ ಚಾಟಿ ಏಟಿನ ರುಚಿಯನ್ನು ತಮ್ಮ ಮುಖಭಾವದಲ್ಲಿ ಹೊರಹಾಕುವುದಿಲ್ಲ,( ಏಕೆಂದರೆ…. ಹೆಗಲು ಮುಟ್ಟಿ ನೋಡಿಕೊಂಡಂತಾಗುತ್ತದೆ). ಮನದೊಳಗೇ ನಡೆಯುವ “ಮಹಾತ್ಮ- ದುರಾತ್ಮ” ಶಬ್ದಗಳ ವಿಮರ್ಶೆಯ ಮೂಲಕ ಸ್ವಮೌಲ್ಯಮಾಪನ ಕ್ರಿಯೆಯಲ್ಲಿ ಮಗ್ನರಾಗಿರುತ್ತಾರೆ. ಚಾಟುವಿನ ಶಬ್ದ ಶರೀರದಿಂದ ಹೊರ ಹೊಮ್ಮಿದ ಅರ್ಥಾನುರಣನ ವ್ಯಕ್ತಿಯನ್ನು ಜಾಗೃತವಾಗಿಡುವುದರ ಜೊತೆಗೆ ಸ್ವಸಂಸ್ಕಾರ ಪ್ರಕ್ರಿಯೆಯಲ್ಲಿ ತೊಡಗಿಸುತ್ತದೆ. ಸ್ವಸಂಸ್ಕಾರ ಪ್ರಕ್ರಿಯೆಯಲ್ಲಿ ಅವಿಚ್ಛನ್ನತೆಯನ್ನು ಕಾಪಾಡುವಲ್ಲಿ ಗೆಲ್ಲುತ್ತದೆ. ತರಂಗ ಪರಿಣಾಮದ ಫಲವಾಗಿ ವ್ಯಕ್ತಿ ( ವ್ಯಷ್ಟಿ) ಯ ಸ್ವಭಾವದಲ್ಲಿ ಕಾಣಬಹುದಾದ ಬದಲಾವಣೆಯೇ ಸಮಾಜದಲ್ಲಿ (ಸಮಷ್ಟಿ) ಮೂಡುತ್ತದೆ.
ಹೂವಿನ ಬಣ್ಣ ಪರಿಮಳದಂತೆಯೇ ಚಾಟೂಕ್ತಿಯ ರಚನೆ, ಗಾತ್ರ ಮತ್ತು ಪ್ರಾಸ ಆಕರ್ಷಣೆ ಪರಿಣಾಮಗಳನ್ನು ಹಿಗ್ಗಿಸುತ್ತದೆ. ಉಧಾಹೃತ ಪದ್ಯದಲ್ಲಿ ಅದದೇ ಶಬ್ದಗಳ ಬಳಕೆ ಮಾಡಿ ಪ್ರಾಸವನ್ನೂ ಸಮಾನ ಶಬ್ದಗಳಿಂದ ಭಿನ್ನಾರ್ಥಗಳನ್ನೂ ಹೊಮ್ಮಿಸುವ ಮೂಲಕ ಚಾಟುಗಾರ ತನ್ನ ವಾಕ್ಚಾತುರ್ಯವನ್ನು ಮೆರೆದಿದ್ದಾನೆ. ರಚನೆ ಅರ್ಥೌನ್ನತ್ಯವನ್ನು ಸಾಧಿಸಿದೆ.
ದುರ್ಜನಂ ಪ್ರಥಮಂ ವಂದೇ
ಸಜ್ಜನಂ ತದನಂತರಂ|
ಮುಖಪ್ರಕ್ಷಾಲನಾತ್ಪೂರ್ವಂ
ಗುದಪ್ರಕ್ಷಾಲನಂ ಯಥಾ||
(ದುಷ್ಟರಿಗೆ ಮೊದಲು ನಮಸ್ಕಾರ ಸಲ್ಲಿಸಿ ನಂತರ ಸಜ್ಜನರಿಗೆ ನಮಸ್ಕಾರಗಳು. ಮುಖತೊಳೆದುಕೊಳ್ಳುವ ಮೊದಲು ತಿಕ ತೊಳೆದುಕೊಂಡಂತೆ)
‘ಮುಖ’ ಏನೋ ಸರಿ… ಆದರೆ ಈ ‘ತಿಕ’ ಯಾಕೋ ತೀರ ಆಯ್ತು ಅನ್ಸುತ್ತೆ. ಸ್ವಲ್ಪ ಅಲ್ಲ.. ಅದು ಸ್ವಲ್ಪನೂ ಸರಿ ಕಾಣೊಲ್ಲ…
ಕಾಣೊಲ್ಲ ಮಾತ್ರ ಅಲ್ಲ.. ಕಾಣ್ಲೂಬಾರ್ದು… ಯಾರು ತಾನೇ ನೋಡೋಕೆ ಆಸೆಪಡ್ತಾರೆ ಹೇಳಿ.. ಬೇರೆಯವರದ್ದು ಬಿಡಿ… ಸ್ವಂತದ್ದರ ಬಗ್ಗೆನೇ ಹೇಸಿಗೆ. ಆದ್ರೂ ಅದೃಷ್ಟಕ್ಕೆ ಕೆಟ್ರೇ.. ಕಿಟಕಿ ಪಕ್ಕದ ಸೀಟು ಬೇಕು ಅಂತ ಬಸ್ಸು/ರೈಲಲ್ಲಿ ಕೂತು ಪ್ರಯಾಣ ಮಾಡಿದ್ರೆ.. ಅದ್ರಲ್ಲೂ ಬೆಳಿಗ್ಗೆ.. ಗ್ರಹಚಾರ ಕೆಡ್ತು… ಬೇಡ ಬೇಡ ಅಂದ್ರೂ ಅದೇ ಕಾಣುತ್ತೆ .ದುರ್ಜನರನ್ನೂ ಹಾಗೆ.. ನೋಡೋಕೆ ಆಸೆಪಡ್ತಾರಾ? ಆದ್ರೂ ಕಾಣ್ತಾರೆ… ಬೆಳಬೆಳಗ್ಗೆ ಯಾರಿಗೆ ಬೇಕು ಹೇಳಿ ಅವರ ಸೇವೆ… ಆದ್ರೂ ಒಂದು ನಮಸ್ಕಾರ ಹಾಕಿ ಸಾಗಿಹಾಕ್ತಿವಿ.. ಗೌರವ ತೋರಿಸಲಿಲ್ಲ ಅಂದ್ರೆ…
ಬಾಯಿಂದ ಬರೋ ಶಬ್ದ ಕೇಳೋಕಾಗಲ್ಲ… ಹೊಲಸು ನಾರತ್ತೆ ಬಾಯಿಬಿಟ್ರೆ… ಈಗ ನೀವು ಹೇಳಿ.. ಎರಡರ ಹೋಲಿಕೆ ಸರಿ ಇದೆ ಅಲ್ವಾ? ಎರಡೂ ಬಾಯಿ ಬಿಡಬಾರದು ಅಂದ್ರೆ ಮೊದಲು ನಮಸ್ಕಾರ ಸಲ್ಲಿಸಿ ಕೈ ತೊಳಕೋ ಬೇಕು… ಅದಕ್ಕೆ ಸೋಪ್ ಹಚ್ಕೊಂಡು ಕೈತೊಳಕೊಳೋದು… ನೋಡಿ, ಮುಖ ತೊಳ್ಕೊಂಡ ಮೇಲೆ ಸೋಪ್ ಹಚ್ಕೊಂಡು ಕೈ ತೊಳಕೊಳೋದು ಎಲ್ಲಾದರೂ ನೋಡಿದ್ದೀರಾ? ಮೊದಲಾದರೂ ಗೌರವ ಕೊಡಿ, ಕೊನೆಗಾದರೂ ಕೊಡಿ ಏನೂ ಗಲಾಟೆ ಇಲ್ಲ… ಕೊಳಕು ಬೆರೆತ ಶಬ್ದ ಇಲ್ಲವೇ ಇಲ್ಲ… ಅದಕ್ಕೆ ಸಜ್ಜನ ಮುಖ ಸಮಾನ… ದುರ್ಜನ –ಕ ಸಮಾನ. ಅದಕ್ಕೆ ವೇದಿಕೆ ಮೇಲೆ ಅವರನ್ನೇ ಮೊದಲು ಕರೆದು ಕುರ್ಚಿ ಕೊಡೋದು… ಕುರ್ಚಿ ಮೇಲೆ ಅವರು ಮೊದಲು ಏನು ಇಡ್ತಾರೆ ಹೇಳಿ… ಅವರು “ಅದಕ್ಕೆ” ಮೊದಲು ಗೌರವ ಕೊಡೋದು.. ಅದಕ್ಕೆ ‘ಅದು’ ಅವರ ಸಮಾನ.. ದುರ್ಜನರಿಗೆ ಹೇಗೆ ಮೊದಲು ಗೌರವವೋ ಹಾಗೇ ‘ಅದಕ್ಕೆ’ ಮೊದಲು ಜಲಾಭಿಷೇಕ. ಈಗ್ಲಾದ್ರೂ ಒಪ್ಕೋತೀರಾ ಅಥವಾ ಇನ್ನೂ ತೀರಾ ಆಯ್ತು ಅಂತೀರಾ? ‘ಅದಕ್ಕೆ’ ಮೊದಲು ಕೈ, ‘ಅದಕ್ಕೆ’ ಮೊದಲು ಜೈ.
ಲೇಖಕ: ಕಿಟ್ಟಿ, ಶಿವಮೊಗ್ಗ
ಪರಿಚಯ;
ಬಹಳ ಇತ್ತು.
ಆದರೆ
ಕಿಟ್ಟಿ ಉರುಫ್ ಕೃಷ್ಣಮೂರ್ತಿ ಅವರೇ
ಬರೆದರು….
” ಕಿಟ್ಟಿ ಅನ್ನಿ ಸಾಕು”
ನಮಗೆ ಸಮಾಧಾನವಾಗಲಿಲ್ಲ
ಸಂಸ್ಕೃತ ಎಂ.ಎ.
ಡಿವಿಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.ರಂಗಭೂಮಿಯಲ್ಲಿ ಒಂದಿಷ್ಟು ಅವಧಿ ಕ್ರಿಯಾಶೀಲರಾಗಿದ್ದರು. ಸಹೃದಯೀ ಮಾತುಗಾರ. ಚಿಕ್ಕ ಬರವಣಿಗೆಯ ಪಕ್ಕಾ ಮನುಷ್ಯ.