ಮುಂದಿನ ಯುಗ ಆಹಾರ ಸಂಸ್ಕರಣೆಯ ಯುಗವಾಗಿದ್ದು, ಆಹಾರ ಸಂಸ್ಕರಣಾ ಉದ್ಯಮದಲ್ಲಿ ಭಾರತ ಜಾಗತಿಕ ನಾಯಕನಾಗಲಿದೆ ಎಂದು ಕೃಷಿ ಹಣಕಾಸು ಮತ್ತು ತಂತ್ರಜ್ಞಾನ ಸಲಹೆಗಾರ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಟಿ.ಜೆ. ಲಕ್ಷ್ಮೀನಾರಾಯಣ ಭಟ್ ಹೇಳಿದರು.
ನಗರದ ರಾಜೇಂದ್ರನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಆಯೋಜಿಸಿದ್ದ “ಆಹಾರ ಸಂಸ್ಕರಣೆ ಮತ್ತು ಆತ್ಮನಿರ್ಭರ ಭಾರತ” ವಿಷಯದ ವಾರದ ಸಭೆಯಲ್ಲಿ ರೋಟರಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ಯಮವು ವೇಗವಾಗಿ ವಿಸ್ತರಿಸುತ್ತಿದ್ದು, ಈ ಭಾಗದಲ್ಲಿ ಉತ್ಪಾದನೆಯಾಗುವ ರಾಗಿ, ಶುಂಠಿ, ಮೆಣಸು, ಬೆಲ್ಲ, ಕಳಲೆ, ಏಲಕ್ಕಿ, ವಿವಿಧ ಹಣ್ಣುಗಳು, ಆಹಾರ ಧಾನ್ಯಗಳು ಸೇರಿದಂತೆ ಹಲವು ಕೃಷಿ ಉತ್ಪನ್ನಗಳನ್ನು ಹೆಚ್ಚಿನ ಮೌಲ್ಯದ ಉತ್ಪನ್ನಗಳಾಗಿ ಪರಿವರ್ತಿಸಲು ವಿಫುಲ ಅವಕಾಶಗಳಿವೆ. ತಿನ್ನಲು ಸಿದ್ಧ ಆಹಾರಗಳು ಸೇರಿದಂತೆ ವಿವಿಧ ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ತಯಾರಿಕೆಗೆ ಅಗತ್ಯವಾದ ಮೂಲಸೌಕರ್ಯ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಆಹಾರ ಸಂಸ್ಕರಣಾ ಉದ್ಯಮವು ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ವೇಗವಾಗಿ ಬೆಳೆಯುತ್ತಿದೆ. ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳನ್ನು ಔಪಚಾರಿಕಗೊಳಿಸುವುದು, ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು ಹಾಗೂ ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಆಹಾರ ಸಂಸ್ಕರಣೆಯಲ್ಲಿ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಸಂಸ್ಕರಣೆಗಳಿದ್ದು, ಕಚ್ಚಾ ಕೃಷಿ ಉತ್ಪನ್ನಗಳು, ಹಾಲು ಹಾಗೂ ಮಾಂಸ ಉತ್ಪನ್ನಗಳನ್ನು ಸುರಕ್ಷಿತ, ಖಾದ್ಯ ಮತ್ತು ದೀರ್ಘಕಾಲ ಸಂರಕ್ಷಿಸಬಹುದಾದ ಆಹಾರ ಉತ್ಪನ್ನಗಳಾಗಿ ಪರಿವರ್ತಿಸುವ ಪ್ರಕ್ರಿಯೆಯೇ ಆಹಾರ ಸಂಸ್ಕರಣೆ ಎಂದರು. ಮೌಲ್ಯವರ್ಧನೆ ಮತ್ತು ಶೀತಲ ಸರಪಳಿ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ ವಿವಿಧ ಕಾರ್ಯಕ್ರಮಗಳ ಮೂಲಕ ಈ ಕ್ಷೇತ್ರವನ್ನು ಬೆಂಬಲಿಸುತ್ತಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಬಿದಿರು ಕೃಷಿಯೂ ಲಾಭದಾಯಕ ಕೃಷಿ ಚಟುವಟಿಕೆಯಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಮಾತನಾಡಿ, ಶಿವಮೊಗ್ಗದ ವೈವಿಧ್ಯಮಯ ಹವಾಮಾನವು ವಿವಿಧ ಕೃಷಿ ಹಾಗೂ ಆಹಾರ ಸಂಸ್ಕರಣಾ ಉಪ-ವಲಯಗಳಿಗೆ ಅನುಕೂಲಕರವಾಗಿದೆ. ಜಿಲ್ಲೆಯು ಕೃಷಿ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶಗಳನ್ನು ಹೊಂದಿದೆ. ಭತ್ತ ಮತ್ತು ಮೆಕ್ಕೆಜೋಳದ ಜೊತೆಗೆ ಗೋಡಂಬಿ, ಶುಂಠಿ, ಮೆಣಸು, ಏಲಕ್ಕಿ ಹಾಗೂ ವೆನಿಲ್ಲಾದಂತಹ ಬೆಳೆಗಳನ್ನೂ ಇಲ್ಲಿ ಬೆಳೆಯಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಔಪಚಾರಿಕೀಕರಣ ಯೋಜನೆ ಕುರಿತು ಡಾ. ಲಕ್ಷ್ಮೀನಾರಾಯಣ ಭಟ್ ವಿವರವಾದ ಮಾಹಿತಿ ನೀಡಿದರು. ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಅಥವಾ ಮೇಲ್ದರ್ಜೆಗೇರಿಸಲು ಈ ಯೋಜನೆಯಡಿ ದೊರೆಯುವ ಸಹಾಯಧನ ಹಾಗೂ ಇತರ ಸೌಲಭ್ಯಗಳ ಕುರಿತು ವಿವರಿಸಿ, ರೋಟರಿಯನ್ಸ್ಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೇಮನೆ, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಕಾರ್ಯದರ್ಶಿ ಆರ್. ಮನೋಹರ್, ಪದಾಧಿಕಾರಿಗಳು, ಮಾಜಿ ಸಹಾಯಕ ಗವರ್ನರ್ ರೊಟೇರಿಯನ್ ಜಿ. ವಿಜಯ್ ಕುಮಾರ್, ಮಾಜಿ ಅಧ್ಯಕ್ಷರಾದ ಎಚ್.ಬಿ. ಗಣೇಶ್, ಎಸ್. ಶ್ರೀಕಾಂತ್, ಎನ್.ಎಚ್. ಕೃಷ್ಣಮೂರ್ತಿ, ಸುಮತಿ ಜಿ., ಕುಮಾರಸ್ವಾಮಿ, ಚಂದ್ರಹಾಸ ರಾಯ್ಕರ್, ನಿಕಟಪೂರ್ವ ಅಧ್ಯಕ್ಷರಾದ ಡಿ. ಕಿಶೋರ್ ಕುಮಾರ್, ಕೇಶವಪ್ಪ, ಜಿ. ಸುನಿಲ್ ಕುಮಾರ್, ಶ್ರೀನಿವಾಸ್ ಗೌಡ, ಕೆ.ಟಿ. ಗುರುಮೂರ್ತಿ, ರಾಜೇಶ್, ಸಾದ್ವಿ ಸಿ. ಕಾರಂತ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು, ಗೌರವಾನ್ವಿತ ಸದಸ್ಯರು, ರೊಟೇರಿಯನ್ಸ್ಗಳು ಹಾಗೂ ಇನ್ನರ್ ವೀಲ್ನ ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್ ಉಪಸ್ಥಿತರಿದ್ದರು.
