Sunday, August 23, 2026
Sunday, August 23, 2026

Madhu Bangarappa ಮುಂದಿನ ಎರಡುವರ್ಷಗಳಲ್ಲಿ 500 ಕೆಪಿಎಸ್ ಶಾಲೆಗಳ ನಿರ್ಮಾಣದ ಉದ್ದೇಶವಿದೆ- ಮಧು ಬಂಗಾರಪ್ಪ.

Date:

Madhu Bangarappa ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದೇ ಪ್ರಾಂಗಣದಲ್ಲಿ ಎಲ್‌.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಗುಣಾತ್ಮಕ ಶಿಕ್ಷಣ ನೀಡುವ, ಸ್ಮಾರ್ಟ್ ತರಗತಿ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 1000 ಸುಸಜ್ಜಿತ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ (Karnataka Public School) ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಹಂತಹಂತವಾಗಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಎಜಾಕ್ಸ್‌ ಇಂಜಿನಿಯರಿಂಗ್‌ ಲಿಮಿಟೆಡ್‌ ಮತ್ತು ಎಜಾಕ್ಸ್‌ ಇಂಜಿನಿಯರಿಂಗ್‌ ಚಾರಿಟಬಲ್‌ ಟ್ರಸ್ಟ್‌ ಇವರ ಸಂಯುಕ್ತಾಶ್ರಯದಲ್ಲಿ ಸಿ.ಎಸ್.ಆರ್.ನಿಧಿಯಡಿಯಲ್ಲಿ ನಗರದ ಬಿ.ಹೆಚ್.ರಸ್ತೆಯ ಸೈನ್ಸ್‌ಮೈದಾನದಲ್ಲಿ ಎಜಾಕ್ಸ್‌ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನಿರ್ಮಿಸಲು ಉದ್ದೇಶಿಸಿರುವ ನೂತನ ಶಾಲಾ ಕಟ್ಟಡದ ಶಂಕುಸ್ತಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 500ಕೆ.ಪಿ.ಎಸ್. ಶಾಲೆಗಳನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಕರ್ನಾಟಕ ಕೆ.ಪಿ.ಎಸ್. ಶಾಲೆಗಳ ರಾಜ್ಯ ಮಟ್ಟದ ಉದ್ಘಾಟನೆ ಮತ್ತು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮವನ್ನು ಶೀಘ್ರದಲ್ಲಿ ಶಿವಮೊಗ್ಗದಲ್ಲಿಯೇ ಆಯೋಜಿಸಲಾಗುವುದು ಎಂದವರು ನುಡಿದರು.
ಅಲ್ಲದೇ 1000 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಧಿಯಿಂದ ಉರ್ದು ಸೇರಿದಂತೆ ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಕಟ್ಟಡಗಳ ನಿರ್ಮಾಣದ ನಂತರ ಶಿಕ್ಷಣ ಇಲಾಖೆಯಿಂದಲೇ ಸದರಿ ಶಾಲೆಗಳನ್ನು ನಿರ್ವಹಿಸಲಾಗುವುದು. ಇದರೊಂದಿಗೆ 750ಕೋಟಿ ರಾಜ್ಯ ಸರ್ಕಾರದ ಪೂರಕ ನಿಧಿ ಮತ್ತು ಏಷಿಯನ್‌ ಡೆವಲೆಪ್‌ಮೆಂಟ್‌ ಬ್ಯಾಂಕಿನ ಆರ್ಥಿಕ ನೆರವು ಸೇರಿದಂತೆ 1750ಕೋಟಿ ವೆಚ್ಚದಲ್ಲಿ ಮುಂದಿನ 4ವರ್ಷಗಳ ಅವಧಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲಾಗುವುದು ಎಂದ ಅವರು, ಕೊಡುಗೈ ದಾನಿಗಳಿಗೆ ಈ ಕಾರ್ಯಕ್ರಮ ಸ್ಫೂರ್ತಿ ನೀಡಲಿದೆ ಎಂದರು.
ಸೇವೆಯೇ ಮುಖ್ಯ ಧ್ಯೇಯವಾಗಿಟ್ಟುಕೊಂಡಿರುವ ಶಿಕ್ಷಣ ಇಲಾಖೆ ಬೃಹತ್‌ ಇಲಾಖೆಯಾಗಿದ್ದು ರಾಜ್ಯದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕಾರ್ಯೋನ್ಮುಖವಾಗಿದೆ. ಮಕ್ಕಳ ಭವಿಷ್ಯ ರೂಪಿಸುವ ಈ ಇಲಾಖೆಯಲ್ಲಿ ಸರ್ಕಾರಿ ನೌಕರರಲ್ಲಿ ಶೇ.38ರಷ್ಟು ನೌಕರರು ಸೇವೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.
ಸಮಾಜದಿಂದ ಎಲ್ಲವನ್ನು ಪಡೆದ ನಾವು ಸಮಾಜಕ್ಕಾಗಿ ಏನನ್ನಾದರೂ ಅಲ್ಪ ಪ್ರಮಾಣದಲ್ಲಿ ನೆರವಾಗುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕು. ಸರ್ಕಾರಿ ಶಾಲೆಗಳ ವ್ಯವಸ್ಥಿತ ನಿರ್ವಹಣೆ ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ. ಇದರಲ್ಲಿ ಸಮಾಜದ ಎಲ್ಲ ಸ್ಥರದ ನಾಗರೀಕರ ಹೊಣೆಗಾರಿಕೆ ಇದೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಪ್ರತಿ ವ್ಯಕ್ತಿಯೂ ತಾವು ವ್ಯಾಸಂಗ ಮಾಡಿ, ಸಮಾಜದಲ್ಲಿ ಗುರುತಿಸುವ ಸ್ಥಾನ ಮಾನ ಹೊಂದಿದ ಪ್ರತಿಯೊಬ್ಬರೂ ತಾವು ಓದಿದ ಶಾಲೆಯ ಉನ್ನತಿಗೆ ಕೊಡುವ ನೀಡುವಂತೆ ಮನವಿ ಮಾಡಿದ ಅವರು, “ನಮ್ಮ ಶಾಲೆ, ನಮ್ಮ ಜವಾಬ್ದಾರಿ” ಎಂಬ ಯೋಜನೆಯಡಿ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಪೂಜ್ಯ ತಂದೆಯವರಾಗಿದ್ದ ದಿ.ಎಸ್.ಬಂಗಾರಪ್ಪನವರ ಹೆಸರಿನಲ್ಲಿ 10ಲಕ್ಷ ರೂ.ಗಳನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಓದಿದ ಶಾಲೆಗೆ 10ಲಕ್ಷ ರೂ.ಗಳನ್ನು ಶಾಲಾಭಿವೃದ್ಧಿಗೆ ದೇಣಿಗೆಯಾಗಿ ನೀಡಿದರು. ಅಂತೆಯೇ ರಾಜ್ಯದಾದ್ಯಂತ ಲಕ್ಷಾಂತರ ಜನರು ತಮ್ಮ ಕೊಡುಗೈ ದಾನ ನೀಡಿ ಶಾಲಾಭಿವೃದ್ಧಿಗೆ ಸಹಕರಿಸಿದ್ದಾರೆ ಎಂದರು.
ದೇವಸ್ತಾನಕ್ಕಿಂತ ಶಾಲೆ ದೊಡ್ಡದಾಗಿದ್ದಾಗಿ ಪ್ರತಿಫಲ ನಿರೀಕ್ಷಿಸಬಹುದಾಗಿದೆ ಎಂದ ಅವರು, ಪ್ರಸ್ತುತ ಸೈನ್ಸ್‌ ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಎಜಾಕ್ಸ್‌ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಕಟ್ಟಡ ನಿರ್ಮಾಣಕ್ಕೆ ಎಜಾಕ್ಸ್‌ ಸಂಸ್ಥೆಯ ಮುಖ್ಯಸ್ಥ ಕೆ.ವಿಜಯ್‌ ಮತ್ತು ಶ್ರೀಮತಿ ಕಲ್ಯಾಣಿ ವಿಜಯ್‌ ಅವರು ತಮ್ಮ ಟ್ರಸ್ಟ್‌ ವತಿಯಿಂದ 13.05ಕೋಟಿ ರೂ.ಗಳ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ಒಂದು ವರ್ಷದ ಅವಧಿಯೊಳಗಾಗಿ ನಿರ್ಮಿಸಿ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಅದಕ್ಕಾಗಿ ಸಹೃದಯಿ ಕೆ.ವಿಜಯ್‌ ದಂಪತಿಗಳಿಗೆ ಸರ್ಕಾರದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

Madhu Bangarappa • ಕೆ.ಪಿ.ಎಸ್. ಶಾಲೆಗಳಲ್ಲಿ ಮಕ್ಕಳಿಗೆ ದ್ವಿಭಾಷಾ ಕಲಿಕೆ, ಎಲ್ಲಾ ಪಠ್ಯ ವಿಷಯಗಳ ಶಿಕ್ಷಕರು, ದೈಹಿಕ ಶಿಕ್ಷಣ, ಸಂಗೀತ, ಗಣಕಯಂತ್ರ ಸೇರಿದಂತೆ ಎಲ್ಲಾ ಶಿಕ್ಷಕರ ಸೇವೆ ದೊರೆಯಲಿದೆ. ಶಿಕ್ಷಣ ಇಲಾಖೆಯಲ್ಲಿ ಇನ್ನೂ 75000 ಶಿಕ್ಷಕರ ಅಗತ್ಯವಿದ್ದು, ಈಗಾಗಲೇ 15000 ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಲಾಗಿದೆ. – ಎಸ್.ಮಧು ಬಂಗಾರಪ್ಪ, ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.

ಈ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದ ಎಜಾಕ್ಸ್‌ ಇಂಜಿನಿಯರಿಂಗ್‌ ಲಿಮಿಟೆಡ್‌ ಮತ್ತು ಎಜಾಕ್ಸ್‌ ಇಂಜಿನಿಯರಿಂಗ್‌ ಚಾರಿಟಬಲ್‌ ಟ್ರಸ್ಟ್‌ ಕೆ.ವಿಜಯ್‌ ಅವರು ಮಾತನಾಡಿ, ಎಳೆಯ ಮನಸುಗಳಲ್ಲಿನ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಸಂಸ್ಥೆಗೆ 7ವರ್ಷ ತುಂಬಿದೆ. ಮುಂದಿನ 5ವರ್ಷಗಳ ಅವಧಿಯಲ್ಲಿ 10ಜಿಲ್ಲೆಗಳಲ್ಲಿ ಸುಸಜ್ಜಿತವಾದ 10 ಶಾಲಾ ಕಟ್ಟಡಗಳನ್ನು ನಿರ್ಮಿಸಿ ಹಸ್ತಾಂತರಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ಅವುಗಳ ವ್ಯವಸ್ಥಿತ ನಿರ್ವಹಣೆ ಮತ್ತು ಉಸ್ತುವಾರಿ ಬಗ್ಗೆಯೂ ಗಮನಹರಿಸಲಿದೆ ಎಂದವರು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ತುಂಬುವ ಕೆಲಸ ಅಭಿನಂದನೀಯ. ಉದ್ದೇಶಿತ ಕಟ್ಟಡವು ತ್ವರಿತವಾಗಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲೆಂದು ಆಶಿಸಿದರು. ಕಾರ್ಯಕ್ರಮದಲ್ಲಿ ಎಜಾಕ್ಸ್‌ ಸಂಸ್ಥೆಯ ಅಧ್ಯಕ್ಷ ಕೆ.ವಿಜಯ್‌, ಶ್ರೀಮತಿ ಕಲ್ಯಾಣಿ ಕೆ.ವಿಜಯ್‌, ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅ‍ಧ್ಯಕ್ಷ ಚೇತನ್‌ ಕೆ. ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ., ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌, ಶ್ರೀಮತಿ ಬಲ್ಕೀಸ್‌ಬಾನು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ., ಪಿ.ಯು. ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಆರ್.ಮಂಜುನಾಥ, ಕೃಷ್ಣಮೂರ್ತಿ ಹೆಚ್.ಆರ್., ರಮೇಶ್‌ನಾಯ್ಕ್‌, ಜಿ.ಎಫ್.ಕುಟ್ರಿ, ದಾದಾಪೀರ್‌, ಸಿ.ಮಂಜನಾಥ್, ಆರ್.ಪ್ರಸನ್ನಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯ ಘಂಟೆಹಕ್ಲು ಬಳಿ ಬಸ್ ಮತ್ತು ಗೂಡ್ಸ್ ವಾಹನ ಢಿಕ್ಕಿ:ಚಾಲಕ ಗಾಯಾಳು

Breaking News ತೀರ್ಥಹಳ್ಳಿ - ಉಡುಪಿ ಮಾರ್ಗ ಮಧ್ಯೆಯ ಘಂಟೆಹಕ್ಲು...

B.Y. Raghavendra ಶಿವಮೊಗ್ಗ ಗ್ರಾಮಾಂತರ ರೈತರ ನೀರಿನ ಬವಣೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸಿ- ಬಿ.ವೈ.ರಾಘವೇಂದ್ರ.

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರ ನೇತೃತ್ವದ...

Breaking News ಶಿರಾಳಕೊಪ್ಪದಲ್ಲಿ ಖಾಸಗಿ ಬಟ್ಟೆ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಅಗ್ನಿ ಅನಾಹುತ. ಕೋಟ್ಯಾಂತರ ಮೌಲ್ಯದ ನಷ್ಟ.

Breaking News ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಭೀಕರ...