ಅವಧಿ ಮೀರಿದ ಬಾದಾಮಿ ಹಾಲು ಕುಡಿದ ಪರಿಣಾಮ ಗ್ರಾಹಕರೊಬ್ಬರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಾಗರ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸಾಗರದ ಬಿ.ಎಚ್. ರಸ್ತೆಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಬೇಕರಿಯೊಂದರಲ್ಲಿ ಗ್ರಾಹಕರೊಬ್ಬರು ಬಾದಾಮಿ ಹಾಲು ಖರೀದಿಸಿ ಸೇವಿಸಿದ್ದಾರೆ. ಬಾಟಲಿಯೊಳಗೆ ಸಣ್ಣ ಹುಳುಗಳು ಇರುವುದನ್ನು ಗಮನಿಸದೆ ಹಾಲು ಕುಡಿದ ಬಳಿಕ ಅವರಿಗೆ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಬೇಕರಿಯಲ್ಲಿ ಅವಧಿ ಮೀರಿದ ಜ್ಯೂಸ್ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಗ್ರಾಹಕರಿಗೆ ತೊಂದರೆಯಾದರೂ ಬೇಕರಿ ಮಾಲೀಕರು ಸೂಕ್ತವಾಗಿ ಸ್ಪಂದಿಸದೆ, ಘಟನೆ ಬಳಿಕ ಜ್ಯೂಸ್ನ್ನು ವಾಪಸ್ ಪಡೆದು ಸುಮ್ಮನಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಎಫ್ಎಸ್ಎಸ್ಎಐ (FSSAI) ಅಧಿಕಾರಿಗಳು ಬೇಕರಿಯನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನಿಯಮ ಉಲ್ಲಂಘನೆ ಕಂಡುಬಂದರೆ ಪರವಾನಗಿ ರದ್ದುಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟಕ್ಕೆ ಕಡಿವಾಣ ಹಾಕಿ, ಗ್ರಾಹಕರ ಆರೋಗ್ಯದ ಹಿತ ಕಾಪಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
