ರಾಜಕೀಯ ಬದಿಗಿಟ್ಟು ರಾಜ್ಯ ಸರ್ಕಾರ ರೈತರ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಲಿ; 10,000 ಕೋಟಿ ರೂ. ತಕ್ಷಣ ನೀಡಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬಿಜೆಪ ಪಕ್ಷದ ವತಿಯಿಂದ ನಡೆಯುತ್ತಿರುವ ಬರ ಪರಿಸ್ಥಿತಿ ಪರಿಶೀಲನೆ ಅಂಗವಾಗಿ ತುಮಕೂರು ಜಿಲ್ಲೆಯ ದುರ್ಗದಹಳ್ಳಿ, ವಡ್ಡರಹಳ್ಳಿ, ಡಿ.ನಾಗೇನಹಳ್ಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಇಂದು ಬರದ ನೈಜ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ರೈತರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಸ್ಥಳೀಯ ಅನ್ನದಾತರ ಅಳಲನ್ನು ವಿಜಯೇಂದ್ರ ಆಲಿಸಿದರು .
ಕೇವಲ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೈಕಟ್ಟಿ ಕುಳಿತುಕೊಳ್ಳದೆ, ಸಂಕಷ್ಟದಲ್ಲಿರುವ ನಮ್ಮ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ 10,000 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಬೇಕು. ರೈತರ ಅನುಕೂಲಕ್ಕಾಗಿ ಪ್ರತಿದಿನ 7 ಗಂಟೆಗಳ ಕಾಲ ನಿರಂತರ 3-ಫೇಸ್ ವಿದ್ಯುತ್ ನೀಡುವುದೂ ಸೇರಿದಂತೆ ಅನ್ನದಾತರ ನೆರವಿಗೆ ತಕ್ಷಣ ಧಾವಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ತಮ್ಮ ರಾಜಕೀಯ ಮೇಲಾಟಗಳನ್ನು ಬದಿಗಿಟ್ಟು ಅನ್ನದಾತರ ಹಿತ ಕಾಯುವುದೇ ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಬೇಕು. ಈ @INCKarnataka ಸರ್ಕಾರ ಈಗಲೂ ಸ್ಪಂದಿಸದಿದ್ದರೆ ರೈತರ ಪರವಾಗಿ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ವರಿಕೆ ನೀಡಿದರು.
ಬಿಜೆಪಿ ಪಕ್ಷದ ಶಾಸಕರುಗಳಾದ ಶ್ರೀ ಸುರೇಶ್ ಗೌಡ, ಶ್ರೀ ಜ್ಯೋತಿ ಗಣೇಶ್, ಶ್ರೀ ಧೀರಜ್ ಮುನಿರಾಜು, ತುಮಕೂರು ಜಿಲ್ಲಾಧ್ಯಕ್ಷ ಶ್ರೀ ರವಿ ಹೆಬ್ಬಕ್ಕ, ವಿಭಾಗ ಪ್ರಭಾರಿ ಶ್ರೀ ಬ್ಯಾಟರಂಗೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಚಿದಾನಂದಗೌಡ ಸೇರಿದಂತೆ ಹಲವಾರು ಪ್ರಮುಖರು, ಮುಖಂಡರು ಈ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರ ಅವರ ಜೊತೆಗಿದ್ದರು.
