ಸಜ್ಜನಿಕೆ ಎಂದರೆ ಎಲ್ಲರಿಗೂ ತಲೆಬಾಗಬೇಕೆಂಬ ಹೇಡಿತನವಲ್ಲ, ದೋಷಗಳನ್ನು ಸಕಾರಣವಾಗಿ ಖಂಡಿಸುವುದು ಸಹಾ ಸಜ್ಜನಿಕೆಯ ಲಕ್ಷಣ ಎಂದು ಹಿರಿಯ ಪತ್ರಕರ್ತ ಡಾ. ಎಚ್. ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.
ಅವರಿಂದು ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಏರ್ಪಾಡಾಗಿರುವ ಮೂರು ದಿನಗಳ ‘ಆಧ್ಯಾತ್ಮಿಕ ಪರ್ವ ಉತ್ಸವ’ವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಾ ಅಧ್ಯಾತ್ಮವೆಂದರೆ ತನ್ನ ಅಂತರಂಗವನ್ನು ತಾನು ಅರಿತುಕೊಂಡು ಅದರ ಪರಿಶುದ್ಧತೆ ಮಾಡಿಕೊಳ್ಳುವುದು, ಇದಕ್ಕೆ ಅಧಿಬೌತಿಕ, ಅಧಿದೈವಿಕ ಪ್ರಕ್ರಿಯೆಗಳು ಸೋಪಾನಗಳಿದ್ದಂತೆ, ಇದಕ್ಕಾಗಿ ಸರಳತೆ, ಸಜ್ಜನಿಕೆ ಮತ್ತು ಸಮದೃಷ್ಟಿಯನ್ನು ಮೈಗೂಡಿಸಿಕೊಳ್ಳಬೇಕು. ಸರಳತೆಯು ಜಿಪುಣತೆಯ, ಸಜ್ಜನಿಕೆಯು ಹೇಡಿತನದ, ಸಮದೃಷ್ಟಿಯು ಪ್ರಚಾರದ ರೂಪವಾಗಬಾರದು ಎಂದರು. ಶಾಲಾ ಮಕ್ಕಳಿಗೆ ಅರ್ಥವಾಗುವಂತೆ ಉದಾಹರಣೆ ನೀಡುತ್ತಾ ಕಾರು ಬೈಕುಗಳ ಬದಲಾಗಿ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವುದು ಸರಳತೆಯಾದರೆ ಸಹ ಪ್ರಯಾಣಿಕರಿಗೆ ತೊಂದರೆ ಕಿರಿಕಿರಿ ಯಾಗದಂತೆ ಪ್ರಯಾಣಿಸುವುದು ಸಜ್ಜನಿಕೆ, ಹಿರಿಯರು, ದೈಹಿಕ ತೊಂದರೆಗಳಿರುವವರು ಸಹಾ ನಮ್ಮಂತೆಯೇ ಪ್ರಯಾಣಿಕರು ಎಂದು ತಿಳಿದು ನಮ್ಮ ಸೀಟನ್ನು ಅವರಿಗೆ ಬಿಟ್ಟುಕೊಡುವುದು ಸಮದೃಷ್ಟಿ, ಸಮಭಾವ ಎಂದು ಡಾ. ಎಚ್. ಬಿ. ಮಂಜುನಾಥ ಹೇಳಿದರು.
ಪ್ರಾಸ್ತಾವಿಕ ನುಡಿಗಳನಾಡುತ್ತಾ, ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಹೆಚ್ ಜಯಣ್ಣ ರವರು ಸಮರ್ಥ ನಾಯಕತ್ವದ ಗುಣಲಕ್ಷಣಗಳನ್ನು, ಅದನ್ನು ಹೊಂದಬೇಕಾದ ವಿಧಾನಗಳನ್ನು ನಿದರ್ಶನಗಳ ಮೂಲಕ ವಿವರಿಸಿದರು. ಪ್ರಾಂಶುಪಾಲ ಮಂಜುನಾಥ್, ಐಶ್ವರ್ಯ, ಬಸವರಾಜ್, ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ್, ಸುಷ್ಮಾ, ವಿವೇಕ್, ಚಂದ್ರಶೇಖರ್, ಫಕೀರಪ್ಪ ಗೌಡ, ಜಯಪ್ಪ ಟಿ ಮುಂತಾದವರು ಉಪಸ್ಥಿತರಿದ್ದು ಸಂಸ್ಕೃತಿ, ವೈಷ್ಣವಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಅಮೃತ ಹೆಚ್ ಎಂ ನೆರವೇರಿಸಿದರು.
