ಅವಕಾಡೊ (ಬೆಣ್ಣೆ ಹಣ್ಣು) ಬೆಳೆಗೆ ರಾಜ್ಯದಲ್ಲಿ ಉತ್ತಮ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಐಸಿಎಆರ್–ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಚೆಟ್ಟಹಳ್ಳಿ ಕೇಂದ್ರದ ವತಿಯಿಂದ ಆಗಸ್ಟ್ 7ರಂದು, ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಅವಕಾಡೊ ತೋಟಗಾರಿಕೆ ಕುರಿತು ವಿಶೇಷ ತರಬೇತಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಣ್ಣೆಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮಗಳು, ನೂತನ ತಳಿಗಳು, ಸಸ್ಯೋತ್ಪಾದನಾ ಪದ್ಧತಿಗಳು, ಸಮಗ್ರ ಪೋಷಕಾಂಶ ನಿರ್ವಹಣೆ, ರೋಗ ಹಾಗೂ ಕೀಟಗಳ ನಿಯಂತ್ರಣ, ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಕೃಷಿ ಮತ್ತು ವಿಜ್ಞಾನಿಗಳೊಂದಿಗೆ ಸಂವಾದ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ರಾಜ್ಯದ ಮಾವು ಬೆಳೆಯುತ್ತಿರುವ ಪ್ರದೇಶಗಳಲ್ಲಿ ಬೆಣ್ಣೆಹಣ್ಣಿನ ಬೆಳೆಯುವ ಸಾಧ್ಯತೆ ಹಾಗೂ ಲಾಭದಾಯಕತೆಯ ಬಗ್ಗೆ ತಜ್ಞರು ರೈತರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ತರಬೇತಿಯಲ್ಲಿ ಭಾಗವಹಿಸಲು ಆಸಕ್ತ ರೈತರು ಮುಂಗಡವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ವಿನಯ್ ಅವರನ್ನು 9591195573 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.
ಸಂಘಟಕರ ಮಾಹಿತಿ ಪ್ರಕಾರ, ತರಬೇತಿಯಲ್ಲಿ ಭಾಗವಹಿಸುವ ರೈತರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದ್ದು, ಆಗಸ್ಟ್ 7ರಂದು ನೋಂದಾಯಿತ ರೈತರಿಗೆ ಬೆಣ್ಣೆಹಣ್ಣಿನ ಸಸಿಗಳನ್ನೂ ಉಚಿತವಾಗಿ ವಿತರಿಸಲಾಗುತ್ತದೆ.
