Thursday, September 10, 2026
Thursday, September 10, 2026

ಯಕ್ಷಗಾನದ ಸೊಗಡಿನಲ್ಲಿ ಸಾರ್ಥಕ ಪ್ರದರ್ಶನಗೊಂಡ” ಕಿತ್ತೂರು ರಾಣಿ ಚನ್ನಮ್ಮ” ಚರಿತ್ರೆಯ ಪ್ರಸಂಗ.

Date:

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಸಂಗೀತ ನಾಟಕ ಅಕಾಡೆಮಿಯು ‘ವಂದೇ ಮಾತರಂ’ ರಚನೆಯ 150ನೇ ವರ್ಷದ ಸ್ಮರಣಾರ್ಥ ಹಾಗೂ ಮಹಾಕವಿ ಕಾಳಿದಾಸ ಜಯಂತಿಯ ಅಂಗವಾಗಿ ಜುಲೈ 15ರಂದು ದೇಶಾದ್ಯಂತ ‘ರಾಷ್ಟ್ರೀಯ ರಂಗಮಹೋತ್ಸವ’ವನ್ನು ಆಯೋಜಿಸಿತು. ಈ ಮಹೋತ್ಸವದಲ್ಲಿ ಭಾರತದಾದ್ಯಂತ 150ಕ್ಕೂ ಹೆಚ್ಚು ವೇದಿಕೆಗಳಲ್ಲಿ, 150ಕ್ಕೂ ಅಧಿಕ ರಂಗತಂಡಗಳು, 39ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುಮಾರು ನಾಲ್ಕು ಸಾವಿರ ಕಲಾವಿದರ ಭಾಗವಹಿಸುವಿಕೆಯಿಂದ ನಾಟಕ ಪ್ರದರ್ಶನಗಳು ನಡೆಯುವ ಮೂಲಕ ಭಾರತೀಯ ರಂಗಪರಂಪರೆಯ ವೈವಿಧ್ಯವನ್ನು ಅನಾವರಣಗೊಳಿಸಲಾಯಿತು. ಈ ಪ್ರಯುಕ್ತ ಬೆಂಗಳೂರಿನ ಎನ್.ಆರ್. ಕಾಲೋನಿಯ ಸಿ. ಅಶ್ವತ್ಥ್ ಕಲಾಮಂದಿರದಲ್ಲಿ ಯಕ್ಷಕಲಾ ಅಕಾಡೆಮಿ (ರಿ.) ವತಿಯಿಂದ ‘ರಾಣಿ ಕಿತ್ತೂರು ಚೆನ್ನಮ್ಮ’ ಯಕ್ಷಗಾನ ಪ್ರಸಂಗವನ್ನು ಸಂಜೆ 6 ಗಂಟೆಗೆ ಪ್ರದರ್ಶಿಸಲಾಯಿತು. ಹಿರಿಯ ಯಕ್ಷಕವಿ ಶ್ರೀಧರ್ ಡಿ.ಎಸ್. ಅವರ ರಚನೆಯಾದ ಈ ಪ್ರಸಂಗವನ್ನು ಯುವ ನಿರ್ದೇಶಕಿ ಚಿಕ್ಕಲಾ ಕೆ. ತುಂಗ ಅವರ ಸಮರ್ಥ ನಿರ್ದೇಶನದಲ್ಲಿ ಯಶಸ್ವಿಯಾಗಿ ರಂಗಕ್ಕೆ ತರಲಾಯಿತು.

ಪ್ರಸಂಗವು ಕಿತ್ತೂರಿನ ಅರಸ ಮಲ್ಲಸರ್ಜ ದೇಸಾಯಿಯ ಕಥಾನಕದಿಂದ ಆರಂಭಗೊಳ್ಳುತ್ತದೆ. ಬೇಟೆಯ ಸಂದರ್ಭದಲ್ಲಿ ಮಲ್ಲಸರ್ಜರನ್ನು ಭೇಟಿಯಾಗುವ ಚೆನ್ನಮ್ಮ, ಅವರನ್ನು ತನ್ನ ತವರು ಕಾಕತಿಗೆ ಆಹ್ವಾನಿಸುತ್ತಾಳೆ. ತಂದೆ ಧೂಳಪ್ಪ ದೇಸಾಯಿಗೆ ಮಲ್ಲಸರ್ಜರನ್ನು ಪರಿಚಯಿಸಿ, ಭವಿಷ್ಯದಲ್ಲಿ ಅವರನ್ನೇ ವಿವಾಹವಾಗುವ ತನ್ನ ಆಶಯವನ್ನು ವ್ಯಕ್ತಪಡಿಸುತ್ತಾಳೆ. ಮಗಳ ಇಚ್ಛೆಗೆ ಸಮ್ಮತಿಸಿದ ಧೂಳಪ್ಪ ದೇಸಾಯಿ ಮಲ್ಲಸರ್ಜರೊಂದಿಗೆ ವಿವಾಹಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಮಂತ್ರಿ ಗುರುಸಿದ್ದಪ್ಪನ ಸಲಹೆಯ ಮೇರೆಗೆ ಮಲ್ಲಸರ್ಜರು ಚೆನ್ನಮ್ಮಳನ್ನು ವಿವಾಹವಾಗುತ್ತಾರೆ. ಸವತಿಯಾದರೂ ವಿಶಾಲ ಹೃದಯದ ರುದ್ರಮ್ಮ (ರುದ್ರಾಂಬೆ), ಚೆನ್ನಮ್ಮಳನ್ನು ಸಂತೋಷದಿಂದ ಅರಮನೆಗೆ ಬರಮಾಡಿಕೊಂಡು, ತನ್ನ ಪುತ್ರ ಶಿವಲಿಂಗ ರುದ್ರಸರ್ಜನ ಜವಾಬ್ದಾರಿಯನ್ನು ಅವಳಿಗೆ ವಹಿಸುತ್ತಾಳೆ. ಮುಂದೆ ಮರಾಠ ದೊರೆ ಬಾಜೀರಾಯನ ಕುತಂತ್ರದಿಂದ ಮಲ್ಲಸರ್ಜರು ಮರಣಹೊಂದುತ್ತಾರೆ. ನಂತರ ಶಿವಲಿಂಗ ರುದ್ರಸರ್ಜನಿಗೆ ಚೆನ್ನಮ್ಮ ಪಟ್ಟಾಭಿಷೇಕ ನೆರವೇರಿಸುತ್ತಾಳೆ. ಆದರೆ ನಿಗೂಢ ಕಾಯಿಲೆಗೆ ತುತ್ತಾದ ಯುವರಾಜನು ಅಕಾಲಿಕವಾಗಿ ನಿಧನ ಹೊಂದುತ್ತಾನೆ.

ಬ್ರಿಟಿಷರ ‘ದತ್ತು ಪುತ್ರನಿಗೆ ಆಡಳಿತದ ಹಕ್ಕಿಲ್ಲ’ ಎಂಬ ನೀತಿಯನ್ನು ಧಿಕ್ಕರಿಸಿ ಚೆನ್ನಮ್ಮ ದತ್ತು ಪುತ್ರನನ್ನು ಉತ್ತರಾಧಿಕಾರಿಯಾಗಿ ಘೋಷಿಸುತ್ತಾಳೆ. ಈ ವಿಷಯವನ್ನು ಸಂಸ್ಥಾನದ ದ್ರೋಹಿಗಳಾದ ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯ ಧಾರವಾಡದ ಕಲೆಕ್ಟರ್ ಥ್ಯಾಕರೆಗೆ ತಿಳಿಸುತ್ತಾರೆ. ಕಿತ್ತೂರಿನ ಮೇಲೆ ದಂಡೆತ್ತಿ ಬಂದ ಥ್ಯಾಕರೆಯನ್ನು ಚೆನ್ನಮ್ಮಳ ನಿಷ್ಠಾವಂತ ಸೇನಾನಿ ಬಾಳಪ್ಪ ಸಂಹರಿಸುತ್ತಾನೆ. ಇದರಿಂದ ಕೋಪಗೊಂಡ ಬ್ರಿಟಿಷ್ ಅಧಿಕಾರಿ ಚಾಪ್ಲಿನ್, ಹೆಚ್ಚಿನ ಸೈನ್ಯದೊಂದಿಗೆ ದಾಳಿ ನಡೆಸಿ, ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯರ ದ್ರೋಹದ ನೆರವಿನಿಂದ ಚೆನ್ನಮ್ಮಳನ್ನು ವಂಚನೆಯ ಮೂಲಕ ಸೆರೆಹಿಡಿಯುತ್ತಾನೆ.
ಇತ್ತ ಸಂಗೊಳ್ಳಿ ರಾಯಣ್ಣ, ಚೆನ್ನಮ್ಮಳ ಆಶೀರ್ವಾದ ಪಡೆದು ಯುವಕರನ್ನು ಸಂಘಟಿಸಿ, ಛತ್ರಪತಿ ಶಿವಾಜಿಯವರ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸಿ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿಸುತ್ತಾನೆ. ರಾಯಣ್ಣನ ಶೌರ್ಯದಿಂದ ಕಂಗೆಟ್ಟ ಚಾಪ್ಲಿನ್, ರಾಯಣ್ಣನ ಮಾವ ಲಕ್ಕಪ್ಪನ ಸಹಾಯದಿಂದ ಸ್ನಾನ ಮಾಡುತ್ತಿದ್ದ ವೇಳೆ ಅವರನ್ನು ಮೋಸದಿಂದ ಬಂಧಿಸಿ ಸೆರೆಮನೆಗೆ ಕಳುಹಿಸುತ್ತಾನೆ. ಈ ಸುದ್ದಿ ತಿಳಿದ ಚೆನ್ನಮ್ಮ, ಕಿತ್ತೂರಿನ ಸ್ವಾತಂತ್ರ್ಯದ ಆಶಾಕಿರಣ ಮಂಕಾಗಿರುವುದನ್ನು ಅರಿತು ತೀವ್ರ ದುಃಖದಿಂದ ಕೊನೆಯುಸಿರೆಳೆಯುತ್ತಾಳೆ. ಅಲ್ಲಿಗೆ ‘ರಾಣಿ ಕಿತ್ತೂರು ಚೆನ್ನಮ್ಮ’ ಪ್ರಸಂಗವು ಅಂತ್ಯಗೊಳ್ಳುತ್ತದೆ.

ಪ್ರಸಂಗದಲ್ಲಿ ಚೆನ್ನಮ್ಮಳ ಪಾತ್ರವನ್ನು ನಿರ್ವಹಿಸಿದ ಕುಮಾರಿ ಪೂಜಾ ಆಚಾರ್ಯ ತಮ್ಮ ಪ್ರಭಾವಶಾಲಿ ಅಭಿನಯ, ಭಾವಪೂರ್ಣ ಸಂಭಾಷಣೆ ಹಾಗೂ ಸ್ವರದ ಏರಿಳಿತಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ರಾಘವೇಂದ್ರ ಐತಾಳ್ ಮಲ್ಲಸರ್ಜನ ಪಾತ್ರಕ್ಕೆ ಸಮರ್ಪಕ ನ್ಯಾಯ ಒದಗಿಸಿದರೆ, ಅಭಿನವ ತುಂಗ ಸಂಗೊಳ್ಳಿ ರಾಯಣ್ಣನಾಗಿ ತಮ್ಮ ಚುರುಕಿನ ನೃತ್ಯ ಹಾಗೂ ರಂಗಸಾನ್ನಿಧ್ಯದಿಂದ ವಿಶೇಷ ಮೆಚ್ಚುಗೆ ಗಳಿಸಿದರು. ಪ್ರದರ್ಶನದ ಅಂತ್ಯದಲ್ಲಿ ಹದಿನಾರು ಕಲಾವಿದರು ‘ವಂದೇ ಮಾತರಂ’ ಗೀತೆಗೆ ನೀಡಿದ ಸಮೂಹಾಭಿನಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು. ರಾಷ್ಟ್ರಭಕ್ತಿ, ಇತಿಹಾಸ ಹಾಗೂ ಯಕ್ಷಗಾನದ ಸೊಗಡನ್ನು ಒಟ್ಟುಗೂಡಿಸಿದ ಈ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇಂತಹ ರಾಷ್ಟ್ರೀಯ ಮಟ್ಟದ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಗೀತ ನಾಟಕ ಅಕಾಡೆಮಿ ಹಾಗೂ ಪ್ರದರ್ಶನವನ್ನು ಸಮರ್ಥವಾಗಿ ರೂಪಿಸಿದ ಯಕ್ಷಕಲಾ ಅಕಾಡೆಮಿ (ರಿ.) ಅಭಿನಂದನಾರ್ಹವಾಗಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...