ಶಿವಮೊಗ್ಗ ನಗರದ ದ್ರೌಪದಮ್ಮ ವೃತ್ತದಲ್ಲಿರುವ ಬಿ.ವಿ.ಎಸ್ ಫ್ಯಾಮಿಲಿ ಸಲೂನ್ ವತಿಯಿಂದ ಇಂದು ಅತ್ಯಂತ ಶ್ಲಾಘನೀಯ ಸಮಾಜಮುಖಿ ಕಾರ್ಯ ನಡೆಯಿತು.
ಗೋಪಾಳದಲ್ಲಿರುವ ಶಾರದ ದೇವಿ ಅಂಧರ ವಿಕಾಸ ಶಾಲೆಯ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಕಟಿಂಗ್ ಸೇವೆಯನ್ನು ನೀಡಲಾಯಿತು.
ಸಲೂನ್ ವ್ಯವಸ್ಥಾಪಕಿ ಶ್ರೀಮತಿ ಶ್ರೀದೇವಿ ಹಾಗೂ ಅವರ ಸಹಾಯಕರು ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಅತ್ಯಂತ ಪ್ರೀತಿ, ಕಾಳಜಿ ಮತ್ತು ಶ್ರದ್ಧೆಯಿಂದ ಕಟಿಂಗ್ ಮಾಡಿದರು. ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು, ಮಾತನಾಡಿ, ಅವರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀದೇವಿ ಅವರು ಭಾವುಕರಾಗಿ,
“ಇಂದು ನನ್ನ ಬದುಕಿನ ಅತ್ಯಂತ ಸಾರ್ಥಕ ದಿನ. ಈ ಪುಟ್ಟ ಅಂಧ ಮಕ್ಕಳಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸುಕೃತ. ಅವರ ಮುಗ್ಧ ಮಾತುಗಳು, ಪರಸ್ಪರ ಮೇಲಿನ ಪ್ರೀತಿ, ಸ್ನೇಹವನ್ನು ಕಂಡಾಗ ಹೃದಯ ತುಂಬಿ ಬಂತು. ಸ್ವಾರ್ಥ ತುಂಬಿದ ಈ ಸಮಾಜದಲ್ಲಿ ಇಂತಹ ಮಕ್ಕಳೊಂದಿಗೆ ಕಳೆದ ಪ್ರತಿ ಕ್ಷಣವೂ ನನಗೆ ಆಶೀರ್ವಾದ. ಸೌಂದರ್ಯ ಎಂದರೆ ಕೇವಲ ಹೊರ ನೋಟವಲ್ಲ, ಒಳಗಿನ ಪ್ರೀತಿ ಮತ್ತು ಕಾಳಜಿಯೇ ನಿಜವಾದ ಸೌಂದರ್ಯ ಎಂದು ಈ ಮಕ್ಕಳಿಂದ ನಾನು ಕಲಿತೆ” ಎಂದರು.
ಕಟಿಂಗ್ ಮಾಡಿಸಿಕೊಂಡ ಮಕ್ಕಳು “ವಿಷ್ಣು ತರ ಕಾಣ್ತಿಯ, ಅಂಬಿ ತರ ಇದ್ದೀಯ” ಎಂದು ಪರಸ್ಪರ ತಲೆ ಸವರಿ ಸಂಭ್ರಮಿಸಿದಾಗ ಹೃದಯ ತುಂಬಿ ಬಂತು. ಅಂತರಂಗದ ಕಣ್ಣಿನಿಂದಲೇ ಬೆಳಕು ಮೂಡಿಸಿದಂತಹ ಆ ಕ್ಷಣಗಳು ಎಲ್ಲರ ಮನಸ್ಸನ್ನು ತಟ್ಟಿದವು.
ಹತ್ತನೇ ತರಗತಿ ಓದುತ್ತಿರುವ ಹೆಣ್ಣು ಮಕ್ಕಳ ಆಸೆಯಂತೆ ಮುಂದಿನ ದಿನಗಳಲ್ಲಿ ಅವರಿಗೆ ಉಚಿತ ಮೇಕಪ್ ಮತ್ತು ಸೌಂದರ್ಯ ತರಬೇತಿ ನಡೆಸಿಕೊಡುವುದಾಗಿ ಶ್ರೀದೇವಿ ಅವರು ಭರವಸೆ ನೀಡಿದರು.
ಈ ಮಹತ್ವದ ಸೇವಾ ಕಾರ್ಯಕ್ಕೆ ಶಾರದ ದೇವಿ ಅಂಧರ ವಿಕಾಸ ಶಾಲೆಯ ಮುಖ್ಯಸ್ಥರಾದ ಈಶ್ವರಭಟ್ ಮತ್ತು ಧರ್ಮದರ್ಶಿ ಅನಿತಾ ಅವರು ಬಿ.ವಿ.ಎಸ್ ಫ್ಯಾಮಿಲಿ ಸಲೂನ್ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಿದರು.
“ಶ್ರೀದೇವಿ ಅವರ ಈ ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ವ್ಯಾಪಾರದ ಜೊತೆಗೆ ಇಂತಹ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ಶ್ಲಾಘನೀಯ” ಎಂದು ಅವರು ಶ್ಲಾಘಿಸಿದರು
