ಮೂವತ್ತೆರಡು ವರ್ಷಗಳ ಹಿಂದೆ ಶಿವಮೊಗ್ಗದ ಶ್ರೀ ನಾಗಪ್ಪ ಶೆಟ್ಟಿ ಸ್ಮಾರಕ ನ್ಯಾಷನಲ್ ಕಾಲೇಜಿನಲ್ಲಿ ತಮಗೆ ಪಾಠ ಮಾಡಿದ ಗುರುಗಳಿಗೆ ಗುರುವಂದನ ವಿಶಿಷ್ಟ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿದ 1992-95 ನೇ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವೀಧರರಾದ ಹಳೆಯ ವಿದ್ಯಾರ್ಥಿಗಳು ಶಿಕ್ಷಕರ ಸಮೂಹವನ್ನು ಭಾವುಕರನ್ನಾಗಿಸಿದರಲ್ಲದೆ, ಪ್ರೇಕ್ಷಕ ವೃಂದದ ಕರತಾಡನ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.
ಅಂದಿನ ಪ್ರಾಂಶುಪಾಲ ರಾಮ್ ಕುಮಾರ್, ಅಂದಿನ ಶಿಕ್ಷಕ ವೃಂದ ಆರ್ ಕೆ ಬಾಳಿಗಾ, ಹೆಚ್ ಎಸ್ ದತ್ತಾತ್ರಿ, ಬಿ ಎನ್ ಆನಂದರಾಮ್, ವಾಣಿಶ್ರೀ, ಲೀನಾ, ಶ್ರೀಧರ ಅಡಿಗ, ಬಾಲಕೃಷ್ಣ, ಶೈಲಾ ಭಟ್ ಮತ್ತು ಎಸ್ ನಾರಾಯಣ ಭಟ್ ಅವರು ಸನ್ಮಾನ ಸ್ವೀಕರಿಸಿದಾಗ ಅವರೆಲ್ಲರ ಕಣ್ಣಾಲಿಗಳು ತುಂಬಿ ಬಂದವು.
ಇವರಲ್ಲಿ ಸೇವೆಯಲ್ಲಿ ಇರುವ ಹೆಚ್ ಎಸ್ ದತ್ತಾತ್ರಿ ಅವರೊಬ್ಬರನ್ನು ಹೊರತು ಪಡಿಸಿ ಎಲ್ಲರೂ ವಯೋನಿವೃತ್ತಿ ಹೊಂದಿ ಎಂಬತ್ತರ ಆಸುಪಾಸಿನ ಗಡಿಯಲ್ಲಿದ್ದು, ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.
ಅಂದಿನ ಬೋಧಕೇತರ ಸಿಬ್ಬಂದಿ ಜ್ಯೋತಿ, ಭಾಗ್ಯ, ವಾಸುದೇವ ಕುಲಕರ್ಣಿ, ಶೋಭಾ, ರವಿ ಸರ್ಕಾರ್, ಮಾಧವ ಮತ್ತು ವಿಜಯ್ ಕುಮಾರ್ ಅವರಿಗೂ ಎದೆ ತುಂಬಿ ಬಂದಿದ್ದು ಗಮನಿಸಬಹುದಾಗಿತ್ತು.
ಇನ್ನು ಅಂದಿನ ಹಳೆಯ ವಿದ್ಯಾರ್ಥಿಗಳಲ್ಲಿ ಕೆಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿಯೇ ಅಮೆರಿಕ, ಜಪಾನ್ ನಿಂದ ಆಗಮಿಸಿದ್ದು ವಿಶೇಷವಾಗಿತ್ತು.
ಅಂದು ಪದವಿ ತರಗತಿಯಲ್ಲಿ ಒಂದೇ ನಿಕಾಯ. ವಿದ್ಯಾರ್ಥಿಗಳ ಸಂಖ್ಯೆ ಕೇವಲ ಮೂವತ್ತು. ಇಂದು ಹಲವು ನಿಕಾಯಗಳು. ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ ಎಂಬುದು ಗಮನಾರ್ಹವಾಗಿತ್ತು.
