ತುಂಗಾ ಏತ ನೀರಾವರಿ ಯೋಜನೆಯಡಿ ಶರಾವತಿ ಮುಳುಗಡೆ ರೈತರಿರುವ ಪುರದಾಳು ಗ್ರಾಮದ ಬಾರೆಹಳ್ಳ ಡ್ಯಾಮ್ ಗೆ ನೀರು ತುಂಬಿಸುವಂತೆ ಪುರದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರದೀಪ್ ಎಸ್ ಹೆಬ್ಬೂರು ಅವರು ಒತ್ತಾಯಿಸಿದ್ದಾರೆ.
ತಾಲೂಕಿನ ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರು ಹೆಚ್ಚಾಗಿ ವಾಸಿಸುತ್ತಿದ್ದಾರೆ.ಶರಾವತಿ ಮುಳುಗಡೆ ಸಂತ್ರಸ್ಥರ ಕೃಷಿ ಚಟುವಟಿಕೆಗಾಗಿ 1970ರ ಸುಮಾರಿನಲ್ಲಿ ಬಾರೇಹಳ್ಳ ಡ್ಯಾಮ್ ಕಟ್ಟಲಾಗಿದ್ದು,ಸದರಿ ಡ್ಯಾಮ್ ಗೆ ೨೦೧೯ ರಲ್ಲಿ ತುಂಗಾ ನದಿಗೆ ಅರಕೆರೆ ಸಮೀಪ ಜಾಕ್ವಲ್ ನಿರ್ಮಿಸಿ ಏತ ನೀರಾವರಿಯ ಮೂಲಕ ನೀರನ್ನು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿತ್ತು.
ಇದರ ಪರಿಣಾಮವಾಗಿ ಸಾವಿರಾರು ರೈತರು ಈ ಯೋಜನೆಯನ್ನು ನಂಬಿ ಸುಮಾರು 3000ಕ್ಕೂ ಅಽಕ ಎಕರೆ ಭೂಪ್ರದೇಶದಲ್ಲಿ ಅಡಿಕೆ,ಭತ್ತ ಇತ್ಯಾದಿ ಬೆಳೆಗಳನ್ನು ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ.
ಈ ನಡುವೆ ತುಂಗಾ ಏತನೀರಾವರಿಯ ವಿದ್ಯುತ್ ಬಿಲ್ ಬಾಕಿ ಇರುವ ಕಾರಣ ಮೆಸ್ಕಾಂನವರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಇದರಿಂದ ಜಾಕ್ವೆಲ್ನಿಂದ ನೀರು ಎತ್ತುವುದು ಸ್ಥಗಿತಗೊಂಡು ಡ್ಯಾಮ್ಗೆ ನೀರು ತುಂಬಿಸುವ ಕಾರ್ಯ ಸ್ಥಗಿತಗೊಂಡಿದೆ.
ಈ ವರ್ಷ ಮಳೆಯ ತುಂಬಾ ಕಡಿಮೆ.ವಾಡಿಕೆಯಂತೆ ಮಳೆಯೂ ಆಗಿಲ್ಲ,ಬರಗಾಲದ ಛಾಯೆ ಆವರಿಸುತ್ತಿದೆ.
ಜೂನ್ ತಿಂಗಳಿನಿಂದ ಡಿಸೆಂಬರ್ವರೆಗೆ ಆರು ತಿಂಗಳು ಕಾಲ ನೀರು ಎತ್ತಲು ಅವಕಾಶವಿದ್ದರೂ ವಿದ್ಯುತ್ ಸಂಪರ್ಕ ಇಲ್ಲದೇ ನೀರು ಎತ್ತಲ್ಲು ಸಾಧ್ಯವಾಗಿಲ್ಲ.ರಾಜ್ಯ ಸರ್ಕಾರ ಕೂಡಲೇ ವಿದ್ಯುತ್ ಬಿಲ್ ಪಾವತಿಸಿ ನೀರು ಎತ್ತಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಬಿಲ್ ಪಾವತಿ ಮಾಡದಿದ್ದರೆ ಬಾರೇಹಳ್ಳ ಅಚ್ಚುಕಟ್ಟು ಪ್ರದೇಶದ ರೈತರು, ಜನಜಾನುವಾರುಗಳು ನೀರಿಗಾಗಿ ಆಹಾಕಾರ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಆದ್ದರಿಂದ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಅಗತ್ಯವಿರುವ ವಿದ್ಯುತ್ ಬಿಲ್ ಪಾವತಿಸಿ ನೀರು ಎತ್ತಲು ಅವಕಾಶ ಕಲ್ಪಿಸಿ ಕೊಡುವುದರ ಮೂಲಕ ಡ್ಯಾಮ್ ಗಳಿಗೆ ನೀರು ಹರಿಸಬೇಕಾಗಿ ಕೋರುತ್ತೇವೆ. ಇಲ್ಲವಾದಲ್ಲಿ ಶರಾವತಿ ಮುಳುಗಡೆ ರೈತರನ್ನು ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಸಾವಿರಾರು ರೈತರೊಂದಿಗೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
