ವಿಶೇಷ ವರದಿ: ಪ್ರಭಾಕರ ಕಾರಂತ.
ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳ ಈಚೆಗೆ ಒಂದು ದಿನದ ಜಡೆ ವಾಸ್ತವ್ಯ ಮತ್ತು ಅಲ್ಲಿ ರಂಗನಾಥ ಸ್ವಾಮಿ, ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಕುಂಭಾಭಿಷೇಕ ಕಾರ್ಯಕ್ರಮ ಹಲವು ರೀತಿಯಲ್ಲಿ ವೈಶಿಷ್ಟ್ಯಪೂರ್ಣ ಅನಿಸಿತು.ಪೂರ್ವ ನಿರ್ಧರಿತ ಕಾರ್ಯಕ್ರಮ ಅಲ್ಲದೇ ಆಲ್ಲಲ್ಲೇ ನಿಗಧಿಯಾದ ಅವರ ಕಾರ್ಯಕ್ರಮ ಅಚ್ಚರಿಗೆ ಕಾರಣವಾಯಿತು.
ಜಡೆಯಲ್ಲಿ 16 ನೇ ಶತಮಾನದಲ್ಲಿ ಕೆಳದಿಯವರು ಸ್ಥಾಪಿಸಿದ ಜಡೆ ಸಂಸ್ಥಾನ ಮಠ ಇದೆ.ಜಗದ್ಗುರು ಶ್ರೀ ಕುಮಾರ ಕೆಂಪಿನ ಸಿದ್ದ ಋಷಭೇಂದ್ರ ಶಿವಯೋಗಿಗಳು ಸ್ಥಾಪಿಸಿದ ಸಂಸ್ಥಾನ ಅದು.ಅವರು ಪರಿವ್ರಾಜಕರಾಗಿ ಲೋಕ ಸಂಚಾರ ಮಾಡಿ ಧರ್ಮ ಪ್ರಚಾರ ನಡೆಸಿದ ಶಿವಯೋಗಿ.ಕರ್ನಾಟಕದಾದ್ಯಂತ ಈ ಸಂಸ್ಥಾನದ ನೂರಾರು ಶಾಖೆಗಳು ಸ್ಥಾಪಿಸಲಾಗಿತ್ತು.
ಪ.ಗು.ಹಳಿಕಟ್ಠಿಯವರ ನಿರಂಜನ ಅಂಶ ರತ್ನಾಕರ ಗ್ರಂಥ ದಲ್ಲಿ ಈ ಮಠದ ಮಹತ್ವದ ಇತಿಹಾಸ ದಾಖಲಾಗಿದೆ.ಪ್ರಥಮ ಜಗದ್ಗುರುಗಳ ನಿರ್ವಿಕಲ್ಪ ಸಮಾಧಿಯೂ ಇಲ್ಲೇ ಇದೆ.
ಈಗ ಈ ಸಂಸ್ಥಾನ ಮುಂದುವರೆಸುತ್ತಿರುವವರು ಶ್ರೀ ಮಹಾಂತ ಶಿವಯೋಗಿ ಸ್ವಾಮಿಯವರು.ಯೋಗ ಶಿವಯೋಗ ಎಂಬ ಅವರ ಕೃತಿ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲ್ಪಟ್ಟ ಸಂಶೋಧನಾ ಕೃತಿ.ಇದು ಸ್ವಾಮೀಜಿಗೆ ಡಾಕ್ಟರೇಟ್ ದೊರಕಿಸಿ ಕೊಟ್ಟಿದೆ.ಈ ಸಂಸ್ಥಾನದ 49 ನೇ ಶಿವಯೋಗಿಗಳು ಇವರು.ಆಗಲೇ ಶಿಷ್ಯ ಸ್ವೀಕಾರ ಮಾಡಿ ಸಂಸ್ಥಾನವನ್ನು ಮುನ್ನೆಡೆಸುತ್ತಿದ್ದಾರೆ.ಒಂದು ಶಿಕ್ಷಣ ಸಂಸ್ಥೆಯನ್ನು ಮಠ ನಡೆಸುತ್ತಿದ್ದು, ಸ್ವಾಮೀಜಿ ಒಂದು ಸಂಸ್ಕೃತ ಪಾಠ ಶಾಲೆ ಆರಂಭಿಸಿ ಅಲ್ಲಿ ವೇದ, ಜ್ಯೋತಿಷ್ಯ, ಸಂಸ್ಕೃತದ ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದಾರೆ.ಭಾರತ ಉಳಿಯಬೇಕಾದರೆ ಇಲ್ಲಿನ ಧರ್ಮ, ಸಂಸ್ಕೃತಿ,ಭಾಷೆ ಉಳಿಯಬೇಕು ಎಂಬುದನ್ನು ನಂಬಿರುವ ಸ್ವಾಮೀಜಿ ಆ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ಮಯೋಗಿ.
ತಮ್ಮ ಊರಿಗೆ ಶೃಂಗೇರಿಯ ಜಗದ್ಗುರುಗಳು ಬರುವ ಸಂಗತಿ ತಿಳಿದ ಆವರು ತಮ್ಮ ಸಂಸ್ಥಾನಕ್ಕೂ ಅವರನ್ನು ಬರಮಾಡಿಕೊಳ್ಳಬೇಕು ಎಂಬ ಇಚ್ಛೆಪಟ್ಟರು.ಆದರೆ ಶೃಂಗೇರಿಯ ಜಗದ್ಗುರುಗಳು ವಿಶ್ವ ವ್ಯಾಪಿ ಪ್ರಭಾವ ಇರುವವರು.ನಿಗಧಿತ ಕಾರ್ಯಕ್ರಮ ಅಲ್ಲದಿದ್ದರೆ ಅವರು ಬೇರೆ ಕಾರ್ಯಕ್ರಮಕ್ಕೆ ಒಪ್ಪುವುದು ಕಷ್ಟ.ಅದರಲ್ಲೂ ಹಲವು ಕಟ್ಟುಪಾಡು ಇಟ್ಟುಕೊಂಡ ಕರ್ಮಠ ಮಠವದು.ಕರೆದರೆ ಒಪ್ಪದಿದ್ದರೆ ಎಂಬ ಸಂಶಯ ಅನೇಕ ಕಡೆಯಿಂದ ವ್ಯಕ್ತವಾಗಿತ್ತು.ಹೇಗೂ ಇರಲಿ ಭೇಟಿ ಯಾಗಿ ಅವರಿಗೆ ಗೌರವ ಸಮರ್ಪಿಸಿ ಆಹ್ವಾನ ನೀಡುವುದು ಎಂದು ಶಿವಯೋಗಿಗಳು ದೃಢ ನಿಶ್ಚಯ ಮಾಡಿದ್ದರು.ಅದಕ್ಕೆ ಕಾರಣವೂ ಇದ್ದಿತ್ತು.ಜಗದ್ಗುರುಗಳ ಧರ್ಮ ವಿಜಯ ಯಾತ್ರೆ ಕುರಿತ ಸುದ್ದಿಗಳನ್ನು ಮಹಾಂತ ಶಿವಯೋಗಿಗಳು ಗಮನಿಸುತ್ತಾ ಬಂದವರು.ಈಚೆಗೆ ಜಗದ್ಗುರುಗಳ ನೇಪಾಳ ಯಾತ್ರೆ ಮತ್ತಲ್ಲಿ ಉಂಟಾದ ಸಂಚಲನ ಅವರ ಅಭಿಮಾನ ಹೆಚ್ಚಿಸಿತ್ತು.ಭರತವರ್ಷದ ಧರ್ಮ ಸಂರಕ್ಷಣೆಯಲ್ಲಿ ಶೃಂಗೇರಿಯ ತರುಣ ಯತಿವರ್ಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದವರ ಅಭಿಪ್ರಾಯ ಆಗಿತ್ತು.ಹೀಗೆಂದೇ ಧೈರ್ಯ ಮಾಡಿ ತಮ್ಮೂರಿಗೆ ಬಂದ ಶೃಂಗೇರಿಯ ಜಗದ್ಗುರುಗಳನ್ನು ಭೇಟಿಯಾಗಿ ತಮ್ಮ ಮಠಕ್ಕೆ ಬರುವಂತೆ ಆಹ್ವಾನ ನೀಡಿದರು.”ಅಚ್ಚರಿ ಎಂದರೆ ಒಂದೇ ಮಾತಿಗೆ ಸ್ವಾಮಿಗಳು ಒಪ್ಪಿಕೊಂಡರು.ಇದು ಅವರ ಕುರಿತು ನಮ್ಮ ಗೌರವ ಹೆಚ್ಚಿಸಿತು ” ಎಂದು ಸ್ವಾಮೀಜಿ ಸಂತೋಷದಿಂದ ಹೇಳುತ್ತಾರೆ.”ಜಡೆಯಿಂದ ನಿರ್ಗಮನದ ಮುನ್ನ ಮಾತು ಕೊಟ್ಟಂತೆ ಸ್ವಾಮೀಜಿ ನಮ್ಮ ಮಠಕ್ಕೆ ದಯಮಾಡಿಸಿದರು.ನಮ್ಮ ಮಠದ ಎಲ್ಲಾ ಕಡೆ ಪಾದಬೆಳೆಸಿ ಪ್ರತಿಯೊಂದು ವಿವರವನ್ನೂ ಆಸಕ್ತಿಯಿಂದ ಪಡೆದರು.ಧರ್ಮಕ್ಕೆ ಸಂಭಂದಿಸಿದ ವಿಷಯದಲ್ಲಿ ನಾವಿಬ್ಬರೂ ಙರ್ಚಿಸೀದೆವು.ಉತ್ತಮ ವಾತಾವರಣ ನಿರ್ಮಾಣ ಆಯಿತು.ನಮ್ಮ ಎರಡು ಸಮುದಾಯಗಳ ನಡುವೆ ಭಾಂದವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲು.ನಮ್ಮ ಮಠದ ಭಕ್ತರ ಮನಗೆದ್ದರು ಸ್ವಾಮೀಜಿ.ಧರ್ಮ ಪ್ರಚಾರಕ್ಕೆ ಸಮಾಜಕ್ಕೆ ಇದಕ್ಕಿಂತ ಉತ್ತಮ ಸಂದೇಶ ಏನಿದೆ.ನಾವು ಅವರನ್ನು ಹೃತ್ಪೂರ್ವಕವಾಗಿ ಗೌರವಿಸಿದೆವು.ನಮ್ಮ ಮನಸ್ಸು ತುಂಬಿದ ಸಂದರ್ಭ ಅದು” ಎಂದು ಶಿವಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ .
ಜಡೆ ಸಂಸ್ಥಾನಕ್ಕೆ ಭೇಟಿ ನೀಡುವ ಮುನ್ನ ಜಗದ್ಗುರುಗಳು ಶ್ರೀ ಮುಕ್ತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಇತ್ತರು.ಮೂಲ ರಂಗನಾಥಸ್ವಾಮಿ ದರ್ಶನ ಮಾಡಿದರು.
ಈಚೆಗೆ ಅರಳಸುರಳಿ ಸಮೀಪದ ಒಂದು ದೇವಸ್ಥಾನ ಕಾರ್ಯಕ್ರಮಕ್ಕೆ ಶೃಂಗೇರಿಯ ಜಗದ್ಗುರುಗಳು ಹೋಗಿದ್ದರು.ಹೆಚ್ಚಾಗಿ ಬಡ ಕೆಳವರ್ಗದ ಜನರಿರುವ ಪ್ರದೇಶ ಅದು.ಆ ಕಾರ್ಯಕ್ರಮಕ್ಕಾಗಿ ಹತ್ತಾರು ತಿಂಗಳು ಆ ದೇವಸ್ಥಾನದವರು ಕಾಯಬೇಕಾಯಿತು.ಆಗ ಕೆಲವರು ಶೃಂಗೇರಿಯ ಜಗದ್ಗುರುಗಳನ್ನು ಕರೆಸಬೇಕಾದರೆ ಮೊದಲೇ ಲಕ್ಷಗಟ್ಟಲೇ ಹಣ ಕಟ್ಟಿ ಕರೆಯಬೇಕು.ಇಂತಹ ಕಡೆಗಳಿಗೆಲ್ಲಾ ಅವರೆಲ್ಲಿ ಬರುತ್ತಾರೆ ಎಂಬ ಮಾತನಾಡಿದ್ದರಂತೆ.”ಈ ಮಾತುಗಳು ನಮ್ಮನ್ನೂ ತಲ್ಪಿದ್ದವು.ನಮ್ಮನ್ನು ಕರೆಯಲು ಹಣ ಕಟ್ಟಬೇಕಿಲ್ಲ.ಅಥವಾ ನಾವು ಬರಬೇಕಾದರೆ ಇಂತಿಷ್ಟು ಹಣ ಕೊಟ್ಟರೆ ಬರುತ್ತೇವೆ ಎಂದು ಯಾವಾಗಲೂ ಹೇಳುವುದಿಲ್ಲ.ನಾವು ನೋಡುವುದು ನಿಮ್ಮ ಶ್ರದ್ಧೆಯನ್ನು.ಇಂದು ನೀವು ಪರಿಶ್ರಮದಿಂದ ನಮ್ಮ ತಾತ್ಕಾಲಿಕ ವಸತಿಗಾಗಿ ಒಂದು ಪರ್ಣಕುಟಿ ನಿರ್ಮಿಸಿದ್ದೀರಿ.ನಮಗಿದೇ ಆನಂದ ತಂದಿದೆ”ಎಂದು ಜಗದ್ಗುರುಗಳು ಹೇಳಿದ್ದರು.ಶೃಂಗೇರಿಯ ಮಠದ ನೆರವಿನಿಂದ ನೂರಾರು ದೇವಾಲಯಗಳು ಪುನರ್ನಿರ್ಮಾಣ ಆಗುತ್ತದೆ.ಹೆಚ್ಚಾಗಿ ಆ ದೇವಸ್ಥಾನಗಳ ಕುಂಭಾಭಿಷೇಕಕ್ಕೆ ಗುರುಗಳು ತೆರಳುತ್ತಾರೆ.ಅವರ ಧರ್ಮ ವಿಜಯ ಯಾತ್ರೆ ಮಠಕ್ಕೆ ಸಂಪನ್ಮೂಲ ಸಂಗ್ರಹಕ್ಕೆ ಅಲ್ಲ,ಮಠದಲ್ಲಿ ಸಂಗ್ರಹವಾಗುವ ಹಣವನ್ನು ಧರ್ಮ ಕಾರ್ಯಕ್ಕೆ ವಿನಿಯೋಗಿಸಲು.
ಜಡೆಗೆ ಆಗಮಿಸುವಾಗ ಜಗದ್ಗುರುಗಳು ಸೊರಬ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಬರುವಾಗ ರಾತ್ರಿ 7.30 ಆಗಿತ್ತು.ದೇವಸ್ಥಾನದ ಎದುರು ನೂರಾರು ಜನ ಕಾದು ನಿಂತಿದ್ದರು.ಸ್ವಾಮಿಗಳು ಕ್ಷಣಕ್ಕಾದರೂ ಇಲ್ಲಿ ನಿಂತು ತಮ್ಮ ಫಲಸಮರ್ಪಣೆ ಸ್ವೀಕರಿಸಬೇಕು ಎಂದು ನೆರೆದವರ ಬಯಕೆ ಆಗಿತ್ತು.ಆಗಲೇ ಸಮಯ ಮೀರಿದೆ,ಇನ್ನವರು ಜಡೆ ತಲ್ಪಿ ಅಲ್ಲಿ ನಿತ್ಯ ವಿಧಿಗಳನ್ನು ಮುಗಿಸಿ ಶ್ರೀ ಚಂದ್ರಮೌಳೀಶ್ವರ ಪೂಜೆ ಮಾಡಬೇಕು.ಇಲ್ಲಿ ಅವರ ವಾಹನ ನಿಲ್ಲಲಾರದು ಎಂಬ ಸಂಶಯ ಅನೇಕರು ವ್ಯಕ್ತಪಡಿಸಿದ್ದರು.ಆದರೆ ಜಗದ್ಗುರುಗಳು ವಾಹನ ನಿಲ್ಲಿಸಿ ಅಲ್ಲೇ ಕೆಳಗಿಳಿದರು.ನಂತರ ರಂಗನಾಥ ಸ್ವಾಮಿ ಮಂದಿರಕ್ಕೆ ಬಂದರು.ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ಹೊರಬಂದವರು ಐದು ನಿಮಿಷ ಅನುಗ್ರಹ ಸಂದೇಶ ನೀಡಿದರು.ಅಲ್ಲಿ ನೆರಘದವರ ಮನಸ್ಸು ಗೆದ್ದರು.
ಜಡೆಗೆ ಶೃಂಗೇರಿಯ ಜಗದ್ಗುರುಗಳು ಬಾರದೇ ನಾಲ್ಕು ದಶಕವಾಗಿತ್ತು.ರಾತ್ರಿ ಹೊತ್ತಿನಲ್ಲೂ ದಾರಿಯಲ್ಲಿ ಸಾವಿರಾರು ಭಕ್ತರು ಕಾದು ನಿಂತಿದ್ದರು.ಜಗದ್ಗುರುಗಳ ದೂಳೀ ಪಾದಪೂಜೆ ನಡೆದು ಅವರು ಸ್ನಾನಾದಿಗಳನ್ನು ಪೂರೈಸಿ ಶ್ರೀ ಚಂದ್ರಮೌಳೀಶ್ವರ ಪೂಜೆ ಸಂಪನ್ನಗೊಳಿಸುವಾಗ ನಡು ರಾತ್ರಿ ಸಮೀಪಿಸುತ್ತಿತ್ತು.ಆ ಪ್ರದೇಶದಲ್ಲಿ ಈಡಿಗರು ಮತ್ತು ಲಿಂಗಾಯತ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಚಂದ್ರಮೌಳೀಶ್ವರ ಪೂಜೆಯನ್ನು ನೆರೆದ ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿ ಪುನೀತರಾದರು.ಆ ಭಕ್ತರು ಊಟ ಸಹಾ ಮಾಡದೇ ಇದು ತಮ್ಮ ಬದುಕಿನಲ್ಲಿ ದೊರೆತ ಅಪೂರ್ವ ಭಾಗ್ಯ ಎಂದು ಪರಿಗಣಿಸಿದ್ದರು.
ಜೂನ್ 22 ಅಷ್ಟಮಿಯಂದು ಜಡೆ ಶ್ರೀ ರಂಗನಾಥ ಸ್ವಾಮಿ, ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಕುಂಭಾಭಿಷೇಕವನ್ನು ಜಗದ್ಗುರುಗಳು ನೆರವೇರಿಸಿದರು.”ಧರ್ಮ ಉಳಿಸುವುದು ಎಂದರೆ ಧರ್ಮ ಸ್ವತಃ ಆಚರಿಸುವುದು.ಸನಾತನ ಪರಂಪರೆಯ ಮಹತ್ವವನ್ನು ನಾವು ಚೆನ್ನಾಗಿ ಅರಿತುಕೊಂಡು ಮುಂದಿನ ಪೀಳಿಗೆಗೂ ಅದರ ಯೋಗ್ಯ ಪರಿಚಯವನ್ನು ಮಾಡಿಸಬೇಕು.ಭಗವತ್ಪಾದ ಶಂಕರರು ಸನಾತನ ಧರ್ಮವನ್ನು ಗಟ್ಟಿಯಾಗಿ ಮರು ಸಂಸ್ಥಾಪನೆ ಮಾಡಿದ್ದಾರೆ.ಹಲವು ಶತಮಾನಗಳ ಕಾಲ ನಿರಂತರ ಪ್ರಹಾರ ನಡೆದರೂ ನಮ್ಮ ಧರ್ಮ ಗಟ್ಟಿಯಾಗಿ ನಿಲ್ಲಲು ಶಂಕರರ ಅಡಿಪಾಯವೇ ಕಾರಣ.ಧರ್ಮ ಉಳಿಸಿ ಗಟ್ಟಿಗೊಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.ಎಲ್ಲೋ ಏನೋ ಆದರೆ ನಮಗೇನು ಎಂದು ಕೈಕಟ್ಟಿ ಕುಳಿತ ಕಾರಣ ಅನೇಕ ಕಡೆಗಳಲ್ಲಿ ಧರ್ಮಕ್ಕೆ ಸಂಕಟ ಬಂದಿದೆ.ಇದು ನಮಗೆ ನಿರಂತರ ಜಾಗೃತರಾಗಿರುವಂತೆ ಎಚ್ಚರಿಕೆ ನೀಡುತ್ತಿದೆ.ಧರ್ಮ ದೃಢಪಡಿಸುವ ಕಾರ್ಯದಲ್ಲಿ ಸರ್ವರ ಪಾತ್ರವೂ ಇದೆ.ದೇವಸ್ಥಾನಗಳು ಧರ್ಮದ ರಕ್ಷಣೆಗಾಗಿ ಅಗತ್ಯ.ಅಲ್ಲಿನ ಕಾರ್ಯಗಳಿಗೆ ಆಹ್ವಾನ ಬೇಕಿಲ್ಲ.ಅದು ಪ್ರತಿಯೊಬ್ಬರ ಕಾರ್ಯಕ್ರಮ ಎಂದು ತಿಳಿದು ಪಾಲ್ಗೊಂಡು ಸೇವೆ ಮಾಡಿ ಭಗವಂತನ ಕೃಪೆ ಪಡೆಯಬೇಕು “ಎಂದು ಜಗದ್ಗುರುಗಳು ತಮ್ಮ ಅನುಗ್ರಹ ಭಾಷಣದಲ್ಲಿ ತಿಳಿಸಿದರು.ಸೊರಬ ಭಾಗದಲ್ಲಿ ಹೊಸ ಸಂಚಲನವನ್ನು ಶೃಂಗೇರಿಯ ಜಗದ್ಗುರುಗಳ ಆಗಮನ ಸೃಷ್ಟಿಸಿತು.
ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳ ಈಚೆಗೆ ಒಂದು ದಿನದ ಜಡೆ ವಾಸ್ತವ್ಯ ಮತ್ತು ಅಲ್ಲಿ ರಂಗನಾಥ ಸ್ವಾಮಿ, ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಕುಂಭಾಭಿಷೇಕ ಕಾರ್ಯಕ್ರಮ ಹಲವು ರೀತಿಯಲ್ಲಿ ವೈಶಿಷ್ಟ್ಯಪೂರ್ಣ ಅನಿಸಿತು.ಪೂರ್ವ ನಿರ್ಧರಿತ ಕಾರ್ಯಕ್ರಮ ಅಲ್ಲದೇ ಆಲ್ಲಲ್ಲೇ ನಿಗಧಿಯಾದ ಅವರ ಕಾರ್ಯಕ್ರಮ ಅಚ್ಚರಿಗೆ ಕಾರಣವಾಯಿತು.
