Kuvempu University ವಿದ್ಯಾರ್ಥಿಗಳಲ್ಲಿ ಜ್ಞಾನ ವಿನಿಮಯ, ಪರಿಕಲ್ಪನೆಗಳ ಆಳವಾದ ಅರಿವು ಹಾಗೂ ಪ್ರಾಯೋಗಿಕ ಅನುಭವ ಬೆಳೆಸಲು ಕಾರ್ಯಾಗಾರ ನೆರವಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಹಿರಿಯ ವಕೀಲ ಲಕ್ಷ್ಮೀಕಾಂತ್ ಚಿಮನೂರು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಪಾಥ್ವೇಸ್ ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದಿಂದ ಆಯೋಜಿಸಿದ್ದ 2025–26ನೇ ಸಾಲಿನ ಬೇಸಿಗೆ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿಯಿಂದ ಅಧ್ಯಯನ ನಡೆಸಿ ಉನ್ನತ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ ಅವರು ವಿದ್ಯಾರ್ಥಿಗಳ ಪ್ರತಿಭೆ, ಪರಿಶ್ರಮ ಮತ್ತು ನವೋತ್ಸಾಹವನ್ನು ಶ್ಲಾಘಿಸಿದರು.
ಅತಿಥಿಗಳು ವಿದ್ಯಾರ್ಥಿಗಳಿಂದ ನಿರ್ಮಿಸಲಾದ “ಹೈಪರ್ಲೂಪ್ ಸ್ಟೇಷನ್ ಮಾದರಿ”ಯನ್ನು ಅನಾವರಣಗೊಳಿಸಿದರು. ವಿದ್ಯಾರ್ಥಿಗಳ ತಂಡವು ಹೈಪರ್ಲೂಪ್ ತಂತ್ರಜ್ಞಾನದ ಆಧಾರಿತ ನವೀನ ಸಾರಿಗೆ ವ್ಯವಸ್ಥೆಯ ಮಾದರಿಯನ್ನು ಪರಿಚಯಿಸಿತು.
ಡಾಕ್ಯುಮೆಂಟರಿ ವಿಭಾಗದಲ್ಲಿ ಶಿವಮೊಗ್ಗದಿಂದ ರಾಣೆಬೆನ್ನೂರಿಗೆ ನಿರ್ಮಾಣಗೊಳ್ಳುತ್ತಿರುವ ಹೊಸ ರೈಲು ಮಾರ್ಗದ ಕುರಿತಾದ ಸಂಶೋಧನೆ, ಯಕ್ಷಗಾನದ ಸಾಂಸ್ಕೃತಿಕ ಪರಂಪರೆ ಮತ್ತು ವೈಶಿಷ್ಟ್ಯಗಳ ಅಧ್ಯಯನವನ್ನು ಪ್ರಸ್ತುತಪಡಿಸಲಾಯಿತು.
ಪುಸ್ತಕ ವಿಭಾಗದಲ್ಲಿ ‘ಅರಣ್ಯ ಅಸ್ಮಿತೆ’ ಮೂಲಕ ಡಾ. ರತ್ತಮ್ಮ ಅವರ ಬುಡಕಟ್ಟು ಹೋರಾಟದ ಬದುಕು ಮತ್ತು ‘ಗಾರ್ಗಿ ಇನ್ನೂ ಜೀವಂತವಾಗಿದ್ದಾಳೆ’ ಕೃತಿಯ ಮೂಲಕ ಬಾಲ್ಯ ವಿವಾಹ ಹಾಗೂ ಮೂಢನಂಬಿಕೆಗಳನ್ನು ಮೀರಿ ಆತ್ಮಗೌರವದಿಂದ ಬದುಕು ಕಟ್ಟಿಕೊಂಡ ಮಹಿಳೆಯ ಬದುಕಿನ ಪಯಣವನ್ನು ಪರಿಚಯಿಸಲಾಯಿತು.
ಪವರ್ಪಾಯಿಂಟ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಕುರಿತ ಚಿಂತನಾತ್ಮಕ ನಿರೂಪಣೆ ನಡೆಯಿತು. ಚಲನಚಿತ್ರ ವಿಭಾಗದಲ್ಲಿ ಗುಂಜನ್ ಸಕ್ಸೇನಾ ಮತ್ತು ಫ್ರಾಂಕೇನ್ಸ್ಟೈನ್ ವಿಷಯಗಳ ವಿಶ್ಲೇಷಣಾತ್ಮಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
Kuvempu University ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಜ್ಞಾನ, ಸಂಶೋಧನಾ ಮನೋಭಾವ, ನವೀನ ಚಿಂತನೆ ಹಾಗೂ ಭವಿಷ್ಯಮುಖಿ ದೃಷ್ಟಿಕೋನವನ್ನು ಬೆಳೆಸುವ ಸಾರ್ಥಕ ಮತ್ತು ಸ್ಮರಣೀಯ ವೇದಿಕೆಯಾಗಿ ಯಶಸ್ವಿಯಾಯಿತು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಅವಿನಾಶ್ ಟಿ., ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿರಾಜ್ ಅಹ್ಮದ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಪ್ರೊ. ರಾಜೇಶ್ವರಿ ಎನ್. ಹಾಗೂ ಪಾಥ್ವೇಸ್ ನಿರ್ದೇಶಕ ಪ್ರೊ. ಗಿರಿಧರ್ ಕೆ. ವಿ. ಉಪಸ್ಥಿತರಿದ್ದರು.
Kuvempu University ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳ ಜ್ಞಾನವೃದ್ಧಿ : ವಕೀಲ ಲಕ್ಷ್ಮೀಕಾಂತ್ ಚಿಮನೂರು
Date:
