ತಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿಕಸ, ಒಣಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ವಿಶೇಷ ಕಾಳಜಿ ತ್ಯಾಜ್ಯವನ್ನಾಗಿ ವಿಂಗಡಿಸುವುದು ಕಡ್ಡಾಯವಾಗಿದೆ ಎಂದು ಶಿಕಾರಿಪುರ ಪುರಸಭೆಯ ಮುಖ್ಯಾಧಿಕಾರಿ ಭರತ್ ಅವರು ಹೇಳಿದರು.
ಇತ್ತೀಚೆಗೆ ಶಿಕಾರಿಪುರ ಪುರಸಭೆಯಿಂದ ಪುರಸಭೆ ಅಧಿಕಾರಿಗಳು ಮತ್ತು ಸ್ವಸಹಾಯ ಸಂಘಗಳ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2026 ರ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಾಗಾರದಲ್ಲಿ ಕಛೇರಿ ವ್ಯವಸ್ಥಾಪಕರಾದ ರಾಜ್ ಕುಮಾರ್ ಅವರು ಭಾಗವಹಿಸಿದ ಸ್ವಸಹಾಯ ಸಂಘದ ಸದಸ್ಯರಿಗೆ ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026 ರ ಯೋಜನೆಯ ಉದ್ದೇಶಗಳು, ಮನೆ ಮನೆ ತ್ಯಾಜ್ಯ ಸಂಗ್ರಹಣೆ, ಕಸದ ವಿಂಗಡಣೆ, ಮರುಬಳಕೆ ಹಾಗೂ ನಗರ ಸ್ವಚ್ಛತೆಯಲ್ಲಿ ಸಮುದಾಯದ ಸಹಭಾಗಿತ್ವದ ಮಹತ್ವವನ್ನು ತಿಳಿಸಿದರು. ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವಂತೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ಜಾಗೃತಿ ಮೂಡಿಸಿದರು.
ಕಾರ್ಯಾಗಾರದಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಮಹಿಳೆಯರು ಮತ್ತು ಸ್ವಸಹಾಯ ಸಂಘಗಳ ಪಾತ್ರ ಮಹತ್ವದ್ದಾಗಿದ್ದು, ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಲಾಯಿತು. ಹೊಸ ನಿಯಮಗಳ ಪ್ರಕಾರ ಸಾರ್ವಜನಿಕರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿರು ಡಸ್ಟ್ ಬಿನ್ನಲ್ಲಿ ಹಸಿ ತ್ಯಾಜ್ಯಗಳಾದ ಅಡುಗೆಮನೆ ತ್ಯಾಜ್ಯ, ಆಹಾರ ಪದಾರ್ಥಗಳು, ಹಣ್ಣು-ತರಕಾರಿ ಸಿಪ್ಪೆಗಳು, ಹೂವುಗಳು, ಎಲೆಗಳು,ನೀಲಿ ಡಸ್ಟ್ ಬಿನ್ನಲ್ಲಿ ಒಣ ತ್ಯಾಜ್ಯಗಳಾದ ಪ್ಲಾಸ್ಟಿಕ್, ಕಾಗದ, ರಟ್ಟು, ಗಾಜು, ಲೋಹ ಹಾಗೂ ಇತರೆ ಮರುಬಳಕೆ ಮಾಡಬಹುದಾದ ವಸ್ತುಗಳು,ಕೆಂಪುಡಸ್ಟ್ ಬಿನ್ನಲ್ಲಿ ಸ್ಯಾನಿಟರಿ ತ್ಯಾಜ್ಯಗಳಾದ ಡ್ರೈಪರ್ಗಳು, ಸ್ಯಾನಿಟರಿ ಪ್ಯಾಡ್ಗಳು, ಟಿಶೂ ಪೇಪರ್ಗಳು ಮುಂತಾದವು ಹಾಗೂ ಕಪ್ಪು ಡಸ್ಟ್ ಬಿನ್ನಲ್ಲಿ ವಿಶೇಷ ಕಾಳಜಿ ತ್ಯಾಜ್ಯಗಳಾದ ಬ್ಯಾಟರಿ, ಬಲ್ಟ್, ಇ-ತ್ಯಾಜ್ಯ, ಔಷಧಿ ತ್ಯಾಜ್ಯ, ಪೇಂಟ್ ಡಬ್ಬಿಗಳು ಮುಂತಾದ ಅಪಾಯಕಾರಿ ತ್ಯಾಜ್ಯಗಳನ್ನು 04 ಬಗೆಯಲ್ಲಿ ವಿಂಗಡಣೆ ಮಾಡಿ ಪುರಸಭೆ ವಾಹನಗಳಿಗೆ ನೀಡುವಂತೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಸುರೇಶ್, ಹಿರಿಯ ಆರೋಗ್ಯ ನಿರೀಕ್ಷಕರಾದ ಸೈಯದ್ ನವಾಜ್ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರಾದ ನಾಗಭೂಷಣ್, ಪುರಸಭೆ ಸಿಬ್ಬಂದಿ ವರ್ಗದವರು, ಸಮುದಾಯ ಸಂಪನ್ಮೂಲ ಸಿಬ್ಬಂದಿಗಳು ಹಾಗೂ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.
ಮೂಲದಲ್ಲಿಯೇ ಕಸವಿಂಗಡಿಸಿ ಪುರಸಭೆ ವಾಹನಗಳಿಗೆ ನೀಡುವುದು ಕಡ್ಡಾಯ- ಭರತ್
Date:
