World Environment Day ಪರಿಸರ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು ಹಾಗೂ ನೈಜ, ನಿಖರ, ನಿರ್ದಿಷ್ಟ ಸಮಯದ ದತ್ತಾಂಶವನ್ನು ವಿಶ್ಲೇಷಿಸಲು ಮತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಕೃತಕ ಬುದ್ಧಿಮತ್ತೆ (ಎಐ) ಬಳಕೆ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರ ಮಾಲಿನ್ಯ ನಿಯಂತ್ರಿಸುವಲ್ಲಿ ಎಐ ತಂತ್ರಜ್ಞಾನದ ಬಳಕೆ ಅಗತ್ಯ ಎಂದು ಟಿಎಂಎಇಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಜಿ.ಎ. ಹಿರೇಮಠ ಪ್ರತಿಪಾದಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ನಿದಿಗೆಯಲ್ಲಿರುವ ಟಿಎಂಎಇಎಸ್ ಆಯುರ್ವೇದ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಜೂ. 5ರ ಶುಕ್ರವಾರ ಮಧ್ಯಾಹ್ನ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಸರೀಕರಣಕ್ಕೆ ಕಾರ್ಯಕ್ರಮಕ್ಕೆ ಸಸಿ ನಡೆವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ನೆಲ- ಜಲ ಮತ್ತು ವಾಯು ಮಾಲಿನ್ಯ ಪತ್ತೆ, ಗಾಳಿ ಹಾಗೂ ನೀರಿನ ಗುಣಮಟ್ಟವನ್ನು ಸಂವೇದಕಗಳು (ಸೆನ್ಸರ್ಸ್) ಮತ್ತು ಉಪಗ್ರಹ ಚಿತ್ರಗಳ ಮೂಲಕ ನಿಖರವಾಗಿ ಎಐ ವಿಶ್ಲೇಷಿಸುತ್ತದೆ. ಅಲ್ಲದೆ ಮಾಲಿನ್ಯಕಾರಕಗಳು ಮತ್ತು ರಾಸಾಯನಿಕ ಸೋರಿಕೆಯನ್ನು ತ್ವರಿತವಾಗಿ ಗುರುತಿಸಲು ನೆರವಾಗುತ್ತದೆ ಎಂದರು.
ವಾಯು ಮಾಲಿನ್ಯಕ್ಕೆ ಕೈಗಾರಿಕೆಗಳು ಮತ್ತು ವಾಹನಗಳು ಹೊರಸೂಸುವ ಹೊಗೆ ಪ್ರಮುಖ ಕಾರಣ. ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯವನ್ನು ಮೇಲ್ವಿಚಾರಣೆ ಮಾಡಿ, ಹೊರಸೂಸುವಿಕೆಯನ್ನು ತಗ್ಗಿಸಲು ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಪರಿಸರ ಸ್ನೇಹಿಯಾಗಿಸಲು ಎಐ ಸಹಕಾರಿಯಾಗಿದೆ. ವಾಹನಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವುದರೊಂದಿಗೆ ಟ್ರಾಫಿಕ್ ದಟ್ಟಣೆಯನ್ನು ಸುಗಮಗೊಳಿಸುವ ಮಾರ್ಗಗಳನ್ನು ಎಐ ಸೂಚಿಸುತ್ತದೆ ಎಂದು ತಿಳಿಸಿದರು.
World Environment Day ತ್ಯಾಜ್ಯ ನಿರ್ವಹಣೆ ಜಾಗತಿಕ ಸಮಸ್ಯೆಯಾಗಿ ಬಿಟ್ಟಿದೆ. ಮಹಾನಗರಗಳಲ್ಲೆಂತೂ ತ್ಯಾಜ್ಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಸ್ಮಾರ್ಟ್ಬಿನ್ಗಳ ಮೂಲಕ ತ್ಯಾಜ್ಯ ನಿಯಂತ್ರಣವನ್ನು ಮುನ್ಸೂಚಿಸುವುದು ಎಐನಿಂದ ಸಾಧ್ಯ. ಈ ಮೂಲಕ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದೆAಬ ಆಶಯ ವ್ಯಕ್ತಪಡಿಸಿದರು.
ಎಐ ತಂತ್ರಜ್ಞಾನದ ಬಳಕೆ ಪರಿಸರ ಸಂರಕ್ಷಣೆಗೆ ವರದಾನವಾಗಿದ್ದರೂ, ಎಐ ಸರ್ವರ್ಗಳು ಮತ್ತು ಡೇಟಾ ಕೇಂದ್ರಗಳು ಅಪಾರ ಪ್ರಮಾಣದ ವಿದ್ಯುತ್ ಮತ್ತು ನೀರನ್ನು ಬಳಸುತ್ತವೆ. ಆದ್ದರಿಂದ ಸುಸ್ಥಿರ ಮತ್ತು ಇಂಧನ ದಕ್ಷತೆಯ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ಸದಾನಂದ ಎಸ್. ಜೋಶಿ, ಡಾ.ಎಸ್.ವಿ. ಪ್ರಶಾಂತ್, ಎನ್ಎಸ್ಎಸ್ ಅಧಿಕಾರಿ ಡಾ. ಮಲ್ಲಿಕಾರ್ಜುನ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿಗಾಗಿ ಮಾನವ ಸರಪಳಿ ರಚಿಸಲಾಗಿತ್ತು
