ಕುವೆಂಪು ಅವರದ್ದು ವರ್ಣನಾತ್ಮಕ ಕಾದಂಬರಿ. ಕಲಾತ್ಮಕ, ವಿಚಾರ ಸೇರಿದ ಕಾದಂಬರಿ ಭೈರಪ್ಪನವರದ್ದು. ಅನಕೃ, ಕಾರಂತರ ಇಬ್ಬರ ಕಾದಂಬರಿಗಳಲ್ಲಿ ರಸ ಕಡಿಮೆ ಅಂತ ಭೈರಪ್ಪನವರ ಅಭಿಪ್ರಾಯ. ರಸ ಪ್ರಧಾನವಾದದ್ದು ಕಡಿಮೆಯಾಗುತ್ತಿತ್ತು ಎನ್ನಬಹುದೇನೋ ಎಂದು ಕಾದಂಬರಿಕಾರ ಡಾ. ಅಜಕ್ಕಳ ಗಿರೀಶ್ ಭಟ್ ಅಭಿಪ್ರಾಯಿಸಿದರು.
ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಅಭಿವ್ಯಕ್ತಿ ಟ್ರಸ್ಟ್ ವತಿಯಿಂದ ಶಿವಮೊಗ್ಗ ಸಾಹಿತ್ಯ ಹಬ್ಬ ಮೊದಲ ಆವತ್ತಿಯ ಎರಡನೇ ದಿನದ ಎರಡನೇ ಗೋಷ್ಠಿಯಲ್ಲಿ ಭೈರಪ್ಪನವರ ಸಾಹಿತ್ಯ ಕನ್ನಡ ಓದುಗ ವಲಯವನ್ನು ಉಳಿಸಿ ಬೆಳೆಸಿದ ಪರಿ ಕುರಿತು ಸಂವಾದಕಾರರಾಗಿ ಪಾಲ್ಗೊಂಡು ಮಾತನಾಡಿದರು.
50ರ ಕೊನೆ 60ರ ದಶಕದ ಆರಂಭ ಭೈರಪ್ಪನವರು ಬರೆಯಲು ಆರಂಭಿಸಿದ್ದು. ಪ್ರಗತಿಶೀಲ ಚಳುವಳಿಯ ಕಾಲ. ಅದು ಹೆಚ್ಚು ಕಾಲ ಉಳಿಯಲಿಲ್ಲ. ನಂತರದ್ದು ನವ್ಯ ಕಾಲಘಟ್ಟ. ವಿಶ್ವವಿದ್ಯಾಲಯದ ಪ್ರೊಫೆಸರ್ಸ್ಗಳು ಬರವಣಿಗೆಗಳು ಕಂಡುಬಂದಿತು. ಇದು ಸಾಮಾನ್ಯರ ಮೇಲೆ ಹೆಚ್ಚು ಪ್ರಭಾವ ಮಾಡಲಿಲ್ಲ. ಪಬ್ಲಿಕ್ ಲೈಬ್ರರಿಯಿಂದ ತಂದು ಕಾದಂಬರಿ ಓದುವ ಕಾಲವದು. ಈ ರೀತಿ ಜನರನ್ನು ಭೈರಪ್ಪನವರ ಕಾದಂಬರಿಗಳು ತಲುಪಿದ್ದವು.
ಭಾವದೊಂದಿಗೆ ವಿಚಾರಗಳನ್ನು ಬೆರೆಸಿದ ಕಾದಂಬರಿಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಭೈರಪ್ಪನವರದ್ದು. ಸಂಸ್ಕಾರ ಮತ್ತು ವಂಶವೃಕ್ಷ ಒಂದೇ ಸಮಯಕ್ಕೆ ಬಂದು ಜನಪ್ರಿಯವಾದವು ಎಂದರು.
ಆದಿತ್ಯವಾರದ ದಿನಪತ್ರಿಕೆಯ ಭೈರಪ್ಪನವರ ವಿಮರ್ಶೆ ಓದುಗರನ್ನು ಸೃಷ್ಟಿಸುತ್ತಿತ್ತು. ವಿಚಾರವನ್ನು ಕಲಾತ್ಮಕವಾಗಿ ಹೇಳಿದರೆ ಜನರಿಗೆ ತಲುಪುತ್ತದೆ. ಭೈರಪ್ಪನವರ ಕಾದಂಬರಿಯಲ್ಲಿ ಸಮಷ್ಟಿಯ ದೃಷ್ಟಿ ಇದ್ದವು. ಒಬ್ಬ ರಚನಾತ್ಮಕ ಕಾದಂಬರಿಕಾರನಾಗಿ ತಮ್ಮ ಸ್ವಾತಂತ್ರವನ್ನೂ ಉಳಿಸಿಕೊಂಡರು. 4 ತಲೆಮಾರುಗಳು ಇವರ ಕಾದಂಬರಿಗಳನ್ನು ಓದಿದ್ದೆ ಎಂದು ಹೇಳಿದರು.
ಕಾದಂಬರಿಕಾರ ಎಮ್.ಆರ್. ದತ್ತಾತ್ರಿ ಮಾತನಾಡಿ, ಕತೆ ಬರೆಯಲು ಹೇಳಿಕೊಟ್ಟಿದ್ದು ಮಾಸ್ತಿಯವರು, ಇದಕ್ಕೆ ವಿಚಾರ ಸೇರಿಸಿದ್ದು ಕಾರಂತರು. ಪಾತ್ರದ ಆಳಕ್ಕೆ ಇಳಿಯುವುದು ಯಶವಂತ ಚಿತ್ತಾಲರು. ಇವು ಮೂರೂ ಸೇರಿದ್ದು ಭೈರಪ್ಪನವರದ್ದು. 50ರಿಂದ 80ರ ಕಾಲಘಟ್ಟವು ಸ್ಥಿತ್ಯಂತರ ಕಾಲಘಟ್ಟ. ಆ ಕಾಲದಲ್ಲಿ ಧೀರ ಸಾಹಿತ್ಯ ರಚನೆ ಭೈರಪ್ಪನವರದ್ದು ಎಂದರು.
50-80ರವರೆಗಿನ ಕಾಲಘಟ್ಟ 3-4 ತಲೆಮಾರಿದೆ. ಬಹಳಷ್ಟು ಸಿಕ್ಕುಗಳಿದ್ದ ತಲೆಮಾರು. ಓದುಗರ ಸಂಖ್ಯೆ ಜಾಸ್ತಿಯಾದುದು 80ರ ದಶಕ. 90ರ ದಶಕ ಎಂಜಿನಿಯರ್ಗಳನ್ನು ತಯಾರು ಮಾಡಿತು. ಅವರಲ್ಲಿ ಹೆಚ್ಚಿನವರು ಭೈರಪ್ಪನವರ ಓದುಗರು. ಯಾವುದೂ ಬಲವಂತವಾಗಿ ಹೇರಿದ್ದಲ್ಲ, ಯೂನಿವರ್ಸಿಟಿಗಳಿಂದ ಬಂದ ಓದುಗರಲ್ಲ. ಯಾವ ಕೃತಿ ಶುದ್ಧವಾಗಿ ಮನುಷ್ಯ ಭಾವಗಳನ್ನು ಕೇಂದ್ರದಲ್ಲಿಟ್ಟುಕೊಳ್ಳುತ್ತದೆಯೋ ಅಂತ ಕೃತಿ ಯಾವತ್ತಿಗೂ ಜನರನ್ನು ಮುಟ್ಟುತ್ತೆ, ಇನ್ನೂ ಬಹುಕಾಲವೂ ಇರುತ್ತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮನ್ವಯಕಾರರಾದ ಸಹನಾ ವಿಜಯ್ಕುಮಾರ್ ಇದ್ದರು.
