Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಪಾಲ್ಗೊಳ್ಳುವುದರಿಂದ ಸೇವಾ ಮನೋಭಾವನೆ ವೃದ್ಧಿಗೊಳ್ಳುವ ಜತೆಯಲ್ಲಿ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಂಜುನಾಥ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ಶಿವಮೊಗ್ಗ ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಪರೀಕ್ಷೆ ಸಂದರ್ಭಗಳಲ್ಲಿ ಮತ್ತು ಕೋವಿಡ್ ಸಂದರ್ಭದಲ್ಲಿ ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯುಕ್ತೆ ಗೈಡ್ ಶಕುಂತಲಾ ಚಂದ್ರಶೇಖರ ಮಾತನಾಡಿ, ಸ್ಕೌಟ್ ಗೈಡ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಚಟುವಟಿಕೆಯಲ್ಲಿ ಭಾಗವಹಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಶಸ್ತಿ ಪಡೆದಿದ್ದೀರಿ, ಮುಂದಿನ ಹಂತವಾದ ರಾಜ್ಯ ಪುರಸ್ಕಾರಕ್ಕೆ ಈಗಿನಿಂದಲೇ ತಯಾರಿ ಶುರುಮಾಡಬೇಕು. ಅದಕ್ಕೆ ಬೇಕಾದ ಮಾರ್ಗದರ್ಶನ ಜಿಲ್ಲಾ ಸಂಸ್ಥೆಯ ವತಿಯಿಂದ ನೀಡುತ್ತೇವೆ ಎಂದು ಶುಭಹಾರೈಸಿದರು.
ಸಮಾರಂಭವು ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಜಿಲ್ಲಾ ಸ್ಕೌಟ್ ಆಯುಕ್ತ ಎಸ್.ಜಿ.ಆನಂದ್ ಸರ್ವರನ್ನು ಸ್ವಾಗತಿಸಿದರು.
ಸ್ಕೌಟ್ ಗೈಡ್ ಸಂಸ್ಥಾಪಕರಾದ ಬೇಡನ್ ಪೋವೆಲ್ ಮತ್ತು ಬೇಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಆಯುಕ್ತ ರೋವರ್ ಕೆ.ರವಿ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಮತ್ತು ಸಂಸ್ಥಾಪಕರ ಬಗ್ಗೆ ಮಾಹಿತಿ ನೀಡಿದರು.
Bharat Scouts and Guides ಜಿಲ್ಲಾ ಸಹ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ ಮತ್ತು ಜಿಲ್ಲಾ ತರಬೇತಿ ಆಯುಕ್ತ ಸ್ಕೌಟ್ ಶಿವಶಂಕರ ಅವರು ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್ ಸರ್ವರಿಗೂ ವಂದಿಸಿದರು. ಶಿವಮೊಗ್ಗ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ವಿ ಅವಲಕ್ಕಿ ನಿರೂಪಿಸಿದರು.
ಸಮಾರಂಭದಲ್ಲಿ ಜಂಟಿ ಕಾರ್ಯದರ್ಶಿ ಲಕ್ಷ್ಮೀ ರವಿ, ಶಿಕಾರಿಪುರ ಸ್ಥಳೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಸಿ.ಎಂ.ಪರಮೇಶ್ವರಯ್ಯ, ಕೃಷ್ಣ ಸ್ವಾಮಿ, ಎ.ಎಸ್.ಮಂಜುನಾಥ್, ಗೀತಾ ಚಿಕ್ಕಮಠ, ಕಾತ್ಯಾಯಿನಿ, ಮೀನಾಕ್ಷಮ್ಮ, ಚೂಡಾಮಣಿ ಈ ಪವಾರ್, ಮಲ್ಲಿಕಾರ್ಜುನ್ ಕಾನೂರು, ಜಿಲ್ಲೆಯ ವಿವಿಧೆಡೆಯಿಂದ ಬಂದಂತಹ ದಳ ನಾಯಕ, ನಾಯಕಿ, ಪದಾಧಿಕಾರಿಗಳು ಮತ್ತು ಏಳು ತಾಲೂಕಿನ 400 ಮಕ್ಕಳು ಭಾಗವಹಿಸಿದ್ದರು.
