Digital financial literacy ಕೌಶಲ್ಯ ಭಾರತ, ಡಿಜಿಟಲ್ ಭಾರತದ ಪರಿಕಲ್ಪನೆ ಯಶಸ್ವಿಯಾಗಬೇಕಾದರೆ ಹಣಕಾಸಿನ ನಿರ್ವಹಣೆಯ ಜ್ಞಾನ ಅಗತ್ಯ ಎಂದು ಜನಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಹೇಳಿದರು.
ಕಾಶೀಪುರದಲ್ಲಿರುವ ಜನಶಿಕ್ಷಣ ಸಂಸ್ಥೆಯ ಕೌಶಲ್ಯವರ್ಧೀನಿ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಹಾಗೂ ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ “ಡಿಜಿಟಲ್ ಹಣಕಾಸು ಸಾಕ್ಷರತೆ” ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಹಿಳೆಯರು ಯಾವುದೇ ಕ್ಷೇತ್ರದ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಹಣಕಾಸನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಆಲೋಚನೆ ನಡೆಸಬೇಕು. ಸಾಮಾನ್ಯ ಗೃಹಿಣಿಯರು, ಸ್ವಸಹಾಯ ಸಂಘಗಳಲ್ಲಿ ಸಾಲ ಸೌಲಭ್ಯ ಪಡೆದಿರುವವರು ಆದಾಯ ಬರುವ ಹಾಗೂ ನಿರ್ವಹಿಸುವ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಸಲಹೆ ನೀಡಿದರು.
ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಡಾ. ಬಿ.ವಿ.ಲಕ್ಷ್ಮಿದೇವಿ ಗೋಪಿನಾಥ್ ಮಾತನಾಡಿ, ಉದ್ಯಮಿಗಳಾಗಿ ಹೆಜ್ಜೆ ಇಡುತ್ತಿರುವ ಮಹಿಳೆಯರು ಸಣ್ಣ ಪುಟ್ಟ ಉಳಿತಾಯವನ್ನು ದೊಡ್ಡದಾಗಿ ಬೆಳೆಸಲು ಹಣಕಾಸಿನ ಸಾಕ್ಷರತೆಯು ಅತ್ಯಂತ ಅವಶ್ಯಕ. ಅನುಭವ ಇರುವ ಸಾಧಕರಿಂದ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಣಕಾಸು ಯೋಜನೆ ಹಾಗೂ ನಿರ್ವಹಣೆ ಕೌಶಲ್ಯದ ಮಹತ್ವ ತಿಳಿಸುವ ಆಶಯದಿಂದ ಕಾರ್ಯಾಗಾರ ಹಮ್ಮಿಕೊಂಡಿದ್ದು, ಶಿಬಿರದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
Digital financial literacy ಇದೇ ಸಂದರ್ಭದಲ್ಲಿ ಬೆಂಗಳೂರಿನ ಫಿಂಗ್ಯಾನ್ ಅಕಾಡೆಮಿಯ ಮುಖ್ಯಸ್ಥ ಶ್ರೀಶ ಮಾತನಾಡಿ, ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಜತೆಯಲ್ಲಿ ಆರ್ಥಿಕ ಏರಿಳಿತದ ಬಗ್ಗೆ ಕಲಿತರೆ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ. ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಮಾಡಬೇಕು ಎಂದು ಹೇಳಿದರು.
ಸ್ವೇಧ ಮಹಿಳಾ ಉದ್ಯಮಿಗಳ ಸಂಘದ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಖಜಾಂಚಿ ಸಹನಾ ಚೇತನ್, ನಿರ್ದೇಶಕಿ ಸವಿತಾ ಮಾಧವ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಕವಿತಾ.ಎಸ್.ಜಿ., ಶೋಭಾ.ಎಂ., ಶ್ರೀಶಾ, ಅನಂತಪದ್ಮನಾಭ, ಸ್ಮಿತಾ, ಸ್ಪೂರ್ತಿ, ನೇಹಾ ಮತ್ತಿತರರು ಉಪಸ್ಥಿತರಿದ್ದರು.
