ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜನ-ಮನ ಗೆದ್ದಿರೋ 777 ಚಾರ್ಲಿ ಚಿತ್ರಕ್ಕೆ ಇದೀಗ ರಾಜ್ಯ ಸರ್ಕಾರ ತೆರಿಗೆ ವಿನಾಯತಿ ನೀಡಿದೆ. ನಟ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು 777 ಚಾರ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಇದೀಗ ರಾಜ್ಯ ಸರ್ಕಾರ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಈ ಹಿಂದೆ ಚಾರ್ಲಿ ಚಿತ್ರಕ್ಕೆ ಶೇಕಡಾ 100ರಷ್ಟು ತೆರಿಗೆ ವಿನಾಯಿತಿ ನೀಡುವಂತೆ ರಕ್ಷಿತ್ ಶೆಟ್ಟಿ ಮನವಿ ಮಾಡಿಕೊಂಡಿದ್ದರು. ಈ ಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಿದರೆ ದೇಶದ ಇನ್ನಷ್ಟು ಜನರಿಗೆ ಈ ಸಂದೇಶವನ್ನು ಮುಟ್ಟಿಸುವಲ್ಲಿ ಸಹಕಾರಿಯಾಗುವುದರಿಂದ ಸೂಕ್ತ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದರು.
ನಟ ರಕ್ಷಿತ್ ಶೆಟ್ಟಿ ಜೂನ್ 14ರಂದು ಸಿಎಂಗೆ ಪತ್ರ ಬರೆದು, “777 ಚಾರ್ಲಿ”ಗೆ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಮನವಿ ಪತ್ರದಲ್ಲಿ ಇನ್ಬ್ರೀಡಿಂಗ್ನಿಂದಾಗಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಪ್ರಾಣಿ ಹಿಂಸೆಯ ಸೂಕ್ಷ್ಮತೆಗಳನ್ನು ಎತ್ತಿಹಿಡಿಯುವ ಆಶಯ ಈ ಚಿತ್ರದ ಕಥಾಹಂದರದಲ್ಲಿ ಒಳಗೊಂಡಿದ್ದು, ಇದರ ಜೊತೆಗೆ ಈ ಚಿತ್ರವು ಬೀದಿ ನಾಯಿಗಳನ್ನು ದತ್ತು ಪಡೆಯುವುದರ ಬಗ್ಗೆ ಸಂದೇಶವನ್ನು ಸಾರುತ್ತದೆ ಎಂದು ವಿವರಿಸಿದ್ದರು.
ಪ್ರದರ್ಶಕರು ಸಿನೆಮಾ ಟಿಕೆಟ್ ಮೇಲೆ ಎಸ್ಜಿಎಸ್ಟಿ ವಿಧಿಸುವಂತಿಲ್ಲ ಮತ್ತು ಸಂಗ್ರಹಿಸುವಂತಿಲ್ಲ. ಎಸ್ಜಿಎಸ್ಟಿ ಮೊತ್ತವನ್ನು ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್ಗಳನ್ನು ಮಾರಾಟ ಮಾಡುವಂತೆ ಸೂಚನೆ ನೀಡಲಾಗಿದೆ.
ತೆರಿಗೆ ವಿನಾಯಿತಿ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯದಾದ್ಯಂತ ಚಲನಚಿತ್ರ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಾರ್ಲಿ ಎಂಬ ಶೀರ್ಷಿಕೆಯುಳ್ಳ ಕನ್ನಡ ಚಲನಚಿತ್ರ ಪ್ರದರ್ಶನಗಳಿಗೆ ದಿನಾಂಕ: 19-06-2022 ರಿಂದ 6 ತಿಂಗಳ ಅವಧಿಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ( SGST) ಹಿಂಪಾವತಿ ಸೌಲಭ್ಯವನ್ನು ಈ ಕೆಳಕಂಡ ಷರತ್ತುಗಳೊಂದಿಗೆ ನೀಡಿರೋದಾಗಿ ಸರ್ಕಾರ ತಿಳಿಸಿದೆ