ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಸರಕಾರಿ ಅಧಿಕಾರಿ ರಾಹುಲ್ ಭಟ್ ಅವರ ಕೊಲೆ ಖಂಡಿಸಿ ಕಾಶ್ಮೀರಿ ಪಂಡಿತರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಭಯೋತ್ಪಾದಕ ಸಂಘಟನೆ ಲಶ್ಕರೆ ಇಸ್ಲಾಮ್, ‘ಕಾಶ್ಮೀರ ಬಿಟ್ಟು ತೊಲಗಿ, ಇಲ್ಲದಿದ್ದರೆ ಹೆಣವಾಗುವಿರಿ’ ಎಂದು ಕಾಶ್ಮೀರಿ ಪಂಡಿತರಿಗೆ ಕೊಲೆ ಬೆದರಿಕೆ ಹಾಕುವ ಮೂಲಕ ದಾರ್ಷ್ಟ್ಯತೆ ತೋರಿದೆ.
ಜಮ್ಮು ಮತ್ತು ಕಾಶ್ಮೀರದ ಹವಾಲದ ನಿರಾಶ್ರಿತರ ಕಾಲೊನಿಯ ಅಧ್ಯಕ್ಷರಿಗೆ ಪತ್ರ ಬರೆದಿರುವ ಲಶ್ಕರೆ ಇಸ್ಲಾಮ್, ‘ಕಾಶ್ಮೀರಿ ಪಂಡಿತರೇ ಪುಲ್ವಾಮಾ ಪ್ರದೇಶವನ್ನು ಬಿಟ್ಟು ಹೊರಡಿ. ಇಲ್ಲದಿದ್ದರೆ ಕೊಲೆಯಾಗುವಿರಿ’ ಎಂದು ಬೆದರಿಸಿದೆ.
ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪತ್ರಕ್ಕೆ ಲಶ್ಕರೆ ಇಸ್ಲಾಮ್ನ ಕಮಾಂಡರ್ ಸಹಿ ಹಾಕಿದ್ದಾನೆ. ಅಲ್ಲದೇ ಪತ್ರದಲ್ಲಿ, ವಲಸಿಗರೆ ಮತ್ತು ಆರ್ ಎಸ್ಎಸ್ ಏಜೆಂಟರೆ ಕಾಶ್ಮೀರ ಬಿಟ್ಟು ತೊಲಗಿ. ಇಲ್ಲದಿದ್ದರೆ ಕೊಲೆಗೆ ಸಿದ್ಧರಾಗಿರಿ, ಎಂದು ಹೆದರಿಸಿರುವ ಭಯೋತ್ಪಾದಕ ಸಂಘಟನೆ, ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಎಲ್ಲ ವಲಸಿಗರೇ ಹಾಗೂ ಆರ್ ಎಸ್ಎಸ್ ಏಜೆಂಟರೆ ಜಮ್ಮು ಮತ್ತು ಕಾಶ್ಮೀರ ಬಿಟ್ಟು ಹೊರಡಿ, ಇಲ್ಲದಿದ್ದರೆ ಸಾಯಲು ಸಿದ್ಧರಾಗಿ. ಕಾಶ್ಮೀರಿ ಮುಸ್ಲಿಮರನ್ನು ಕೊಲ್ಲುವ ಮೂಲಕ ಕಾಶ್ಮೀರವನ್ನು ಮತ್ತೊಂದು ಇಸ್ರೇಲ್ ಮಾಡಲು ಬಿಡುವುದಿಲ್ಲ. ಕಾಶ್ಮೀರಿ ಪಂಡಿತರಿಗೆ ಇಲ್ಲಿ ಸ್ಥಳವಿಲ್ಲ. ನೀವು ನಿಮ್ಮ ಭದ್ರತೆಯನ್ನು 2-3 ಪಟ್ಟು ಹೆಚ್ಚಿಸಿಕೊಳ್ಳಿ. ಜೊತೆಗೆ ದಾಳಿಗೆ ಸಿದ್ಧವಾಗಿರಿ. ನೀವು ಸಾಯುವುದು ಶತಸಿದ್ಧ ಎಂದು ಬೆದರಿಕೆ ಹಾಕಿದೆ.
ಮೇ 12ರಂದು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿ, ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರನ್ನು ಭಯೋತ್ಪಾದಕ ಸಂಘಟನೆ ಲಶ್ಕರೆ ತೊಯ್ಬಾ ಹತ್ಯೆ ಮಾಡಿತು.
ಇದು ಕಾಶ್ಮೀರಿ ಪಂಡಿತರನ್ನು ಕೆರಳಿಸಿದೆ. ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಕಾಶ್ಮೀರ ಪಂಡಿತರಿಗೆ ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆ ಹಾಕಲಾಗಿದೆ.
ಇನ್ನೊಂದು ಕಡೆ, ರಾಹುಲ್ ಭಟ್ ಅವರನ್ನು ಹತ್ಯೆ ಮಾಡಿದ ಲಶ್ಕರೆ ತೊಯ್ಬಾ ಸಂಘಟನೆಯ 3 ಭಯೋತ್ಪಾದಕರನ್ನು ಕೆಲವು ದಿನಗಳ ಹಿಂದೆ ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ಪಡೆಯು ಎನ್ಕೌಂಟರ್ ಮಾಡಿದೆ.