Friday, May 15, 2026
Friday, May 15, 2026
Home Blog Page 96

CM Siddharamaiah ನರೇಂದ್ರ ಮೋದಿ ಅವರು ಸಂಪೂರ್ಣ ಅಮೆರಿಕಕ್ಕೆ ಶರಣಾಗಿದ್ದಾರೆ- ಸಿದ್ಧರಾಮಯ್ಯ

0

CM Siddharamaiah ಭಾರತ & ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಒಪ್ಪಿಕೊಂಡು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಸಂಪೂರ್ಣ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಒಪ್ಪಂದ 140 ಕೋಟಿ ಭಾರತೀಯರಿಗೆ, ಅದರಲ್ಲಿಯೂ ಮುಖ್ಯವಾಗಿ ದೇಶದ 72 ಕೋಟಿ ರೈತರ ಪಾಲಿಗೆ ಮರಣಶಾಸನ ಆಗಲಿರುವುದು ಖಂಡಿತ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಎರಡು ದೇಶಗಳ ನಡುವಿನ ಸಂಬಂಧಗಳು ಸಮಾನತೆ ಮತ್ತು ಪರಸ್ಪರ ಗೌರವದ ಬುನಾದಿಯ ಮೇಲೆ ಸ್ಥಾಪನೆಯಾಗಬೇಕಾಗುತ್ತದೆ. ಅದು ಒತ್ತಡ, ಬೆದರಿಕೆ ಮತ್ತು ಏಕಪಕ್ಷೀಯ ನೀತಿ-ನಿರ್ಧಾರಗಳ ಹೇರಿಕೆಯಿಂದ ನಡೆಯಬಾರದು. ಆದರೆ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ಕಾರ್ಯರೂಪಕ್ಕೆ ಬಂದಿರುವ ವಿಧಿ-ವಿಧಾನಗಳನ್ನು ಗಮನಿಸಿದರೆ ಇದು ಒಡೆಯನ ಅಜ್ಞೆಗೆ ಸೇವಕ ತಲೆಯಾಡಿಸಿದಂತಿದೆ.

ರಷ್ಯಾದಿಂದ ತೈಲ ಖರೀದಿಸುತ್ತಿದ್ದ ಭಾರತವನ್ನು ಮಣಿಸುವ ಉದ್ದೇಶದಿಂದಲೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಯರ್ರಾಬಿರ್ರಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏರಿಸಿದ್ದರು. ಈಗ ಅದನ್ನು 25%ರಿಂದ 18%ಕ್ಕೆ ಇಳಿಸಿ ಭಾರತಕ್ಕೆ ಮಹದುಪಕಾರ ಮಾಡಿದಂತೆ ನಾಟಕವಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಭಾರತ ಸೊನ್ನೆಗಿಳಿಸಿದೆ. ಮೇಲ್ನೋಟದಲ್ಲಿಯೇ ಈ ತಾರತಮ್ಯದಿಂದ ಆಗಿರುವ ಅನ್ಯಾಯ ಸ್ಪಷ್ಟವಾಗಿ ಕಾಣುತ್ತಿದ್ದರೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ಸ್ವಾಗತಿಸಿರುವುದು ಭಾರತದ 149 ಕೋಟಿ ಜನರಿಗೆ ಮಾಡುತ್ತಿರುವ ಮಹಾದ್ರೋಹವಾಗಿದೆ ಎಂದು ಸೀಎಂ ಸಿದ್ಧರಾಮಯ್ಯನವರು x ಖಾತೆಯಲ್ಲಿ ದೀರ್ಘವಾಗಿ ಲೇಖನ ಬರೆದಿದ್ದಾರೆ.

ಸದ್ಯ ಭಾರತ ಶೇಕಡಾ 40ರಷ್ಟು ತೈಲವನ್ನು ರಷ್ಯಾದಿಂದ ಖರೀದಿಸುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ತಲೆಬಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ಕೈಬಿಟ್ಟು ಅಮೆರಿಕ ಮತ್ತು ವೆನಿಜುವೆಲಾ ದೇಶಗಳಿಂದ ತೈಲ ಖರೀದಿಸಲು ಒಪ್ಪಿಕೊಂಡಿರುವುದು ಈ ಒಪ್ಪಂದದ ಮುಖ್ಯಾಂಶವಾಗಿದೆ. ಇದು ಭಾರತದ ಸಂಪೂರ್ಣ ಶರಣಾಗತಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದ್ದು ಅದರ ಪರಿಣಾಮವಾಗಿ ಉಳಿದ ಅಗತ್ಯವಸ್ತುಗಳು ಕೂಡಾ ದುಬಾರಿಯಾಗಲಿದೆ.

ಈ ಒಪ್ಪಂದದಿಂದ ಆಗಲಿರುವ ಸಣ್ಣಪುಟ್ಟ ಲಾಭಗಳನ್ನು ದೊಡ್ಡ ಸಾಧನೆ ಎಂದು ಬಿಂಬಿಸುತ್ತಿರುವ ಕೇಂದ್ರ ಸರ್ಕಾರ ಭಾರತೀಯರಿಗೆ, ಮುಖ್ಯವಾಗಿ ದೇಶದ ರೈತ ಸಮುದಾಯಕ್ಕೆ ಆಗುತ್ತಿರುವ ನಷ್ಟವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ. ಈ ಒಪ್ಪಂದವನ್ನು ಅಮೆರಿಕದ ರೈತ ಸಮುದಾಯ ಒಕ್ಕೊರಲಿನಿಂದ ಸ್ವಾಗತಿಸಿ ಕುಣಿದಾಡುತ್ತಿರುವುದೇ ಈ ಒಪ್ಪಂದ ಭಾರತದ ರೈತರ ಪಾಲಿನ ಮರಣಶಾಸನವಾಗಲಿದೆ ಎಂಬುದಕ್ಕೆ ಸೂಚನೆಯಾಗಿದೆ.

ಭಾರತಕ್ಕೆ ಹೋಲಿಸಿದರೆ ಅತೀ ಹೆಚ್ಚಿನ ಪ್ರಮಾಣದ ಸಬ್ಸಿಡಿ ಪಡೆಯುತ್ತಿರುವ ಅಮೆರಿಕದ ರೈತರು ಭಾರತದ ಕೃಷಿ ಉತ್ಪನ್ನಗಳಿಗಿಂತ ಕಡಿಮೆ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಿದೆ. ಈ ಅಪಾಯವನ್ನು ತಪ್ಪಿಸಲಿಕ್ಕಾಗಿಯೇ ಇಲ್ಲಿಯವರೆಗಿನ ಎಲ್ಲ ಸರ್ಕಾರಗಳು ಅಮೆರಿಕದಿಂದ ಆಮದಾಗುತ್ತಿರುವ ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದ ಸುಂಕ ಹೇರುತ್ತಾ ಬಂದಿವೆ. ಈಗ ಈ ಆಮದು ಸುಂಕವನ್ನು ರದ್ದುಗೊಳಿಸದರೆ ದೇಶದ ಮಾರುಕಟ್ಟೆಗಳಲ್ಲಿ ಅಮೆರಿಕದ ಅಗ್ಗದ ದರದ ಆಹಾರಧಾನ್ಯ, ಹಣ್ಣು, ತರಕಾರಿ ಮತ್ತು ಡೇರಿ ಉತ್ಪನ್ನಗಳು ಲಗ್ಗೆ ಇಡಲಿದೆ.. ಇದರಿಂದ ಭಾರತದ ರೈತರು ದಿವಾಳಿ ಸ್ಥಿತಿ ತಲುಪಲಿದ್ದು, ಅವರಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಇಲ್ಲದ ಸ್ಥಿತಿ ನಿರ್ಮಾಣವಾಗಬಹುದು.

ಸಂಪೂರ್ಣವಾಗಿ ಶರಣಾಗತಿಯಾಗಿರುವ ಈ ಒಪ್ಪಂದಕ್ಕೆ ಭಾರತೀಯರ ಹಿತರಕ್ಷಣೆಯ ಉದ್ದೇಶ ಖಂಡಿತ ಇಲ್ಲ. ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಎದುರಿಸುತ್ತಿರುವ ಮೋದಿಯವರ ಉದ್ಯಮ ಸ್ನೇಹಿತ ಅದಾನಿ ಅವರ ರಕ್ಷಣೆ ಮತ್ತು ಜೆಫ್ರಿ ಎಪ್ಸ್ಟೀನ್ ಫೈಲ್ಸ್ ನಲ್ಲಿ ಕಾಣಿಸಿಕೊಂಡಿರುವ ಪ್ರಧಾನಿ ಮೋದಿ ಮತ್ತು ಸಂಪುಟದ ಸದಸ್ಯರ ಹೆಸರುಗಳಿಂದಾಗಿ ಸೃಷ್ಟಿಯಾಗಿರುವ ಒತ್ತಡದ ಭಾಗವಾಗಿ ಕೇಂದ್ರ ಸರ್ಕಾರ ದೇಶ ವಿರೋಧಿಯಾಗಿರುವ ಒಪ್ಪಂದಕ್ಕೆ ಒಪ್ಪಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಲು ಸಾಧ್ಯವೇ?

ಜಾಗತಿಕವಾಗಿ ಭಾರತ ಹಿಂದೆಂದೂ ಇಷ್ಟೊಂದು ದುರ್ಬಲವಾಗಿರಲಿಲ್ಲ. ರಾಜತಾಂತ್ರಿಕವಾಗಿಯ ಎದುರಾಗುವ ಒತ್ತಡಗಳನ್ನು ಇಲ್ಲಿಯ ವರೆಗಿನ ಎಲ್ಲ ಪ್ರಧಾನಿಗಳು ಸಮರ್ಥವಾಗಿ ಎದುರಿಸಿ ಭಾರತದ ಸಾರ್ವಭೌಮತೆ ಮತ್ತು ಗೌರವವನ್ನು ಕಾಪಾಡಿಕೊಂಡು ಬಂದಿದ್ದಾರೆ. ದೇಶದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ ನೆಹರೂ ಅವರ ಅಲಿಪ್ತ ನೀತಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿತ್ತು. ಪ್ರಧಾನಿ ಇಂದಿರಾಗಾಂಧಿಯವರು ದೈತ್ಯ ಅಮೆರಿಕದ ಒತ್ತಡವನ್ನು ಕೂಡಾ ಲೆಕ್ಕಿಸದೆ ಪಾಕಿಸ್ಥಾನವನ್ನು ಮಣಿಸಿದ್ದು ಈಗ ಇತಿಹಾಸವಾಗಿದೆ. ಜಾಗತಿಕವಾಗಿ ಎಲ್ಲ ದೇಶಗಳು ಆರ್ಥಿಕ ಹಿಂಜರಿತದಿಂದ ತತ್ತರಿಸುತ್ತಿದ್ದಾಗ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಿದ್ದ ಡಾ.ಮನಮೋಹನ್ ಸಿಂಗ್ ಅವರು ಹೊಸ ಆರ್ಥಿಕ ಯುಗದ ಪ್ರವರ್ತಕರಾಗಿದ್ದರು.

CM Siddharamaiah ಆದರೆ ಇಂದು ವಿಶ್ವದಲ್ಲಿ ಭಾರತಕ್ಕೆ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚಾಗಿದೆ. ವಿದೇಶಾಂಗ ನೀತಿ ಎಂದರೆ ಭಾಷಣ, ಘೋಷಣೆ, ಕೈಕುಲುಕಾಟ ಮತ್ತು ಸ್ವಪ್ರಚಾರವಷ್ಟೇ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿದುಕೊಂಡಂತಿದೆ. ಚೀನಾ ಮತ್ತು ಅಮೆರಿಕದಂತಹ ದೈತ್ಯ ಶಕ್ತಿಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಭಾರತ ತನ್ನ ಅಸ್ಮಿತೆಯನ್ನು ಸಂಪೂರ್ಣ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ತಲೆಮೇಲೆ ಕೂರಿಸಿ ಮೆರೆದಾಡಿದ್ದ ಮೋದಿ ಅವರು ಈಗ ಅದೇ ಟ್ರಂಪ್ ರ ಆಜ್ಞಾಪಾಲಕರಾಗುವ ದೈನೇಸಿ ಸ‍್ಥಿತಿಗೆ ಬಂದಿದ್ದು ವಿಷಾದನೀಯ. ಮೋದಿಯವರ 56 ಇಂಚಿನ ಎದೆ ಮತ್ತು ವಿಶ್ವಗುರುವಿನ ಕಿರೀಟವನ್ನು ಟ್ರಂಪ್ ಪ್ರತಿದಿನ ಕುಟ್ಟಿ ಪುಡಿ ಮಾಡುತ್ತಿದ್ದಾರೆ.

ವಿದೇಶಾಂಗ ನೀತಿಯಿಂದ ಹಿಡಿದು ಆರ್ಥಿಕ ಮತ್ತು ಸಾಮಾಜಿಕ ನೀತಿಯ ವರೆಗೂ ಎಲ್ಲ ರಂಗಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿರುವ ಪ್ರಧಾನಿ ಮೋದಿಯವರು ರಾಜೀನಾಮೆ ಕೊಟ್ಟು ದೇಶದ ಮತ್ತು ಅಳಿದುಳಿದ ಅವರ ಗೌರವವನ್ನು ಉಳಿಸಿಕೊಳ್ಳುವುದು ಒಳ್ಳೆಯದು ಎಂದು ಮುಖ್ಯಮಂತ್ರಿಗಳು ತಮ್ಮ ಅನಿಸಿಕೆಯನ್ನು
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

B.Y.Raghavendra ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂಸದ ರಾಘವೇಂದ್ರ

0

B.Y.Raghavendra ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ, ಶ್ರೀ ಮಹರ್ಷಿ ಗುರುಪೀಠ, ರಾಜನಹಳ್ಳಿ, ಹರಿಹರದಲ್ಲಿ ಶ್ರೀ ಮಠದ 28ನೇ ವಾರ್ಷಿಕೋತ್ಸವ, ಲಿಂಗೈಕ ಜಗದ್ಗುರು ಶ್ರೀ ಪುಣ್ಯಾನಂದ ಪುರಿ ಮಹಾಸ್ವಾಮೀಜಿ ಯವರ 19ನೇ ವರ್ಷದ ಪುಣ್ಯಾರಾಧನೆ ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಡಾ. ವಾಲ್ಮೀಕಿ ಪ್ರಸನ್ನನಂದ ಮಹಾಸ್ವಾಮೀಜಿಯವರ 18ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಭಕ್ತಿಭಾವದಿಂದ ನೆರವೇರಿತು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಆಯೋಜಿಸಲಾದ ವೈದ್ಯಕೀಯ ಗೋಷ್ಠಿಯಲ್ಲಿ ಪ್ರಮುಖ ವೈದ್ಯರುಗಳು ಭಾಗವಹಿಸಿ ಭಕ್ತರಿಗೆ ಆರೋಗ್ಯ ಸೇವೆ ಹಾಗೂ ಮಾರ್ಗದರ್ಶನ ನೀಡಿದರು.

B.Y.Raghavendra ಧರ್ಮ, ಸಂಸ್ಕೃತಿ ಮತ್ತು ಸಮಾಜಸೇವೆಯ ಸಮನ್ವಯಗೊಂಡ ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

Madhu Bangarappa ಕ್ರಿಕೆಟ್ ಕೇವಲ ಆಟವಲ್ಲ.ಅದು ಸಾಧನೆಯ ಹಾದಿಯಾಗಿದೆ- ಮಧು ಬಂಗಾರಪ್ಪ

0

Madhu Bangarappa ಗುಡ್ಡೆಮನೆ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಗುಡ್ಡೆಮನೆ ಗ್ರಾಮದ ನಾಳಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ‘ಬಂಗಾರಪ್ಪ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ. ಮಧು ಬಂಗಾರಪ್ಪ ಪಾಲ್ಗೊಂಡಿದ್ದರು.

ಕ್ರಿಕೆಟ್ ಕೇವಲ ಒಂದು ಆಟವಲ್ಲ ಅದು ಸಾಧನೆಯ ಹಾದಿಯಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ರಾಜ್ಯಮಟ್ಟದ ಪಂದ್ಯಾವಳಿಗಳು ನಡೆಯುವುದರಿಂದ ಸ್ಥಳೀಯ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳು ದೊರಕುತ್ತವೆ. ಸತತ 4 ದಿನಗಳ ಕಾಲ ಶಿಸ್ತುಬದ್ಧವಾಗಿ ಈ ಟೂರ್ನಿಯನ್ನು ಆಯೋಜಿಸಿದ ಯುವಕರ ತಂಡಕ್ಕೆ ಮತ್ತು ಭಾಗವಹಿಸಿದ ಎಲ್ಲಾ ಆಟಗಾರರಿಗೆ ಅಭಿನಂದನೆಗಳನ್ನು ಮಧು ಬಂಗಾರಪ್ಪ ತಿಳಿಸಿದರು

Madhu Bangarappa ಬಳಿಕ ಪ್ರಥಮ ಬಹುಮಾನವಾಗಿ 2 ಲಕ್ಷ ರೂಪಾಯಿಗಳ ನಗದು, ದ್ವಿತೀಯ ಬಹುಮಾನವಾಗಿ 1 ಲಕ್ಷ ರೂಪಾಯಿಗಳ ನಗದು ಬಹುಮಾನದ ಚೆಕ್ ಗಳನ್ನು ವಿಜೇತ ತಂಡಗಳಿಗೆ ನೀಡುವ ಮೂಲಕ ಬಂಗಾರಪ್ಪ ಟ್ರೋಫಿ ಗೆದ್ದ ಸಾಧಕರಿಗೆ ಸಚಿವರು ಶುಭ ಹಾರೈಸಿದರು

ಸರ್ಕಾರದ ಸೂಚನೆಯಂತೆ ಕನ್ನಡ ಭಾಷಾ ನೀತಿ & ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ- ಪ್ರಭುಲಿಂಗ ಕವಳಿಕಟ್ಟಿ

0

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಡಳಿತದ ನಿಯಂತ್ರಣದಲ್ಲಿ ಹಾಗೂ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕನ್ನಡ ಭಾಷಾನೀತಿ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕನ್ನಡ ಅನುಷ್ಟಾನದಲ್ಲಿ ಲೋಪದೋಷಗಳು ಕಂಡುಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಲಾಗುವ ಸಭೆ-ಸಮಾರಂಭಗಳ ತಿಳುವಳಿಕೆಯನ್ನು ಕನ್ನಡದಲ್ಲಿಯೇ ಅಚ್ಚುಹಾಕಿಸಿ ಸಂಬಂಧಿಸಿದವರಿಗೆ ತಲುಪಿಸಲು ಸೂಚಿಸಲಾಗುವುದು ಎಂದ ಅವರು, ಪ್ರತಿ ಕಚೇರಿಯಿಂದ ನಡೆಸಲಾಗುವ ಪತ್ರ ವ್ಯವಹಾರಗಳೂ ಕನ್ನಡದಲ್ಲಿಯೇ ಇರುವಂತೆ ಸೂಚಿಸಲಾಗುವುದು ಎಂದರು.
ಪ್ರತಿ ನಾಮಫಲಕಗಳ ಮೇಲೆ ಆಯಾ ಊರಿನ ಹೆಸರನ್ನು ಬರೆದಿರಬೇಕು. ರಾಜ್ಯದ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಹಾಗೂ ಭಾಷಾನೀತಿಯ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ನೂತನವಾಗಿ ನೇಮಕಗೊಂಡಿರುವ ಜಾಗೃತಿ ಸಮಿತಿ ಸದಸ್ಯರುಗಳ ಸಲಹೆ-ಸಹಕಾರವನ್ನು ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಡಾ|| ಎ.ಬಿ.ರಾಮಚಂದ್ರ ಅವರು ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ನಿರ್ವಹಿಸುವ ಪ್ರತಿ ಕಡತಗಳು, ಅಧಿಕಾರಿಗಳು ಬರೆಯುವ ಟಿಪ್ಪಣಿಗಳೂ ಸಹ ಆಂಗ್ಲಭಾಷೆಯಲ್ಲಿರುವುದನ್ನು ಗಮನಿಸಲಾಗಿದೆ. ಈ ಎಲ್ಲಾ ಸಂದರ್ಭಗಳಲ್ಲಿಯೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಕನ್ನಡ ಅನುಷ್ಟಾನಕ್ಕೆ ತೊಡಕಾಗಿದೆ ಎಂದರು.
ಸಾಂಸ್ಕೃತಿಕವಾಗಿ, ಭಾಷಿಕವಾಗಿ ಕನ್ನಡ ಭಾಷೆಯ ಅಸ್ಮಿತತೆಯ ಕೇಂದ್ರ ಬಿಂದು ಶಿವಮೊಗ್ಗ ಜಿಲ್ಲೆ. ಇಲ್ಲಿಂದಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸುವ ಕಾರ್ಯ ಆರಂಭಗೊಳ್ಳಬೇಕು. ಆದ್ದರಿಂದ ಪ್ರತಿ ತಿಂಗಳಲ್ಲಿ ಒಂದು ದಿನ ಮೂರು ಕಚೇರಿಗಳಿಗೆ, ಶಾಲೆ-ಕಾಲೇಜು ವಿಶ್ವವಿದ್ಯಾಲಯಗಳಿಗೆ ಜಾಗೃತಿ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ನಗರದಲ್ಲಿನ ಅಂಗಡಿ-ಮುಂಗಟ್ಟುಗಳ ನಾಮಫಲಕಗಳೂ ಸಹ ಶೇ.60ಕನ್ನಡದಲ್ಲಿರಬೇಕೆಂಬ ನಿಯಮವಿದೆ. ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನೂತನ ಅಂಗಡಿಗಳಿಗೆ ಹಾಗೂ ಅದರ ನವೀಕರಣ ಸಂದರ್ಭದಲ್ಲಿ ಅಂಗಡಿಯ ನಾಮಫಲಕದ ಛಾಯಾಚಿತ್ರವನ್ನು ಅವಲೋಕಿಸಿ ಪರವಾನಿಗೆ ನೀಡಬೇಕು. ಖಾಸಗಿ ಶಾಲೆಗಳಲ್ಲಿಯೂ ಸರ್ಕಾರದ ಕನ್ನಡ ಪಠ್ಯಕ್ರಮಕ್ಕೆ ಬದಲಾಗಿ ಬೇರೆಯದಾದ ಪಠ್ಯಕ್ರಮ ಬೋದಿಸುತ್ತಿರುವುದು, ವಿಶೇಷವಾಗಿ ಕನ್ನಡವನ್ನು ನಿರ್ಲಕ್ಷಿಸಿ, ಇಂಗ್ಲೀಷಿನಲ್ಲಿಯೇ ಬೋದಿಸುತ್ತಿರುವುದನ್ನು ಗಮನಿಸಲಾಗಿದೆ. ಈ ಎಲ್ಲೆಡೆಯಲ್ಲೂ ಕನ್ನಡ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲೇಬೇಕಾದ ಅಗತ್ಯವಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಕನ್ನಡ ಜಾಗೃತ ಸಮಿತಿ ಸದಸ್ಯ ಡಿ.ಮಂಜುನಾಥ್‌ಅವರು ಮಾತನಾಡಿ, ರಾಷ್ಟ್ರೀಯ ಬ್ಯಾಂಕುಗಳ ಚಲನ್‌ಗಳಲ್ಲಿ, ರೈಲ್ವೇ ಟಿಕೇಟ್‌ಗಳಲ್ಲಿ ಕನ್ನಡ ಕಾಣೆಯಾಗಿರುವುದು ಆಘಾತಕಾರಿಯಾಗಿದೆ. ಇಲ್ಲಿ ಕನ್ನಡ ಬಳಕೆಗೆ ಸೂಚನೆ ನೀಡಬೇಕು. ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂಧಿಗಳು ಕನ್ನಡಿಗರಾಗಿರಬೇಕು. ಅಥವಾ ಕನ್ನಡ ಕಲಿತು ಮಾತನಾಡಿ, ಜನರಿಗೆ ಸಕಾಲಿಕವಾಗಿ ಸ್ಪಂದಿಸುವಂತಾಗಬೇಕು. ವಿದ್ಯುತ್‌ನಿಗಮ, ವಿವಿಧ ಕೈಗಾರಿಕೆಗಳಲ್ಲಿ ಮತ್ತು ಅಲ್ಲಿನ ಉತ್ಪನ್ನಗಳ ಮೇಲೆ ಕನ್ನಡ ಬಳಸುವಂತೆ ಸೂಚಿಸಬೇಕು ಎಂದವರು ನುಡಿದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವವರು ಶೇ.80ರಷ್ಟು ಜನ ಕನ್ನಡಿಗರಿರಲಿ. ಡೆತ್‌ರಿಪೋರ್ಟ್‌ಕನ್ನಡದಲ್ಲಿಯೂ ಇರಲಿ. ಪೋಷಕರಿಗೆ ಆಂಗ್ಲ ವ್ಯಾಮೋಹ ಸರಿಯಲ್ಲ. ಕಳೆದ ಸಾಲಿನ ಎಸ್.ಎಸ್.‌ಎಲ್‌.ಸಿ. ಪರೀಕ್ಷೆಯಲ್ಲಿ 1.65ಲಕ್ಷ ಮಕ್ಕಳು ಕನ್ನಡದಲ್ಲಿ ಅನುತ್ತೀರ್ಣರಾಗಿರುವುದಕ್ಕೆ ಕಾರಣಗಳನ್ನು ಗುರುತಿಸಿ, ಸುಧಾರಣೆಗೆ ಕ್ರಮ ವಹಿಸಲಾಗುತ್ತಿದೆ. ಡಾ|| ಎ.ಬಿ.ರಾಮಚಂದ್ರ, ಜಾಗೃತಿ ಸಮಿತಿ ಸದಸ್ಯರು.

ಆಂಗ್ಲಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಉಪೇಕ್ಷಿಸಲಾಗುತ್ತಿದೆ. ಉರ್ದು ಶಾಲೆಗಳ ಕನ್ನಡ ಶಿಕ್ಷಕರಿಗೆ ಕನ್ನಡ ಬಾಷಾಕಲಿಕೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವ ಅಗತ್ಯವಿದೆ. ಡಿ.ಮಂಜುನಾಥ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಕನ್ನಡ ಜಾಗೃತ ಸಮಿತಿ ಸದಸ್ಯರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ಹಾಲಾಡಿ, ಕನ್ನಡ ಜಾಗೃತಿ ಸಮಿತಿ ಸದಸ್ಯ ಹೆಚ್.ಜಿ.ಮಲ್ಲಯ್ಯ, ಸತೀಶ್‌ಅಧೀನಸಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಸುರೇಶ್‌ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Department of Kannada and Culture ಫೆಬ್ರವರಿ 10. ಜಿಲ್ಲಾಡಳಿತದಿಂದ ಕಾಯಕ ಶರಣರ ಜಯಂತಿ ಆಚರಣೆಗೆ ಸಿದ್ಧತೆ

0

Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಫೆ. 10 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಕಾಯಕ ಶರಣರ ಜಯಂತಿಯನ್ನು ಆಯೋಜಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕರಾದ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
Department of Kannada and Culture ಜಿಲ್ಲೆಯ ಸಂಸದರು, ವಿಧಾನಸಭಾ, ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಮಹಾನಗರಪಾಲಿಕೆ ಮಹಾಪೌರರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿ.ಪಂ ಸಿಇಓ, ಮಹಾನಗರ ಪಾಲಿಕೆ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆ ಮುಖಂಡರು, ಪದಾಧಿಕಾರಿಗಳು ಪಾಲ್ಗೊಳ್ಳುವರು.
ಈ ಕಾರ್ಯಕ್ರಮದಲ್ಲಿ ಶಂಕರಘಟ್ಟ ಸಾಹಿತಿಗಳಾದ ಡಾ. ಬಸವರಾಜ್ ನೆಲ್ಲಿಸರ ರವರಿಂದ ವಿಶೇಷ ಉಪನ್ಯಾಸ ನೀಡುವರು.

Shimoga Soldier Welfare and Rehabilitation Department ಡಿಜಿಆರ್ ವತಿಯಿಂದ ಬೆಂಗಳೂರಿನಲ್ಲಿ ಮಾಜಿ ಸೈನಿಕರಿಗೆ ಉದ್ಯೋಗ ಮೇಳ

0

Shimoga Soldier Welfare and Rehabilitation Department ಡೈರೆಕ್ಟೋರೇಟ್ ಜನರಲ್ ರಿಸೆಟ್ಲ್ ಮೆಂಟ್ ಇವರ ಪ್ರಾಯೋಜಕತ್ವದಲ್ಲಿ ಮಾಜಿ ಸೈನಿಕರಿಗಾಗಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಅಂಡ್ ಸೆಂಟರ್, ಬೆಂಗಳೂರು ಇಲ್ಲಿ ಫೆ 27 ರಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ಮಾಜಿ ಸೈನಿಕರು, ಮಾಜಿ ಸೈನಿಕ ಗುರುತಿನ ಚೀಟಿ ಮತ್ತು ಬಯೊಡೇಟದ 5 ಪ್ರತಿಗಳೊಂದಿಗೆ ನೇರವಾಗಿ ಭಾಗವಹಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 020-26341217/011-20863432 ಹಾಗೂ ವೆಬ್‌ಸೈಟ್ drzspne@desw.gov.in,/ seopadgr@desw.gov.in ಅನ್ನು ಸಂಪರ್ಕಿಸಬಹುದು.

ಪಾರದರ್ಶಕತೆ ಮತ್ತು ಗೌಪ್ಯತೆ ಕಾಪಾಡಲು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಗಳ ಬಳಕೆ, ರಾಜ್ಯ ಸರ್ಕಾರದ ನಿರ್ಧಾರ

0

ಸ್ಥಳೀಯ ಪ್ರಾಧಿಕಾರಗಳ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಹಿಂದಿನಂತೆ ಮತಪತ್ರಗಳ ಮೂಲಕ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಮತಪತ್ರ ಬಳಸಿ ಚುನಾವಣೆ ನಡೆಸಲು ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೀಗ ಗ್ರಾಮೀಣ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಅದೇ ಮಾದರಿ ಅನುಸರಿಸಲು ಕಾಯ್ದೆಗೆ ತಿದ್ದುಪಡಿ ತಂದು, ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರಗಳ (ಬ್ಯಾಲೆಟ್‌ ಪೇಪರ್‌) ಮೂಲಕವೇ ಚುನಾವಣೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಸಾಗರದ ಎಲ್.ಬಿ.ಕಾಲೇಜಿನಲ್ಲಿ ವೃತ್ತಪರ ಮಾರ್ಗದರ್ಶನ ಕಾರ್ಯಕ್ರಮ

0

ಎಲ್. ಬಿ. ಮತ್ತು ಎಸ್. ಬಿ. ಎಸ್. ಕಾಲೇಜಿನ ಅಂತಿಮ ವರ್ಷದ BCA ವಿದ್ಯಾರ್ಥಿಗಳಿಗೆ ಶ್ರೀ ಶಿಶಿರ ಎಂ. ಎಸ್., ಮಂಚಾಲೆ ( SAGE BANK, ಬೆಂಗಳೂರು, ಇದರ ಇಂಜಿನಿಯರ್ ) ಇವರು ವೃತ್ತಿಪರ ಮಾರ್ಗದರ್ಶನ ಮತ್ತು ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕುರಿತಂತೆ ಸುಮಾರು 2:30 ಗಂಟೆಗಳ ಕಾಲ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಓರ್ವ ವ್ಯಕ್ತಿ , ವ್ಯಕ್ತಿತ್ವದಿಂದ ದೊಡ್ಡವನಾಗುತ್ತಾನೆ ಹೊರತು ಆಸ್ತಿ ಅಂತಸ್ತಿನಿಂದಲ್ಲ- ಎಂ.ಎನ್.ಸುಂದರರಾಜ್

0

ಭೂಪಾಳಂ ವಿಜಯಕುಮಾರ್ ಒಬ್ಬ ಸಾತ್ವಿಕ ಭಾವಜೀವಿ ಆಗಿದ್ದರು ಸದಾ ಹಸನ್ಮುಖಿಯಾಗಿ ಎಲ್ಲರೊಡನೆ ಸ್ನೇಹದಿಂದ ಇದ್ದ ಒಬ್ಬ ಸಜ್ಜನ. ಒಳ್ಳೆಯ ಕವಿಯಾಗಿ ಉತ್ತಮ ವೀಣಾ ವಾದಕರಾಗಿ ಮತ್ತು ಪ್ರಗತಿಪರ ರೈತರಾಗಿ ಎಲ್ಲಕ್ಕಿಂತ ಹೆಚ್ಚಾಗಿ ಆತ್ಮೀಯರಾಗಿ ಬಾಳಿದವರು. ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕವನವಾಚನ ಮಾಡುವಾಗ ಸಹವೇ ಆ ಕವನಗಳಿಗೆ ರಾಗ ಸಂಯೋಜಿಸಿ ಹಾಡುತ್ತಿದ್ದರು. ತಮ್ಮ ಭೂಪಾಳ0 ವಂಶದ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದವರು. ತಮ್ಮ ಮನೆಯಲ್ಲಿ ಆಗಾಗ ಸಾಹಿತ್ಯ ಮತ್ತು ಸಂಗೀತದ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಗೆಳೆಯರನ್ನು ಆಹ್ವಾನಿಸಿ ರಂಜಿಸುತ್ತಿದ್ದರು ಎಂದು ಸಾಹಿತಿ ಎಂ ಎನ್ ಸುಂದರರಾಜ್ ತಿಳಿಸಿದ್ದಾರೆ. ಅವರು ವಿಜಯಪಥ ಅಡಿಯಲ್ಲಿ ನಡೆದ ವಿಜಯ್ ಕುಮಾರ್ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವದಿಂದ ದೊಡ್ಡವನಾಗುತ್ತಾನೆ ಹೊರತಾಗಿ ಆತನ ಆಸ್ತಿ ಅಂತಸ್ತಿ ನಂದಲ್ಲ ಎಂದು ಈ ಸಂದರ್ಭದಲ್ಲಿ ಹೇಳಿ ವಿಜಯ್ ಕುಮಾರ್ ಅವರ ಜೀವನದ ಕೆಲವು ಘಟನೆಗಳನ್ನು ತಿಳಿಸಿಕೊಟ್ಟರು. ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಟಿಆರ್ ಅಶ್ವತ ನಾರಾಯಣ ಶೆಟ್ಟಿ ಅವರು ನಡೆಸಿಕೊಟ್ಟರು. ಅವರು ಮಾತನಾಡುತ್ತಾ ವಿಜಯಕುಮಾರ್ ತಮ್ಮ ಅಪೂರ್ವ ವ್ಯಕ್ತಿತ್ವ ಮತ್ತು ಕವಿ ಮನಸ್ಸಿನಿಂದ ಹೆಚ್ಚು ಪ್ರಸಿದ್ಧರಾಗಿದ್ದರು ಎಂದು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಶಿವಮೊಗ್ಗ ಟೈಮ್ಸ್ ನ ಸಂಪಾದಕರಾದ ಎಸ್ ಚಂದ್ರಕಾಂತ್ ಅವರು ಮಾತನಾಡಿ ವಿಜಯಕುಮಾರ್ ಅನೇಕ ಬಾರಿ ಕವನ ವಾಚನ ಮಾಡಿದ್ದನ್ನು ತಾವು ಕೇಳಿರುವುದಾಗಿ ತಿಳಿಸಿ ಅವರ ಎರಡು ಕವನ ಸಂಕಲನಗಳನ್ನು ತಮಗೆ ನೀಡಿದ್ದನ್ನು ನೆನಪು ಮಾಡಿಕೊಂಡರು. ಹಾಗೆ ಭೂಪಾಳ0 ಚಂದ್ರಶೇಖರಯ್ಯನವರು ತಮಗೆ ಪತ್ರಿಕೋದ್ಯಮದ ಒಳ ತಿರುವುಗಳನ್ನು ತಿಳಿಸಿಕೊಟ್ಟ ಮಹಾನುಭಾವರು ಎಂಬುದನ್ನು ಬಿಚ್ಚಿಟ್ಟರು. ಭೂಪಾಳಂ ಕುಟುಂಬದವರು ಕೋವಿಡ್ ಸಮಯದಲ್ಲಿ ಸುಮಾರು ಐದು ಕೋಟಿ ರೂಪಾಯಿಗಳ ನೆರವನ್ನು ಮೆಗ್ಗಾನ್ ಆಸ್ಪತ್ರೆಗೆ ನೀಡಿದ್ದನ್ನು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುವರ್ಣ ವಿಜಯಕುಮಾರ್ ಅವರು ಮಾತನಾಡಿ ಇಂದಿಗೂ ತಮ್ಮ ಪತಿ ಬಗ್ಗೆ ಇಷ್ಟೊಂದು ಅಭಿಮಾನ ಇರುವುದು ತಮಗೆ ಸಂತಸ ತಂದಿದೆ ಎಂದು ಹೇಳಿದರು. ಕೌಟುಂಬಿಕವಾಗಿ ಅತ್ಯಂತ ಪ್ರೀತಿ ಹೊಂದಿ ತಮ್ಮ ಬಗ್ಗೆಯೂ ಒಂದು ಕವನವನ್ನು ಬರೆದಿದ್ದನ್ನು ಅಭಿಮಾನದಿಂದ ಹೇಳಿಕೊಂಡರು.
ಪ್ರಾರಂಭದಲ್ಲಿ ಪ್ರತಿಭಾ ನಾಗರಾಜ್ ಅವರಿಂದ ಪ್ರಾರ್ಥನೆ ನಡೆಯಿತು ದೀಪಿಕಾ ಸ್ವಾಗತಿಸಿದರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟವರು ಶಾಂತಾ ಶೆಟ್ಟಿಯವರು.
ಕಾರ್ಯಕ್ರಮದ ಅಂಗವಾಗಿ ಜಯಶ್ರೀ ಶ್ರೀಧರ್ ವಸಂತ ವೇಣುಗೋಪಾಲ್ ಉಮಾ ದಿಲೀಪ್ ಲಕ್ಷ್ಮಿ ಮಹೇಶ್ ವಿಜಯ್ ಕುಮಾರ್ ಅವರ ಗೀತೆಗಳ ನ್ನು ಸುಶ್ರಾವ್ಯವಾಗಿ ಹಾಡಿದರು ಶೋಭಾ ಸತೀಶ್ ಅವರು ಸ್ವರಚಿತ ಕವನ ವಾಚನ ಮಾಡಿದರು. ಕೊನೆಯಲ್ಲಿ ಶರತ್ ಅವರು ವಂದನಾರ್ಪಣೆ ನಡೆಸಿಕೊಟ್ಟರು. ಒಟ್ಟಿನಲ್ಲಿ ಈ ಒಂದು ಕಾರ್ಯಕ್ರಮ ಅತ್ಯಂತ ಸ್ನೇಹದ ವಾತಾವರಣದಲ್ಲಿ ನಡೆದು ಎಲ್ಲರನ್ನೂ ಭಾವುಕತೆಯ ತ್ತ ಕರೆದು ವೈದಿತು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಜಿ ವಿಜಯಕುಮಾರ್ ಸಹಿತ 12 ಗಣ್ಯರಿಗೆ ಗೌರವಾರ್ಪಣೆ ನಡೆಯಿತು.

ಶಿವಮೊಗ್ಗದ ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಅವರಿಗೆ “ಸಾಹಿತ್ಯ ಸಿರಿ ಪ್ರಶಸ್ತಿ”

0

ಫೆ. 21 ಹಾಗೂ 22 ರಂದು ಬೆಳ್ಳೂರಿನಲ್ಲಿ ನಡೆಯುವ 10 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡುವ ಪ್ರತಿಷ್ಠಿತ “ಸಾಹಿತ್ಯ ಸಿರಿ ಪ್ರಶಸ್ತಿ”ಗೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಗೋಪಾಲ್ ಎಸ್ ಯಡಗೆರೆ ಆಯ್ಕೆಯಾಗಿದ್ದಾರೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ತಿಳಿಸಿದ್ದಾರೆ.

ಗೋಪಾಲ್ ಎಸ್ ಯಡಗೆರೆ ಅವರ ಪರಿಚಯ :

ನರಸಿಂಹರಾಜಪುರ ತಾಲ್ಲೂಕಿನ ಯಡಗೆರೆಯಲ್ಲಿ ಜನಿಸಿದ ಗೋಪಾಲ್, ಹುಟ್ಟೂರು ಯಡಗೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಗೋಪಾಲ್ ಎಸ್ ಯಡಗೆರೆ ಅವರು ಶಿವಮೊಗ್ಗದ ಕನ್ನಡಪ್ರಭ ಪತ್ರಿಕೆಯ ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಈಗಾಗಲೇ 3 ಪುಸ್ತಕಗಳನ್ನು ಅವರು ಬರೆದಿದ್ದು ಲೋಕಾರ್ಪಣೆಗೊಂಡಿದೆ. “ನಾನಾಗದ ನಾನು” ಎಂಬ ಕವನ ಸಂಕಲನ, “ಸೋಲನ್ನು ಸೋಲಿಸು” ಹಾಗೂ “ಮಿಸ್ಡ್ ಕಾಲ” ಎಂಬ ಪುಸ್ತಕ ಬಿಡುಗಡೆಯಾಗಿದೆ. “ಸೋಲನ್ನು ಸೋಲಿಸು” ಕೃತಿಗೆ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಗೋಪಾಲ್ ಎಸ್ ಯಡಗೆರೆ ಅವರು 1988 ರಿಂದ ಪತ್ರಿಕೋದ್ಯಮ ಆರಂಭಿಸಿದ್ದು, ಉದಯವಾಣಿ ದಿನ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ, ಕನ್ನಡ ಪ್ರಭ ಪತ್ರಿಕೆಯಲ್ಲಿ ಶಿವಮೊಗ್ಗ ಪ್ರಧಾನ ವರದಿಗಾರರಾಗಿ ಕಾರ್ಯಾರಂಭ ಮಾಡಿ, ಪದೋನ್ನತಿ ಹೊಂದಿ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉದಯವಾಣಿ, ಕನ್ನಡಪ್ರಭ ಪತ್ರಿಕೆಯ ಜೊತೆಗೆ ತರಂಗ, ತುಷಾರ ಪತ್ರಿಕೆಗಳಲ್ಲಿ ಹಲವಾರು ಲೇಖನ, ಮುಖಪುಟ ಲೇಖನ ಪ್ರಕಟಗೊಂಡಿದೆ. ಆಕಾಶವಾಣಿಯಲ್ಲಿ ಕವನ ವಾಚನ ಮಾಡಿದ್ದಾರೆ. 2021 ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ಮಾದ್ಯಮ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿತ್ತು.