ಸಾಧನೆಯ ಹಾದಿಯಲ್ಲಿರುವ ಮಹಿಳೆಯ ಯಶಸ್ಸಿನ ಬಗ್ಗೆ ಕುಟುಂಬದ ಸದಸ್ಯರು ಬರೆಯುವುದು ಸಾಮಾನ್ಯದ ಸಂಗತಿ.
ಆದರೆ ಎಲ್ಲಾ ಮಮಕಾರಗಳನ್ನು ಮೀರಿ ಅಕ್ಕನ ಸಾಧನೆಯ ಮೆಟ್ಟಿಲುಗಳನ್ನು ಮನತುಂಬಿ ರಂಗೋಲಿ ಇಟ್ಟಂತೆ ಬಿಡಿಸಿಟ್ಟಿದ್ದಾರೆ ಸಹೋದರ ರಾಮಚಂದ್ರ ನಾಡಿಗ್.
ಬೆಳಗಾವಿಯ ಮರಾಠಾ ಲೋಕಮಾನ್ಯ ಸೊಸೈಟಿಯವರು ನವರಾತ್ರಿ ಅಂಗವಾಗಿ ನೀಡುವ ‘ಸ್ತ್ರೀಶಕ್ತಿ’ ಪ್ರಶಸ್ತಿಯನ್ನು ಈಬಾರಿ ನನ್ನ ಅಕ್ಕ ವತ್ಸಲಾ ಇವಳಿಗೆ ನೀಡಿದ್ದಾರೆ.
ಅಕ್ಕನ ಸಾಧನೆಯ ಪಯಣವನ್ನು ರಾಮಚಂದ್ರ ನಾಡಿಗ್ ಅವರು ತಮ್ಮದೇ ಆದ ಶೈಲಿಯಲ್ಲಿ ವಿವರಿಸಿರುವ ಬಗೆ ಹೀಗಿದೆ……,
ಉದ್ಯಮದಲ್ಲಿ ಯಾವ ಮಹಿಳೆ ತನ್ನನ್ನು ತೊಡಗಿಸಿಕೊಂಡು ಯಶಸ್ವಿ ಆಗಿರುತ್ತರೋ, ಸಾಧನೆ ಮಾಡಿರುತ್ತಾರೆಯೋ ಅವರಿಗೆ ಲೋಕಮಾನ್ಯ ಸೊಸೈಟಿಯು ಈ ಪ್ರಶಸ್ತಿಯನ್ನು ನೀಡುತ್ತದೆ.
ನನ್ನ ನಾಲ್ಕು ಜನ ಅಕ್ಕಂದಿರಲ್ಲಿ ವತ್ಸಲಾ ನಾಲ್ಕನೆಯವಳು. ಓದಿನಲ್ಲಿ ಸ್ವಲ್ಪ ಹಿಂದೆ ಇದ್ದರೂ, ವ್ಯವಹಾರದ ಲಕ್ಷಣಗಳು ಮೊದಲಿನಿಂದಲೇ ಇದ್ದವು.

ಟೈಪ್ ರೈಟಿಂಗ್ ಕಲಿತಳು, ಭರತನಾಟ್ಯ ಕಲಿತಳು ಯಾವುದೂ ಕೈಹಿಡಿಯಲಿಲ್ಲ.
ಈಕೆ ಒಳ್ಳೆ ನೃತ್ಯಗಾತಿ. ಅದನ್ನೇ ಮುಂದುವರಿಸಿದ್ದರೆ ನೃತ್ಯದಲ್ಲಿ ಒಳ್ಳೆಯ ಭವಿಷ್ಯವಿತ್ತು. ಆದರೆ ಮನೆಯಲ್ಲಿನ ಹಲವು ಸಮಸ್ಯೆಗಳು ಇದಕ್ಕೆ ಆಸ್ಪದ ಕೊಡಲಿಲ್ಲ.
ಕೆಲ ವರ್ಷಗಳ ಕಾಲ ಹಳ್ಳಿಯ ಮನೆಯಲ್ಲಿ ಕುಳಿತು ಬಟ್ಟೆ ಹೊಲಿದು ಅದರಲ್ಲೆ ಉತ್ತಮ ಹಣ ಸಂಪಾದಿಸುತ್ತಿದ್ದಳು.
ಕಡೆಗೆ ಬೆಳಗಾವಿಯ ವಿಲಾಸ್ ತಿನೈಕರ್ ಜೊತೆ ಮದುವೆಯಾಯಿತು. ಭಾವ ವಿಲಾಸ್ ಅವರ ಬಗ್ಗೆ ಹಾಗೂ ಅವರ ಉದ್ಯಮದ ಬಗ್ಗೆ ನಮಗೆ ಏನೂ ಗೊತ್ತಿರಲಿಲ್ಲ.
ಆಗ ನಮ್ಮ ಭಾವ ನಡೆಸುತ್ತ ಇದ್ದದ್ದು ಸಣ್ಣ ಹೋಟೆಲ್. ಬೆಳಗಾವಿಯ ಭಾಗ್ಯನಗರದಲ್ಲಿನ ಕೆ. ಎಲ್.ಇ ಸೊಸೈಟಿಯ ಹಾಸ್ಟೆಲ್ನಲ್ಲಿ ಹೋಟೆಲ್ ನಡೆಸುತ್ತಿದ್ದರು.
ವಿಲಾಸ್ ಈ ಹೋಟೆಲ್ ಜೊತೆ ಮತ್ತೊಂದು ಹೋಟೆಲ್ ಉದ್ಯಮಕ್ಕೆ ಕೈ ಹಾಕಿದರು. ವತ್ಸಲಾ ಇಲ್ಲಿನ ವ್ಯವಹಾರ ನೋಡಿಕೊಂಡರೆ, ಭಾವ ಮತ್ತೊಂದು ಹೋಟೆಲ್ ವ್ಯವಹಾರ ನೋಡಿಕೊಳ್ಳುತ್ತಿದ್ದರು.
ಕಡೆಗೆ ಒಮ್ಮೆ ಇದ್ದಬದ್ದ ಬಂಗಾರವನ್ನೆಲ್ಲ ಮಾರಿ, ಬ್ಯಾಂಕಿನಿಂದ ಒಂದಿಷ್ಟು ಲೋನ್ ಮಾಡಿ ಭಾಗ್ಯನಗರದಲ್ಲಿ ಒಂದು ಮಳಿಗೆಯನ್ನು ಖರೀದಿ ಮಾಡಿದರು. ಅದಕ್ಕೆ “ಪದ್ಮಶ್ರೀ ಹೋಟೆಲ್” ಎಂದು ನಾಮಕರಣ ಮಾಡಿದರು.
ಎರಡರ ಜೊತೆ ಮೂರನೆಯದಾಗಿ ಈ ಹೋಟೆಲ್ ಆರಂಭವಾಯಿತು.
ಅವೆರಡು ಕಾಲೇಜ್ ಕ್ಯಾಂಟೀನ್ ಆದರೆ, ಇದು ಮಾತ್ರ ಯಾರ ಆಧೀನದಲ್ಲೂ ಇಲ್ಲದೆ ಸ್ವತಂತ್ರವಾಗಿ ನಡೆಯುವಂತಾಯಿತು. ಪದ್ಮಶ್ರೀ ಹೋಟೆಲ್ನಲ್ಲಿ ಎರಡು ಹೊತ್ತು ಊಟ ಮಾತ್ರ.
ಕಡೆಗೆ ಎರಡು ಹಾಸ್ಟೆಲ್ ಕ್ಯಾಂಟೀನ್ ಗಳನ್ನು ಬಿಟ್ಟು ಪದ್ಮಶ್ರೀ ಹೋಟೆಲ್ ಸಮೀಪವೇ ಮತ್ತೊಂದು ಜಾಗವನ್ನು ಲೀಸ್ ಗೆ ಪಡೆದು ಎರಡು ವರ್ಷದ ಹಿಂದೆ ಮತ್ತೊಂದು ಹೋಟೆಲ್ ಆರಂಭವಾಗಿದೆ.
ಇಲ್ಲಿ ಊಟ ಇಲ್ಲ ತಿಂಡಿ ಮಾತ್ರ. ಇದರ ನಡುವೆ ಮದುವೆ, ಬರ್ತಡೆ ಪಾರ್ಟಿ ಮತ್ತಿತರ ಶುಭಕಾರ್ಯಗಳಿಗೆ ಕ್ಯಾಟರಿಂಗ್ ಸೇವೆ ಕೂಡಾ ಇದೆ. ಭಾವನವರ ಎಲ್ಲಾ ಸಾಧನೆ ಹಿಂದೆ ಇರುವುದು ಅಕ್ಕ ವತ್ಸಲಾ.
ಹಬ್ಬ-ಹರಿದಿನಗಳಲ್ಲಿ ಊಟದಲ್ಲಿ ಏನಾದರೂ ವಿಶೇಷತೆ, ಅಡುಗೆ, ತಿಂಡಿಯಲ್ಲಿ ಏನಾದರೂ ವಿಶೇಷತೆ ಹೀಗೆ ಹಲವು ಹೊಸ ಪ್ರಯೋಗಗಳನ್ನು ಮಾಡಿ ಗ್ರಾಹಕರ ಮೆಚ್ಚುಗೆಗೆ ಪದ್ಮಶ್ರೀ ಹೋಟೆಲ್ ಪಾತ್ರವಾಗಿದೆ ಎಂದರೆ ಅದಕ್ಕೆ ಕಾರಣ ವತ್ಸಲಾ.
ತವರು ಮನೆಯಲ್ಲಿ ನಮ್ಮಮ್ಮ ಮಾಡುತ್ತಿದ್ದ ಚಟ್ನಿ, ಪಲ್ಯಗಳನ್ನು ಹೋಟೆಲ್ ನಲ್ಲಿ ಪ್ರಯೋಗಿಸಿದ್ದು ಗ್ರಾಹಕರಿಗೆ ಬಹಳ ಇಷ್ಟವಾಗಿದೆ.
ಅದಕ್ಕೆ ಹಿರಿಯರು ಹೇಳಿದ ಮಾತು… ಹೆಣ್ಣು ಸಂಸಾರದ ಕಣ್ಣು.
ಶ್ರೀಮತಿ ವತ್ಸಲಾ ಅವರು ಇನ್ನೂ ಹೆಚ್ಚಿನದನ್ನು ಸಾಧಿಸಲಿ ….
ಶುಭಾಶಯಗಳು.

ವಿಜಯನಗರದ ದೊರೆಗಳು ತಮ್ಮ ವಿಜಯೋತ್ಸವದ ಸಂತೋಷದಲ್ಲಿ ಶೃಂಗೇರಿ ಮಠಕ್ಕೆ ಭೂದಾನವನ್ನು ಮಾಡಿದರು. ಗುರು ವಿದ್ಯಾಶಂಕರ ಅದ್ವಿತೀಯ ದೇವಾಲಯವನ್ನು ಶೃಂಗೇರಿ ಮಠದಲ್ಲಿ ಕಟ್ಟಿಸಿಕೊಟ್ಟರು. ಶೃಂಗೇರಿ ಮಠಕ್ಕೆ ವಿಜಯನಗರದ ಸಾಮ್ರಾಜ್ಯ ಇದ್ದ ಐತಿಹಾಸಿಕ ಸಂಬಂಧವೂ ಶೃಂಗೇರಿ ಮಠದ ಹಲವಾರು ಸಂಪ್ರದಾಯ, ಆಚರಣೆ ಹಾಗೂ ಉತ್ಸವಗಳ ಉಗಮಕ್ಕೆ ಪ್ರೇರಣೆಯಾಯಿತು. ವಿಜಯನಗರದ ಹಕ್ಕ-ಬುಕ್ಕರು ವಿದ್ಯಾರಣ್ಯರಿಗೆ ಕೊಟ್ಟ ರಾಜ ಲಾಂಛನವನ್ನು ಗೌರವದಿಂದ ಶೃಂಗೇರಿ ಮಠದಲ್ಲಿ ದಸರಾ ದರ್ಬಾರ್ ಆಚರಣೆ ಆರಂಭವಾಯಿತು. ವಿಜಯನಗರದ ಸ್ಥಾಪನೆಯಾಗಿ ಇಂದಿಗೆ ಸುಮಾರು ಆರೂವರೆ ಶತಮಾನಗಳು ಕಳೆದರೂ ಇಂದಿಗೂ ಐತಿಹಾಸಿಕ ಧಾರ್ಮಿಕ ಆಚರಣೆಯು ಶೃಂಗೇರಿ ಮಠದ ದಸರಾ ಹಬ್ಬದ ವಿಶೇಷತೆಯಾಗಿದೆ. ಶಾರದಾ ಮಾತೆಯ 9 ಅಲಂಕಾರಗಳು ಹೋಮಹವನ ಪಾರಾಯಣ ಇತ್ಯಾದಿ ಧಾರ್ಮಿಕ ಆಚರಣೆಗಳು ಸಾಧಾರಣವಾಗಿ ನಮ್ಮ ನಾಡಿನ ಎಲ್ಲ ಮಠ-ಮಂದಿರ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಆದರೆ ಈ ದರ್ಬಾರ ಆಚರಣೆಯು ವಿಜಯನಗರದ ದೊರೆಗಳು ವಿಜಯನಗರ ವೆಂಬ ಮಹಾ ಸಾಮ್ರಾಜ್ಯವನ್ನು ಕಟ್ಟಲು ಕಾರಣೀಭೂತರಾದ ಶ್ರೀ ವಿದ್ಯಾರಣ್ಯರಿಗೆ ಕೊಟ್ಟ ರಾಜ್ಯ ಗೌರವದ ಸಂಕೇತವಾಗಿದ್ದು ಕನ್ನಡನಾಡಿನ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುತ್ತದೆ.
ವಿಜಯನಗರದ ದೊರೆಗಳ ನಂತರ ಕೆಳದಿ, ತ್ರಾವೆಂಕೂರ್, ಮೈಸೂರು, ಸುರಪುರ, ಜಮಖಂಡಿ, ನೇಪಾಳ, ಬರೋಡ ಮುಂತಾದ ರಾಜಸಂಸ್ಥಾನಗಳು ಶೃಂಗೇರಿ ಜಗದ್ಗುರುಗಳನ್ನು ಅಪಾರವಾಗಿ ಗೌರವಿಸುವ ಮಾರ್ಗದರ್ಶನ ಪಡೆದರೆಂದು ಪತ್ರಾಗಾರದ ಇಲಾಖೆಯ ದಾಖಲೆಗಳು ತಿಳಿಸುತ್ತವೆ. ಇಂದಿಗೂ ಶೃಂಗೇರಿ ದರ್ಬಾರ್ ನಲ್ಲಿ ಭಾರತದ ಹಲವಾರು ರಾಜವಂಶಸ್ಥರು ಗುರುಕಾಣಿಕೆಯನ್ನು ಸಲ್ಲಿಸುವುದು ವಿಶೇಷವಾಗಿದೆ. ಯಾವ ಸ್ವರ್ಣ ಸಿಂಹಾಸನವನ್ನು ಶ್ರೀ ವಿದ್ಯಾರಣ್ಯರು ಹರಿಹರ ಬುಕ್ಕರಾಯರಿಗೆ ಅಲಂಕರಿಸಲು ಸಹಾಯಮಾಡಿದ್ದರೊ ಆ ಸಿಂಹಾಸನವು ಪಾಂಡವರಿಗೆ ಮತ್ತು ವಿಕ್ರಮಾದಿತ್ಯನಿಗೆ ಸೇರಿದ್ದು ಎಂಬ ಪ್ರತೀತಿ ಇದೆ. ಇದೇ ಸ್ವರ್ಣ ಸಿಂಹಾಸನವನ್ನು ಮೈಸೂರು ದೊರೆಗಳು ವಶಪಡಿಸಿಕೊಂಡು ಮೈಸೂರು ಸಂಸ್ಥಾನವನ್ನು ಸಂಸ್ಥಾನವನ್ನು ಕಟ್ಟಿದ್ದರಿಂದ ಸಹಜವಾಗಿವೆ ಮೈಸೂರಿನ ಎಲ್ಲಾ ದೊರೆಗಳು ಶೃಂಗೇರಿ ಗುರುಗಳನ್ನು ರಾಜಗುರುಗಳು ಎಂದು ಗೌರವಿಸುವುದನ್ನು ನಾವು ಇತಿಹಾಸದ ದಾಖಲೆಗಳಲ್ಲಿ ಕಾಣಬಹುದು. ಇಂದಿಗೂ ಶೃಂಗೇರಿ ಜಗದ್ಗುರುಗಳವರು ಇಂದಿಗೂ ವಿಜಯದಶಮಿ ಮೆರವಣಿಗೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಭಕ್ತಿಪೂರ್ವಕವಾಗಿ ಅರ್ಪಿಸಿದ ಸ್ವರ್ಣ ಪಾಲಕಿಯನ್ನು ಅನುಭವಿಸುವುದನ್ನು ನಾವು ಕಾಣಬಹುದು. ಶೃಂಗೇರಿ ಜಗದ್ಗುರುಗಳಾಗಿದ್ದ ನರಸಿಂಹ ಭಾರತೀ ಸ್ವಾಮಿಗಳವರು ಚಾಮರಾಜ ಒಡೆಯರಿಗೆ ಬಳುವಳಿಯಾಗಿ ಆಶೀರ್ವದಿಸಿದ ನವರತ್ನ ಕೀಟವನ್ನು ಇಂದಿಗೂ ಮೈಸೂರು ದಸರಾ ಆಚರಣೆಯಲ್ಲಿ ಪೂಜಿಸುವುದು ಗುರು-ಶಿಷ್ಯ ಬಾಂಧವ್ಯಕ್ಕೆ ಪ್ರತ್ಯಕ್ಷ ಪ್ರಮಾಣವಾಗಿ ನಿಲ್ಲುತ್ತದೆ.
