ದೈನಂದಿನ ಜೀವನ ಮತ್ತು ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಜನರಿಗೆ ಚೀನಾ ಸರ್ಕಾರವೇ ಶಿಫಾರಸ್ಸು ಮಾಡಿದೆ . ಜನರು ಆತಂಕದಲ್ಲಿ ಮುಳುಗಿದ್ದು ಅಗತ್ಯವಸ್ತುಗಳನ್ನು ಖರೀದಿಸುತ್ತಿದ್ದಾರೆ. ಅಲ್ಲದೆ ಚೀನಾ ತನ್ನೊಂದಿಗೆ ಯುದ್ಧ ನಡೆಸಲು ಮುಂದಾಗಿದೆ ಎನ್ನುವ ಊಹಾಪೋಹ ಮತ್ತು ಪ್ರಶ್ನೆಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಸ್ಥಳಿಯ ಮಾಧ್ಯಮಗಳ ಪ್ರಕಾರ, ಯುದ್ಧ ಭಯವೋ ಅಥವಾ ಇಲ್ಲವೋ, ಚೀನಾದ ಕೆಲವು ನಗರಗಳಲ್ಲಿ ಜನರು ಅಕ್ಕಿ, ನೂಡಲ್ಸ್, ಮತ್ತು ಅಡುಗೆ ಎಣ್ಣೆಯನ್ನು ಮುಗಿಬಿದ್ದು ಖರೀದಿಸುತ್ತಿರುವುದು ಅಲ್ಲಲ್ಲಿ ಕಂಡು ಬಂದಿದೆ. ಕೋವಿಡ್ – 19 ಏಕಾಏಕಿ ಹಲವಾರು ಪ್ರಾಂತ್ಯಗಳಲ್ಲಿ ಹರಡುತ್ತಿರುವುದರಿಂದ ನೆರೆಹೊರೆಯಲ್ಲಿ ಲಾಕ್ಡೌನ್ ಸಾಧ್ಯತೆಯು ಕೆಲವರಿಗೆ ತಕ್ಷಣಕ್ಕೆ ಹೆಚ್ಚು ಚಿಂತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಹುಶಃ ಮಿಲಿಟರಿ ಹಗೆತನವು ಸನ್ನಿಹಿತವಾಗಿದೆ ಎಂದು ಹೆಚ್ಚಿನ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್ಗಳು ಜನರ ಅಂತಹ ಅಭಿಪ್ರಾಯ ಇರುವುದನ್ನು ಮತ್ತು ಯುದ್ಧೋತ್ಸಾಹದ ಹೇಳಿಕೆಗಳನ್ನು ಹೊರಹಾಕಿದೆ.
ಚೀನಾ : ಆಂತರಿಕ ಆತಂಕ
ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ
ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 18 ಸಾವಿರ ಹಾಗೂ ಪ್ರೌಢಶಾಲೆಗಳಲ್ಲಿ 5,078 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಪ್ರೌಢಶಾಲೆಗಳಿಗೆ ಈಗಾಗಲೇ 3253 ಅಂದರೆ ಶೇಕಡಾ 60ರಷ್ಟು ಹುದ್ದೆಗಳಿವೆ. ಅತಿಥಿ ಉಪನ್ಯಾಸಕರ ನೇಮಕಕ್ಕೆ ಸೂಚಿಸಲಾಗಿದೆ. ಉಳಿದ 1825 ಶಿಕ್ಷಕರ ನೇಮಕಕ್ಕೆ ಸುತ್ತೋಲೆ ಹೊರಡಿಸಲಾಗಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಜಾರಿಯಲ್ಲಿದೆ. ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ಕೂಡಲೇ ಅತಿಥಿ ಶಿಕ್ಷಕರನ್ನು ಬಿಡುಗಡೆ ಮಾಡಬೇಕು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ಮಾಸಿಕ 7,500ಸಾವಿರ ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಮಾಸಿಕ 8,000ಗೌರವ ಸಂಭಾವನೆ ಸಿಗಲಿದೆ. ತಾನಿರುವ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಅತಿಥಿ ಶಿಕ್ಷಕರ ನೇಮಕಾತಿ ಹೊಣೆಯನ್ನು ಆಯಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ. ಮೆರಿಟ್ ಆಧಾರದಲ್ಲಿ ನೇಮಕಾತಿ ನಡೆಯಬೇಕು ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಇರುವ ಹುದ್ದೆಗಳು, ಶಿಕ್ಷಕರಹಿತ ಶಾಲೆಗಳಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.
ಹಿಂದೂ ಧರ್ಮಕ್ಕೆ ಆದಿಶಂಕರರ ಕೊಡುಗೆ ಅಪಾರ : ಮೋದಿಜಿ
ನವೆಂಬರ್ 5 ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ಪ್ರಸಿದ್ಧ ಯಾತ್ರಾಸ್ಥಳ ಕೇದಾರನಾಥ್ ಗೆ ಭೇಟಿ ನೀಡಿದರು. ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣ ಮಾಡುವ ಕಾರ್ಯಕ್ರಮಕ್ಕೆ ಆಗಮಿಸಿದರು. 2016ರಲ್ಲಿ ಬಂದ ಹಿಮ ಪ್ರವಾಹದ ಪರಿಣಾಮವಾಗಿ ಶಂಕರಾಚಾರ್ಯರ ಸಮಾಧಿ ಅಸ್ತವ್ಯಸ್ತವಾಗಿತ್ತು. ಮತ್ತೆ ಅದರ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನ ಮೈಸೂರಿನ ಶಿಲ್ಪಿ ಅವರು ತಮ್ಮ ಕರಕುಶಲತೆಯಿಂದ ನಿರ್ಮಿಸಿದ್ದಾರೆ. 12 ಅಡಿ ಎತ್ತರ ಇರುವ ಶಂಕರಾಚಾರ್ಯರ ಮೂರ್ತಿಯನ್ನು ಬಹುಸುಂದರವಾಗಿ ನಿರ್ಮಿಸಲಾಗಿದೆ. ಅವರ ಶಿಲ್ಪ ಕಲಾ ನೈಪುಣ್ಯಕ್ಕೆ ಗೌರವಿಸಿ ಕೇಂದ್ರ ಸರ್ಕಾರ ಅವರನ್ನು ಪರೀಕ್ಷಾರ್ಥವಾಗಿ ಆಚಾರ್ಯರ ಮಾದರಿ ಮೂರ್ತಿಯನ್ನು ಕೆತ್ತನೆ ಮಾಡಲು ಕೇಳಲಾಗಿತ್ತು. ಮೋದಿ ಅವರೇ ಈ ಕೆತ್ತನೆಗೆ ಮನಸೋತು ಕೆಲಸ ಆರಂಭಿಸಲು ಸೂಚಿಸಿದರು. ಶಂಕರಾಚಾರ್ಯರ ಮೂರ್ತಿಯನ್ನು ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿದೆ.
ಪ್ರಧಾನಿ ಮೋದಿ ಜಿ ಅವರು ಕೇದಾರೇಶ್ವರನಿಗೆ ಅರ್ಚನೆಯ ಮಾಡಿ ಪೂಜೆ ಸಲ್ಲಿಸಿದರು. ಕನ್ನಡಿಗ ಅರ್ಚಕರಾದ ಶ್ರೀ ವಾಗೀಶ ಲಿಂಗ ಅವರು ರುದ್ರಾಕ್ಷಿ ಹಾರವನ್ನು ಪ್ರಧಾನಿಯವರ ಕೊರಳಿಗೆ ತೊಡಿಸಿ ಸ್ವಾಗತಿಸಿದರು. ನಂತರ ಪ್ರಧಾನಿಯವರು ಕೇದಾರೇಶ್ವರನಿಗೆ ಆರತಿ ಬೆಳಗಿದರು. ಭಕ್ತಿಪರವಶರಾಗಿ ಆದಿಶಂಕರಾಚಾರ್ಯರ ಪ್ರತಿಮೆ ಮುಂದೆ ಧ್ಯಾನಸ್ಥರಾಗಿ ಕುಳಿತಿದ್ದರು. ತಮ್ಮ ಭಾಷಣದಲ್ಲಿ ಹಿಂದೂ ಧರ್ಮಕ್ಕೆ ಆದಿಶಂಕರರ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಗೃಹ ಬಳಕೆಯ ಎಲ್ ಪಿಜಿ ಬೆಲೆ ಇಳಿಯಲಿ
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದಾಗಿ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ದರ ಇಳಿಕೆ ಮಾಡಿದ್ದು ಜನರು ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಸಾಮಾನ್ಯ ಕುಟುಂಬಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿರುವ ಅಡುಗೆ ಅನಿಲ ದರವನ್ನು ಕೂಡ ಇಳಿಸಬೇಕು ಎಂಬ ಬೇಡಿಕೆ ಬಲವಾಗಿ ಕೇಳಿಬರುತ್ತಿದೆ.
ಗೃಹ ಬಳಕೆ ಸಿಲಿಂಡರ್ ಗಳ ದರ ಕೆಲವು ತಿಂಗಳಲ್ಲಿ ದುಬಾರಿಯಾಗಿದ್ದು ಶ್ರೀಸಾಮಾನ್ಯರಿಗೆ ಹೊರೆಯಾಗಿದೆ. ಹೀಗಾಗಿ ರಾಜಕೀಯ ನಾಯಕರು ಮತ್ತು ಜನಸಾಮಾನ್ಯರು ಅಡುಗೆ ಅನಿಲದ ಬೆಲೆ ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ.
ವಾಹನ ಸವಾರರ ಗಿಂತ ಹೆಚ್ಚಾಗಿ ಸರ್ಕಾರ ಇನ್ನೊಂದು ಅಂಶವನ್ನು ಪ್ರಮುಖವಾಗಿ ಗಮನಿಸಬೇಕಾಗಿದೆ. ಗೃಹಬಳಕೆಯ ಸಿಲಿಂಡರ್ ಬಳಕೆ ಕೂಡ ಗಗನಕ್ಕೇರಿದೆ. ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರಿಗೆ ಸಿಲಿಂಡರ್ ಬೆಲೆ ಕೈಗೆಟುಕದಂತಾಗಿದೆ. ಕೇಂದ್ರ ಸರ್ಕಾರ ತಕ್ಷಣ ಗಮನ ಹರಿಸಿ ಗೃಹ ಬಳಕೆ ಸಿಲಿಂಡರ್ ಬೆಲೆಯನ್ನು ಕೂಡಲೇ ತಗ್ಗಿಸುವಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಆಸೆಗಣ್ಣಿನಿಂದ ಜನ ನೋಡುತ್ತಿದ್ದಾರೆ.
ರಾಜಕುಮಾರ. ಬಸವಶ್ರೀ…ಪುನೀತ .
ಈಗ ಪುನೀತ್ ರಾಜ್ ಕುಮಾರ್
ಕೈಗೊಂಡ ಸಾಮಾಜಿಕ ಸೇವೆಗಳು
ಎಲ್ಲರ ಗಮನಕ್ಕೆ ಬಂದಿವೆ.
26 ಅನಾಥಾಶ್ರಮಗಳು, 45 ಉಚಿತ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ . ಹೆತ್ತವರಾದ ಕರ್ನಾಟಕ ರತ್ನ ಡಾ.ರಾಜ್ ಮತ್ತು ಪಾರ್ವತಮ್ಮನವರು ಸ್ಥಾಪಿಸಿದ ಮೈಸೂರಿನ” ಶಕ್ತಿ ಧಾಮ “ದಲ್ಲಿ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯನ್ನು ಮಾಡಿದ್ದಾರೆ.
ಜೀವಮಾನದಲ್ಲಿ ಒಬ್ಬ ಮನುಷ್ಯ ಮಾಡಬಹುದಾದ ಕೊಡುಗೆಕಿಂತ
ಇವು ಹೆಚ್ಚಾಗಿಯೇ ಇವೆ.ಅವರ
‘ ರಾಜಕುಮಾರ’ ಸಿನಿಮಾ ಮಹತ್ವದ್ದು.ವೃದ್ದಾಪ್ಯದಲ್ಲಿ ಹೆತ್ತವರನ್ನ ವೃದ್ಧಾಶ್ರಮಕ್ಕೆ ತಳ್ಳುವ ಇಂದಿನ
ಪೀಳಿಗೆಗೆ ಕಣ್ತೆರೆಸುವ ಸಂದೇಶವಿದೆ.
ಅವರು ಹಿನ್ನೆಲೆಗಾಯನದಿಂದ ಬಂದ
ಹಣವನ್ನ ವೃದ್ಧಾಶ್ರಮಕ್ಕೇ ನೀಡುತ್ತಿದ್ದರಂತೆ. ಇನ್ನು ಜಾಹೀರಾತುಗಳಿಗೆ ಮಾಡೆಲ್ ಆಗಿ
ಸಂಪಾದಿಸಿದ ಹಣವೂ ಕೂಡ ಸಮಾಜ ಸೇವೆಗೇ ಮೀಸಲಾಗಿತ್ತು.
ಕೆಲವು ಸಾಮಾಜಿಕ ಬದ್ಧತೆಯುಳ್ಳ
ಸಂದೇಶಗಳಿಗೆ ರಾಯಭಾರಿಗಳಾಗಿದ್ದರು. ಅವುಗಳಿಂದ ಗೌರವಧನವನ್ನೇ ಸ್ವೀಕರಿಸುತ್ತಿರಲಿಲ್ಲ. ಸಮಾಜ ಸೇವೆ ಎಂದರೆ ಸ್ವೀಕರಿಸುವ ಹಣದಲ್ಲಿ
ಶೇಕಡಾವಾರು ಮೀಸಲಲ್ಲ.ಅಷ್ಡೂ ಇಡುಗಂಟನ್ನ ಆಯಾ ಸೇವೆಗೇ ಕೊಟ್ಟುಬಿಡುತ್ತಿದ್ದ ಧಾರಾಳಿ ಈ ‘ದೊಡ್ಮನೆ ಹುಡುಗ’.
ಇಪ್ಪತ್ತಾರು ಅನಾಥಾಶ್ರಮಗಳು.
ನಿಜಕ್ಕೂ ಅಲ್ಲಿನ ಮಕ್ಕಳು ಯುವರತ್ನನಿಗೆ ಸ್ವರ್ಗ ಸಿಗಲೆಂದೇ
ಮನಪೂರ್ತಿ ಹರಸುತ್ತಾರೆ.
ನಾಲ್ವತೈದು ಉಚಿತ ಶಾಲೆಗಳಲ್ಲಿ
ವಿದ್ಯಾದಾನ ಮಾಡಿದ ಪುಣ್ಯ ಪುನೀತನಿಗೆ. ಹತ್ತೊಂಬತ್ತು ಗೋಶಾಲೆಗಳು.ಅಲ್ಲಿನ ಮೂಕ ಗೋಮಾತೆ ಕೂಡ ಪುನೀತನಿಗೆ
ಪುಣ್ಯತುಂಬಿ ಹರಸುತ್ತಿವೆ.
ಸಾವಿರದ ಎಂಟುನೂರು ಮಕ್ಕಳಿರುವ ” ಶಕ್ತಿಧಾಮ”.ಅದರ ಹೊಣೆಯನ್ನ ಮಿತ್ರ ನಟ ವಿಶಾಲ್
ವಹಿಸಿಕೊಂಡಿದ್ದಾರೆ.
ಹಿರಿಯರು ಹೇಳುವ ಮಾತಿದೆ
ಈ ಜಗತ್ತಿಗೆ ಬರುವಾಗ ನಾವು
ಅಳುತ್ತಿರುತ್ತೇವೆ. ಪೋಷಕರು ಆನಂದದಿಂದ ನಗುತ್ತಿರುತ್ತಾರೆ.
ಆದರೆ ಜಗತ್ತನ್ನ ಬಿಟ್ಟು ಹೋಗುವಾಗ
,ನಗುತ್ತಾ ಹೋಗ ಬೇಕಂತೆ.ಆಗ ಸಮಾಜ ಅಳುತ್ತಿರುವುದಂತೆ.
ಹಾಗೆ ಅಪ್ಪು ನಗುತ್ತಲೇ ಹೋಗಿದ್ದಾರೆ.
ನಾವು ಅಗಲಿಕೆಯ ದುಃಖದಲ್ಲಿ
ಮುಳುಗಿದ್ದೇವೆ.
ಇಂತಹ ವ್ಯಕ್ತಿಗೆ ಬಸವಶ್ರೀ ಪ್ರಶಸ್ತಿ
ಅರಸಿ ಬಂದಿದೆ. ಸಾಮಾಜಿಕ ಕಳಕಳಿಯುಳ್ಳ ಮನುಷ್ಯರಿಗೆ ನೀಡುವ ಈ ಪುರಸ್ಕಾರಕ್ಕೆ ಬೆಲೆಬಾಳುವಂಥ ವ್ಯಕ್ತಿಯೇ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೂ ಮೌಲ್ಯ ಹೆಚ್ಚಿದೆ.
ನಾನು ಭೂಮಿತಾಯಿಯ ಪುತ್ರಿ : ವಿನಿಷಾ
ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಸಿಒಪಿ 26 ಹವಾಮಾನ ಶೃಂಗಸಭೆಗೆ ಇಂಗ್ಲೆಂಡಿನ ಪ್ರಿನ್ಸ್ ವಿಲಿಯಮ್ಸ್ ಅವರಿಂದ ಭಾರತದ ತಮಿಳುನಾಡು ಮೂಲದ 14 ವರ್ಷದ ಬಾಲಕಿ ವಿನಿಷಾ ಉಮಾಶಂಕರ್ ಆಹ್ವಾನಿತರಾಗಿದ್ದರು.
ಬಿಬಿಸಿ ಮಾಧ್ಯಮ ಸಂಸ್ಥೆಯ ಪ್ರತಿಷ್ಠಿತ ‘ಅರ್ಥ್ ಶಾರ್ಟ್’ ಪ್ರಶಸ್ತಿಯ ಫೈನಲ್ ತಲುಪಿದ್ದ 15 ಸ್ಪರ್ಧಿಗಳಲ್ಲಿ ಒಬ್ಬರಾದ ವಿನಿಷಾ ಸೌರಚಾಲಿತ ಐರನಿಂಗ್ ಕಾರ್ಟ್ ಯೋಜನೆ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ.
ಸಿಒಪಿ 26 ಹವಾಮಾನ ಶೃಂಗಸಭೆಯಲ್ಲಿ ವಿನಿಷಾ ಸುಮಾರು ಐದು ನಿಮಿಷ ತಂತ್ರಜ್ಞಾನ ಹಾಗೂ ನಾವಿನ್ಯತೆ ವಿಷಯ ಕುರಿತು ಮಾತನಾಡಿದರು. ” ಹವಾಮಾನ ಬದಲಾವಣೆ, ಪರಿಸರ ರಕ್ಷಣೆ ಕುರಿತು ನಾವೀಗ ಬರೀ ಮಾತನಾಡುವ ಹಂತದಲ್ಲಿಲ್ಲ. ಮಾತನಾಡುವುದನ್ನು ನಿಲ್ಲಿಸಿ, ಕೆಲಸ ಆರಂಭಿಸುವ ಹಂತದಲ್ಲಿದ್ದೇವೆ. ಹಾಗಾಗಿ ನಮ್ಮ ಮುಂದಿನ ಭವಿಷ್ಯಕ್ಕಾಗಿ ಸಮಯ, ಹಣ, ನೂತನ ಧೇಯೋದ್ದೇಶ ಅಳವಡಿಕೆಯ ಅಗತ್ಯವಿದೆ” ಎಂದು ಹೇಳಿದರು.
” ನಾವು ಸಿಟ್ಟು ಮಾಡಿಕೊಳ್ಳಲು ತುಂಬಾ ಕಾರಣಗಳಿವೆ. ಆದರೆ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅದಕ್ಕೆಲ್ಲ ಈಗ ಸಮಯ ಇಲ್ಲ. ನಾನು ಕಾರ್ಯಪ್ರವೃತ್ತಳಾಗಲು ಇಷ್ಟಪಡುತ್ತೇನೆ. ನಾನು ಬರೀ ಭಾರತೀಯಳಲ್ಲ, ನಾನು ಭೂಮಿತಾಯಿಯ ಪುತ್ರಿ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ವಿದ್ಯಾರ್ಥಿನಿಯಾಗಿ, ಪರಿಸರ ಕಾಳಜಿವುಳ್ಳವಳಾಗಿ, ಮೇಲಾಗಿ ಆಶಾವಾದ ಇಟ್ಟುಕೊಂಡ ವಳಗಿ ಹೇಳುತ್ತಿದ್ದೇನೆ. ಎಲ್ಲರೂ ಕಾರ್ಯಪ್ರವೃತ್ತರಾಗೋಣ. ನಮ್ಮ ಯುವಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಶ್ರಮ ವಹಿಸೋಣ” ಎಂದು ವಿನಿಷಾ ಹೇಳಿದರು.
ಬಾಲಕಿ ವಿನಿಷಾ ಅವರ ಮಾತುಗಳಿಗೆ ಪ್ರಧಾನಿ ಮೋದಿಜಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದ ಹಲವು ನಾಯಕರು ಎದ್ದುನಿಂತು ಗೌರವ ಸಲ್ಲಿಸಿದ್ದಾರೆ.
ಕೋವಿಡ್, ‘ವಿಆಸಂ’ ಆತಂಕ
ಅಮೆರಿಕ ಮೂಲದ ‘ಮೆರ್ಕ ಅಂಡ್ ರಿಡ್ಜ್ ಬ್ಯಾಕ್ ಬಯೋಥೆರಪ್ಯೂಟಿಕ್’ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ನಿರೋಧಕ ಮಾತ್ರೆ ‘ಮೊಲ್ನುಪಿರಾವಿರ್’ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದೆ.
ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಯುರೋಪಿನಾದ್ಯಂತ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ದಾಖಲೆಯ ಮಟ್ಟವನ್ನು ಮುಟ್ಟುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಅಲೆಯು ತೀವ್ರ ಕಳವಳಕಾರಿಯಾದದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
ಯುರೋಪಿನ 53 ದೇಶಗಳಲ್ಲಿ ಪ್ರಸ್ತುತ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಡೆಲ್ಟಾ ರೂಪಾಂತರಿ ವೈರಾಣುಗಳು ವೇಗವಾಗಿ ಹಬ್ಬುತ್ತಿರುವುದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಹ್ಯಾನ್ಸ್ ಕ್ಲೂಗೆ ಹೇಳಿದ್ದಾರೆ.
ಚಳಿಗಾಲ ಆರಂಭವಾಗಿರುವ ಕಾರಣ, ಜನರು ಮನೆಯೊಳಗೆ ಉಳಿಯುತ್ತಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಯುರೋಪಿನಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರಿದಲ್ಲಿ ಫೆಬ್ರುವರಿ ಹೊತ್ತಿಗೆ ಐದು ಲಕ್ಷ ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಕ್ಲೂಗೆ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಮಾತ್ರೆಯ ಬಳಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಬ್ರಿಟನ್ ಆಗಿದೆ. ಸೌಮ್ಯ ಪ್ರಮಾಣದ ಕೋವಿಡ್ ನಿಂದ ಮಧ್ಯಮ ಪ್ರಮಾಣದ ಕೋವಿಡ್ ಲಕ್ಷಣ ಹೊಂದಿರುವವರು ಮಾತ್ರೆ ಬಳಸಲು ಬ್ರಿಟನ್ ನ ಮೆಡಿಸನ್ಸ್ ಅಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗುಲೇಟರಿ ಏಜೆನ್ಸಿ ( ಎಂಎಚ್ಆರ್ ಎ) ಶಿಫಾರಸು ಮಾಡಿದೆ.
ದೇಶರಕ್ಷಕರೊಂದಿಗೆ ಪ್ರಧಾನಿ ದೀಪಾವಳಿ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ನಲ್ಲಿ ಗುರುವಾರ ಭಾರತೀಯ ಯೋಧರೊಂದಿಗೆ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಯೋಧರಿಗೆ ಸಿಹಿ ತಿನ್ನಿಸಿ, ” ದೇಶ ಕಾಯುವ ಧೈರ್ಯವಂತರಾದ ತಾವೇ ನನ್ನ ಕುಟುಂಬ” ಇಂದು ಯೋಧರನ್ನು ಉದ್ದೇಶಿಸಿ ಭಾವುಕ ಭಾಷಣ ಮಾಡಿದರು.
ವಿಶ್ವದಾದ್ಯಂತ ಯುದ್ಧ ಮಾದರಿಗಳು ದಿನೇದಿನೇ ಬಾರಿ ಬದಲಾವಣೆ ಕಾಣುತ್ತೇವೆ. ಈ ನಿಟ್ಟಿನಲ್ಲಿ ಹೋರಾಟಕ್ಕಾಗಿ ಅಗತ್ಯವಾದ ಮಿಲಿಟರಿ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ತಕ್ಕಂತೆ ಗಡಿಯಲ್ಲಿ ಸಂಪರ್ಕ ಹೆಚ್ಚಳ ಹಾಗೂ ಸೇನೆ ನಿಯೋಜನೆಗೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಲಾಗಿದೆ ಎಂದು ಮೋದಿಜಿಯವರು ಹೇಳಿದ್ದಾರೆ.
ಹಲವು ಸಾಮ್ರಾಜ್ಯಗಳು, ಕೌಟುಂಬಿಕ ಆಳ್ವಿಕೆಗಳು ಈ ನೆಲದಲ್ಲಿ ಬಂದುಹೋಗಿವೆ. ಕೇವಲ ಭೌಗೋಳಿಕ ಗಡಿಯನ್ನು ಕಾಯ್ದುಕೊಳ್ಳುವುದು ಮಾತ್ರವೇ ರಾಷ್ಟ್ರೀಯ ಭದ್ರತೆ ಅಲ್ಲ. ಭಾರತದಂತಹ ವಿಶಿಷ್ಟ ರಾಷ್ಟ್ರದ ವೈವಿದ್ಯತೆ, ಅಸ್ಮಿತೆ ಹಾಗೂ ಏಕತೆಯನ್ನು ಕಾಯ್ದುಕೊಳ್ಳುವುದು ಕೂಡ ರಾಷ್ಟ್ರೀಯ ಬದ್ಧತೆಯೇ ಆಗಿದೆ ಎಂದು ಯೋಧರನ್ನು ಉದ್ದೇಶಿಸಿ ಮೋದಿಜಿ ಮಾತನಾಡಿದರು.
ಹುಷಾರಿ ! ಹೋಟೆಲ್ ಬಿಲ್ ದುಬಾರಿ…
ಅಡುಗೆ ಅನಿಲ ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಈಗ ಹೋಟೆಲ್ ತಿಂಡಿ ತಿನಿಸುಗಳ ದರವನ್ನು ಏರಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.
ರಾಜ್ಯದ್ಯಂತ ನವಂಬರ್ 8 ರ ಬಳಿಕ ಶೇ.15 ರಿಂದ 20 ರಷ್ಟು ದರ ಹೆಚ್ಚಳ ಆಗುವ ಸಾಧ್ಯತೆ ಇದೆ. ದೋಸೆ, ಇಡ್ಲಿ ಇತ್ಯಾದಿ ತಿನಿಸುಗಳ ಬೆಲೆಯಲ್ಲಿ 5 ರುಪಾಯಿ ಏರಿಕೆಯಾಗುವ ಸಂಭವವಿದ್ದು ಆಹಾರ ಪ್ರಿಯರಿಗೆ ಇದು ಹೊರೆಯಾಗಲಿದೆ.
ವಾಣಿಜ್ಯ ಅಡುಗೆ ಅನಿಲದ ಸಿಲಿಂಡರ್ ದರ ನವೆಂಬರ್ 1ರಂದು ಏಕಾಏಕಿ 266 ರೂಪಾಯಿ ಹೆಚ್ಚಳ ಮಾಡಿರುವುದರಿಂದ ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ತೀವ್ರ ಪರಿಣಾಮ ಬೀರಿದೆ ರಸ್ತೆಬದಿಯ ಫಾಸ್ಟ್ ಫುಡ್ ಮಳಿಗೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿದೆ.
ಈಗ ಪ್ರತೀ ಸಿಲಿಂಡರ್ ಬೆಲೆ 2063 ರೂಪಾಯಿ ಇದೆ ಹೋಟೆಲ್ಗಳಲ್ಲಿ ಅತಿ ಹೆಚ್ಚು ಖರ್ಚು ಬರುವುದರಲ್ಲಿ ಅಡುಗೆ ಅನಿಲ ಕೂಡ ಒಂದು. ನಾವು ತಿಂಡಿತಿನಿಸು ದರ ಏರಿಕೆ ಮಾಡದಿದ್ದರೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.
ನೂರು ದಿನ ನೂರಾರು ತಲ್ಲಣ
“ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿಗೆ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುವೆ ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ತಮ್ಮ ನೇತೃತ್ವದ ರಾಜ್ಯ ಸರ್ಕಾರ ನೂರು ದಿನಗಳ ಆಡಳಿತ ಪೂರೈಸಿರುವುದು ದೊಡ್ಡ ಮೈಲಿಗಳು ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜನಪರ ನಡೆ ಹೇಗಿರಲಿದೆ ಎಂಬುದರ ದಿಕ್ಸೂಚಿಯಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರು ದಿನಗಳಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹೆಚ್ಚಳ, ಅಮೃತ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿವೆ. ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದ್ದು, ಮುಂದೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ವ್ಯವಸ್ಥೆಯ ಸುಧಾರಣೆಯ ಜೊತೆಗೆ, ಜನರ ಬಳಿಯೇ ಸರ್ಕಾರ ಹಾಗೂ ಯೋಚನೆಗಳು ಹೋಗಬೇಕಿವೆ. ಆರ್ಥಿಕ ಬೆಳವಣಿಗೆಗೆ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಪರಿಶಿಷ್ಟರು ಹಿಂದುಳಿದ ವರ್ಗದವರು ಬಡವರು ಹಾಗೂ ಮಹಿಳೆಯರನ್ನು ತಲಾ ಆದಾಯ ಏರಿಕೆಗಾಗಿ ಒಳಪಡಿಸಿಕೊಳ್ಳಬೇಕು. ಅದಕ್ಕಾಗಿ ಆರ್ಥಿಕ ನೆರವು ನೀಡುವ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
