Saturday, May 16, 2026
Saturday, May 16, 2026
Home Blog Page 118

Bhadra Reservoir ಭದ್ರಾ ಜಲಾಶಯದಿಂದ ‌ನೀರು ಬಿಡುಗಡೆ, ಸಾರ್ವಜನಿಕರು ಜಾಗ್ರತೆ ವಹಿಸಲು ಇಲಾಖೆ ಪ್ರಕಟಣೆ

0

Bhadra Reservoir 2025-26ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ನದಿಯ ಮೂಲಕ ವಿಜಯನಗರ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ತುಂಗ-ಭದ್ರಾ ನದಿಗೆ ಜ.20 ರಿಂದ ಜ. 30 ಪ್ರತಿ ದಿನ 500 ಕ್ಯೂಸೆಕ್ಸ್ನಂತೆ ಹಾಗೂ ಜ. 31 ರಂದು 300 ಕ್ಯೂಸೆಕ್ಸ್ ಒಟ್ಟು 0.50 ಟಿ.ಎಂ.ಸಿ ನೀರನ್ನು ಹರಿಸಲಾಗುವುದು.
Bhadra Reservoir ಈ ಅವಧಿಯಲ್ಲಿ ನದಿಯಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನ ಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‌ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ, ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಅಮೋಘ ” ನರ್ತನ ಸಂಭ್ರಮ” ಆಯೋಜನೆ

0

ಶಿವಮೊಗ್ಗ ನಗರದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿರುವ, ವಿವಿಧ ಕ್ಷೇತ್ರಗಳಲ್ಲಿನ ಯುವ ಸಮಾನ ಮನಸ್ಕರ ತಂಡವಾದ ‘ಅನವರತ ಫೌಂಡೇಶನ್’ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

:’ನರ್ತನ ಸಂಭ್ರಮ’:
ರಾಷ್ಟ್ರಗಾಯನ ವಂದೇ ಮಾತರಂ’ಗೆ 150ನೇ ವರ್ಷದ ಸಂಭ್ರಮ ಹಾಗೂ ನಮ್ಮ ಹೆಮ್ಮೆಯ ನಾಡಗೀತೆಗೆ 100 ವರ್ಷಗಳು ಸಂದಿರುವ ಸುಸಂದರ್ಭದಲ್ಲಿ ಈ ಐತಿಹಾಸಿಕ ಘಟ್ಟಗಳನ್ನು ಸಂಭ್ರಮದಿಂದ ಆಚರಿಸಲು ನಗರದ ಹೆಸರಾಂತ ನೃತ್ಯ ತಂಡಗಳಿಂದ ‘ನರ್ತನ ಸಂಭ್ರಮ’ ಎಂಬ ವೈಭವದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನಗರದ ಖ್ಯಾತ ನೃತ್ಯ ಗುರುಗಳ ಮಾರ್ಗದರ್ಶನದಲ್ಲಿ ಬೆಳಗಿದ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ತಮ್ಮ ಕಲಾ ಚಾತುರ್ಯವನ್ನು ಪ್ರದರ್ಶಿಸಲಿದ್ದಾರೆ.
ಭಾಗವಹಿಸುವ ತಂಡಗಳು-

  1. ಕಲಾರ್ಪಣ
  2. ನಟನಂ ಬಾಲ ನಾಟ್ಯ ಕೇಂದ್ರ
  3. ಪುಷ್ಪ ಪರ್ಫಾರ್ಮಿಂಗ್ ಆರ್ಟ್ಸ್
  4. ಪೆರುಮಾಳ್ ನೃತ್ಯ ಕಲಾ ಕೇಂದ್ರ
  5. ಮನು ಕಲಾ ಕೇಂದ್ರ
  6. ಮಯೂರಿ ನೃತ್ಯ ಕಲಾ ಕೇಂದ್ರ
  7. ಮಲ್ನಾಡ್ ಜನಪದ ಕಲಾತಂಡ
  8. ಶ್ರೀ ನಟರಾಜ ನೃತ್ಯ ಕಲಾನಿಕೇತನ
  9. ಸಹಚೇತನ ನಾಟ್ಯಾಲಯ

ವಿಶೇಷವಾಗಿ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಚಿತ್ರರಂಗದ ಖ್ಯಾತ ನಟಿಯಾದ ಶ್ರೀಮತಿ ತಾರಾ ಅವರು ನೆರವೇರಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶ್ರೀ ಪಟ್ಟಾಭಿರಾಮ್ ಅವರು ಹಾಗೂ ಬೆಳ್ಳಿ ಮಂಡಲ ಹಾಗೂ ಸಿನಿಮೊಗ ತಂಡದ ಸಂಚಾಲಕರಾದ ಶ್ರೀ ವೈದ್ಯನಾಥ್ ಹೆಚ್.ಯು ಅವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸುತ್ತಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಫೌಂಡೇಶನ್ ನ ಗೌರವಾಧ್ಯಕ್ಷರು ಹಾಗೂ ನಗರದ ಶಾಸಕರಾದ ಶ್ರೀ ಎಸ್ ಎನ್ ಚನ್ನಬಸಪ್ಪ ಅವರು ವಹಿಸಲಿದ್ದಾರೆ.

ಗೆಜ್ಜೆ ನಾದದ ಲಯಕ್ಕೆ ಸಾಕ್ಷಿಯಾಗಲಿರುವ ಈ ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಿವಮೊಗ್ಗದ ಕಲಾಭಿಮಾನಿಗಳು ಹಾಗೂ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ‘ಅನವರತ ಫೌಂಡೇಶನ್’ ವಿನಂತಿಸುತ್ತಿದೆ.

ಈ ಮೊದಲು,
ದಿನಾಂಕ 21.01.2026ರ ಬುಧವಾರ ಬೆಳಿಗ್ಗೆ 10.00 ಗಂಟೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಈ ಕೆಳಗಿನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

  • ನಮ್ಮ ಮಣ್ಣಿನ ಸೊಗಡನ್ನು ಬಿಂಬಿಸುವ ಜನಪದ ಕಲೆಯ ಆದ್ಯತೆಗಾಗಿ:
    “ಜಾನಪದ ನೃತ್ಯ ಮತ್ತು ಗಾಯನ”
  • ಅಭಿನಯ ಮತ್ತು ಕಲೆಯ ಪ್ರಕಟೀಕರಣಕ್ಕಾಗಿ: ಏಕಪಾತ್ರಾಭಿನಯ ಹಾಗೂ ಚಿತ್ರಕಲಾ ಸ್ಪರ್ಧೆಗಳು.
  • ಆಧುನಿಕ ಸಂವಹನ ಮತ್ತು ಇಂದಿನ ಪೀಳಿಗೆಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು : ‘ಛಾಯಾಗ್ರಹಣ’ (Photography) ಮತ್ತು ‘ರೀಲ್ಸ್’ (Reels) ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಈ ಸ್ಪರ್ಧೆಗಳಲ್ಲಿನ ಆಸಕ್ತರು ಭಾಗವಹಿಸಲು ಆನ್‌ಲೈನ್ ಮೂಲಕ ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ತಂಡವು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದವರೇ ಆದ, ಖ್ಯಾತ ಸಾಹಿತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ।। ಗಜಾನನ ಶರ್ಮ ಅವರು ನೆರವೇರಿಸಲಿದ್ದು, ಅವರೊಂದಿಗೆ ಸಾಮಾಜಿಕ ಕಾರ್ಯಕರ್ತರು, ಸಹ್ಯಾದ್ರಿ ವಾಣಿಜ್ಯ ಕಾಲೇಜ್ ನ ಉಪನ್ಯಾಸಕರಾದ ಶ್ರೀ ಗಿರೀಶ್ ಕಾರಂತ್ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

State Newspaper Distributors Association ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಕ್ಯಾಲೆಂಡರ್ ಬಿಡುಗಡೆ.

0

State Newspaper Distributors Association ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ (ರಿ) ಶಿವಮೊಗ್ಗ ಜಿಲ್ಲಾ ಘಟಕದ ವತಿಯೀಂದ ಸೊರಬ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ವಿತರಕ ಶರತ್ ಸ್ವಾಮಿ ನೇತೃತ್ವದಲ್ಲಿ ಕ್ಯಾಲೆಂಡರ್ ಗಳನ್ನು ಬಿಡುಗಡೆಗೊಳಿಸಲಾಯಿತು. ಪತ್ರಕರ್ತರ ಸಂಘದ ಅಧ್ಯಕ್ಷ ತೋಟಪ್ಪ ಜಿ.ಎಂ ಮಾತನಾಡಿ, ಪತ್ರಿಕಾ ವಿತರಕರು ಪತ್ರಿಕಾ ರಂಗದ ಅವಿಭಾಗ್ಯ ಅಂಗವಾಗಿದ್ದು, ಪತ್ರಿಕೆ ಮುದ್ರಣದ ಶ್ರಮಕ್ಕೆ ಪ್ರತಿಫಲ ಸಿಗಲು ವಿತರಕರ ಪಾತ್ರ ಮಹತ್ತರವಾಗಿದೆ ಎಂದರು.
State Newspaper Distributors Association ಮಾಜಿ ಅಧ್ಯಕ್ಷ ಬಣ್ಣದಬಾಬು ಮಾತನಾಡಿ, ಜನರಿಗೆ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೇ ಮನೆಮನೆಗೆ ಪತ್ರಿಕೆ ಮುಟ್ಟಿಸುವ ಕಾರ್ಯ ಅನನ್ಯ ಎಂದರು. ಪತ್ರಿಕಾ ವಿತರಕ ರಘುನಾಥ ಬಾಪಟ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶರತ್ ಸ್ವಾಮಿ, ರಾಘವೇಂದ್ರ ಬಾಪಟ್, ನೋಪಿಶಂಕರ, ರವಿ ಕಲ್ಲಂಬಿ, ಚಂದ್ರಪ್ಪ, ಹೆಚ್.ಕೆ.ಬಿ ಸ್ವಾಮಿ,ಜೆ.ಎಸ್ ಚಿದಾನಂದಗೌಡ ಮತ್ತಿತರರಿದ್ದರು.

Shivamogga Police 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ‌ಮಾಡಿದ ಶಿವಮೊಗ್ಗ ಪೊಲೀಸ್ ಇಲಾಖೆ.

0

Shivamogga Police ಸಾಗರ ಪೇಟೆ ಪೊಲೀಸ್ ಠಾಣಾ ಗುನ್ನೆ ಸಂಖ್ಯೆ 29/1985 ಕಲಂ 448, 323 ಐ.ಪಿ.ಸಿ ಪ್ರಕರಣದ ಆರೋಪಿ ಕೆ. ಪಿ. ಮಯಡ್ಡಿ, ( 1985 ರಲ್ಲಿ 18 ವರ್ಷ, ಪ್ರಸ್ತುತ 60 ವರ್ಷ) ವಾಸ ತೊಬ್ಬಟ್ಟು ಗ್ರಾಮ, ಮಂಗಳೂರು ಈತನು ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 33 ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಮಾನ್ಯ PCJ & JMFC ನ್ಯಾಯಾಲಯ ಸಾಗರದ LPR ಪ್ರಕರಣ 20/1993 C.C. ಸಂಖ್ಯೆ 350/89 ರಲ್ಲಿ ಆರೋಪಿ ವಿರುದ್ಧ ಘನ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಹೊರಡಿಸಿರುತ್ತದೆ. ಸದರಿ ಆರೋಪಿತನ ಪತ್ತೆ ಬಗ್ಗೆ ಡಿ.ವೈ.ಎಸ್.ಪಿ ಸಾಗರ ಪೊಲೀಸ್ ಉಪ ವಿಭಾಗ ರವರ ನೇತೃತ್ವದಲ್ಲಿ, ಸಾಗರ ಪೇಟೆ ಪೊಲೀಸ್ Shivamogga Police ಠಾಣೆಯ ASI ಪರಶುರಾಮ್, HC ರತ್ನಾಕರ, HC ತಾರಾನಾಥ HC ಶೇಕ್ ಫೈರೋಜ್ ಅಹಮದ್, PC ವಿಶ್ವಾನಾಥ, PC ರಾಮನ ಗೌಡ ಪಾಟೀಲ್ ಮತ್ತು PC ಜಗದೀಶ್ ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿದ್ದು, ಸದರಿ ತಂಡವು ಆರೋಪಿ ಕೆ. ಪಿ. ಮಯಡ್ಡಿಯನ್ನು ಪತ್ತೆ ಮಾಡಿ, ಮಾನ್ಯ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದ್ದು, ಆರೋಪಿ ತಪ್ಪು ಒಪ್ಪಿಕೊಂಡು ದಂಡ ಕಟ್ಟಿದ ಕಾರಣ ಘನ ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯ ಮಾಡಿರುತ್ತದೆ.

Shri Saraswati Music Institute “ವೀಣಾ ತ್ರಿಶತೋತ್ಸವ”ದಲ್ಲಿ ವೀಣೆಗಳ‌ ಝೇಂಕಾರ ಕೇಳಲು ರೋಮಾಂಚಕ ಅನುಭವ- ಬಿ.ವೈ.ರಾಘವೇಂದ್ರ.

0

Shri Saraswati Music Institute ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ, ಸುಶ್ರಾವ್ಯ ಸಂಗೀತ ವಿದ್ಯಾಲಯ ಹಾಗೂ ಶ್ರೀ ಸಾಯಿಶಕ್ತಿ ಸಂಗೀತ ವಿದ್ಯಾಲಯಗಳ ಸಹಯೋಗದೊಂದಿಗೆ ‘ವೀಣಾ ತ್ರಿಶತೋತ್ಸವ’ ಕಾರ್ಯಕ್ರಮವನ್ನು
ಆಯೋಜಿಸಲಾಗಿತ್ತು

ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.

ಒಂದೇ ವೇದಿಕೆಯಲ್ಲಿ ‘301 ವೀಣಾ ನಾದ ಝೇಂಕಾರ’ ಮೊಳಗಿದ್ದು ನಿಜಕ್ಕೂ ರೋಮಾಂಚನಕಾರಿ ಮತ್ತು ಕಿವಿಗೆ ಇಂಪಾದ ಅನುಭವವಾಗಿತ್ತು. ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ ಈ ಸಂಸ್ಥೆಗಳ ಕಾರ್ಯ ಶ್ಲಾಘನೀಯ.

Shri Saraswati Music Institute ಈ ಸಂದರ್ಭದಲ್ಲಿ ಶ್ರೀ ಡಿ. ಎಸ್. ಅರುಣ್ ವಿಧಾನ ಪರಿಷತ್ ಸದಸ್ಯರು, ಡಾ. ಧನಂಜಯ್ ಸರ್ಜಿ ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ ನಗರದ ಶಾಸಕರಾದ ಎಸ್. ಏನ್ ಚೆನ್ನಬಸಪ್ಪ, ಶ್ರೀ ಕೆ. ಬಿ. ಪ್ರಸನ್ನ ಕುಮಾರ್ ಮಾಜಿ ಶಾಸಕರು, ಶ್ರೀಮತಿ ರೇವತಿ ಕಾಮತ್, ಶ್ರೀ ಉಮೇಶ್ ಹಾಲಾಡಿ ಸೇರಿದಂತೆ ವೇದಿಕೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಾರಿ ಜಾತ್ರೆ ಅಂಗವಾಗಿ ” ಟಗರು ಕಾಳಗ” ಪೋಸ್ಟರ್ ಬಿಡುಗಡೆ ಸಮಾರಂಭ ಆಯೋಜನೆ

0

ನಮ್ಮೂರ ಬಳಗ, ಶಿವಮೊಗ್ಗ ವತಿಯಿಂದ, ಪ್ರತಿಷ್ಠಿತ ‘ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ’ ಅಂಗವಾಗಿ ಆಯೋಜಿಸಿರುವ “ರಾಷ್ಟ್ರಮಟ್ಟದ ಬಾರಿ ಟಗರು ಕಾಳಗ” ದ ಪೋಸ್ಟರ್ ಬಿಡುಗಡೆ ಹಾಗೂ ಸಾಮಾಜಿಕ ಜಾಲತಾಣದ ಮುಖಪುಟ ಚಾಲನೆ ಕಾರ್ಯಕ್ರಮವನ್ನು ದಿನಾಂಕ: 19 -1- 2026ನೇ ಸೋಮವಾರ , ನಾಳೆ ಬೆಳಗ್ಗೆ 11: 30 ಕ್ಕೆ ಕೋಟೆ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಕೋಟೆ ಮಾರಿಕಾಂಬ ದೇವಾಲಯ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚಾಲನೆ ನೀಡುವರು ತಾವುಗಳು ಆಗಮಿಸಬೇಕಾಗಿ ವಿನಂತಿಸಲಾಗಿದೆ.

MESCOM ಜನವರಿ 21. ಮಾಚೇನಹಳ್ಳಿ ಸುತ್ತಮುತ್ತ ವಿದ್ಯುತ್ ನಿಲುಗಡೆ. ಮೆಸ್ಕಾಂ ಪ್ರಕಟಣೆ

0

MESCOM ಶಿವಮೊಗ್ಗ ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ಜ. 21 ರಂದು ಬೆಳಗ್ಗೆ 9.30 ರಿಂದ ಸಂಜೆ 6.00 ರವರೆಗೆ ಮಾಚೇನಹಳ್ಳಿ, ಬಿದರೆ, ಬಿದರೆ ಗೇಟ್, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಜನತಾ ಕಾಲೋನಿ, ಶಿವಣ್ಣ ಕ್ಯಾಂಪ್, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

ಅಲ್ಲಿ “ಬಿಗ್ ಬಾಸ್” .”ಗಿಲ್ಲಿ “ಫುಲ್ ಪಾಸ್

0

“ಬಿಗ್ ಬಾಸ್ ” ನೋಡುತ್ತಿರುವವರು ಈವರೆಗೂ ಒಂದು ರೀತಿ ಇದೇನು ಮಾಧ್ಯಮ ಯಾವ ಲೆವೆಲ್ಲಿಗೆ ಇಳೀತು ಅಂತ ಅಂದುಕೊಂಡಿದ್ದು ಸಹಜ. ಈಗ ಖ್ಯಾತ ನಟ ಸುದೀಪ್ ನಡೆಸಿಕೊಟ್ಟ
” ಬಿಗ್ ಬಾಸ್ -12″
ಅದನ್ನೆಲ್ಲಾ ಹಿಂಡಿಹಾಕಿದೆ.
ಕಾರಣ ಇಷ್ಟೆ. ಇಲ್ಲಿಯವರೆಗೂ ರಿಯಾಲಿಟಿ ಶೋ ಗಳಲ್ಲಿ ಯಾರು ಗೆದ್ರೆ ಏನು ? ಎಂಬಂತೆ ಮೂಗುಮ್ಮಾಗಿದ್ದ ಪ್ರೇಕ್ಷಕ ವರ್ಗ ಈ ಹನ್ನೆರಡನೇ ಸಂಚಿಕೆಯನ್ನ ಎಂದಿಗಿಂತ ಆಸಕ್ತಿ,ಕುತೂಹಲಗಳಿಂದಲೇ ವೀಕ್ಷಿಸಿತು.

ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು ವಾರದಿಂದ ವಾರಕ್ಕೆ ಪಾದರಸದಂತೆ ಆಟ ನಿರ್ವಹಿಸುವ ಓರ್ವ ಕಲಾವಿದ. ಮತ್ತು ಎರಡನೇಯದು ಅಣ ಕಲಾವಿದನ ಬ್ಯಾಗ್ರೌಂಡು. ಈ ಎರಡೂ ಅಂಶಗಳು ಗಿಲ್ಲಿ ನಟನ ಅದೃಷ್ಟ ಬರೆದಿವೆ ಎನ್ನಬಹುದು.
ಈಗಾಗಲೇ ಬೇರೆ ಬೇರೆ ಟೀವಿ ಶೋಗಳಲ್ಲಿ ಮಾಧ್ಯಮ ಮತ್ತು ಚಿತ್ರ ನಟರ ಗಮನ ಸೆಳಯುವಲ್ಲಿ “ಗಿಲ್ಲಿ ನಟ “
ಯಶಸ್ವಿಯಾಗಿದ್ದರು.
ಅದೊಂದು ಇಮೇಜೇ ಸೃಷ್ಟಿಯಾಗಿತ್ತು. ಜೊತೆಗೆ ಆತನ ಗ್ರಾಮೀಣ ಹಿನ್ನೆಲೆ ಮುಂಚಿತವಾಗೇ ಓಪನ್ ಸೀಕ್ರೆಟ್ ಆಗಿಬಿಟ್ಟಿತ್ತು. ನಾಲ್ವೆತ್ತೆಂಟು ಕೋಟಿಗೂ ಅಧಿಕ ಮತಗಳು ಸೆಳೆದನೆಂದರೆ ಅದೇ ಆತನ ಜನಪ್ರಿಯತೆಗೆ ಸಾಕ್ಷಿ.

ಈಗ ಐವತ್ತುಲಕ್ಷರೂಪಾಯಿ ಜೇಬಿಗಳಿಸಿದ್ದಲ್ಲದೇ ಸುದೀಪ್ ಮನಮೆಚ್ಚಿ ಹತ್ತು ಲಕ್ಷರೂಪಾಯಿ ನೀಡಿದ್ದಾರೆ. ಜೊತೆ ಒಂದು ಕಾರನ್ನೂ ಪ್ರಾಯೋಜಕರು ನೀಡಿದ್ದಾರೆ.
ಯಾರೂ ಹುಬ್ಬೇರಿಸಬೇಕಿಲ್ಲ. ಅದು ನಟನ ತಾಕತ್ತು.ಯೋಗ್ಯತೆಗೆ ಸಿಕ್ಕ ಪ್ರತಿಫಲ.

ಖ್ಯಾತ ಚಿತ್ರನಟ ಜಗ್ಗೇಶ್ ,ಗಿಲ್ಲಿ ಬಗ್ಗೆ ” ಮುಂದೊಂದು ದಿನ ನಿನಗೆ ಜೊತೇಲಿ ಒಬ್ಬ ಚತ್ರಿ ಹಿಡೀತಾನೆ. ಮತ್ತೆ ಸುತ್ತ ನಾಕುಜನ ಬಾಡಿಗಾರ್ಡ್ ಗಳು ಬರ್ತಾರೆ” ಅಂತ ಹೇಳಿದ ಮಾತು ಇಂತಹ ಗ್ರಾಮೀಣ ಪ್ರತಿಭೆಗೆ ಆಶೀರ್ವಾದ ಮಾಡಿ ಹೇಳಿದ ಮಾತು ಅತಿಶಯೊಕ್ತಿ ಅಲ್ಲ.

Klive Special Article ಭೂಗೋಲದ ಸುತ್ತ. ಆತಂಕಗಳ ಹುತ್ತ… ಲೇ: ಸುಧೀರ್ ಕೀಳಂಬಿ

0

Klive Special Article ಯುದ್ಧ ಮತ್ತು ಶಾಂತಿ: ಇಂದಿನ ಅಗತ್ಯತೆ
೨೦೨೬ರ ಆರಂಭವೇ ಜಾಗತಿಕ ಅಶಾಂತಿಯ ಹೊಸ ಅಧ್ಯಾಯವನ್ನು ತೆರೆದಿದೆ. ೨೦೨೫ರಲ್ಲಿ ನಡೆದ ಅನೇಕ ಸಂಘರ್ಷಗಳ ಗಾಯಗಳು ಇನ್ನೂ ಮಸುಕಾಗದಿರುವಾಗಲೇ, ಹೊಸ ಉದ್ವಿಗ್ನತೆಗಳು ವಿಶ್ವವನ್ನು ಮತ್ತೊಮ್ಮೆ ಯುದ್ಧದ ಅಂಚಿನತ್ತ ತಳ್ಳುತ್ತಿರುವುದು ಆತಂಕಕಾರಿ. ಶಾಂತಿಯನ್ನು ಬಯಸುವ ಜನ-ಮನಗಳ ನಡುವೆ ಕೆಲವೇ ನಾಯಕರು ತೋರಿಸುತ್ತಿರುವ ದುರಾಸೆ ಮತ್ತು ಅಧಿಕಾರಲಾಲಸೆ, ಜಗತ್ತಿನ ಸ್ಥಿರತೆಗೆ, ಶಾಂತಿ ಸೌಹಾರ್ದಕ್ಕೆ ಗಂಭೀರ ಸವಾಲು ಹಾಕುತ್ತಿದೆ.
ಅಮೇರಿಕಾದ ನಡೆ
ಜಗತ್ತಿನ ದೊಡ್ಡಣ್ಣ ಅಮೇರಿಕ ಇತ್ತೀಚಿಗೆ ವೆನಿಜುವೆಲಾ ದಲ್ಲಿ ನಡೆದುಕೊಂಡ ರೀತಿ ಹಾಗೂ ಇರಾನ್ ಮತ್ತು ಗ್ರೀನ್ಲ್ಯಾಂಡ್ ಕುರಿತಾದ ಹೇಳಿಕೆಗಳು ಮಿತ್ರ ರಾಷ್ಟ್ರಗಳಲ್ಲಿ ಒಡಕು ಮೂಡಿಸಿ, ಅಂತರ ರಾಷ್ಟೀಯ ವ್ಯವಸ್ಥೆಯ ಅಲ್ಲೊಲ್ಲ ಕಲ್ಲೋಲಕ್ಕೆ ಮುನ್ನುಡಿ ಬರೆಯುತ್ತಿದೆ. ಇದರ ಮುಂದುವರಿದ ಭಾಗ ಯುದ್ಧವಾಗಿ ಪರಿವರ್ತನೆ ಆಗಲಿದೆಯೇ ಎಂಬ ಆತಂಕ ಎಲ್ಲರಲ್ಲಿ ಮನೆಮಾಡಿದೆ.
ಮಧ್ಯಪ್ರಾಚ್ಯ: ನಿರಂತರ ಕದನದ ವಲಯ
ಗಾಜಾದಲ್ಲಿ ಇಸ್ರೇಲ್–ಹಮಾಸ್ ಯುದ್ಧ ತೀವ್ರಗೊಂಡಿದ್ದು, ಅಲ್ಲಿನ ನಾಗರಿಕರಲ್ಲಿ ಭಾರೀ ಮಾನವೀಯ ಸಂಕಷ್ಟವನ್ನು ಉಂಟುಮಾಡಿದೆ. ವೆಸ್ಟ್ ಬ್ಯಾಂಕ್‌ನಲ್ಲಿನ ಘರ್ಷಣೆಗಳು ಹೆಚ್ಚಾಗಿದ್ದು, ಲೆಬನಾನ್ ಗಡಿಯಲ್ಲಿ ಇಸ್ರೇಲ್–ಹೆಜ್ಬೊಲ್ಲಾ ನಡುವಿನ ಉದ್ವಿಗ್ನತೆ ಮತ್ತಷ್ಟು ಗಂಭೀರವಾಗಿದೆ. ಅಮೇರಿಕಾ-ಇರಾನ್–ಇಸ್ರೇಲ್ ನಡುವಿನ ಏರಿಳಿತಗಳು ಪ್ರಾದೇಶಿಕ ಯುದ್ಧದ ಭೀತಿಯನ್ನು ಹೆಚ್ಚಿಸುತ್ತಿವೆ. ಸಿರಿಯಾ, ಯೆಮೆನ್ ನಲ್ಲಿನ ಸಶಸ್ತ್ರ ಗುಂಪುಗಳ ನಡುವಿನ ಅಧಿಕಾರ ಹೋರಾಟ ಶರಣಾರ್ಥಿ ಸಂಕಷ್ಟವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಉಕ್ರೇನ್-ರಷ್ಯಾ: ಯುದ್ಧ, ಭಾರೀ ನಾಶ
ಉಕ್ರೇನ್‌-ರಷ್ಯಾ ನಡುವಿನ ಭೂಪ್ರದೇಶ ಸಂಭಂದಿತ ಯುದ್ಧ ಮುಗಿಯುವ ಸೂಚನೆ ಇಲ್ಲದೇ ಮುಂದುವರೆಯುತ್ತಿದೆ. ಅಮೇರಿಕದ ಮಧ್ಯಸ್ಥಿಕೆ ಕೆಲವು ಭರವಸೆ ಮೂಡಿಸಿದ್ದರೂ ಈಗ ಮತ್ತೆ ಯಾವ ಆಶಾಭಾವ ಇಲ್ಲದೇ, ಯುದ್ಧದ ಕಾರ್ಮೋಡ ಮತ್ತೆ ಭುಗಿದೇಳುತ್ತಿದೆ.
ಆಫ್ರಿಕಾ: ಮರೆಮಾಚಲಾಗದ ಮಾನವೀಯ ದುರಂತಗಳು
ಸುಡಾನ್‌ನ ಗೃಹಯುದ್ಧವು ೧೪ ಮಿಲಿಯನ್ ಜನರನ್ನು ಸ್ಥಳಾಂತರಗೊಳಿಸಿರುವ ವಿಶ್ವದ ಅತಿದೊಡ್ಡ ಮಾನವೀಯ ದುರಂತಗಳಲ್ಲಿ ಒಂದಾಗಿದೆ. ಕಾಂಗೋದಲ್ಲಿನ ಬಂಡುಕೋರರ ಚಟುವಟಿಕೆಗಳು ಪ್ರಾದೇಶಿಕ ಯುದ್ಧದ ಅಪಾಯವನ್ನು ಹೆಚ್ಚಿಸಿವೆ. ಸೋಮಾಲಿಯಾ, ಇಥಿಯೋಪಿಯಾ ಮತ್ತು ಮೊಜಾಂಬಿಕ್‌ನ ಹಿಂಸಾಚಾರ ಮಾನವೀಯ ನೆರವಿನ ಅಗತ್ಯವನ್ನು ತೀವ್ರಗೊಳಿಸಿದೆ.
ಏಷ್ಯಾ–ಪೆಸಿಫಿಕ್: ಉದ್ವಿಗ್ನತೆಯ ಹೊಸ ಕೇಂದ್ರಬಿಂದು
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಚಟುವಟಿಕೆಗಳು, ವಿಶೇಷವಾಗಿ ಫಿಲಿಪೈನ್ಸ್ ವಿರುದ್ಧ, ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಒಳಗೊಳ್ಳುವ ಸಂಘರ್ಷದ ಭೀತಿಯನ್ನು ಹೆಚ್ಚಿಸುತ್ತಿವೆ. ತೈವಾನ್ ಗೆ ಸಂಭದಿಸಿದಂತೆ ಚೀನಾ ಮತ್ತು ಜಪಾನ್ ಹಾಗೂ ಇತರ ದೇಶಗಳ ನಿರ್ಧಾರಗಳು ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಕಾಶ್ಮೀರದಲ್ಲಿ ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆದ ಹೀನ ಭಯೋತ್ಪಾದಕ ಕೃತ್ಯ, ಶಾಂತಿಯನ್ನು ಸಾರುವ ಭಾರತವೂ ಶಸ್ತ್ರವನ್ನು ಕೈಗೆ ತೆಗೆದುಕೊಳ್ಳಲೇಬೇಕಾದಂತ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ವಿಪರ್ಯಾಸ. ಥೈಲ್ಯಾಂಡ್ – ಕಾಂಬೋಡಿಯಾ ನಡುವೆ ಆಗಾಗ್ಗೆ ಆಗುತ್ತಿರುವ ತಿಕ್ಕಾಟ ಕೊನೆಗೊಂಡರೆ ಸಾಕು. ಮ್ಯಾನ್ಮಾರ್‌ನ ಗೃಹಯುದ್ಧ ಮತ್ತು ಅಫ್ಘಾನಿಸ್ತಾನದ ಅಸ್ಥಿರತೆ ಮುಂದುವರಿಯುತ್ತಿವೆ.
ವಿಶ್ವಸಂಸ್ಥೆಯ ಕನಸಿನಿಂದ ಇಂದಿನ ವಾಸ್ತವತೆವರೆಗೆ
Klive Special Article ಎರಡು ಮಹಾಯುದ್ಧಗಳ ನಂತರ “ಮುಂದಿನ ಪೀಳಿಗೆಯನ್ನು ಯುದ್ಧದ ವಿಪತ್ತಿನಿಂದ ರಕ್ಷಿಸುವುದು” ಎಂಬ ಗುರಿಯೊಂದಿಗೆ ಸ್ಥಾಪಿತವಾದ ವಿಶ್ವಸಂಸ್ಥೆ, ಇಂದಿನ ಜಗತ್ತಿನ ಸಂಕೀರ್ಣ ಸಂಘರ್ಷಗಳನ್ನು ತಡೆಗಟ್ಟುವಲ್ಲಿ ವಿಫಲವಾಗುತ್ತಿದೆಯೋನೋ ಎಂಬ ದಿಟ್ಟ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಓಸ್ಲೋ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, ೨೦೨೪ನೇ ವರ್ಷವು ವಿಶ್ವಸಂಸ್ಥೆ ಸ್ಥಾಪನೆಯ ನಂತರದ ಅತ್ಯಂತ ಹಿಂಸಾತ್ಮಕ ವರ್ಷ. ೩೬ ದೇಶಗಳಲ್ಲಿ ೬೧ ಯುದ್ಧಗಳು ದಾಖಲಾಗಿವೆ. ೨೦೨೫ ಮತ್ತು ೨೦೨೬ರ ಆರಂಭವೂ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದು ಆತಂಕಕಾರಿ.


ಯುದ್ಧದ ಕಾನೂನು: ಕಾಗದದಲ್ಲೇ ಉಳಿದ ನಿಯಮಗಳು
ಜಿನೀವಾ ಒಪ್ಪಂದಗಳು ನಾಗರೀಕರ ರಕ್ಷಣೆಯಿಂದ ಹಿಡಿದು, ಶಾಲೆ–ಆಸ್ಪತ್ರೆಗಳ ಮೇಲೆ ದಾಳಿ ಮಾಡಬಾರದೆಂಬ ನಿಯಮಗಳವರೆಗೆ ಅನೇಕ ನಿರ್ಬಂಧಗಳನ್ನು ವಿಧಿಸುತ್ತವೆ. ಆದರೆ ಗಾಜಾ, ಉಕ್ರೇನ್, ಸುಡಾನ್, ಸಿರಿಯಾ—ಎಲ್ಲೆಡೆ ಈ ನಿಯಮಗಳ ಉಲ್ಲಂಘನೆ ಸಾಮಾನ್ಯವಾಗಿದೆ. ಅಂತರರಾಷ್ಟ್ರೀಯ ರೆಡ್ ಕ್ರಾಸ್‌ಗೆ ನೀಡಲಾದ ಮೇಲ್ವಿಚಾರಣಾ ಜವಾಬ್ದಾರಿ ನೆಲಮಟ್ಟದಲ್ಲಿ ಪರಿಣಾಮಕಾರಿಯಾಗದಿರುವುದು ಸ್ಪಷ್ಟ.

ಸುಧೀರ್ ಕೀಳಂಬಿ ಅವರು ಜಿನೀವಾದಲ್ಲಿನ ಭಾರತದ ಮಿಷನ್ ನಲ್ಲಿ ಭಾರತದ ರಾಜತಾಂತ್ರಿಕ ಪ್ರತಿನಿಧಿ.
(ಇದು ಲೇಖಕರ ವೈಯುಕ್ತಿಕ ಅಭಿಪ್ರಾಯವಾಗಿದ್ದು, ಭಾರತ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಭಿಸುವುದಿಲ್ಲ.)

Shimoga-Bhadravati Urban Development Authority ಜನರ ಆರೋಗ್ಯ ದೃಷ್ಟಿಯಿಂದ ಸೂಡಾ ವ್ಯಾಪ್ತಿಯ ಕೆರೆಗಳು & ಪಾರ್ಕುಗಳನ್ನ ಅಭಿವೃದ್ಧಿ ಪಡಿಸಲಾಗುತ್ತಿದೆ- ಹೆಚ್.ಎಸ್.ಸುಂದರೇಶ್

0

ಶಿವಮೊಗ್ಗ ನಗರವನ್ನು ಸುಂದರಗೊಳಿಸುವುದು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಸೂಡಾ ವ್ಯಾಪ್ತಿಯಲ್ಲಿ ಪಾರ್ಕ್ಗಳು ಮತ್ತು ಕೆರೆಗಳ ಅಭಿವೃದ್ದಿ, ಅಪಾರ್ಟ್ಮೆಂಟ್‌ಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಸೋಮವಾರ ನಗರದ ಸಾಗರ ರಸ್ತೆಯ ಕೊಡಚಾದ್ರಿ ಬಡಾವಣೆಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಹಾಗೂ ಶರಾವತಿ ಡೆಂಟಲ್ ಕಾಲೇಜ್ ಬಳಿಯ ಗೋಲ್ಡನ್ ಸಿಟಿ ಬಡಾವಣೆಯಲ್ಲಿ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು.
ಸಾಗರ ರಸ್ತೆಯ ಕೊಡಚಾದ್ರಿ ಬಡಾವಣೆಯಲ್ಲಿ ನೂತನವಾಗಿ ರೂ.25 ಲಕ್ಷ ಮೊತ್ತದಲ್ಲಿ ಪಾರ್ಕ್ ಅಭಿವೃದ್ದಿ ಮತ್ತು ರೂ.25 ಲಕ್ಷದಲ್ಲಿ ರಸ್ತೆ ಅಭಿವೃದ್ದಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಹಾಗೂ ಶರಾವತಿ ಡೆಂಟಲ್ ಕಾಲೇಜ್ ಬಳಿಯ ಗೋಲ್ಡನ್ ಸಿಟಿ ಬಡಾವಣೆಯಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಓಪನ್ ಜಿಮ್ ಉದ್ಘಾಟಿಸಲಾಗಿದ್ದು ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇತ್ತೀಚೆಗೆ ಮಲೆನಾಡಿನ ಸೊಬಗು ಮರೆಯಾಗುತ್ತಿದ್ದು, ಉಷ್ಣಾಂಶ ಹೆಚ್ಚುತ್ತಿದೆ. ಆದ್ದರಿಂದ ನಗರದಲ್ಲಿ ಗಿಡಗಳನ್ನು ನೆಡುವುದು, ಪಾರ್ಕ್ ಅಭಿವೃದ್ದಿ ಪಡಿಸುವುದು ಅತ್ಯವಶ್ಯಕವಾಗಿದೆ. ಕಳೆದ ಬಾರಿ ವಾಜಪೇಯಿ ಬಡಾವಣೆಯಲ್ಲಿ 3 ಸಾವಿರ ಗಿಡಗಳನ್ನು ನೆಡಲಾಗಿತ್ತು. ಈ ಬಾರಿ ನಗರದಲ್ಲಿ 5 ಸಾವಿರ ಗಿಡಗಳನ್ನು ನೆಡುವ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ಮಾತನಾಡಿದ್ದೇನೆ. ನಗರನ್ನು ಹಸಿರಾಗಿಡಲು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಈಗಾಗಲೇ 50 ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 50 ಪಾರ್ಕ್ಗಳನ್ನು ಅಭಿವೃದ್ದಿಪಡಿಸಿ, ಉದ್ಘಾಟನೆ ಮಾಡಲಾಗುತ್ತಿದೆ. ಶಿವಮೊಗ್ಗ ನಗರ ತನ್ನದೇ ಆದ ಇತಿಹಾಸ ಹೊಂದಿದ್ದು, ಎಲ್ಲ ಮೂಲಭೂತ ಸೌಕರ್ಯ ಇರುವುದರಿಂದ ಹೂಡಿಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇಂತಹ ನಗರವನ್ನು ನಾವು ಸುಂದರವಾಗಿ ಮತ್ತು ಹಸಿರಾಗಿ ಇಟ್ಟುಕೊಳ್ಳಬೇಕು. ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ನೆಡಬೇಕು ಎಂದರು.
ಶಿವಮೊಗ್ಗ-ಭದ್ರಾವತಿ ವ್ಯಾಪ್ತಿಯಲ್ಲಿ ರೂ.50 ಕೋಟಿ ವೆಚ್ಚದಲ್ಲಿ 22 ಕೆರೆಗಳನ್ನು ಹೈಟೆಕ್ ಆಗಿ ಅಭಿವೃದ್ದಿಪಡಿಸಲಾಗುವುದು. 12 ಕೆರೆ ಅಭಿವೃದ್ದಿಗೆ ಈಗಾಗಲೇ ಟೆಂಡರ್ ಆಗಿದೆ. ವಾಕಿಂಗ್ ಪಾಥ್, ಮಕ್ಕಳ ಆಟಿಕೆಗಳು, ಫೆನ್ಸ್, ಲೈಟ್, ಐಲ್ಯಾಂಡ್ ನಿರ್ಮಾಣ ಸೇರಿದಂತೆ ಅತ್ಯಂತ ಸುಂದರವಾಗಿ ಕೆರೆಗಳನ್ನು ಅಭಿವೃದ್ದಿಸಲು ಯೋಜನೆ ರೂಪಿಸಲಾಗಿದೆ.
ನಗರದಲ್ಲಿ ಇತ್ತೀಚೆಗೆ ನಿವೇಶನಗಳು ಸಿಗುವುದು ಬಹಳ ಕಷ್ಟವಾಗಿರುವ ಕಾರಣ ನಗರ ವ್ಯಾಪ್ತಿಯಲ್ಲಿ ಸುಮಾರು 1000 ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ ಜನರಿಗೆ ನೀಡಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಾಗೂ ಜನರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡುವ ಉದ್ದೇಶದಿಂದ ಗೋಪಿಶೆಟ್ಟಿಕೊಪ್ಪದಲ್ಲಿ 33 ಎಕರೆಯನ್ನು ರೈತರಿಂದ ಖರೀದಿಸಿ ನಿವೇಶನ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
Shimoga-Bhadravati Urban Development Authority ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಬಡಾವಣೆಗಳ ನಿವಾಸಿಗಳು ಕೋರಿರುವಂತೆ ಬಡಾವಣೆಗಳಲ್ಲಿನ ರಸ್ತೆ ಮರು ಡಾಂಬರೀಕರಣ, ಪಾರ್ಕ್ ಅಭಿವೃದ್ದಿ, ಸಮುದಾಯ ಭವನ ನಿರ್ಮಾಣ ಇತರೆ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದ ಅವರು ಪ್ರಸ್ತುತ ಇರುವ ಓಪನ್ ಜಿಮ್, ಪಾರ್ಕ್ ಇತರೆ ಸೌಲಭ್ಯಗಳನ್ನು ನಿವಾಸಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಎಇಇ ಬಸವರಾಪ್ಪ, ಎಇಇ ಗಂಗಾಧರಸ್ವಾಮಿ, ಟಿಪಿಎಂ ಅಭಿಲಾಷ್, ಸೂಡಾ ಮಾಜಿ ಅಧ್ಯಕ್ಷರಾದ ಜ್ಞಾನೇಶ್ವರ್, ನಾಗರಾಜ್, ಮಣಿ, ದೇವೇಂದ್ರಪ್ಪ, ಚಂದ್ರಶೇಖರ್, ಬಡಾವಣೆಗಳ ನಿವಾಸಿಗಳು ಹಾಜರಿದ್ದರು.