Friday, February 13, 2026
Friday, February 13, 2026
Home Blog Page 116

Karnataka Sanga Shivamogga ಕರ್ನಾಟಕ ಸಂಘದ ವಾರ್ಷಿಕ ಪುಸ್ತಕ ಬಹುಮಾನ ಘೋಷಣೆ

0

Karnataka Sanga Shivamogga ಶಿವಮೊಗ್ಗ ಕರ್ನಾಟಕ ಸಂಘವು ೨೦೨೪ನೆಯ ಸಾಲಿನ ಪುಸ್ತಕ ಬಹುಮಾನಗಳನ್ನು ಈ ಕೆಳಕಂಡ ಕನ್ನಡ ಸಾಹಿತ್ಯ ಪ್ರಕಾರಗಳಿಗೆ ಘೋಷಿಸಿದೆ. ವಿಜೇತರಿಗೆ ತಲಾ ರೂ. 10,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ವನ್ನು ನೀಡಿ ಗೌರವಿಸಲಾಗುವುದು. ಪುಸ್ತಕ ಬಹುಮಾನ 2024ರ ಸಮಾರಂಭವನ್ನು ದಿನಾಂಕ 22-11-2025ರ ಶನಿವಾರದಂದು ಕರ್ನಾಟಕ ಸಂಘದ ಹಸೂಡಿ ವೆಂಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಕ್ರಸಂ
ಬಹುಮಾನ
ಪುಸ್ತಕ
ಲೇಖಕರು
೧.
ಕುವೆಂಪು (ಕಾದಂಬರಿ)
ಶಾಂತಿಧಾಮ
ಸಿರಿ ಮೂರ್ತಿ ಕಾಸರವಳ್ಳಿ

ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ (ಅನುವಾದ)
ಆ ಲಯ ಈ ಲಯ
ನಟರಾಜ್ ಹೊನ್ನವಳ್ಳಿ
೩.
ಶ್ರೀಮತಿ ಎಂ.ಕೆ. ಇಂದಿರಾ (ಮಹಿಳಾ ಸಾಹಿತ್ಯ)
ಜೀವನ್ಮುಖಿ
ಶ್ರೀಮತಿ ಪ್ರತಿಭಾ ರಾವ್
೪.
ಶ್ರೀ ಪಿ. ಲಂಕೇಶ್ (ಮುಸ್ಲಿಂ ಬರಹಗಾರರು)
ಹೊಸ್ತಿಲು ದಾಟಿ ಬಂದ ಬಿಕ್ಕು
ಸಂತೇಬೆನ್ನೂರ್ ಫೈಜ್ನಟ್ರಾಜ್
೫.
ಡಾ. ಜಿ. ಎಸ್. ಶಿವರುದ್ರಪ್ಪ (ಕವನ ಸಂಕಲನ)
ದೇವರ ತೇರಿಗೂ ಗಾಲಿಗಳು ಬೇಕು
ಶ್ರೀಮತಿ ಭವ್ಯ ಕಬ್ಬಳಿ
೬.
ಡಾ. ಹಾ. ಮಾ. ನಾಯಕ
(ಅಂಕಣ ಬರಹಗಾರರು)
ಪತ್ರಿಕೋದ್ಯಮದ ಪಲ್ಲಟಗಳು
ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ
೭.
ಡಾ. ಯು. ಆರ್. ಅನಂತಮೂರ್ತಿ
(ಸಣ್ಣ ಕಥಾ ಸಂಕಲನ)
ಬುದ್ಧ ಗಂಟೆಯ ಸದ್ದು
ಮಹಾಂತೇಶ್ ನವಲಕಲ್
೮.
ಡಾ. ಕೆ. ವಿ. ಸುಬ್ಬಣ್ಣ (ನಾಟಕ)
ನೀವು ಕಾಣಿರೇ ಮತ್ತು ಮಲ್ಲಿಗೆ
ಕೆ.ವೈ. ನಾರಾಯಣಸ್ವಾಮಿ
೯.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ (ಪ್ರವಾಸ ಸಾಹಿತ್ಯ)
ಸುಪ್ತ ಸಾಗರದಾಚೆ
ಡಾ. ಶೈಲೇಶ್ ಕುಮಾರ್ ಎಸ್.
೧೦.
ಶ್ರೀ ಹಸೂಡಿ ವೆಂಕಟ ಶಾಸ್ತ್ರಿ (ವಿಜ್ಞಾನ ಸಾಹಿತ್ಯ)
ಪಂಚಭೂತಗಳ ರಾಸಾಯನಿಕ ವೈವಿಧ್ಯ
ಪ್ರೊ. ಬಿ.ಎಸ್. ಜೈಪ್ರಕಾಶ್
ಪ್ರೊ. ಆರ್. ವೇಣುಗೋಪಾಲ್
೧೧.
ಡಾ. ನಾ. ಡಿಸೋಜ (ಮಕ್ಕಳ ಸಾಹಿತ್ಯ)
ಭೈರ
ಶ್ರೀ ಸತೀಶ್ ಕೆ.ಎಸ್
೧೨.
ಡಾ. ಹೆಚ್. ಡಿ. ಚಂದ್ರಪ್ಪಗೌಡ
(ವೈದ್ಯ ಸಾಹಿತ್ಯ)
ಮಿಸ್ಸಿಂಗ್ ವುಮೆನ್
ಡಾ. ಕರವೀರಪ್ರಭು ಕ್ಯಾಲಕೊಂಡ

ಭಾವಿ ಉದ್ಯಮಿಗಳಾಗುವ ವಿದ್ಯಾರ್ಥಿಗಳಲ್ಲಿ ಉದ್ಯಮಿಗಳ ಯಶಸ್ಸಿನ ಹಿಂದಿರುವ ಸೃಜನಶೀಲತೆ, ಹೂಡಿಕೆ & ಜಾರಿ ತರುವ ನಿಯಮಗಳ ಬಗ್ಗೆ ಅರಿವಿರಬೇಕು- ಬಿ.ಗೋಪಿನಾಥ್

0

Incubation ಯೋಜನೆ ಕುರಿತು ಒಂದು ದಿನದ ಕಾರ್ಯಾಗಾರವನ್ನು MBA ‍& MCA ಆಡಿಟೋರಿಯಂ ‌JNN ಕಾಲೇಜ್‌ ಆಫ್‌ ಇಂಜಿನಿಯರಿಂಗ್, ಶಿವಮೊಗ್ಗದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಶ್ರೀ ಗೋಪಿನಾಥ್‌ ಬಿ. ಅಧ್ಯಕ್ಷರು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ(ರಿ). ಶಿವಮೊಗ್ಗ ಇವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ, ವಿದ್ಯಾರ್ಥಿಗಳಿಗೆ ಅನೇಕ ಉದ್ಯಮಿಗಳ ಯಶಸ್ಸಿನ ಹಿಂದೆ ಇರುವ Innovation, Investment and Implementation ಎಂಬ ಮೂರು ನಿಯಮಗಳನ್ನು ಅಳವಡಿಸಿ ಹೇಗೆ ಯಶಸ್ವಿ ಉದ್ಯಮದಾರರಾಗಲು ಉತ್ತೇಜಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಶ್ರೀ ಜೋಯಿಸ್‌ ರಾಮಾಚಾರ್‌ ಇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಉದ್ಯಮದಾರರಾಗಲು ಹೆಚ್ಚಿನ ಸ್ಪೂರ್ತಿದಾಯಕ ವಿಷಯವನ್ನು ಪ್ರಸ್ತಾಪಿಸಿದರು.

ಸಂಪನ್ಮೂಲಕರಾದ ಶ್ರೀ ಗೋಪಿನಾಥ್‌ ಇವರು ವಿದ್ಯಾರ್ಥಿಗಳಿಗೆ ಉದ್ಯಮದಾರರಾಗಲು ಸರ್ಕಾರದ ವಿವಿಧ ಯೋಜನೆಗಳು, ಬ್ಯಾಂಕ್‌ ಗಳಿಂದ ದೊರಕುವ ಸಾಲ ಸೌಲಭ್ಯಗಳು ಮತ್ತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಶ್ರೀ ಹೆಚ್‌ ಸುರೇಶ್‌, ಜಿಲ್ಲಾ ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕರಾದ ಶ್ರೀ ಹನುಮಂತಪ್ಪ, MCA ವಿಭಾಗದ ಡಾ. ಹೇಮಂತ್‌ ಕುಮಾರ್‌, ಸಹಾಯಕ ಪ್ರಾಧ್ಯಾಪಕರಾದ ಅರುಣ್‌ ಕುಮಾರ್‌ ಕೆ.ಎಲ್.‌ ಹಾಗೂ ಇನ್ನಿತರರು ಪ್ರಮುಖರಿದ್ದರು.

Sharavati Pumped Storage ಶರಾವತಿ ಪಂಪ್ಡ್ ಸ್ಟೊರೇಜ್ : ಕರ್ನಾಟಕ ಸರ್ಕಾರದ ಮಾಹಿತಿ ಪ್ರಕಟ

0

Sharavati Pumped Storage ರಾಜ್ಯ ಹಾಗೂ ರಾಷ್ಟ್ರದ ವಿದ್ಯುತ್ ಭವಿಷ್ಯಕ್ಕಾಗಿ ಪರಿಸರಸ್ನೇಹಿ ನವೀಕರಿಸಬಹುದಾದ ಇಂಧನ ಶೇಖರಣಾ ಯೋಜನೆಗಳಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಪ್ರಮುಖ ಯೋಜನೆಯಾಗಿದೆ.

ರಾಜ್ಯದ ಆರ್ಥಿಕ ಪ್ರಗತಿ ಮತ್ತು ಶಾಶ್ವತ ವಿದ್ಯುತ್‌ ಅಭಿವೃದ್ಧಿಗೆ ಪೂರಕವಾದ ಯೋಜನೆ.
● ಕೇವಲ 0.541 ಚ.ಕಿ.ಮೀ. ಅರಣ್ಯ ಭೂಮಿಯಲ್ಲಿ 2000 ಮೆಗಾವಾಟ್ ವಿದ್ಯುತ್ ಶೇಖರಣೆ ಮತ್ತು ಮರು ಉತ್ಪಾದನೆ — ಅತಿ ಕಡಿಮೆ ಭೂಮಿ ಬಳಕೆಯ ಯೋಜನೆ.
ಮುನ್ನೆಚ್ಚರಿಕಾ ಕ್ರಮಗಳಿಂದ – ಪರಿಸರಕ್ಕೆ ಕನಿಷ್ಠ ಪರಿಣಾಮದೊಂದಿಗೆ ಯೋಜನೆಯ ಜಾರಿ.
● ಹೊಸ ಅಣೆಕಟ್ಟುಗಳಿಲ್ಲದೆ – ಗೇರುಸೊಪ್ಪ ಮತ್ತು ತಲಕಳಲೆ ಅಣೆಕಟ್ಟುಗಳ ಬಳಕೆ, ಹಾಲಿ ಇರುವ ವ್ಯವಸ್ಥೆಯ ಮೂಲಕ ವಿದ್ಯುತ್‌ ಸರಬರಾಜು.
● ಗುಡ್ಡ ಕುಸಿತದ ವದಂತಿಗಳಿಗೆ ಕಿವಿಗೊಡಬೇಡಿ – ತಜ್ಞರ ಮೇಲ್ವಿಚಾರಣೆಯಲ್ಲಿ ಸುರಕ್ಷಿತ ಕಾಮಗಾರಿ.
● ಯೊಜನೆ ನೀರಿನ ಮರುಬಳಕೆಯಿಂದ ಕಾರ್ಯನಿರ್ವಹಿಸುವುದರಿಂದ – ಹಾಲಿ ನದಿ ನೀರಿನ ಹರಿವಿನಲ್ಲಿ ಯಾವುದೆ ಬದಲಾವಣೆ ಆಗುವುದಿಲ್ಲ.

ಕರ್ನಾಟಕ ರಾಜ್ಯವು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಮೂಲಕ ಶರಾವತಿ ಕಣಿವೆಯಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದೆ ಈ ಯೋಜನೆಯನ್ನು ಜಾರಿಗೊಳಿಸಲು ಕೆಪಿಸಿಎಲ್ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಹೆಜ್ಜೆ ಇಡುತ್ತಿದೆ. ಪ್ರಸ್ತುತ ಪರಿಸರ ಸಂರಕ್ಷಣೆ ಜೊತೆಗೆ ಬೇಡಿಕೆಗೆ ಅನುಗುಣವಾಗಿ ರಾಜ್ಯದ ಜನರಿಗೆ ವಿದ್ಯುತ್ ಪೂರೈಸಲು ಈ ಯೋಜನೆ ಅನಿವಾರ್ಯ.

Sharavati Pumped Storage ಈ ಯೋಜನೆ ಜಾರಿ ವೇಳೆ ಈಗಾಗಲೇ ನಿರ್ಮಾಣವಾಗಿರುವ ಗೇರುಸೊಪ್ಪ ಮತ್ತು ತಲಕಳಲೆ ಅಣೆಕಟ್ಟೆಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಅಣೆಕಟ್ಟೆ ಅವಶ್ಯಕತೆ ಇಲ್ಲ. 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅತೀ ಕಡಿಮೆ ಭೂಮಿ ಬಳಕೆ ಮಾಡಿಕೊಳ್ಳುತ್ತಿರುವುದು ಶರಾವತಿ ಪಿಎಸ್‌ಪಿ ಯೋಜನೆಯ ಮಹತ್ವದ ಅಂಶವಾಗಿದೆ. ಈ ಯೋಜನೆಯಡಿ ಕೇವಲ 100.645 ಹೆಕ್ಟೇರ್ ಪ್ರದೇಶ (248.7 ಎಕರೆ ಪ್ರದೇಶ)ವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದ್ದರೆ, 46.49 ಹೆಕ್ಟೇರ್ ಅರಣ್ಯೇತರ ಪ್ರದೇಶವಾಗಿದೆ. ಅರಣ್ಯ ಪ್ರದೇಶ ಬಳಕೆ ವೇಳೆ ಕೈಗೊಳ್ಳಲಾಗುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೆಪಿಸಿ ಕೈಗೊಳ್ಳಲಿದೆ ಮತ್ತು ಈ ಬಗ್ಗೆ ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿಗಳೂ ಸಹ ಸೂಕ್ತ ಸಮಯದಲ್ಲಿ ಮೇಲುಸ್ತುವಾರಿ, ಪರಿಶೀಲನೆ, ಪರಾಮರ್ಶೆ ನಡೆಸಲಿವೆ. ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಪಿಸಿ ಪರ್ಯಾಯ ಅರಣ್ಯ ಪುನರ್ ಸ್ಥಾಪಿಸಲು ಅರಣ್ಯ ಇಲಾಖೆಗೆ ಸ್ವಾಧೀನದಷ್ಟೇ ಅರಣ್ಯೇತರ ಪ್ರದೇಶ ಹಾಗು ಅರಣ್ಯ ಪುನರ್ ಸ್ಥಾಪನೆಗೆ ತಗಲುವ ವೆಚ್ಚವನ್ನೂ ಭರಿಸುತ್ತಿದೆ. ಯೋಜನೆ ವ್ಯಾಪ್ತಿಯಲ್ಲಿ ಮರಗಳನ್ನು ಗುರುತಿಸಲಾಗಿದೆಯಾದರೂ ಅಗತ್ಯ ಇದ್ದರೆ ಮಾತ್ರ ಕಡಿಯಲಾಗುತ್ತದೆ.

ಬಹುಪಾಲು ರಚನೆಗಳು ಸುರಂಗದ ಒಳಗೆ ಇರುವುದರಿಂದ ಭೂಮಿಯ ಮೇಲ್ಮೈನಲ್ಲಿ ಕನಿಷ್ಟ ಪರಿಣಾಮ ಉಂಟಾಗುತ್ತದೆ. ಭೂಮಿಯ ಆಳದಲ್ಲಿ ಟನಲ್ (ಸುರಂಗ) ಮೂಲಕ ನೀರನ್ನು ಹರಿಬಿಡುವ ಮತ್ತು ಅದೇ ಟನಲ್ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಸುರಂಗ ನಿರ್ಮಾಣದ ಭೂಮಿಯ ಮೇಲ್ಮೈನಲ್ಲಿ ಇರುವ ಮರ-ಗಿಡ- ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಕಾಮಗಾರಿ ವೇಳೆ ಪ್ರಸ್ತುತ ಇರುವ ರಸ್ತೆಯನ್ನೇ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಪ್ರಸ್ತುತ 3.5 ಮೀಟರ್ ಇರುವ ಈ ರಸ್ತೆಯನ್ನು ಅಗತ್ಯ ವಸ್ತುಗಳ ರವಾನೆಗೆ ಅನುವಾಗುವಂತೆ 5.5 ಮೀಟರ್ ವಿಸ್ತರಿಸಲು ಯೋಜಿಸಲಾಗಿದೆ.

ಭೂಮಿಯ ಒಳಗೆ ಪಂಪ್ ಹೌಸ್ ಸೇರಲು ಸುರಂಗ ಪ್ರವೇಶಿಸುವ ಸ್ಥಳದಲ್ಲಿ ಮಾತ್ರ ಅಲ್ಪ ಪ್ರಮಾಣದ ಅರಣ್ಯ ಪ್ರದೇಶ ಬಳಕೆ ಮಾಡಿಕೊಳ್ಳಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಸುರಂಗದ ಪ್ರವೇಶ ದ್ವಾರದ ಸುತ್ತಮುತ್ತ ಅರಣ್ಯ ಪುನರ್ ನಿರ್ಮಾಣವಾಗಲಿದೆ. ಈ ಸಂಬಂಧ ಈಗಾಗಲೇ ರಾಜ್ಯ ಅರಣ್ಯ ಇಲಾಖೆ, ಕೇಂದ್ರ ಅರಣ್ಯ ಇಲಾಖೆ ಹಲವು ಭಾರಿ ಸ್ಥಳ ಪರಿಶೀಲನೆ ನಡೆಸಿ ಕನಿಷ್ಠ ಗಿಡ-ಮರಗಳ ಕಡಿದು ಯೋಜನೆ ಜಾರಿ ಮಾಡಲು ಕ್ರಮವಹಿಸಿವೆ.

ಪಂಪ್ಡ್ ಸ್ಟೋರೇಜ್ ಯೋಜನೆಗೆ ಈಗಾಗಲೇ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮತಿ ನೀಡಿದೆ. ಈ ಪ್ರಾಧಿಕಾರವು ಅನುಮತಿ ನೀಡುವ ಮೊದಲು 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿತ್ತು. ಆ ನಿರ್ದೇಶನಾಲಯಗಳು ಯೋಜನೆಯಿಂದ ಭೂಕುಸಿತ, ಭೂಕಂಪದಂತಹ ಅಪಾಯಗಳು ಉದ್ಭವವಾಗುವುದಿಲ್ಲ, ಜೀವ ವೈವಿದ್ಯತೆಗೆ ಸಮಸ್ಯೆಯಾಗುವುದಿಲ್ಲ, ಭೂಮಿಯ ಸ್ಥಿರತೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ತಿಳಿದುಕೊಂಡು ವರದಿ ನೀಡಿದ ಬಳಿಕವೇ ಯೋಜನೆಗೆ ಅನುಮತಿ ನೀಡಲಾಗಿರುತ್ತದೆ.

ಈಗಾಗಲೇ ವನ್ಯ ಜೀವಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದಲ್ಲದೆ, ರಚನಾತ್ಮಕವಾಗಿ ಭೂಮಿಯ ಸ್ಥಿರತೆಗೆ ಯಾವುದೇ ಧಕ್ಕೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿತ್ತು. ಇದರ ಆಧಾರದ ಮೇಲೆ ವನ್ಯಜೀವಿ ಇಲಾಖಾಧಿಕಾರಿಗಳು ಪ್ರತ್ಯೇಕವಾಗಿ ಪರಿಶೀಲಿಸಿದ ಬಳಿಕ ಯೋಜನೆಯನ್ನು ಮೇಲ್ಮಟ್ಟದಲ್ಲಿರುವ ವನ್ಯಜೀವಿ ಮಂಡಳಿ ಮುಂದೆ ಮಂಡಿಸಲಾಗಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಬಳಿಕ ರಾಜ್ಯ ಮನ್ಯಜೀವಿ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿವೆ.

ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವಾಲಯ, ಪರಿಸರ ಇಲಾಖೆಗಳು ನಿಗದಿಪಡಿಸುವ ಮಾನದಂಡದಡಿ ಕಾರ್ಯಾಚರಣೆ ನಡೆಸಲಾಗುತ್ತದೆ. ಕೇಂದ್ರ ಅರಣ್ಯ ಸಚಿವಾಲಯದ ನಿಯಮಗಳು ಮತ್ತು ಉಲ್ಲೇಖಗಳನ್ವಯ ಅಧ್ಯಯನ ನಡೆಸಲಾಗಿದೆ. ಈ ವರದಿ ಆಧರಿಸಿ ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆಯ ನಿಯಮಗಳಂತೆ ಯೋಜನೆ ಅನುಷ್ಠಾನದ ವೇಳೆ ಉಪಶಮನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಶರಾವತಿ ಪಿಎಸ್ಪಿ ಯೋಜನೆ ಜಾರಿ ಪ್ರದೇಶದಲ್ಲಿ ಅಪರೂಪದ ಸಿಂಗಳೀಕಗಳು ಸಂಚರಿಸುತ್ತವೆ ಎಂದು ಅರಣ್ಯ ಇಲಾಖೆಯು ತಿಳಿಸಿದೆ. ಇವರುಗಳ ಸಂಚಾರಕ್ಕೆ ಸಹ ತೊಡಕಾಗದಂತೆ ಕ್ರಮ ವಹಿಸಲು ಕೆಪಿಸಿ ಮುಂದಾಗಿದೆ. ಯೋಜನೆ ಜಾರಿ ವೇಳೆ ಅರಣ್ಯ ಇಲಾಖೆ ನೇತೃತ್ವದಲ್ಲಿ ಸಿಂಗಳೀಕಗಳ ಸಂಚಾರಕ್ಕೆ ಯಾವುದೇ ಬಾದಕ ಆಗಂದಂತೆ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಅನುಸರಿಸಲಾಗಿದ್ದ ಮೇಲ್ಸೇತುವೆ (ಟ್ರೀ ಕ್ಯಾನೋಪಿ)ಗಳನ್ನು ಅರಣ್ಯ ಇಲಾಖೆ, ಸೂಚನೆ, ಮಾರ್ಗದರ್ಶನ ಮತ್ತು ಮೇಲುಸ್ತುವಾರಿಯಲ್ಲಿ ನಿರ್ಮಾಣ ಮಾಡುವ ಷರತ್ತಿನೊಂದಿಗೆ ಕೆಪಿಸಿ ಯೋಜನೆ ಜಾರಿಗೆ ಮುಂದಾಗಿದೆ.

ಕನಿಷ್ಠ ನೀರಿನ ಅಗತ್ಯ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ನೀರಿನ್ನು ಮರುಬಳಕೆ ಮಾಡುವುದರಿಂದ ಮತ್ತು ಮುಂದಿನ 50-60 ವರ್ಷಗಳ ಅವಧಿಗೆ ಒಮ್ಮೆ ಮಾತ್ರ ಕೇವಲ 0.37 ಟಿಎಂಸಿ ನೀರನ್ನು ಬಳಕೆ ಮಾಡಲಾಗುವುದು. ಇದಕ್ಕಿಂತ ಹೆಚ್ಚಿನ ನೀರನ್ನು ಬಳಕೆ ಮಾಡಲು ಅಥವಾ ಅಣೆಕಟ್ಟೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರನ್ನು ಸಂಗ್ರಹಿಸಲು ಅವಕಾಶವೇ ಇಲ್ಲದಿರುವುದರಿಂದ ನದಿಯಲ್ಲಿ ಎಂದಿನಂತೆಯೇ ನೀರು ಹರಿಯಲಿದೆ ಮತ್ತು ಸಮುದ್ರಕ್ಕೂ ಸೇರಲಿದೆ. ಹೀಗಾಗಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ನೀರಿನ ಕೊರತೆ, ನದಿಗೆ ಉಪ್ಪು ನೀರು ಸೇರುವುದು ಅಥವಾ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವುದಿಲ್ಲ.

ಲಿಂಗನಮಕ್ಕಿ ಜಲಾಶಯದಲ್ಲಿ ವಾರ್ಷಿಕ ಸರಾಸರಿ 180ರಿಂದ 220 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಬಳಕೆ ಮಾಡಿಕೊಂಡು ಈಗಾಗಲೇ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರಿನ ಬಳಕೆಯಿಂದ ಜಲ ವಿದ್ಯುತ್ ಉತ್ಪಾದನೆ ನಂತರ ಕೃಷಿ, ಕುಡಿಯಲು, ಮೀನುಗಾರಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಮತ್ತು ರೈತರು ಬಳಕೆ ಮಾಡಿಕೊಂಡ ನಂತರ ಆ ನೀರು ಸಮುದ್ರ ಸೇರುತ್ತಿದೆ. ಶರಾವತಿ ಪಿಎಸ್ಪಿ ಜಾರಿ ನಂತರವೂ ಈಗಿನ ಶರಾವತಿ ನೀರಿನ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ನೀರಿನ ಪ್ರಮಾಣದಲ್ಲಿ ಕೊರತೆ ಆಗುವುದಿಲ್ಲ.

ವಿದ್ಯುತ್ ಸರಬರಾಜಿಗೆ ಈಗಿರುವ ವ್ಯವಸ್ಥೆಯ ಬಳಕೆ:

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಉತ್ಪಾದಿಸಲಾಗುವ 2000 ಮೆಗಾ ವ್ಯಾಟ್ ವಿದ್ಯುತ್ ಅನ್ನು ಸರಬರಾಜು ಮಾಡಲು ಪ್ರಸ್ತುತ “ಓನ್ ನೇಷನ್- ಓನ್ ಗ್ರಿಡ್”ನಡಿ ಇರುವ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನೇ ಬಳಸಲಾಗುವುದು. ಪ್ರಸ್ತುತ ಈ ವ್ಯಾಪ್ತಿಯಲ್ಲಿ ಲಭ್ಯವಿರುವ 220 ಕೆ.ವಿ ಸರಬರಾಜು ವ್ಯವಸ್ಥೆಯನ್ನು 400 ಕೆ.ವಿ ಮೇಲ್ದರ್ಜೆಗೆ ಏರಿಸಲಾಗುವುದರಿಂದ ಹೊಸದಾಗಿ ಲೈನ್ ಎಳೆಯಲು ಹೆಚ್ಚುವರಿ ಭೂಮಿಯ ಅವಶ್ಯಕತೆ ಇರುವುದಿಲ್ಲ.

ಗುಡ್ಡ ಕುಸಿತ ಇಲ್ಲ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೂ ಮುನ್ನ ಪ್ರಾಥಮಿಕ ಹಂತದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಭೂ ಸರ್ವೇಕ್ಷಣಾ ಇಲಾಖೆಯೂ ಈ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿದ್ದು, ಪಿಎಸ್ಪಿ ಜಾರಿ ಪ್ರದೇಶದಲ್ಲಿ ಸುರಂಗ ನಿರ್ಮಾಣ ಅಥವಾ ಕಾಮಗಾರಿಯಿಂದ ಭೂ ಕುಸಿತ ಆಗುವುದಿಲ್ಲ ಎಂಬುದನ್ನು ದೃಢೀಕರಿಸಿದ ನಂತರವೇ ಯೋಜನೆಗೆ ಅನುಮತಿ ನೀಡಿರುತ್ತದೆ.

ಪಂಪ್ಡ್ ಸ್ಟೋರೇಜ್ ಯೋಜನೆ ಎಂದರೇನು? ಏಕೆ ಅನಿವಾರ್ಯ?

ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಗತ್ತಿನ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನವೆಂದು ಪರಿಗಣಿಸಲಾಗುತ್ತಿದೆ. ಇದನ್ನು ಎರಡು ಜಲಾಶಯಗಳ ಮಧ್ಯೆ ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ನೀರನ್ನು ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ. ಇದಕ್ಕಾಗಿ ಹೊಸ ಜಲಾಶಯಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಹೆಚ್ಚು ಬೇಡಿಕೆ ಅವಧಿಯಲ್ಲಿ ವಿದ್ಯುತ್ ಉತ್ಪಾದಿಸಲು ಅನುಕೂಲವಾಗುವುದರಿಂದ ಇದು ಗ್ರಿಡ್ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಹಗಲು ವೇಳೆ ನವೀಕರಿಸಬಹುದಾದ ಇಂಧನ ಹೇರಳವಾಗಿ ಲಭ್ಯವಾಗಲಿದ್ದು, ಈ ಸಮಯದಲ್ಲಿ ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರು ಪಂಪ್ ಮಾಡಲಾಗುವುದು. ಹೆಚ್ಚು ಬೇಡಿಕೆ ಅವಧಿಯಲ್ಲಿ ಅಥವಾ ರಾತ್ರಿ ವೇಳೆ ವಿದ್ಯುತ್ ಉತ್ಪಾದಿಸಿ ಗ್ರಾಹಕರಿಗೆ ಪೂರೈಸಲಾಗುವುದು. ಸೋಲಾರ್ ಮತ್ತು ಗಾಳಿಯಿಂದ ಉತ್ಪಾದನೆಯಾಗುತ್ತಿರುವ ವಿದ್ಯುತ್ ವ್ಯರ್ಥವಾಗದಂತೆ ಉಳಿಸಿಕೊಂಡು ಅದನ್ನು ಬೇಡಿಕೆ ಅವಧಿಯಲ್ಲಿ ತ್ವರಿತವಾಗಿ ಉತ್ಪಾದಿಸಿ ಗ್ರಾಹಕರಿಗೆ ಸರಬರಾಜು ಮಾಡಲು ಪಿಎಸ್ ಪಿಗಳಿಂದ ಮಾತ್ರ ಸಾಧ್ಯ.

N. Chaluvarayaswamy ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರ ದಾಸ್ತಾನಿದೆ. ಕೃಷಿಕರಿಗೆ ತೊಂದರೆಯಾಗದಂತೆ ವಿತರಿಸಿ- ಕೃಷಿಸಚಿವ ಎನ್.ಚಲುವರಾಯ ಸ್ವಾಮಿ

0

(ಬೆಂಗಳೂರು ಪ್ರತಿನಿಧಿಯಿಂದ)

N. Chaluvarayaswamy ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿಗೆ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ದಾಸ್ತಾನಿದ್ದು, ರೈತರಿಗೆ ಅನಾನುಕೂಲವಾಗದಂತೆ ರಸಗೊಬ್ಬರ ವಿತರಣೆ ಮಾಡುವಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಯವರು ತಿಳಿಸಿದರು..

ವಿಕಾಸಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ ಹಾಗು 5 ಕೃಷಿ ವಿಶ್ವವಿದ್ಯಾನಿಲಯಗಳ ಕುಲಪತಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು,
ಸರ್ಕಾರದ ಆಶಯವನ್ನು ಅರಿತು ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು..

ಕರ್ನಾಟಕದಲ್ಲಿ ಕೃಷಿ ಬಹುಜನರ ಪ್ರಧಾನ ಕಾಯಕ, ಈ ಕ್ಷೇತ್ರದಲ್ಲಿ ತೊಡಗಿದ ರೈತರು ಹಾಗೂ ಕೃಷಿ ಕಾರ್ಮಿಕರ ಹಿತ ಕಾಯುವುದು ಸರ್ಕಾರ ಹಾಗೂ ಇಲಾಖೆಯ ಜವಾಬ್ದಾರಿ ಅವರನ್ನು ಅಲೆದಾಡಿಸದೆ ಮನೆ ಬಾಗಿಲಿಗೆ ಯೋಜನೆಗಳ ಫಲ ತಲುಪಿಸಿ ಎಂದು ಸಚಿವರು ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಕೃಷಿ ಬಹುತೇಕ ಮಳೆಯಾಶ್ರಿತವಾಗಿದೆ. ಹಾಗಾಗಿ ಬೆಳೆ ವಿಮೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಎಲ್ಲಾ ರೈತರು ಈ ಯೋಜನೆ ವ್ಯಾಪ್ತಿಗೆ ಒಳಪಡುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಇಲಾಖೆಯಲ್ಲಿ ಕಳೆದ 2 ವರ್ಷಗಳಲ್ಲಿ ತೋರಿದ ಸಾಧನೆ ಜನಪರ ಕಾಳಜಿಯ ಸೇವೆಯನ್ನು ಅಭಿನಂದಾನಾರ್ಹವಾಗಿದೆ ಆದರೆ ಎಲ್ಲಾ ಜಿಲ್ಲೆಗಳಲ್ಲಿಯೂ ಒಂದೆ ರೀತಿಯ ಪ್ರಗತಿಯನ್ನು ನಿರೀಕ್ಷಿಸಲಾಗುತ್ತಿದೆ. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ಎಚ್ಚರಿಸಿದರು.

ಕೃಷಿ ವಿಶ್ವವಿದ್ಯಾನಿಲಯಗಳು ನಡೆಸುವ ಸಂಶೋಧನಾ ಫಲ ರೈತರಿಗೆ ಸಲುಭವಾಗಿ ತಲುಪುವಂತಾಗಬೇಕು. ಬೇಸಾಯದಲ್ಲಿ ತಂತ್ರಜ್ಞಾನ, ವೈಜ್ಞಾನಿಕತೆ ಪರಿಣಾಮಕಾರಿಯಾಗಿ ಅಳವಡಿಕೆಯಾಗಬೇಕು. ಕೃಷಿಕರಿಗೆ ನಿಖರವಾದ ಮಾರ್ಗದರ್ಶನ ನೀಡಬೇಕು, ಆ ಮೂಲಕ ಕೃಷಿಕರ ಆರ್ಥಿಕ ಸುಧಾರಣೆಗೆ ನೆರವಾಗಬೇಕು ಎಂದು ಅವರು ಸಲಹೆ ನೀಡಿದರು.

ಕರ್ನಾಟಕವನ್ನು ತೊಗರಿ ಬೆಳೆಯಲ್ಲಿ ಮುಂಚೂಣಿ ರಾಜ್ಯವನ್ನಾಗಿಸುವ ಗುರಿಹೊಂದಲಾಗಿದೆ
ಎಲ್ಲಾ ಕ್ಷೇತ್ರಗಳಿಗೂ ಕೃಷಿ ಭಾಗ್ಯ ಯೋಜನೆ ವಿಸ್ತರಿಸಲಾಗಿದೆ.
ಸಾವಯವ ಮತ್ತು ಸಮಗ್ರ ಬೇಸಾಯ ಪದ್ದತಿ ಪ್ರೋತ್ಸಾಹಕ್ಕೂ ಯೋಜನೆ ಜಾರಿಗೊಳಿಸಲಾಗಿದೆ.ರೈತರು ತಮ್ಮ ಉತ್ಪನ್ನಗಳ ಮೌಲ್ಯವರ್ಧನೆಗೆ ಗಮನ ಹರಿಸಬೇಕು ಎಂದರು.

N. Chaluvarayaswamy ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಒದಗಿಸುತ್ತಿದೆ, ಎಲ್ಲಾ ವರ್ಗದ ರೈತರಿಗೆ ಸೂಕ್ಷ್ಮ ನೀರಾವರಿ ಸಾಧನಗಳನ್ನು ಕೊಳ್ಳಲು ಇದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದೆ, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿನಲ್ಲಿ ಯಾವುದೇ ಕೊರತೆ ಇಲ್ಲ ಪೂರೈಕೆ, ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿ ಸಿಬ್ಬಂದಿ ನಿಗಾ ವಹಿಸಬೇಕು ಎಂದು ಕೃಷಿ ಸಚಿವರು ಸೂಚನೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆಯ ಆಯುಕ್ತ ವೈ.ಎಸ್ ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಯು.ಪಿ.ಸಿಂಗ್, ಕೃಷಿ ಇಲಾಖೆ ನಿರ್ದೇಶಕ ಡಾ. ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್, ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶಕ ವೆಂಕಟರಮಣರೆಡ್ಡಿ ಹಾಗೂ ಬೆಂಗಳೂರು, ಶಿವಮೊಗ್ಗ, ಧಾರವಾಡ, ರಾಯಚೂರು, ಮಂಡ್ಯ ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Sahyadri Superspeciality Hospital ಕೆಲಸದ ಒತ್ತಡ, ಜಡಜೀವನ ಶೈಲಿ, ಧೂಮಪಾನ & ಮದ್ಯಪಾನ‌ ಚಟಗಳು ಪಾರ್ಶ್ವವಾಯುವಿಗೆ ಕಾರಣಗಳು: ಡಾ.ಎ.ಶಿವರಾಮಕೃಷ್ಣ

0

ಶಿವಮೊಗ್ಗ ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಾಕಾಥಾನ್‌ ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು.

ಶಿವಮೊಗ್ಗ ನಗರದ ಸಹ್ಯಾದ್ರಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಿಂದ ಪ್ರಾರಂಭವಾದ ವಾಕಾಥಾನ್‌, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಆಸ್ಪತ್ರೆ ಆವರಣದಲ್ಲಿ ಮುಕ್ತಾಯಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗದ ಹಿರಿಯ ನ್ಯೂರೋ ಫಿಜಿಷಿಯನ್ ಡಾ. ಶಿವರಾಮಕೃಷ್ಣ ಆರೂರು, ಭಾರತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಸ್ಟ್ರೋಕ್ ಆಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಹಾಗೂ ಪಾರ್ಶ್ವ ವಾಯುವಿಗೆ ಮುಖ್ಯ ಕಾರಣಗಳು ಜಡಜೀವನ ಶೈಲಿ ಧೂಮಪಾನ ಮದ್ಯಪಾನ ಅತಿಯಾದ ಕೆಲಸದ ಒತ್ತಡ ಇವುಗಳು ಕಾರಣಗಳಾಗಿವೆ. ಹಾಗಾಗಿ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿರಬೇಕು ಮತ್ತು ಪ್ರತಿನಿತ್ಯ ವಾಕಿಂಗ್, ವ್ಯಾಯಾಮ, ಯೋಗ ಹಾಗೂ ಉತ್ತಮ ಆಹಾರ ಪದ್ಧತಿಗಳನ್ನು ರೂಡಿಸಿಕೊಂಡು ಸಕ್ರಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು.

ಇಂದಿಗೂ ಸಹ ಪಾಶ್ವ ವಾಯುವಿನ ಬಗ್ಗೆ ಮೂಢನಂಬಿಕೆಗಳಿದ್ದು ಸಾರ್ವಜನಿಕರು ಅಂತಹ ಮೂಢನಂಬಿಕೆಗಳಿಂದ ಹೆಚ್ಚು ತೊಂದರೆಗೆ ಒಳಗಾಗದೆ ಸೂಕ್ತ ಚಿಕಿತ್ಸೆಯನ್ನು ಸೂಕ್ತ ಸಮಯದಲ್ಲಿ ಪಡೆಯುವುದು ಅವಶ್ಯಕವಾಗಿದೆ, ಹಾಗೂ 40 ವಯಸ್ಸಿನ ನಂತರ ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ ಆರೋಗ್ಯ ತಪಾಸಣೆಗಳನ್ನು ಮಾಡಿಸುವುದರ ಮುಖಾಂತರ ಉತ್ತಮ ಆರೋಗ್ಯದ ಕಡೆ ಗಮನಹರಿಸಬೇಕೆಂದು ತಿಳಿಸಿದರು.

Sahyadri Superspeciality Hospital ಪಾರ್ಶ್ವವಾಯುವಿನ ಲಕ್ಷಣಗಳಾದ ಸಮತೋಲನ ಕಳೆದುಕೊಳ್ಳುವುದು, ದೃಷ್ಟಿ ದೋಷವಾಗುವುದು, ಮುಖದ ಒಂದು ಭಾಗ ಜೋತು ಬೀಳುವುದು, ದೇಹದ ಒಂದು ಭಾಗದ ಕೈಕಾಲುಗಳು ದುರ್ಬಲವಾಗುವುದು, ಮಾತಿನಲ್ಲಿ ತೊದಲುವಿಕೆ ಇಂತಹ ಲಕ್ಷಣಗಳು ಕಂಡುಬಂದಲ್ಲಿ ತ್ವರಿತವಾಗಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು.

ನಾರಾಯಣ ಆಸ್ಪತ್ರೆಯ ನ್ಯೂರೋಲಜಿ ವಿಭಾಗದ ತಜ್ಞ ವೈದ್ಯರಾದ ಡಾ. ರೂಪ ಕೆಜಿ ಮಾತನಾಡಿ ಉತ್ತಮ ಹವ್ಯಾಸಗಳನ್ನು ರೂಪಿಸಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ಸಕ್ರಿಯ ಹಾಗೂ ಸದೃಢ ಜೀವನ ಶೈಲಿಯನ್ನು ರೂಡಿಸಿಕೊಳ್ಳಬೇಕು, ಸಾರ್ವಜನಿಕರಲ್ಲಿ ಹೃದ್ರೋಗದ, ಪಾರ್ಶ್ವವಾಯು, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಸರ್ವೇಸಾಮಾನ್ಯವಾಗುತ್ತಿದ್ದು ತುಂಬಾ ಬೇಸರ ಸಂಗತಿಯಾಗಿದೆ ಇದರಿಂದ ಹೊರಗೆ ಬರಲು ಪ್ರತಿಯೊಬ್ಬರೂ ಉತ್ತಮ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು ಪಾಶ್ವವಾಯುವಿನ ಲಕ್ಷಣಗಳು ಕಾಣಿಸಿದ ತಕ್ಷಣ ರೋಗಿಯನ್ನು 4 ಗಂಟೆಯ ಒಳಗೆ ಸ್ಟ್ರೋಕ್ ರೆಡಿ ಹಾಸ್ಪಿಟಲ್ ಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಲ್ಲಿ ರೋಗಿಯನ್ನು ಸಂಪೂರ್ಣ ಗುಣಮುಖರನ್ನಾಗಿ ಮಾಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಯುತ ವರ್ಗೀಸ್ ಪಿ ಜಾನ್, ಎಲ್ಲಾ ವಿಭಾಗದ ವೈದ್ಯರು ಹಾಗೂ ಮುಖ್ಯಸ್ಥರುಗಳು, ಸಿಬ್ಬಂದಿಗಳು, ಮಾರ್ಕೆಟಿಂಗ್ ವಿಭಾಗದ ಶೈಲೇಶ್ ಹಾಗೂ ನಗರದ ಮೈತ್ರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ನಗರದ ಸಾರ್ವಜನಿಕರು ಸಹ ಭಾಗವಹಿಸಿದ್ದರು.

Kannada Rajotsava ನವೆಂಬರ್ 1. ವಿಜೃಂಭಣೆಯ ರಾಜ್ಯೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ

0

Kannada Rajotsava ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ.01 ರಂದು ಬೆಳಿಗ್ಗೆ 9 ಗಂಟೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಕನ್ನಡ ರಾಜೋತ್ಸವ ದಿನಾಚರಣೆ-2025 ರ ಕಾರ್ಯಕ್ರಮವನ್ನು ಏರ್ಪಡಿಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಧ್ವಜಾರೋಹಣ ನೆರವೇರಿಸುವರು.

ಭದ್ರಾವತಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ, ಸಾಗರ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಗೌರವಾನ್ವಿತ ಉಪಸ್ಥಿತಿ ವಹಿಸಲಿದ್ದು,
ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಶಾಸಕರುಗಳು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಿ ಅಧ್ಯಕ್ಷರುಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಪೊಲೀಸ್ ಅಧೀಕ್ಷಕರು, ಮಹಾನಗರ ಪಾಲಿಕೆಯ ಆಯುಕ್ತರು , ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕನ್ನಡ ಸಂಘಟನೆಗಳು ಪಾಲ್ಗೊಳ್ಳುವರು.

Kannada Rajotsava ಬೆಳಿಗ್ಗೆ 8 ಗಂಟೆಗೆ ಸೈನ್ಸ್ ಮೈದಾನದಿಂದ ನೆಹರು ಕ್ರೀಡಾಂಗಣದವರೆಗೆ ಶ್ರೀಭುವನೇಶ್ವರಿ ದೇವಿಯ ಮೆರವಣಗೆ ಹೊರಡಲಿದೆ. ಬೆಳಿಗ್ಗೆ 9 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ, ಕನ್ನಡ ರಾಜ್ಯೋತ್ಸವ ಸಂದೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯುವಜನ ಹಾಗೂ ಕ್ರೀಡೆ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಂಜೆ 5 ಗಂಟೆಗೆ ನಗರದ ಕುವೆಂಪು ರಂಗಮAದಿರದಲ್ಲಿ ಪೊಲೀಸ್ ಬ್ಯಾಂಡ್ ಹಾಗೂ ಶಿವಮೊಗ್ಗ ನಗರದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

CM Siddharamaiah ಪರಿಶಿಷ್ಠ ಜಾತಿ ಒಳಜಾತಿಯ ಮೀಸಲಾತಿ ಅನುಷ್ಠಾನ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಮಹತ್ವದ ಸಭೆ

0

CM Siddharamaiah ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಅನುಷ್ಠಾನದ ಕುರಿತಂತೆ ಇರುವ ಸಮಸ್ಯೆಗಳ ಬಗ್ಗೆ ಸಭೆ ನಡೆಯಿತು.

CM Siddharamaiah ಈ ಸಭೆಯಲ್ಲಿ ಸಚಿವರಾದ ಡಾ. ಜಿ.ಪರಮೇಶ್ವರ್, ಡಾ.ಎಚ್.ಸಿ. ಮಹಾದೇವಪ್ಪ, ಕೆ.ಎಚ್. ಮುನಿಯಪ್ಪ, ಶಿವರಾಜ ಎಸ್. ತಂಗಡಗಿ, ಎಚ್.ಕೆ. ಪಾಟೀಲ್, ಪ್ರಿಯಾಂಕ ಖರ್ಗೆ, ಬಿ.ಆರ್.ತಿಮ್ಮಾಪುರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್, ಮತ್ತಿತರರು ಉಪಸ್ಥಿತರಿದ್ದರು.

national caregivers day ಶೇ. 75ಕ್ಕೂ ಹೆಚ್ಚು ವಿಕಲತೆ ಹೊಂದಿದವರ ಆರೈಕೆದಾರರಿಗೆ ಸರ್ಕಾರ ತಿಂಗಳಿಗೆ ₹1000 ಆರೈಕೆ ಭತ್ಯೆ ನೀಡುತ್ತಿದೆ.- ದಾಸ್ ಸೂರ್ಯವಂಶಿ

0

(ಬೆಂಗಳೂರು ಪ್ರತಿನಿಧಿಯಿಂದ)

national caregivers day ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರು ಮತ್ತು ಆರೈಕೆದಾರರೊಂದಿಗೆ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಬಾಲ ಭವನ ಸಭಾಂಗಣದಲ್ಲಿ”ವಿಶ್ವ ಆರೈಕೆದಾರರ ದಿನಾಚರಣೆಯನ್ನು”
ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟಿಸಿದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರಾದ ದಾಸ್ ಸೂರ್ಯವಂಶಿ ಅವರು ಮಾತನಾಡಿ, ಶೇಕಡ 75 ಕ್ಕಿಂತಲೂ ಹೆಚ್ಚು ವಿಕಲತೆ ಹೊಂದಿರುವ ವ್ಯಕ್ತಿಗಳು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಕಷ್ಟವಾಗುತ್ತಿದ್ದು ಅವರುಗಳ ಆರೈಕೆ ಮಾಡಬೇಕಾಗಿರುತ್ತದೆ.ಇಂತಹ ಆರೈಕೆದಾರರಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು ಒಂದು ಸಾವಿರದಂತೆ ಆರೈಕೆ ಭತ್ಯೆ ನೀಡಲಾಗುತ್ತಿದೆ. ಆರೈಕೆದಾರರ ಸೇವೆಯನ್ನು ಸ್ಮರಿಸಿ ಅವರನ್ನು ಉತ್ತೇಜಿಸಲು ಈ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಮಾಜಿ ಆಯುಕ್ತ ರಾಜಣ್ಣ ಮಾತನಾಡಿ, ವಿಕಲಚೇತನರ ಆರೈಕೆದಾರರು ಎಲೆ ಮರೆಯ ಕಾಯಿಯ ಹಾಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದು ದಿನದ ಪೂರ್ತಿ ವಿಕಲಚೇತನರೊಂದಿಗೆ ಇರಬೇಕಾಗಿರುವುದರಿಂದ ಇವರಿಗೆ ಯಾವುದೇ ಉದ್ಯೋಗವಿಲ್ಲದೆ ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಯಾವುದೇ ಸಭೆ ಸಮಾರಂಭಗಳಿಗೆ ಸಾಮಾಜಿಕ ಕಾರ್ಯಗಳಿಗೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಇದ್ದು ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋಗಿರುತ್ತಾರೆ. ಇಂತಹ ಆರೈಕೆದಾರರನ್ನು ಗುರುತಿಸಿ ಅವರೊಂದಿಗೆ ಸರ್ಕಾರ, ಸಮಾಜ ,ಸಂಘ ಸಂಸ್ಥೆಗಳು ಇದ್ದೇವೆ ಎಂಬ ಭರವಸೆ ನೀಡಿ ಪ್ರೋತ್ಸಾಹಿಸಬೇಕು. ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಆರೈಕೆದಾರರಿಗೆ ಮಾಸಿಕ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ 10 ಜನ ಆರೈಕೆದಾರರಿಗೆ ತಲಾ 5 ಸಾವಿರ ರೂ.ಗಳ ನಗದು ನೀಡಿ ಸನ್ಮಾನಿಸಲಾಯಿತು .

ಆರೈಕೆದಾರರ ಪ್ರತಿನಿಧಿಗಳು ಮಾತನಾಡಿ, ನಮ್ಮ ಸೇವೆಯನ್ನ ಗುರುತಿಸಿ ಪ್ರೋತ್ಸಾಹ ನೀಡುತ್ತಿರುವ ಸರ್ಕಾರದ ಕಾರ್ಯ ಅಭಿನಂದನೀಯ,ಆರೈಕೆ ಭತ್ಯೆಯನ್ನು ಕನಿಷ್ಠ 3000ಗಳಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

national caregivers day ಬಾಲ ಭವನ ಸೊಸೈಟಿ ಅಧ್ಯಕ್ಷ ಬಿ.ಆರ್.ನಾಯ್ಡು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಂಟಿ ನಿರ್ದೇಶಕ ಎಸ್‌.ನಟರಾಜ್, ಹಿರಿಯ ಮನೋವೈದ್ಯ ಡಾ. ಸಿ. ಆರ್ .ಚಂದ್ರಶೇಖರ್ ಡಾ.ಎಂ ಕೆ.ಶ್ರೀಧರ , ಡಾ. ಜಗದೀಶ್ ತೀರ್ಥಹಳ್ಳಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ರಜನಿ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಆರೈಕೆದಾರರು, ವಿಕಲಚೇತನರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು .

ಸಂಪೂರ್ಣ ಅಂಧತ್ವವುಳ್ಳ ಕುಮಾರಿ ಪ್ರೀತ ಹಾಗೂ ಪುಷ್ಪ ಇವರು ನಿರೂಪಣೆ ಮಾಡಿದ್ದು ವಿಶೇಷವಾಗಿತ್ತು. ಅಶ್ವತ್ಥಮ್ಮ ಸ್ವಾಗತಿಸಿದರು, ನಾಗವೇಣಿ ವಂದಿಸಿದರು.

Pace PU College ಭಗವದ್ಗೀತೆ, ಇಡೀವಿಶ್ವಕ್ಕೇ ಭಾರತದ ಸತ್ವ ಎತ್ತಿ ತೋರಿಸಿದೆ: ವಿದ್ವಾನ್ ಜಿ.ಎಸ್.ನಟೇಶ್

0

Pace PU College ಶ್ರೀ ಭಗವದ್ಗೀತೆಯಲ್ಲಿ ವಿಶ್ವ ಜೀವನದ ರಹಸ್ಯ ಅಡಗಿದೆ ಎಂದು ವಾಗ್ಮಿ ಜಿ.ಎಎಸ್.ನಟೇಶ್ ಹೇಳಿದರು.

ಅವರು ಶಿವಮೊಗ್ಗ ನಗರದ ಪೇಸ್ ಪಿ.ಯೂ.ಕಾಲೇಜು ಮತ್ತು ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ಸ್ವರ್ಣರಶ್ಮಿ ಟ್ರಸ್ಟ್ ಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಭಗವದ್ಗೀತೆಯಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.

ಇಡೀ ವಿಶ್ವಕ್ಕೆ ಭಾರತದ ಸತ್ವವನ್ನು ಎತ್ತಿ ತೋರಿಸುವುದೇ ಭಗವದ್ಗೀತೆ. ರಾಮ ನಡೆದ ದಾರಿಯಲ್ಲಿ ನಾವು ನಡೆಯಬೇಕು. ಆದರೆ ಶ್ರೀ ಕೃಷ್ಣ ನಡೆದ ಹಾದಿಯಲ್ಲಿ ನಡೆಯಲಾಗುವುದಿಲ್ಲ. ಬದಲಾಗಿ ಶ್ರೀ ಕೃಷ್ಣ ಹೇಳಿದ ಮಾತುಗಳನ್ನು ಕೇಳಿ ಜೀವನ ಪಾವನ ಮಾಡಿಕೊಳ್ಳಬೇಕು ಎಂದ ಅವರು ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯನ್ನು ಓದದ ಭಾರತ ಭಾರತವೇ ಅಲ್ಲ. ಭಾರತೀಯರಾಗಲು ಪ್ರತಿಯೊಬ್ಬರೂ ಈ ಮೂರು ಗ್ರಂಥಗಳನ್ನು ಓದಲೇಬೇಕು ಎಂದು ಪ್ರತಿಪಾದಿಸಿದರು.

ದೇಹವನ್ನು ನಾಶಪಡಿಸಬಹುದು. ಆದರೆ ಆತ್ಮವನ್ನು ನಾಶಪಡಿಸಲು ಸಾಧ್ಯವಿಲ್ಲ. ಮನಸ್ಸನ್ನು ಹೃದಯ ನಿಯಂತ್ರಿಸಬೇಕು. ಪ್ರಾಣಶಕ್ತಿಯನ್ನು ಶಿರಸ್ಸು ನಿಯಂತ್ರಿಸಬೇಕು. ಇದುವೇ ಯೋಗ ಶಕ್ತಿ. ಭಗವದ್ಗೀತೆ ತಿಳಿಸುವುದೇ ಇದನ್ನು ಎಂದರು.
ಗೀತೆ ಭಾರತದ ಸರ್ವಸ್ವ. ಪ್ರತಿಯೊಂದು ಸಂಶಯ, ಸಮಸ್ಯೆಗಳಿಗೆ ಪರಿಹಾರ ಭಗವದ್ಗೀತೆಯಲ್ಲಿದೆ. ಪೂಜಾ, ಕರ್ತವ್ಯ ಪಾಲನೆ, ಧ್ಯಾನ, ತ್ಯಾಗ, ತಪಸ್ಸುಗಳ ಬಗ್ಗೆ ಹೇಳುವ ಭಗವದ್ಗೀತೆ ಇಂದ್ರಿಯ ನಿಗ್ರಹ ಶಕ್ತಿಯನ್ನು ಹೊಂದಿದೆ.

ಅಪ್ಪ, ಅಮ್ಮ, ವಿದ್ಯಾ ಗುರುಗಳಿಗೆ ಗೌರವ ಕಡಿಮೆಯಾಗದಂತೆ ವಿದ್ಯಾರ್ಥಿಗಳು ಗಮನಿಸಬೇಕು. ಜೀವನದಲ್ಲಿ ಸರಳವಾಗಿದ್ದವರು, ಅಹಂಕಾರ ರಹಿತರು ಮಾಡಿದಷ್ಟು ಸಾಧನೆಯನ್ನು ದುಡ್ಡಿದ್ದವರು ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

Pace PU College ಈ ಸಂದರ್ಭದಲ್ಲಿ ಅಭಿಯಾನ ಸಮಿತಿಯ ಡಾ.ಬಾಲಕೃಷ್ಣ ಹೆಗಡೆ, ಪಿ.ಯೂ.ಕಾಲೇಜಿನ ಪ್ರಾಚಾರ್ಯ ಪ್ರೊ.ವಿಶ್ವನಾಥಯ್ಯ, ಉಪನ್ಯಾಸಕರಾದ ಡಾ.ಮೈತ್ರೇಯಿ ಆದಿತ್ಯಪ್ರಸಾದ್, ಬಸವರಾಜ್, ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ಮುಖ್ಯೋಪಾದ್ಯಾಯರಾದ ಪವನಕುಮಾರ್ ಮೊದಲಾದವರಿದ್ದರು.

ಕೃಷಿ ಬದುಕಿಗೆ ಬರಲು ಯುವಜನ ಹಿಂದೇಟು ಹಾಕುತ್ತಿರುವುದು ವಿಷಾದನೀಯ- ವಿಶ್ವೇಶ್ವರ ಸಜ್ಜನ್

0

ಸಾವಯವ ಕೃಷಿ ಉತ್ಪನ್ನಗಳನ್ನು ಬಳಸುವುದರಿಂದ ಸದಾ ಆರೋಗ್ಯವಂತರಾಗಿ ಇರುತ್ತೇವೆ. ದೇಹದಲ್ಲಿ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಆದರೆ ಈ ಕೃಷಿ ಉತ್ಪನ್ನಕ್ಕೆ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ್ ಹೇಳಿದರು.

ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಅವರಿಗೆ ವಿಶೇಷ ಸಾಧಕ ಪ್ರಶಸ್ತಿ ಗೌರವ ಸ್ವೀಕರಿಸಿ ಮಾತನಾಡಿದರು.

ಎಲ್ಲಾ ರೈತರು ಈ ಪದ್ಧತಿ ಅಳವಡಿಸಿಕೊಂಡರೆ ನಮ್ಮ ದೇಶ ಆರೋಗ್ಯವಂತ ದೇಶವಾಗುತ್ತದೆ. ಸದೃಢ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಾವಯವ ಕೃಷಿಯೂ ಸಹ ಸಹಕಾರಿಯಾಗಿದೆ. ಇಂದು ಕೃಷಿ ಬದುಕಿಗೆ ಕೃಷಿ ಜೀವನಕ್ಕೆ ಬರಲು ಯುವಜನರು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಷಾದನೀಯ ವ್ಯಕ್ತಪಡಿಸಿದರು.

ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದ ವಿಶ್ವೇಶ್ವರಯ್ಯ ಸಜ್ಜನ್ ಅವರು ಅಲ್ಪ ಜಾಗದಲ್ಲಿ, ಅಲ್ಪ ವೆಚ್ಚದಲ್ಲಿ ಹಾಗೂ ಅಲ್ಪ ನೀರಿನಲ್ಲಿ ಹೆಚ್ಚು ಬೆಳೆ ಬೆಳೆದು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತಾವೇ ತಮ್ಮ ಬೆಳೆಗಳ ಮೌಲ್ಯವರ್ಧನೆ ಮಾಡಿ ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಗೂ ರಫ್ತು ಮಾಡಿ ವ್ಯವಸಾಯವನ್ನು ಲಾಭದಾಯಕ ಉದ್ಯಮ ಎಂದು ಸಾಬೀತು ಪಡಿಸಿದ್ದಾರೆ ಎಂದರು.

ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಎನ್.ಬಿ.ರಾಜಶೇಖರ್, ಕಟ್ಟಡ ಸಮಿತಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಬಿ ಕೆ ಜಗನ್ನಾಥ್, ಬಿ ಕೆ ಮೋಹನ್, ಪ್ರೊ. ಎ ಎಸ್ ಚಂದ್ರಶೇಖರ್, ಸಂಘದ ಪ್ರಧಾನ ಕಾರ್ಯದರ್ಶಿ ಎಮ್ ಆರ್ ಕಿರಣ್ ಕುಮಾರ್, ಭದ್ರಾವತಿ ತಾಲೂಕು ಅಧ್ಯಕ್ಷ ಟಿ ಎಸ್ ಆನಂದ ಕುಮಾರ್, ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.