ಸ್ಮಾರ್ಟ್ ಸಿಟಿ ಇಂದಾಗಿ ಶಿವಮೊಗ್ಗ ನಗರದ ಎಲ್ಲೆಡೆ ರಸ್ತೆಗಳಲ್ಲಿ ಗುಂಡಿ ಕಾಣುತ್ತಿದೆ. ಅಲ್ಲದೆ ಈ ಗುಂಡಿಗಳಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಕೂಡ ಅಧಿಕವಾಗಿದೆ. ಇದೀಗ ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷಕ್ಕೆ ಅಂಧನೊಬ್ಬ ಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಇಮಾಂಸಾಬ್ ಇನಾಂದಾರ್ ಎಂಬುವವರು ಹುಟ್ಟಿನಿಂದ ಅಂಧರಾಗಿದ್ದು, ಐದು ವರ್ಷದಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ ಎರಡನೇ ಡಿವಿಜನ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದಿನಂತೆ ಕುವೆಂಪು ರಂಗಮಂದಿರದ ಬಳಿ ತೆರಳುತ್ತಿದ್ದ ವೇಳೆ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ.
ಇಮಾಮ್ ಸಾಬ್ ಇನಾಂದಾರ್ ಅವರು ಮಾತನಾಡಿ “ನಾನು ಪ್ರತಿದಿನ ಓಡಾಡುವ ರಸ್ತೆ ಅದು ಹೊಸದಾಗಿ ಗುಂಡಿ ತೆಗೆದಿದ್ದಾರೆ. ನಾನು ಸ್ಟಿಕ್ ಇಟ್ಟು, ಎಡಗಾಲು ಮುಂದಿಟ್ಟು ನೇರವಾಗಿ ಗುಂಡಿಯೊಳಗೆ ಬಿದ್ದು ತೊಡೆ ಭಾಗದಲ್ಲಿ ಭಾರಿ ನೋವಾಯಿತು” ಎಂದು ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಪ್ರಾರಂಭದಿಂದಲೂ ಸಾರ್ವಜನಿಕರಿಗೆ ದಿನನಿತ್ಯ ಒಂದಲ್ಲಾ ಒಂದು ಕಿರಿಕಿರಿ ಯಿಂದಾಗಿ ಜನರು ರೋಸಿಹೋಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸುವರೇ ಕಾದುನೋಡಬೇಕಾಗಿದೆ.