ಗ್ರಾಮೀಣಾಭಿವೃದ್ಧಿ, ಕಾನೂನು ಜಾಗೃತಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗದ ಸ್ವಚನ್ ಫೌಂಡೇಶನ್ ವತಿಯಿಂದ ಸೆ.20 ರಂದು ವಾರ್ಷಿಕ ಉಪನ್ಯಾಸ ಸರಣಿ ಮತ್ತು ಉದ್ಯಮ ಪಾಲುದಾರರ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆ.20 ರಂದು ಬೆಳಿಗ್ಗೆ 9.00 ಗಂಟೆಗೆ ಶಿವಮೊಗ್ಗದ ಜ್ಯುವೆಲ್ ರಾಕ್ ರಸ್ತೆಯ ಎಸ್.ಆರ್. ಸನ್ಸ್ ಕಟ್ಟಡದ ಮೊದಲ ಮಹಡಿಯಲ್ಲಿರುವ ಸ್ವಚನ್ ಕೇಂದ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಸ್ವಚನ್ ಫೌಂಡೇಶನ್ನ ಶೈಕ್ಷಣಿಕ ವಿಭಾಗದ ವತಿಯಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಾನೂನು ಚೌಕಟ್ಟು, ನವೀನ ಆವಿಷ್ಕಾರಗಳು ಹಾಗೂ ಉದ್ಯಮಶೀಲತೆಯ ಮೂಲಕ ಪ್ರಾದೇಶಿಕ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಉತ್ತೇಜಿಸುವ ಕುರಿತು ಚರ್ಚೆ ನಡೆಯಲಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಅವರು ಉದ್ಘಾಟನಾ ಭಾಷಣ ಮಾಡಲಿದ್ದು, ಸ್ವಚನ್ ಫೌಂಡೇಶನ್ ಅಧ್ಯಕ್ಷ ಚಂದ್ರಕಾಂತ್ ಅಸಗೋಡು ಅಧ್ಯಕ್ಷತೆ ವಹಿಸಲಿದ್ದಾರೆ.
ವಿಶೇಷ ಉಪನ್ಯಾಸ ಹಾಗೂ ಸಂವಾದಕರಾಗಿ ಸೆಕ್ಷನ್ ಇನ್ಫಿನ್ ಫೌಂಡೇಶನ್ ನ ನಿರ್ದೇಶಕರು ಹಾಗೂ ಅಟಲ್ ಇನ್ ಕ್ಯೂಬೇಷನ್ ಸೆಂಟರ್ ನ ಮಾಜಿ ಸಿಇಓ ಡಾ. ಶಿವಕಿರಣ್ ಮಕಂ ಮತ್ತು ಐಪಿ ಅಟಾರ್ನಿ ಎಸ್.ಸಿ.ಕೆ. ಹಾಗೂ ಅಸೋಸಿಯೇಟ್ಸ್ ಮತ್ತು ಐಐಎಂ ಸಂದರ್ಶಕ ಪ್ರಾಧ್ಯಾಪಕಿ ಹಾಗೂ ಸ್ಟಾರ್ಟ್ ಅಪ್ ಐಪಿ ಫೆಸಿಲಿಟೇಟರ್ ಅಡ್ವೊಕೇಟ್ ಸಾಧ್ವಿ ಸಿ. ಕಾಂತ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಟಾರ್ಟ್ ಅಪ್ ಸಂಸ್ಥಾಪಕರು, ಉದ್ಯಮಿಗಳು, ಮಹಿಳಾ ಉದ್ಯಮಿಗಳು, ಸಂಶೋಧಕರು, ಉಪನ್ಯಾಸಕರು, ಔಷಧ ಮತ್ತು ಉತ್ಪಾದನಾ ಕ್ಷೇತ್ರದ ಪ್ರತಿನಿಧಿಗಳು, ಕಲಾವಿದರು ಸೇರಿದಂತೆ ನವೀನ ಆವಿಷ್ಕಾರ ಮತ್ತು ಉದ್ಯಮಶೀಲತೆಯಲ್ಲಿ ಆಸಕ್ತಿ ಹೊಂದಿರುವ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಸೀಮಿತ ಆಸನಗಳಿರುವ ಹಿನ್ನೆಲೆಯಲ್ಲಿ ಆಸಕ್ತರು ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ : 9739383734 ನ್ನು ಸಂಪರ್ಕಿಸಬಹುದಾಗಿದೆ.
