ಸಾಗರ ತಾಲೂಕಿನ ಬಿದನೂರು ಗ್ರಾಮದ ಬಿದರೂರು ಚಾನೆಲ್ ಬಳಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ತುಮಕೂರು ಮೂಲದ ಯುವತಿಯನ್ನು ಕಾರ್ಗಲ್ ಪೊಲೀಸರು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.
ಜೋಗ ಜಲಪಾತಕ್ಕೆ ಬಂದಿದ್ದ ಯುವತಿ ಚಾನೆಲ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ ಮೀನುಗಾರರು ತಕ್ಷಣ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆತ ಕೂಡಲೇ ಕಾರ್ಗಲ್ ಪೊಲೀಸರ ERV ತಂಡ ಸ್ಥಳಕ್ಕೆ ಧಾವಿಸಿ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಿದೆ.
ವಿಚಾರಣೆ ವೇಳೆ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಬಳಿಕ ಆಕೆಯ ಪೋಷಕರನ್ನು ಕರೆಸಿದ ಪೊಲೀಸರು, ಯುವತಿಯನ್ನು ಸುರಕ್ಷಿತವಾಗಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ತಕ್ಷಣ ಸ್ಪಂದಿಸಿ ಯುವತಿಯ ಪ್ರಾಣ ಉಳಿಸಿದ ERV ಅಧಿಕಾರಿ ಅಣ್ಣಪ್ಪ ಹಾಗೂ ಚಾಲಕ ರಾಘವೇಂದ್ರ ಅವರ ಸಮಯಪ್ರಜ್ಞೆಗೆ ಅಭಿನಂದನೆ ವ್ಯಕ್ತವಾಗಿದೆ. ಅಲ್ಲದೇ ಕಾರ್ಗಲ್ ಠಾಣೆಯ ಸಿಬ್ಬಂದಿ ಸಂದೀಪ್ ಮತ್ತು ಪುರುಷೋತ್ತಮ್ ಅವರ ಕಾರ್ಯಕ್ಕೂ ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದೆ.
