ಸಮಾಜಮುಖಿ ಚಿಂತನೆ, ಶಿಕ್ಷಣದ ಮೇಲಿನ ಅಪಾರ ಕಾಳಜಿ ಹಾಗೂ ಸರಳ-ಸೌಮ್ಯ ವ್ಯಕ್ತಿತ್ವದ ಮೂಲಕ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ, ಸೇವಾ ಸಾಗರದ ಅಧ್ಯಕ್ಷರು ಹಾಗೂ ಶಿಕ್ಷಣ ಪ್ರೇಮಿ ಅಪ್ಪು ನಾರಾಯಣಪ್ಪ ಅವರ ನಿಧನಕ್ಕೆ ಶ್ರೀನಗರ ಯುವಜನ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಪ್ಪು ನಾರಾಯಣಪ್ಪ ಅವರು ತಮ್ಮ ಜೀವನವನ್ನು ಸಮಾಜಮುಖಿ ಚಟುವಟಿಕೆಗಳು ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು. ಶಿಕ್ಷಣವೆಂಬುದು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ವ್ಯಕ್ತಿಯ ಬದುಕನ್ನು ರೂಪಿಸುವ ಶಕ್ತಿ ಎಂಬ ನಂಬಿಕೆಯನ್ನು ಹೊಂದಿದ್ದ ಅವರು, ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸದಾ ಕಾಳಜಿ ವಹಿಸುತ್ತಿದ್ದರು. ಯುವಜನರು ಉತ್ತಮ ಶಿಕ್ಷಣ ಪಡೆದು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು ಸಮಾಜದಲ್ಲಿ ಯಾವುದೇ ವ್ಯಕ್ತಿಯ ಬೆಳವಣಿಗೆಗೆ ಶಿಕ್ಷಣದ ಪಾತ್ರ ಮಹತ್ವದ್ದು ಎಂಬುದನ್ನು ಅರಿತಿದ್ದ ಅವರು, ಶಿಕ್ಷಣದ ಮಹತ್ವವನ್ನು ಜನರಲ್ಲಿ ಮೂಡಿಸುವ ಕಾರ್ಯಕ್ಕೆ ಆದ್ಯತೆ ನೀಡುತ್ತಿದ್ದರು. ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರು, ಸರಳ ಜೀವನ, ನೇರ ನಡೆ-ನುಡಿ ಮತ್ತು ಸಮಾಜದ ಬಗ್ಗೆ ಹೊಂದಿದ್ದ ಕಳಕಳಿಯಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು ಎಂದು ಶ್ರೀನಗರದ ನಿವಾಸಿ ಗಣೇಶ್ ಭಟ್ ಹೇಳಿದರು
ಆರ್ಎಸ್ಎಸ್ನ ಹಿರಿಯ ಮುಖಂಡರಾಗಿ ಸಂಘಟನಾ ಚಟುವಟಿಕೆಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶಿಸ್ತು, ಸೇವಾ ಮನೋಭಾವ ಹಾಗೂ ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಕಾರ್ಯಕ್ಕೆ ಅವರು ಪ್ರೋತ್ಸಾಹ ನೀಡುತ್ತಿದ್ದರು. ಯುವಜನರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ತಮ್ಮ ಸಮಯ ಮತ್ತು ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತಿದ್ದರು ಎಂದು ಶ್ರೀನಗರ ಯುವಜನ ಸಂಘದ ಅಧ್ಯಕ್ಷರಾದ ಎಂ ಜಿ ಚಂದ್ರಕಾಂತ್ ಹೇಳಿದರು
ಯುವಕ ಕುಮಾರ ಮಾತನಾಡಿ ಅವರ ಅಗಲಿಕೆ ಸಮಾಜಕ್ಕೆ ಹಾಗೂ ಅವರನ್ನು ಆತ್ಮೀಯವಾಗಿ ಕಂಡಿದ್ದವರಿಗೆ ತುಂಬಲಾರದ ನಷ್ಟವಾಗಿದೆ. ಒಬ್ಬ ಹಿರಿಯರಾಗಿ ಮಾರ್ಗದರ್ಶನ ನೀಡುತ್ತಿದ್ದ ಅಪ್ಪು ನಾರಾಯಣಪ್ಪ ಅವರ ಅನುಭವ, ಸರಳತೆ ಮತ್ತು ಸಮಾಜಮುಖಿ ಚಿಂತನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಅವರು ಬೆಳೆಸಿದ ಮೌಲ್ಯಗಳು ಹಾಗೂ ಶಿಕ್ಷಣದ ಮೇಲಿನ ಕಾಳಜಿ ಅವರ ನೆನಪನ್ನು ಸದಾ ಜೀವಂತವಾಗಿರಿಸಲಿದೆ.
ಈ ಸಂದರ್ಭದಲ್ಲಿ ಗಣೇಶ್ ಕಿಣಿ,ರಾಘವೇಂದ್ರ ಸಿ ನಾಯಕ್, ಅಮಿತ್ ಇನ್ನಿತರರು ಹಾಜರಿದ್ದರು
