Sunday, August 23, 2026
Sunday, August 23, 2026

Apollo Hospitals ಅಂಗಾಂಗ ದಾನವು ಮಾನವೀಯತೆಯ ಅತ್ಯುನ್ನತ ರೂಪ- ಡಾ.ಪ್ರದೀಪ ಕೃಷ್ಣ.

Date:

Apollo Hospitals ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ಅಪೋಲೋ ಹಾಸ್ಪಿಟಲ್ಸ್ ಬೆಂಗಳೂರು ಮತ್ತು ಶಿವಮೊಗ್ಗದ ಸುಶೋಧ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಜಂಟಿಯಾಗಿ ಸಾರ್ವಜನಿಕರಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ಮತ್ತು ಹೆಚ್ಚಿನ ಸಾರ್ವಜನಿಕ ಸಹಭಾಗಿತ್ವವನ್ನು ಉತ್ತೇಜಿಸಲು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಸುಶೋಧ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದ ಗಣ್ಯರು, ಅವರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿ, ಜೀವ ಉಳಿಸುವ ಅಂಗಾಂಗ ದಾನದ ಮಹತ್ವದ ಕುರಿತು ಅರಿವು ಮೂಡಿಸಿದರು.

ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಪ್ರಮುಖ ಆರೋಗ್ಯ ಕೇಂದ್ರವಾಗಿರುವುದರಿಂದ, ಕೇವಲ ಮಹಾನಗರಗಳಿಗೆ ಸೀಮಿತವಾಗದೆ ಶಿವಮೊಗ್ಗ ಮಟ್ಟದ ಸಮುದಾಯಗಳಿಗೂ ಅಂಗಾಂಗ ದಾನದ ಕುರಿತ ಚರ್ಚೆಯನ್ನು ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ತಜ್ಞರೊಂದಿಗೆ ಸಂವಾದ, ಮಾಹಿತಿಪೂರ್ಣ ಗೋಷ್ಠಿಗಳು ಮತ್ತು ಅಂಗಾಂಗ ಕಸಿ ಪಡೆದವರ ಸ್ಫೂರ್ತಿದಾಯಕ ಕಥೆಗಳ ಮೂಲಕ ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಅಂಗಾಂಗ ದಾನದ ಮಹತ್ವ ಮತ್ತು ದಾನಿಯಾಗುವ ಕುರಿತು ಕುಟುಂಬಗಳಲ್ಲಿ ಮುಕ್ತ ಚರ್ಚೆಗೆ ಪ್ರೇರೇಪಿಸಿತು.

2025ರಲ್ಲಿ 20,000ಕ್ಕೂ ಹೆಚ್ಚು ಅಂಗಾಂಗ ಕಸಿಗಳು ನಡೆದಿದ್ದು, ಇದು ಒಂದೇ ವರ್ಷದಲ್ಲಿ ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ. ಆದಾಗ್ಯೂ, ಅಂಗಾಂಗಗಳ ಬೇಡಿಕೆ ಮತ್ತು ಲಭ್ಯತೆಯ ನಡುವೆ ಭಾರಿ ಅಂತರವಿದೆ. ರಾಷ್ಟ್ರೀಯ ಅಂಗಾಂಗ ಮತ್ತು ಕಸಿ ಸಂಸ್ಥೆ (NOTTO) ಪ್ರಕಾರ, ಮಾರ್ಚ್ 3, 2026ರ ಹೊತ್ತಿಗೆ ಭಾರತದಲ್ಲಿ ಪ್ರಮುಖ ಅಂಗಾಂಗ ಕಸಿಗಾಗಿ ಸುಮಾರು 90,000 ರೋಗಿಗಳಿದ್ದಾರೆ. ಈ ಅಂಕಿ-ಅಂಶಗಳು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮತ್ತು ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಮುಂದೆ ಬರುವಂತೆ ಪ್ರೇರೇಪಿಸುವ ಅಗತ್ಯವನ್ನು ತೋರಿಸುತ್ತವೆ.

ಅಂಗಾಂಗ ದಾನದ ಜಾಗೃತಿಯ ಅಗತ್ಯತೆಯ ಬಗ್ಗೆ ಮಾತನಾಡಿದ ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ಪ್ರದೀಪ್ ಕೃಷ್ಣ ಅವರು, “ಅಂಗಾಂಗ ದಾನವು ಮಾನವೀಯತೆಯ ಅತ್ಯುನ್ನತ ರೂಪವಾಗಿದ್ದು, ರೋಗಿಗಳಿಗೆ ಪುನರ್ಜನ್ಮ ನೀಡುತ್ತದೆ. ವೈದ್ಯಕೀಯ ಕ್ಷೇತ್ರವು ಗಮನಾರ್ಹ ಪ್ರಗತಿ ಸಾಧಿಸಿದ್ದರೂ, ಸೂಕ್ತ ಅಂಗಾಂಗಗಳ ಲಭ್ಯತೆ ಇನ್ನೂ ದೊಡ್ಡ ಸವಾಲಾಗಿ ಉಳಿದಿದೆ. ಇಂತಹ ಜಾಗೃತಿ ಕಾರ್ಯಕ್ರಮಗಳು ತಪ್ಪು ಕಲ್ಪನೆಗಳನ್ನು ನಿವಾರಿಸಲು, ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಅಂಗಾಂಗ ದಾನದ ಕುರಿತು ಸರಿಯಾದ ಅರಿವು ಮೂಡಿಸಲು ಸಹಕಾರಿಯಾಗುತ್ತವೆ” ಎಂದು ಹೇಳಿದರು.

ಸಿ-ಸಂಬಂಧಿತ ಲಿವರ್ ಸಿರೋಸಿಸ್, ಪುನರಾವರ್ತಿತ ಅಸೈಟಿಸ್ (ಹೊಟ್ಟೆಯಲ್ಲಿ ನೀರು ತುಂಬುವುದು), ಹೆಪಟಿಕ್ ಎನ್ಸೆಫಲೋಪತಿ ಮತ್ತು ಕಾಮಾಲೆ ರೋಗದಿಂದ ಬಳಲುತ್ತಿದ್ದ ಶ್ರೀ ಲೋಕೇಶ್ ಅವರ ಪ್ರಕರಣದಲ್ಲಿ, ಮೂರು ವರ್ಷಗಳ ಹಿಂದೆ ಅವರು ಮೆದುಳು ನಿಷ್ಕ್ರಿಯಗೊಂಡ (ಬ್ರೈನ್ ಡೆಡ್) ದಾನಿಯೊಬ್ಬರಿಂದ ಲಿವರ್ ಪಡೆದಿದ್ದರು. ಪ್ರಸ್ತುತ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಕುಟುಂಬದೊಂದಿಗೆ ಆರೋಗ್ಯಕರ ಮತ್ತು ಸಕ್ರಿಯ ಜೀವನ ನಡೆಸುತ್ತಿದ್ದಾರೆ.

ಮತ್ತೊಂದು ಹೃದಯಸ್ಪರ್ಶಿ ಅನುಭವ ಶ್ರೀ ರಾಜಶೇಖರ್ ಅವರದ್ದು. ಕಾಮಾಲೆ, ಅಸೈಟಿಸ್ ಮತ್ತು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಸ್ಥಿತಿ ಗಂಭೀರವಾಗಿತ್ತು ಮತ್ತು ಮೃತ ದಾನಿಗಳಿಂದ ಯಕೃತ್ತು ಲಭ್ಯವಿರಲಿಲ್ಲ. ಆ ಸಂದರ್ಭದಲ್ಲಿ ಅಮೆರಿಕದಲ್ಲಿದ್ದ ಅವರ ಪುತ್ರಿ ಭಾರತಕ್ಕೆ ಆಗಮಿಸಿ, ಜೀವಂತ ದಾನಿಯಾಗಿ (Living Donor) ತಮ್ಮ ಯಕೃತ್ತಿನ ಒಂದು ಭಾಗವನ್ನು ತಂದೆಗೆ ದಾನ ಮಾಡಿದರು. ಕಸಿ ಚಿಕಿತ್ಸೆಯ ನಂತರ ಶ್ರೀ ರಾಜಶೇಖರ್ ಚೇತರಿಸಿಕೊಂಡಿದ್ದು, ಇದೀಗ ರೋಗಮುಕ್ತರಾಗಿದ್ದಾರೆ. ಅವರ ಪುತ್ರಿ ಅಮೆರಿಕಕ್ಕೆ ಮರಳಿ ತಮ್ಮ ವೃತ್ತಿಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ.

Apollo Hospitals ಕಸಿ ಚಿಕಿತ್ಸೆಯ ಮಹತ್ವದ ಕುರಿತು ಮಾತನಾಡಿದ ಶಿವಮೊಗ್ಗದ ಸುಶೋಧ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್, ಹೆಪಟಾಲಜಿಸ್ಟ್ ಮತ್ತು ಎಂಡೋಸ್ಕೋಪಿಸ್ಟ್ ಡಾ. ಪ್ರದೀಪ್ ಜೆ.ಕೆ. (ಎಂ.ಡಿ., ಮೆಡಿಸಿನ್, ಡಿ.ಎನ್.ಬಿ., ಗ್ಯಾಸ್ಟ್ರೋ) ಅವರು, “ಪ್ರತಿಯೊಂದು ಅಂಗಾಂಗ ದಾನವೂ ಔದಾರ್ಯ ಮತ್ತು ಹೊಸ ಭರವಸೆಯ ಕಥೆಯಾಗಿದೆ. ಯಾರೋ ಒಬ್ಬರು ಅಂಗಾಂಗ ದಾನ ಮಾಡಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳು ಗುಣಮುಖರಾಗಿ ತಮ್ಮ ಕುಟುಂಬವನ್ನು ಸೇರಿಕೊಂಡಿರುವುದನ್ನು ನಾವು ಕಂಡಿದ್ದೇವೆ. ಅಂಗಾಂಗ ದಾನದ ಪ್ರಕ್ರಿಯೆ ಮತ್ತು ಈ ಮಹತ್ಕಾರ್ಯದಿಂದ ಎಷ್ಟು ಜೀವಗಳನ್ನು ಉಳಿಸಬಹುದು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಲು ಇದು ಸಾಮಾನ್ಯ ಚರ್ಚೆಯ ವಿಷಯವಾಗಬೇಕು” ಎಂದರು.

ಮೆದುಳು ನಿಷ್ಕ್ರಿಯತೆ (ಬ್ರೈನ್ ಡೆಡ್), ವೈದ್ಯಕೀಯ ಆರೈಕೆ, ಧಾರ್ಮಿಕ ನಂಬಿಕೆಗಳು ಮತ್ತು ಅಂಗಾಂಗ ಹಂಚಿಕೆ ನಿಯಮಗಳ ಕುರಿತಾದ ಸಂಶಯಗಳಿಗೂ ಈ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಲಾಯಿತು. ಅಂಗಾಂಗ ದಾನ ಪ್ರಕ್ರಿಯೆಯನ್ನು ವೈದ್ಯಕೀಯ, ನೈತಿಕ ಮತ್ತು ಕಾನೂನು ನಿಯಮಾವಳಿಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ನಡೆಸಲಾಗುತ್ತದೆ ಎಂದು ಒತ್ತಿ ಹೇಳಿದರು.

ಒಬ್ಬ ದಾನಿಯು ಹಲವು ಜೀವಗಳನ್ನು ಉಳಿಸಬಹುದು ಎಂಬ ಸಂದೇಶವನ್ನು ಕಾರ್ಯಕ್ರಮ ಪುನರುಚ್ಚರಿಸಿತು ಹಾಗೂ ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಅಂಗಾಂಗ ದಾನದ ಕುರಿತು ಕುಟುಂಬದಲ್ಲಿ ಮುಕ್ತವಾಗಿ ಚರ್ಚಿಸುವಂತೆ ಪ್ರೋತ್ಸಾಹಿಸಿತು.

ಮಾಧ್ಯಮ ಮಾಹಿತಿ ಸಂಪರ್ಕ:
ರಾಘವ್: 7795213926
ಜನಕ್ ಗೌಶನ್: 8310690012

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಮುಂದಿನ ಎರಡುವರ್ಷಗಳಲ್ಲಿ 500 ಕೆಪಿಎಸ್ ಶಾಲೆಗಳ ನಿರ್ಮಾಣದ ಉದ್ದೇಶವಿದೆ- ಮಧು ಬಂಗಾರಪ್ಪ.

Madhu Bangarappa ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ...

Breaking News ತೀರ್ಥಹಳ್ಳಿಯ ಘಂಟೆಹಕ್ಲು ಬಳಿ ಬಸ್ ಮತ್ತು ಗೂಡ್ಸ್ ವಾಹನ ಢಿಕ್ಕಿ:ಚಾಲಕ ಗಾಯಾಳು

Breaking News ತೀರ್ಥಹಳ್ಳಿ - ಉಡುಪಿ ಮಾರ್ಗ ಮಧ್ಯೆಯ ಘಂಟೆಹಕ್ಲು...

B.Y. Raghavendra ಶಿವಮೊಗ್ಗ ಗ್ರಾಮಾಂತರ ರೈತರ ನೀರಿನ ಬವಣೆಗೆ ದೀರ್ಘಕಾಲೀನ ಪರಿಹಾರ ಕಲ್ಪಿಸಿ- ಬಿ.ವೈ.ರಾಘವೇಂದ್ರ.

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಅವರ ನೇತೃತ್ವದ...